BhandaryVarthe Team

BhandaryVarthe Team
Bhandary Varthe Team

Wednesday 26 July 2017

ತುಳುನಾಡಿನಲ್ಲಿ ನಾಗಾರಾಧನೆ


     
ತುಳುನಾಡು ಪುರಾಣಕಾಲದ ನಾಗಲೋಕವೆಂದೂ, ಇಲ್ಲಿ ಇರುವ ನಾಗಗಳೇ ಮನುಷ್ಯರಾಗಿ ಪರಿವರ್ತನೆಗೊಂಡರೆಂಬುದು ಪುರಾಣದ ಉಲ್ಲೇಖ. ನಾಡು ತಲಸಿರಿಯ ಮಕ್ಕಳಾದ ನಲವತ್ತು ಜನ ನಾಗಕನ್ಯೆಯರ ಅಧಿಕಾರದಲ್ಲಿತ್ತೆಂದು ಜಾನಪದ ಇತಿಹಾಸದಲ್ಲಿದೆ. ಮಲಸಿರಿಯ ಮಕ್ಕಳು 60 ಜನ ನಾಗಕನ್ಯೆಯರು ಮಲಯಾಳ ರಾಜ್ಯವನ್ನು ಆಳುತ್ತಿದ್ದರೆಂದೂ, ತುಳುನಾಡು ಮತ್ತು ಮಲಯಾಳದಲ್ಲಿ ನಾಗಮೂಲ ಕಟ್ಟಾದ ಅಳಿಯಕಟ್ಟಿನವರು ಇದ್ದೂ, ಅವರು ನಾಗಾರಾಧಕರಾಗಿ ಇರುವುದನ್ನು ಕಾಣುತ್ತಿದ್ದೇವೆ. ಇಲ್ಲಿ ಹೆಣ್ಣು ಮೂಲಕಟ್ಟಿಗೆ ವಾಸುಕಿಯೇ ಕಾರಣ, ತನ್ನ ಸೊಸೆಯಂದಿರಿಗೆ ನಾಡಿನ ಆಳ್ವಿಕೆ ಬಿಟ್ಟು ಕೊಟ್ಟಿದ್ದು, ತುಳುವರು ನಾಗವಂಶಜರೆಂದೆ ಐತಿಹ್ಯ. ಇಲ್ಲಿ ನಾಗರ ಆರಾಧನೆ ವಿಶೇಷವಾಗಿ ಇದೆ. ಆರಾಧನೆಯಲ್ಲಿ ರಾಹುವಿಗೆ ಪ್ರಾಮುಖ್ಯತೆ ಇದೆ. ಜ್ಯೋತಿಷ್ಯ ಗ್ರಂಥಗಳಲ್ಲಿ ರಾಹುವಿನಿಂದ ನಾಗದೋಷಗಳನ್ನು ತಿಳಿಯುವುದು ಸುಲಭ. ಶನಿ-ಕುಜರು  ಕೂಡಾ ನಾಗಕಾರಕರೆ ಆದರೂ, ನಾಗನ ಬಗ್ಗೆ ಹೆಚ್ಚಿನ ವಿಚಾರ ರಾಹುವಿನಿಂದಲೇ ತಿಳಿಯುವರು. ನಾಗರ ಆರಾಧನೆ ಒಂದು ಪ್ರಕೃತಿ ಪೂಜೆ. ತಮ್ಮ ಗದ್ದೆಗಳ ಮೂಲೆಯಲ್ಲಿ  ನಾಗಬನಗಳನ್ನು ಬೆಳೆಸಿ, ಉಳಿಸಿ ನಾಗರ ಕಲ್ಲನ್ನು ಮರದ ಬುಡದಲ್ಲಿ ಪ್ರತಿಷ್ಠೆ ಮಾಡಿ, ಬನದ ಮರಗಳನ್ನು ರಕ್ಷಿಸಿ ಖಗ, ಮಿಗ, ಉರಗಗಳಿಗೆ ಒಂದು ನೆಲೆಮಾಡಿಕೊಟ್ಟು ತಮ್ಮ ಔದಾರ್ಯವನ್ನು ತುಳುವರು ಮೆರೆದಿದ್ದಾರೆ.

ಆಟಿ ತಿಂಗಳಲ್ಲಿ ಬರುವ ನಾಗರಪಂಚಮಿಯಂದು ನಾಗರಕಲ್ಲಿಗೆ ಹಾಲನ್ನು ಎರೆಯುವುದು, ತಂಬಿಲ ಬಡಿಸುವುದು, ತುಳುವರ ಪ್ರಕೃತಿಪೂಜೆಯ ಕ್ರಮ. ನಾಗಬನದ ಸ್ಥಾಪನೆ ಮಾಡಿದ ಕುಟುಂಬಕ್ಕೆ ಎಲ್ಲಿ ನಾಗರ ಸ್ಥಾಪನೆ ಮಾಡಿರುವುದೋ ಅಲ್ಲೇ ಮೂಲಸ್ಥಾನವೆಂದೂ, ಬನದಲ್ಲಿ ವಾರ್ಷಿಕ ತಂಬಿಲ, ಹಾಲೆರೆಯುವ ಕಾರ್ಯಕ್ರಮ ಈಗಲೂ ಮಾಡುತ್ತಿದ್ದಾರೆ. ಪಂಚಾಮೃತ, ಸರ್ಪಸೂಕ್ತ ಹೋಮ, ಆಶ್ಲೇಷಬಲಿ ಇತ್ಯಾದಿ ನಾಗಾರಾಧನೆಯು ಈಗಲೂ ನಡೆಯುತ್ತಿದೆ. ಆದರೆ, ಹಿಂದೆ ಹಿಂದುಳಿದ ವರ್ಗದ ವೈದ್ಯರು ಢಕ್ಕೆ ಬಡಿದು ಭಜನೆಯ ಮೂಲಕ ಕುಣಿದು ನಾಗನನ್ನು ಮೆಚ್ಚಿಸುವಂತ ಕ್ರಮ ಇತ್ತು. ಈಗಲೂ ಖಡ್ಗೇಶ್ವರಿ ಎಂಬ ನಾಗಕನ್ನಿಕೆಯ ಪ್ರೀತ್ಯಾರ್ಥ ಢಕ್ಕೆ ಬಲಿ ನಡೆಯುತ್ತಿದೆ. ಮೇರಜನಾಂಗದವರ ಕಾಡ್ಯನಾಟ್ಯದ ಮೂಲದಲ್ಲಿ ವಿಶೇಷವಿದೆ. ಅದನ್ನು ಕಂಡು ನಾಗಮಂಡಲವೆಂದೂ, ಅರ್ಧನಾರಿ ಮತ್ತು ದರ್ಶನಪಾತ್ರಿಗಳ ಒಂದು ವಿಶೇಷ ಆರಾಧನೆ ನಡೆಯುತ್ತಿದ್ದು, ಇದು ನಾಗಾರಾಧನೆಯ ಮೂಲಸ್ವರೂಪ ಖಂಡಿತಾ ಅಲ್ಲ. ನಾಗ ಮನುಷ್ಯನ ಮೈಮೇಲೆ ಆಕರ್ಷಣೆಯಾಗುವುದಿಲ್ಲ. ಹಣಗಳಿಸಲು ಒಂದು ವರ್ಗ ಕಂಡುಕೊಂಡ ದಾರಿ ಇದು. ನಾಗಪಾತ್ರಿಗೆ ದರ್ಶನ ಬಂದು, ಬನದ ಮರಗಳನ್ನು ಕಡಿಸಿ, ನಾಗರ ಕಟ್ಟೆ, ಗುಡಿ ಕಟ್ಟಿಸಲು ಮಾರ್ಗದರ್ಶನ ನೀಡುವುದನ್ನು ನೋಡಿದರೆ ಪ್ರಕೃತಿನಾಶಕ್ಕೆ ಪಾತ್ರಿಯೆ ಕಾರಣನಾಗಿರುವುದು ಸತ್ಯ. ಬೂತ ನಾಗರ ನಡುವೆ ಜನರನ್ನು ವಂಚಿಸುವ ನಾಟಕಕ್ಕೆ ಇವರೇ ಕಾರಣವೆಂಬುದನ್ನು ಎಲ್ಲರೂ ತಿಳಿಯಲೇಬೇಕು.

     ನಾಗನನ್ನು ಹಿಂಸಿಸುವುದು ತಪ್ಪು. ನಾಗ ಸತ್ತರೆ ಸಂಸ್ಕಾರ ಮಾಡಿಸುವ ಕ್ರಮ, ಆಶ್ಲೇಷಬಲಿ ಮಾಡಿಸುವ ಕ್ರಮ ಹಿಂದಿನಿಂದಲೂ ಕಾಣುತ್ತಿದ್ದೇವೆ. ಸರ್ಪಗಳು ಸುರಸೆಯ ಮಕ್ಕಳು, ಸರ್ಪಗಳನ್ನು ಈಗಲೂ ಕಾಣುತ್ತಿದ್ದೇವೆ. ಕದ್ರುವಿನ ಮಕ್ಕಳಾದ ನಾಗಗಳು ಕಾಣಿಸುವುದಿಲ್ಲ. ನಾವು ನಾಗರ ಆರಾಧನೆಯನ್ನು ಕಲ್ಲಿಗೆ  ಹಾಲೆರೆದು, ತಂಬಿಲಹಾಕಿ ಮಾಡುತ್ತಿದ್ದು, ಕೆಲವೆಡೆ ಜೀವಂತ ಸರ್ಪಗಳನ್ನು ಕೂಡಾ ಪೂಜಿಸುವುದಿದೆ. ಒಟ್ಟಿನಲ್ಲಿ ನಾಗಾರಾಧನೆ ಒಂದು ವಿಶೇಷ ಪ್ರಕೃತಿ ಪೂಜೆ. ಮನುಷ್ಯನ ಪ್ರಾರಬ್ಧ ದೋಷಗಳನ್ನು ನಿವಾರಿಸುವ ಆರಾಧನೆಗೆ ವಿಶೇಷ ಮಹತ್ವವಿದೆ.
          ದಿನಾಂಕ 27/07/2017 ರಂದು ನಾಗಾರಾಧನೆಯ ವಿಶಿಷ್ಟ ನಾಗರಪಂಚಮಿ ಇದ್ದು, ನಾಡಿನ ಜನ ನಾಗಾರಾಧನೆಯನ್ನು ಸಂಭ್ರಮ ದಿಂದ ಆಚರಿಸುತ್ತಾರೆ. ಮನುಷ್ಯನ ಪಿಟ್ಯೂಟರಿ ಗ್ರಂಥಿಗೂ, ನಾಗಹೆಡೆಗೂ ಒಂದು ವೈಜ್ಞಾನಿಕ ಸಂಬಂಧವಿದೆ. ಆದ್ದರಿಂದ  ನಾಗನನ್ನು ಕಂಡರೆ ನಮಗೆ ಹೆದರಿಕೆಯಾಗುತ್ತದೆ. ನಾಗ ಪರೋಪಕಾರಿ ಜೀವಿ. ಜನವರಿ ತಿಂಗಳಿನಿಂದ ಜೂನ್ ತಿಂಗಳವರೆಗೆ ಸರ್ಪಗಳ ಮಿಲನವಾಗುತ್ತದೆ. ನಲವತ್ತು ದಿನಗಳು ಮಿಲನದಿಂದವಿಶೇಷ ಆಮ್ಲಜನಕ ಗಾಳಿಯೊಡನೆ ಸೇರಿ, ನಮ್ಮ ನರಮಂಡಲಕ್ಕೆ ಪುಷ್ಠಿ ಕೊಡುತ್ತದೆ ಎಂಬುದು ವಿಜ್ಞಾನಿಗಳ ಅಂಬೋಣ. ಅಂತೂ ಸರ್ಪ ಸಂಬಂಧ ನಮಗಿದೆ. ನಾಗಮಂಡಲ, ನಾಗದರ್ಶನದ ನಾಟಕಗಳನ್ನು ಬಿಟ್ಟರೆ, ಉಳಿದ ಆರಾಧನೆಗೆ ಪುರಾತನ ಇತಿಹಾಸವಿದೆ ಎಂಬುದು ಸತ್ಯ.


🏻 : ಕೆ. ಅನಂತರಾಮ ಬಂಗಾಡಿ

5 comments:

  1. ಸೂಪರ್ ಸರ್,ನಿಮ್ಮಿಂದ ಇನ್ನೂ ಹೆಚ್ಚು ಹೆಚ್ಚು ಮಾಹಿತಿಗಳ ನಿರೀಕ್ಷೆ ನಮಗಿದೆ.

    ReplyDelete
  2. ಸೂಪರ್ ಸರ್,ನಿಮ್ಮಿಂದ ಇನ್ನೂ ಹೆಚ್ಚು ಹೆಚ್ಚು ಮಾಹಿತಿಗಳ ನಿರೀಕ್ಷೆ ನಮಗಿದೆ.

    ReplyDelete
  3. ಸೂಪರ್..

    ReplyDelete
  4. ನಾಗಾರಾಧನೆ ಎಂಬುದು ಒಂದು ಪ್ರಕೃತಿ ಪೂಜೆ.ಹಿಂದುಗಳಲ್ಲಿ ನಾಗಾರಾಧನೆಗೆ ವಿಶೇಷ ಸ್ಥಾನಮಾನವಿದೆ ಎಂಬುದನ್ನು ತಿಳಿಸಿಕೊಟ್ಟ ಲೇಖನ. ಚೆನ್ನಾಗಿತ್ತು.

    ReplyDelete