BhandaryVarthe Team

BhandaryVarthe Team
Bhandary Varthe Team

Wednesday 15 September 2021

ಕಣ್ಣಿನ ಆರೋಗ್ಯಕ್ಕೆ ಆಯುರ್ವೇದ ಸೂತ್ರಗಳು.

 ಕಣ್ಣಿನ ಆರೋಗ್ಯ ರಕ್ಷಿಸಿ ಪೋಷಿಸುವುದು ಬಹಳ ಅವಶ್ಯಕ. ಕಣ್ಣುಗಳು ಮಾನವನಿಗೆ ಪ್ರಮುಖವಾದ ಇಂದ್ರಿಯ ಅಥವಾ ಅಂಗ. ಹೊರ ಜಗತ್ತನ್ನು ನೋಡಿ ಆನಂದಿಸಲು ಇರುವ ಪ್ರಮುಖ ಸಾಧನ ನಯನ ಅಥವಾ ಕಣ್ಣುಗಳು.

 


ಕಣ್ಣುಗಳು ಬಹಳ ಸೂಕ್ಷ್ಮವಾದ ಅಂಗಗಳು. ಇವುಗಳನ್ನುರಕ್ಷಿಸಿ ಪೋಷಿಸುವುದು ಬಹಳ ಅವಶ್ಯಕ. ಬದಲಾದ ಜೀವನ ಶೈಲಿ, ಆಹಾರ ಮತ್ತು ವಾತಾವರಣದಲ್ಲಿನ ಪ್ರದೂಷಣೆ ಕಣ್ಣಿನ ಆರೋಗ್ಯವನ್ನು ನಾಶಗೊಳಿಸುತ್ತದೆ. ಆಯುರ್ವೇದ ಕಣ್ಣುಗಳಿಗೆ ಮಹತ್ವವನ್ನು ನೀಡುತ್ತಾ "ಸರ್ವೇಂದ್ರಿಯಾಣಾಮ್ ನಯನಂ ಪ್ರಧಾನಂ" ಅಂದರೆ ಎಲ್ಲ ಇಂದ್ರಿಯಗಳಲ್ಲಿ ಕಣ್ಣು ಪ್ರಧಾನವಾದದ್ದು ಎಂದು ಅರ್ಥ.

ಕಣ್ಣಿನ ಆರೋಗ್ಯಕ್ಕೆ ಸುಲಭ ಸೂತ್ರಗಳು :

  • ನೀರಿನಿಂದ ಶುದ್ಧಗೊಳಿಸುವುದು : ಬೆಳಗ್ಗೆ ಎದ್ದ ಕೂಡಲೇ ಮುಖ ತೊಳೆಯುವಾಗ, ಬಾಯಲ್ಲಿ ನೀರು ತುಂಬಿಸಿಕೊಂಡು ಕಣ್ಣುಗಳಿಗೆ ನೀರು ಸಿಂಪಡಿಸುವುದರಿಂದ ಕಣ್ಣುಗಳು ಶುದ್ಧ ಹಾಗೂ ಫ್ರೆಶ್ ಆಗುತ್ತದೆ. ಆದರೆ ಅತಿಯಾದ ಶೀತ ಮತ್ತು ಬಿಸಿ ನೀರಿನಿಂದ ಕಣ್ಣನ್ನು ಶುದ್ಧಗೊಳಿಸಬಾರದು.

 

  • ಸೂರ್ಯನನ್ನು ನೋಡುವುದು: ಸೂರ್ಯೋದಯವಾಗುವ ಸಮಯದಲ್ಲಿ ಸೂರ್ಯನನ್ನು ನೋಡುವುದರಿಂದ ದೃಷ್ಟಿ ಉತ್ತಮವಾಗುತ್ತದೆ. ಆಲ್ಲದೆ ಮೂರನೇ ಕಣ್ಣು ಎಂದು ತಿಳಿಸುವ ಪೀನಲ್ ಗ್ರಂಥಿಯು ಪ್ರಚುರವಾಗುತ್ತದೆ. ಸೂರ್ಯನ ತೀಕ್ಷ್ಣ ಕಿರಣಗಳನ್ನು ನೋಡಬಾರದು.

 

  • ತ್ರಾಟಕ ಕ್ರಿಯೆ: ಕಣ್ಣಿನ ತೊಂದರೆಗಳನ್ನು ನಿವಾರಿಸಲು ಬಹು ಉಪಕಾರಿ. ಕಣ್ಣುಗಳನ್ನು ಮಿಟುಕಿಸದೆ ಕತ್ತಲೆ ಕೋಣೆಯಲ್ಲಿತುಪ್ಪದ ದೀಪದ ಜ್ಯೋತಿಯನ್ನು 2-3  ನಿಮಿಷ ಸತತವಾಗಿ ನೋಡುವುದರಿಂದ ದೃಷ್ಟಿಯ ಶಕ್ತಿ ಮತ್ತು ಕಣ್ಣಿನ ಕಾಂತಿ ಹೆಚ್ಚುವುದು.

 

  • ಪಾದಾಭ್ಯಂಜನ: ಪಾದಗಳನ್ನು ಗಿಡಮೂಲಿಕೆಯುಕ್ತವಾದ ಎಣ್ಣೆಯನ್ನು ಸ್ವಲ್ಪ ಬೆಚ್ಚಗೆ ಮಾಡಿ ಹಚ್ಚಿ ಮೃದುವಾಗಿ ಅಭ್ಯಂಜನ ಮಾಡುವುದರಿಂದ ರಕ್ತ ಸಂಚಾರ ಹೆಚ್ಚಾಗಿ ದೃಷ್ಟಿಯ, ಮಾನಸಿಕ ಆರೋಗ್ಯ ಮತ್ತು ಮನಸ್ಥಿತಿ ಉತ್ತಮಗೊಳ್ಳುತ್ತದೆ. ಅಭ್ಯಂಜನದಿಂದ ಪಾದಗಳಲ್ಲಿನ ದೃಷ್ಟಿಗೆ ಸಂಬಂಧಿಸಿದ ಕೆಲವು ನಿರ್ದಿಷ್ಟ ಬಿಂದುಗಳು ಪ್ರಚುರವಾಗುತ್ತವೆ. ಆದರೆ ಜ್ವರ ಶೀತ, ನೆಗಡಿ ಇರುವಾಗ ಮಾಡಬಾರದು.
  •  
  • ಕಣ್ಣಿಗೆ ಆಯುರ್ವೇದ ವಿಶೇಷ ಚಿಕಿತ್ಸೆಗಳು: ಅಕ್ಷಿ ತರ್ಪಣ, ಕ್ರೀಯಾ ಕಲ್ಪ ಚಿಕಿತ್ಸೆಗಳು, ನಸ್ಯ ಕರ್ಮಾ ಬಹು ಉಪಯೋಗಿ-ಆದರೆ ಆಯುರ್ವೇದ ವೈದ್ಯರ ನಿರ್ದೇಶನದ ಮೇಲೆ ಚಿಕಿತ್ಸೆ ಪಡೆಯಬೇಕು

ಕಣ್ಣಿನ ರೋಗಗಳಿಗೆ ಸಾಮಾನ್ಯ ಕಾರಣಗಳು:

  • ಬದಲಾದ ಜೀವನ ಪದ್ಧತಿ
  • ಪೋಷಕಾಂಶಗಳ ಕೊರತೆ
  • ದುರಭ್ಯಾಸಗಳು
  • ಕೊಬ್ಬು, ಜಿಡ್ಡಿನ ಅತಿಯಾದ ಸೇವನೆ
  • ಜಂಕ್ ಆಹಾರಗಳು
  • ಅತಿಯಾದ ಮಾನಸಿಕ ಒತ್ತಡ
  • ಟಿ.ವಿ , ಮೊಬೈಲ್ ಮತ್ತು ಕಂಪ್ಯೂಟರ್ ನ ಅತಿಯಾದ ವೀಕ್ಷಣೆ
  • ನಿದ್ರಾ ಹೀನತೆ
  • ಮಧುಮೇಹ, ರಕ್ತದೊತ್ತಡ,ರೆಟಿನೋಪತಿ, ಕಂಪ್ಯೂಟರ್ ಸಿಂಡ್ರೋಮ್ ನಂತಹ ರೋಗಗಳು

ನೈಸರ್ಗಿಕವಾಗಿ ಕಣ್ಣಿನ ದೃಷ್ಟಿಯನ್ನು ಉತ್ತಮಗೊಳಿಸುವ ವಿಧಾನಗಳು.

  • ಕೆಲವೊಂದು ಯೋಗ ಅಥವಾ ಕಣ್ಣಿನ ವ್ಯಾಯಾಮಗಳು : ಸುಖಾಸನದಲ್ಲಿ ಕುಳಿತು ಕಣ್ಣಿನ ಗುಡ್ಡೆಯನ್ನು ಮೇಲೆ , ಕೆಳಗೆ , ಎಡ -ಬಲ ಹೀಗೆ ಪುನರಾವರ್ತಿತವಾಗಿ ಬಹಳಷ್ಟು ಸಲ ಮಾಡಬೇಕು.

 

  • 2 ನಿಮಿಷ ವಿಶ್ರಾಂತಿ - ಕಂಪ್ಯೂಟರ್ ನಲ್ಲಿ ಸತತವಾಗಿ ಕೆಲಸ ಮಾಡುವಾಗ 2 ನಿಮಿಷ ವಿಶ್ರಾಂತಿ ಪಡೆದು ದೂರದ ವಸ್ತುವನ್ನು ನೋಡಿ ಮನೆ ಹತ್ತಿರದ ವಸ್ತುವನ್ನು ಒಂದರ ನಂತರ ಒಂದರಂತೆ ನೋಡುವುದರಿಂದ ಕಣ್ಣಿಗೆ ಆಗುವ ಒತ್ತಡ ನಿವಾರಣೆಯಾಗುತ್ತದೆ.

 

  • ಕಣ್ಣು ಮಿಟುಕಿಸುವುದು-ಸರಿಯಾಗಿ ಕಣ್ಣು ಮಿಟುಕಿಸುವುದರಿಂದ ಕಣ್ಣಿನ ಒತ್ತಡ ಕಡಿಮೆಯಾಗಿ ಕಣ್ಣುಗಳು ಆರಾಮವಾಗುತ್ತದೆ.ಸುಖಾಸನದಲ್ಲಿ ಕುಳಿತು 10 ಸೆಕೆಂಡ್ ಕಣ್ಣು ಮಿಟುಕಿಸಿ, ನಂತರ ಕಣ್ಣು ಮುಚ್ಚಿ 20 ಸೆಕೆಂಡ್ ವಿಶ್ರಾಂತಿ ಪಡೆಯಬೇಕು.

ಕೆಲವು ಮನೆ ಮದ್ದುಗಳು:

  • ಎರಡು ಹನಿ ಅರಳೆಣ್ಣೆಯನ್ನು ಎರಡು ಕಣ್ಣುಗಳಿಗೆ ಮಲಗುವಾಗ ಹಾಕುವುದರಿಂದ ಕಣ್ಣಿನ ಕಾರ್ಯ ಕ್ಷಮತೆ ಹೆಚ್ಚುತ್ತದೆ.(ಪ್ರಿಸರ್ವೇಟಿವ್ ಇಲ್ಲದ ಒಳ್ಳೆಯ ಎಣ್ಣೆಯನ್ನು ಬಳಸಬೇಕು)

 

  • ಸಣ್ಣ ಹತ್ತಿಯ ಉಂಡೆಯನ್ನು ಮೇಕೆಯ ಹಾಲಿನಲ್ಲಿ ಅದ್ದಿ, ಕಣ್ಣುಗಳ ಮೇಲೆ ಇರಿಸುವುದರಿಂದ ಕಣ್ಣಿನ ಒತ್ತಡ ನಿವಾರಣೆಯಾಗುತ್ತದೆ.ಮತ್ತು ಹಿತಕರ ಅನುಭವ ನೀಡುತ್ತದೆ.

 

  • ಕಣ್ಣಿನ ಮೇಲೆ ಹಚ್ಚಿದ ಸೌತೆಕಾಯಿ ತುಂಡುಗಳನ್ನು ಇಡುವುದರಿಂದ ಕಣ್ಣಿಗಾಗುವ ಕಿರಿ ಕಿರಿ ಊಟ ಕಡಿಮೆಯಾಗುವುದು, ನೀರಿನಂಶ ಸಿಗುವುದರಿಂದ ಒಣ ಕಣ್ಣಿನ ಸಮಸ್ಯೆ ನಿವಾರಣೆಯಾಗುವುದು.

 

  • ಕಣ್ಣಿನ ಸುತ್ತ ಒಣ ಚರ್ಮ, ಕಪ್ಪು ಕಲೆಯಿದ್ದರೆ ಬಾದಾಮಿ ಎಣ್ಣೆಯಿಂದ ಅಭ್ಯಂಜನ ಮಾಡುವುದರಿಂದ ನಿವಾರಣೆಯಾಗುತ್ತದೆ.

ಇವುಗಳನ್ನು ನಿಷೇಧಿಸಬೇಕು

  • ಅತೀ ಹೆಚ್ಚಿನ ಖಾರ, ಉಪ್ಪಿನ ಪದಾರ್ಥಗಳು
  • ಕಾರ್ಬೊನೇಟೆಡ್ ಪಾನೀಯ
  • ಅತಿಯಾದ ಬಿಸಿ ನೀರಿನ ಸ್ನಾನ
  • ರಾತ್ರಿ ಜಾಗರಣೆ , ಹಗಲಲ್ಲಿ ನಿದ್ರಿಸುವುದು
  • ತುಂಬಾ ಎತ್ತರದ ಅಥವಾ ಸಣ್ಣ ತಲೆದಿಂಬಿನ ಬಳಕೆ
  • ಅತಿಯಾದ ಕೋಪ, ದುಃಖ, ಅಳು
  • ಕಲುಷಿತ ಗಾಳಿಯಲ್ಲಿ ವಿಹರಿಸುವುದು.
  • ಧೂಮಪಾನ, ಮದ್ಯಪಾನ , ತಂಬಾಕು
  • ಟಿ. ವಿ , ಕಂಪ್ಯೂಟರ್, ಮೊಬೈಲ್ ಅತಿಯಾದ ಬಳಕೆ

ಕಣ್ಣಿನ ಆರೋಗ್ಯಕ್ಕೆ ಹಿತಕರವಾದ ಆಹಾರ

  • ವಿಟಮಿನ್ ಎ ಯುಕ್ತ ಹಣ್ಣು , ತರಕಾರಿಯ ಸೇವನೆ, ಉದಾ : ಕ್ಯಾರಟ್, ಖರ್ಜೂರ, ಬೀಟ್ ರೂಟ್ , ಎಲೆಕೋಸು
  • ಬಸಳೆ ಸೊಪ್ಪು, ಪಾಲಕ್ ಸೊಪ್ಪು, ಹೊನಗೊನ್ನೆ ಸೊಪ್ಪು
  •  ಬಾದಾಮಿ, ನೆಲ್ಲಿಕಾಯಿ, ಕೆಂಪು ಅಕ್ಕಿ, ಗೋದಿ , ಬಾರ್ಲಿ
  • ತ್ರಿಫಲ, ಸೋಂಪು
  • ಶುದ್ಧವಾದ ನೀರು , ಹಾಲು , ದಾಳಿಂಬೆ
  • ಕಲ್ಲುಪ್ಪು, ಹೆಸರು ಕಾಳು, ಹೆಸರು ಬೇಳೆ
  • ಸರಿಯಾದ ನಿದ್ದೆ

 

ಹೀಗೆ ಆಯುರ್ವೇದದಲ್ಲಿ ಹೇಳಿರುವ ದಿನಚರಿ, ಋತುಚರಿ ಪಾಲಿಸುವುದರಿಂದ ಕೆಲವು ವಿಶೇಷ ನೇತ್ರ ಚಿಕಿತ್ಸೆಗಳನ್ನು ಪಡೆಯುವುದರಿಂದ ಕಣ್ಣಿನ ರೋಗ ತಡೆಯಬಹುದು.ಉತ್ತಮ ದೃಷ್ಟಿಯನ್ನು ಹಲವು ವರ್ಷಗಳ ಉಳಿಸಿಕೊಳ್ಳಬಹುದು.

ಸಂಗ್ರಹ : ಕುಶಲ್ ಭಂಡಾರಿ, ಬೆಂಗಳೂರು



No comments:

Post a Comment