BhandaryVarthe Team

BhandaryVarthe Team
Bhandary Varthe Team

Sunday 8 August 2021

ಜಿಡ್ಡುಪ್ರವಚನ (ಧ್ಯಾನ-3): ಅಧಿಕಾರದಲ್ಲಿಗುಣವಿಲ್ಲ,ಹಳೆಯ ಮನಸ್ಸುಅಧಿಕಾರಕ್ಕೆ ಬದ್ಧವಾದದ್ದು-ಕಣಬ್ರಹ್ಮವೆಂಕಿ (ವೆಂಕಟೇಶ ಭಂಡಾರಿ ಕುಂದಾಪುರ )


          ವಿವೇಕವೆಂದರೆ ಏನು?, ಎಂಬುದನ್ನು ಪ್ರತಿಯೊಬ್ಬರೂ ತಾವೇ ಕಂಡುಕೊಳ್ಳಬೇಕು. ವಿವೇಕವೆಂಬುದು ಜ್ಞಾನದ ಫಲಿತಾಂಶವಲ್ಲ‌. ಜ್ಞಾನ ಮತ್ತು ವಿವೇಕ ಒಟ್ಟಿಗೆ ಇರುವುದು ಸಾಧ್ಯವಿಲ್ಲ. ತನ್ನನ್ನು ತಾನು ತಿಳಿದ ಪ್ರಬುದ್ಧತೆಯಿಂದ ವಿವೇಕ ಬರುತ್ತದೆ. ತನ್ನನ್ನು ತಾನು ತಿಳಿಯದಿದ್ದರೆ ಯಾವ ವ್ಯವಸ್ಥೆಯು ಇರುವುದಿಲ್ಲ. ವ್ಯವಸ್ಥೆ ಇಲ್ಲವಾದಗ ಒಳಿತೂ ಇರುವುದಿಲ್ಲ.
ಸ್ವತಂತ್ರರಾಗಬೇಕಾದರೆ ಅಧಿಕಾರವೆಂದರೆ ಏನು ಎಂದು ಚೆನ್ನಾಗಿ ಪರಿಶೀಲನೆ ಮಾಡಬೇಕು. ಅಧಿಕಾರವೆಂಬ ಅಸಹ್ಯವನ್ನು ಪೂರ್ತಿಯಾಗಿ ಸುಲಿದುಹಾಕಿ ಅದರ ಅಸ್ಥಿಪಂಜರದ ಸ್ವರೂಪ ಹೇಗಿದೆ ಎಂದು  ನೋಡಬೇಕು. ಹೀಗೆ ಮಾಡುವುದಕ್ಕೆ ದೈಹಿಕ ಶಕ್ತಿಯೂ ಬೇಕು,ಮಾನಸಿಕ ಶಕ್ತಿಯೂ ಬೇಕು. ಆದರೆ ನಿಮ್ಮೊಳಗೆ ಸಂಘರ್ಷವಿರುವಾಗ, ಶಕ್ತಿ ನಷ್ಟವಾಗುತ್ತಿರುತ್ತದೆ,ನಾಶವಾಗುತ್ತಿರುತ್ತದೆ...ಸಂಘರ್ಷವೆಂದರೇನು,ಹೇಗಿದೆ,ಯಾಕಿದೆ ಎಂದು ಇಡಿಯಾಗಿ ತಿಳಿದುಕೊಂಡಾಗ ಸಂಘರ್ಷಕೊನೆಗೊಳ್ಳುತ್ತದೆ.ಅನಂತರ ನಾವು ಮನೆಯನ್ನು ಕೆಡವಿಹಾಕುವ ಕೆಲಸಕ್ಕೆ ತೊಡಗಬಹುದು.ಅದು ಶತಮಾನಗಳ ಕಾಲ ದುಡಿದು ಕಟ್ಟಿಕೊಂಡಿರುವ ಅರ್ಥವಿಲ್ಲದ ಮನೆ.    

        ನಾಶಮಾಡುವುದೆಂದರೆ ಸೃಷ್ಟಿಸುವುದೆಂದೇ ಅರ್ಥ. ಕಟ್ಟಡಗಳನ್ನು. ಸಾಮಾಜಿಕ ಅಥವಾ ಆರ್ಥಿಕ ವ್ಯವಸ್ಥೆಯನ್ನು ನಾಶಮಾಡುವುದಲ್ಲ ಇದು. ಇವೆಲ್ಲ ಹೇಗೂ ದಿನದಿನವೂ ನಾಧವಾಗುತ್ತಲೇ ಇವೆ. ನಾವು ನಾಶಮಾಡಬೇಕಾದ್ದು ಮನಸ್ಸಿಗೆ ಸಂಬಂಧಿಸಿದೆ. ನಮಗೆ ಗೊತ್ತಿದ್ದೋ ಗೊತ್ತಿಲ್ಲದೆಯೋ ವಿಚಾರಗಳ ಮೂಲಕವಾಗಿ ಅನೇಕ ರಕ್ಷಣೆಗಳನ್ನು ನಮ್ಮ ಸುತ್ತ ಏರ್ಪಡಿಸಿದ್ದೇವೆ. ಒಬ್ಬೊಬ್ಬರಲ್ಲೂ ಸುರಕ್ಷತೆಯ ಅಪೇಕ್ಷೆ ಆಳವಾಗಿ ಬೇರುಬಿಟ್ಟುಕೊಂಡಿದೆ. ಎಲ್ಲ ರಕ್ಷಣೋಪಾಯಗಳನ್ನು ಪೂರ್ತಿಯಾಗಿ ಹರಿದು ಬಿಸಾಕಿ ಕೇವಲ -ಸಹಾಯಕರಾಗಬೇಕು. -ಸಹಾಯಕರಾಗಿದ್ದಾಗ ಮಾತ್ರ ಪ್ರೀತಿಸಲು, ಪ್ರೀತಿಯನ್ನು ಪಡೆಯಲು ಸಾಧ್ಯ ‌. ಅಧಿಕಾರ ಎಂದರೇನು ಎಂಬುದು ಕಾಣುತ್ತದೆ, ತಿಳಿಯುತ್ತದೆ‌. ಯಾವ ಬಗೆಯ ಅಧಿಕಾರ ಅಗತ್ಯ, ಎಷ್ಟು ಪ್ರಮಾಣದಲ್ಲಿ, ಯಾವ ಹಂತದಲ್ಲಿ ಅಗತ್ಯ ಎಂದು ತಿಳಿಯುತ್ತದೆ. ಕಲಿಕೆಯನ್ನು ನಿರ್ಧರಿಸುವ ಅಧಿಕಾರ, ಸಾಮರ್ಥ್ಯದ ಅಧಿಕಾರ, ಮಾಡುವ ಕೆಲಸದ ಮೂಲಕ  ದೊರೆಯುವ ಅಂತಸ್ತಿನ ಅಧಿಕಾರ, ಗುರುಗಳ,ಮೇಷ್ಟರ,ಇತರರ ಅಧಿಕಾರದ ಸ್ವರೂಪವನ್ನು ತಿಳಿಯಲು ಹರಿತವಾದ ಮನಸ್ಸು, ಸ್ಪಷ್ಟವಾದ ಮೆದುಳು ಇರಬೇಕು.

           ಮನಸ್ಸು ಅಧಿಕಾರಕ್ಕೆ ಒಳಪಡದೆ ಸ್ವತಂತ್ರವಾಗಿ ಇರಬಲ್ಲುದೆ? ಅಂದರೆ, ಭಯವಿಲ್ಲದೆ, ಸ್ವತಂತ್ರವಾಗಿ, ಏನನ್ನೂ ಯಾರನ್ನೂ ಹಿಂಬಾಲಿಸದೆ,ಇರಬಲ್ಲುದೇ? ಹಾಗಿರಲು ಸಾಧ್ಯವಾಗುವುದಾದರೆ ಅನುಕರಣೆ ಕೊನೆಗೊಳ್ಳುತ್ತದೆ. ಅನುಕರಣೆ ಕೇವಲ ಯಾಂತ್ರಿಕವಾದದ್ದು. ಶಿಸ್ತು ಎಂದು, ಸಿದ್ಧ ಸೂತ್ರವನ್ನು ಅನುಸರಿಸುತ್ತಾ ಗುಣವನ್ನು ಬೆಳೆಸಿಕೊಳ್ಳಲು ಬಯಸುವ ಮನಸ್ಸು ತಾನೇ ಅನೀತಿಯ ಸಮಸ್ಯೆಗಳನ್ನು ಹುಟ್ಟುಹಾಕುತ್ತದೆ.

            ದೇವರು, ನೀತಿ ಇತ್ಯಾದಿಯಾಗಿ ತನಗಿಂತ ಹೊರಗೆ ಇರುವ ಅಧಿಕಾರ ಕೇಂದ್ರವೊಂದನ್ನು ಮನಸ್ಸು ಕಲ್ಪಿಸಿಕೊಳ್ಳುತ್ತದೆ. ಬಾಹ್ಯವಾದ ಅಧಿಕಾರ ಕೇಂದ್ರ ವಿನಾಶಕಾರಿ ಯಾಗುತ್ತದೆ.ಇಂಥ ಅಧಿಕಾರ ಕೇಂದ್ರಗಳನ್ನು ಕಲ್ಪಿಸಿಕೊಂಡು ಮೂಲಕ ನಿಜವಾದ ಗುಣವನ್ನು ಅರಿಯಲು  ಸಾಧ್ಯವಿಲ್ಲ. ನಮ್ಮ ಜ್ಞಾನರೂಪದ, ನಮ್ಮ ಅನುಭವವನ್ನು ಅಧಿಕಾರವೆಂದು ಕಲ್ಪಿಸಿಕೊಂಡು ಅದನ್ನು ಅನುಸರಿಸಲು ಬಯಸುತ್ತೇವೆ‌. ಇದರಿಂದ ಮಾಡಿದ್ದನ್ನೇ ಮಾಡುತ್ತಾ, ಗೊತ್ತಿರುವುದನ್ನೇ ಅನುಕರಿಸತ್ತಾ ಇರುತ್ತೇವೆ. ಅಧಿಕಾರವೆಂದರೆ ಕಾನೂನಿನ ಅಧಿಕಾರವಲ್ಲ, ಮಾನಸಿಕ ಅಧಿಕಾರ. ಮಾನಸಿಕ ಅಧಿಕಾರ ಗುಣಗಳನ್ನು ನಾಶಮಾಡುತ್ತದೆ. ಏಕೆಂದರೆ ಗುಣವೆಂಬುದು ಜೀವಂತವಾದದ್ದು, ಸದಾ ಚಲಿಸುತ್ತಿರುವಂಥದ್ದು. ಬಹುಶಃ ವಿನಯವನ್ನು ರೂಡಿಸಿಕೊಳ್ಳಲು ಸಾಧ್ಯವಿಲ್ಲ. ಪ್ರೀತಿಯನ್ನು ರೂಢಿಸಿಕೊಳ್ಳಲು ಸಾಧ್ಯವಿಲ್ಲ, ಹಾಗೆಯೇ ಗುಣವನ್ನು ಕೂಡ ರೂಢಿಸಿಕೊಳ್ಳಲು  ಸಾಧ್ಯವಿಲ್ಲ. ಇದೆ ಗುಣದ ಸೌಂದರ್ಯ, ಗುಣ ಯಾಂತ್ರಿಕವಾದದ್ದಲ್ಲ.

             ಅನೇಕ ಜಾತಿ,ಧರ್ಮ, ಮೂಢನಂಬಿಕೆ, ಭಯಗಳಿಗೆ ಒಗ್ಗಿಹೋಗಿರುವ, ರೂಢಿಗತವಾದ ಮನಸ್ಸು ತನ್ನನ್ನು ತಾನು ಬಿಡಿಸಿಕೊಂಡು ಹೊಸ ಮನಸ್ಸು ಆಗುವುದು ಸಾಧ್ಯವೇ? ಇದೇ ನಿಜವಾದ ಸಮಸ್ಯೆ. ಅಧಿಕಾರ ಎಂಬ ಮಾತನ್ನು ಇಲ್ಲಿ ಕಾನೂನಿನ ಅರ್ಥದಲ್ಲಿ ಬಳಸುತ್ತಿಲ್ಲ, ಸಂಪ್ರದಾಯದ ಅಧಿಕಾರ, ಜ್ಞಾನದ ಅಧಿಕಾರ, ಅನುಭವದ ಅಧಿಕಾರ, ಎಂಬ ಅರ್ಥದಲ್ಲಿ ಬಳಸುತ್ತಿದ್ದೇನೆ. ನಮ್ಮ ಮನಸ್ಸು ಯಾವಾಗಲೂ ಸುರಕ್ಷತೆಯನ್ನು ಹುಡುಕುತ್ತಿರುತ್ತದೆ. ತಳಮಳಕ್ಕೆ ಒಳಗಾಗದೆ, ನೆಮ್ಮದಿಯಾಗಿರಲು ಒಂದು ತಾಣವನ್ನು ಬಯಸುತ್ತಿರುತ್ತದೆ. ಅಧಿಕಾರ ಅಂಥ ಸುರಕ್ಷಿತ ತಾಣವನ್ನು ಒದಗಿಸುತ್ತದೆ‌. ಇದು ತನ್ನಷ್ಟಕ್ಕೇ ತಾನೇ ಒಪ್ಪಿಕೊಂಡ ವಿಚಾರದ ಅಧಿಕಾರವಾಗಿರಬಹುದು, ಅಥವಾ ದೇವರನ್ನು ಕುರಿತ ಧಾರ್ಮಿಕ ವಿಚಾರವೇ ಅಧಿಕಾರವಾಗಿರಬಹುದು, ಯಾವ ವಿಚಾರವೂ ಧಾರ್ಮಿಕ ಮನುಷ್ಯನಿಗೆ ನಿಜವಾದುದ್ದಲ್ಲ, ವಾಸ್ತವದುದ್ದಲ್ಲ. ನೀವು ದೇವರನ್ನು ನಂಬ ಬಹುದು, ಆದರೂ ಅದು ಕೇವಲ ಕಲ್ಪನೆ. "ದೇವರನ್ನು ಕಾಣಬೇಕಾದರೆ ಕಲ್ಪನೆಯನ್ನು ಪೂರ್ಣವಾಗಿ ನಾಶಮಾಡಬೇಕು". ಯಾಕೆಂದರೆ ಹಳೆಯ ಮನಸ್ಸು ಭೀತಮನಸ್ಸು. ಆಸೆ ತುಂಬಿದ ಮನಸ್ಸು, ಸಾಯುವ ಬಗ್ಗೆ, ಬದುಕುವ ಬಗ್ಗೆ, ಸಂಬಂಧಗಳ ಬಗ್ಗೆ ಕಳವಳ ತುಂಬಿದ ಮನಸ್ಸು. ಗೊತ್ತಿದ್ದೋ ಇಲ್ಲದೆಯೋ ಸದಾ ಶಾಶ್ವತವನ್ನು, ಸುರಕ್ಷತೆಯನ್ನು ಬಯಸುವ ಮನಸ್ಸು ಸಿದ್ಧ ಅಧಿಕಾರದತ್ತಾ ವಾಲುತ್ತದೆ. (ಇಲ್ಲಿ ಅಧಿಕಾರ ಅನ್ನುವ ಪದ ಪೂರ್ವಗ್ರಹವಾಗಿ ಕಾಡುವ ನಮ್ಮ ಹಳೆಯ ಜ್ಞಾನ ಮತ್ತು ನಮ್ಮ ಸಿದ್ದಾಂತಗಳ ಅತಿಯಾದ ಅಭಿಮಾನ, ಅದು ನನ್ನುದು ಅನ್ನುವ ಅಧಿಕಾರಯುತ ನಿಲುವನ್ನು ಸೂಚಿಸುತ್ತದೆ.)

(ಮುಂದುವರೆಯುವುದು)
ಮೂಲ: ಜಿಡ್ಡು ಕೃಷ್ಣಮೂರ್ತಿ ಪುಸ್ತಕಗಳು
: ಕಣಬ್ರಹ್ಮವೆಂಕಿ (ವೆಂಕಟೇಶ ಭಂಡಾರಿ), ಭಂಡಾರಿ ವಾರ್ತೆ



3 comments:

  1. ಮನುಷ್ಯ ಮಾನವನಾಗಬೇಕು...
    ಮನುಷ್ಯ ಮಾನವಂತನಾಗಬೇಕು....ಈ ನಿಟ್ಟಿನಲ್ಲಿ ಜಿಡ್ಡು ಪ್ರವಚನ ದಾರಿದೀಪ.ಮುಂದುವರೆಯಲಿ....

    ReplyDelete