BhandaryVarthe Team

BhandaryVarthe Team
Bhandary Varthe Team

Thursday 30 September 2021

ಪುತ್ತೂರು ಬಾಲಕೃಷ್ಣ ಭಂಡಾರಿಯವರಿಗೆ ಎಸ್ ಎಂ ಇ ಇಂಜಿನಿಯರಿಂಗ್ ಇಂಡಿಯಾ ಅವಾರ್ಡ್ 2021

ಪೂನಾದ ಕ್ಯಾಬಿನೆಟ್ ಸಿಸ್ಟಮ್ ಪ್ರೈವೇಟ್ ಲಿಮಿಟೆಡ್ ಕಂಪನಿಯ ಪ್ರವರ್ತಕ ಪುತ್ತೂರು ಬಾಲಕೃಷ್ಣ ಭಂಡಾರಿಯವರಿಗೆ ಸಣ್ಣ ಮತ್ತು ಮಧ್ಯಮ ವಲಯದ (SME) ಉದ್ಯಮಗಳಲ್ಲಿ ಇಂಜಿನಿಯರಿಂಗ್ ವಿಭಾಗದಲ್ಲಿ ಎಸ್ ಎಂ ಇ ಇಂಜಿನಿಯರಿಂಗ್ ಇಂಡಿಯಾ ಅವಾರ್ಡ್ 2021  ಒಲಿದಿದೆ.

 ದೇಶದ 45 ಲಕ್ಷಕ್ಕೂ ಅಧಿಕ ಎಸ್‌.ಎಂ.ಇ ಗಳಲ್ಲಿ ಈ ಅಯ್ಕೆ ನಡೆಸಲಾಗಿದೆ. ರಾಜಧಾನಿ ಹೊಸದಿಲ್ಲಿಯಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಕೇಂದ್ರ ಸಚಿವೆ ಅನುಪ್ರಿಯಾ ಪಟೇಲ್ ಸಮ್ಮುಖದಲ್ಲಿ ಬಾಲಕೃಷ್ಣ ಭಂಡಾರಿಯವರಿಗೆ ಪ್ರಶಸ್ತಿ ನೀಡಿ ಗೌರವಿಸಿದರು. ಕಂಪನಿಯ ವಿವಿಧ ಉತ್ಪನ್ನಗಳನ್ನು ವಿವಿಧ ದೇಶಗಳಿಗೆ ರಫ್ತು ಮಾಡುತ್ತಿದ್ದು, ಇದರಲ್ಲಿ ಕಂಪನಿ ಸಾಧಿಸಿದ ಗಮನಾರ್ಹ ಸಾಧನೆಯನ್ನು ಪರಿಗಣಿಸಿ ಈ ಪ್ರಶಸ್ತಿ ನೀಡಲಾಗಿದೆ.


ಸುರತ್ಕಲ್ ನ ಕರ್ನಾಟಕ ರೀಜನಲ್ ಇಂಜಿನಿಯರಿಂಗ್ ಕಾಲೇಜ್ ಸುರತ್ಕಲ್ ( ಈಗಿನ NITK ) ಇಲ್ಲಿಯ ವಿದ್ಯಾ ಸಂಸ್ಥೆಯಲ್ಲಿ ಅತ್ಯುತ್ತಮ ಅಂಕದೊಂದಿಗೆ ಎಲೆಕ್ಟ್ರಿಕಲ್ ಪವರ್ ನಲ್ಲಿ
ಬಿ ಟೆಕ್ ಎಂಜಿನಿಯರಿಂಗ್ ಪದವಿಯನ್ನು ಪೂರೈಸಿದ ಭಂಡಾರಿ ಸಮುದಾಯದ ಪ್ರತಿಭಾವಂತ ವಿದ್ಯಾರ್ಥಿ ಎಂಬ ಹೆಗ್ಗಳಿಕೆಗೆ ಇವರು ಪಾತ್ರರಾಗಿದ್ದರು. ಕಳೆದ 24 ವರ್ಷಗಳಿಂದ ಪೂನಾದಲ್ಲಿ ಕ್ಯಾಬಿನೆಟ್ ಸಿಸ್ಟಮ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯನ್ನು ನಡೆಸಿಕೊಂಡಿದ್ದು, ಇದರ ಉತ್ಪನ್ನ ವಿಶ್ವದಾದ್ಯಂತ ಜಗತ್ಪಸಿದ್ಧವಾಗಿದೆ.



ಕ್ಯಾಬಿನೆಟ್ ಸಿಸ್ಟಮ್ಸ್ ಮತ್ತು ಕಂಟ್ರೋಲ್ಸ್ ಪ್ರೈ. LTD. 1997 ರಲ್ಲಿ ಸ್ಥಾಪಿಸಲಾಯಿತು. ಕಂಪನಿಯು ಪೈಪ್ ಪ್ಲಾಂಟ್, ಕಬ್ಬಿಣ ಮತ್ತು ಉಕ್ಕು, ಪೇಪರ್, ಕೆಮಿಕಲ್ ಮತ್ತು ಮೆಟೀರಿಯಲ್ ಹ್ಯಾಂಡ್ಲಿಂಗ್ ನಂತಹ ವಿವಿಧ ಕ್ಷೇತ್ರಗಳಲ್ಲಿ ಕೈಗಾರಿಕಾ ಆಟೊಮೇಷನ್ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದೆ.

ಇದೀಗ ಈ ಪ್ರತಿಷ್ಠಿತ ಪ್ರಶಸ್ತಿ ಪಡೆಯುವ ಮೂಲಕ ಕಂಪನಿಯು ಹೊಸ ಮೈಲುಗಲ್ಲನ್ನು ಸ್ಥಾಪಿಸಿದೆ.


ಭಂಡಾರಿ ಸಮಾಜದಲ್ಲಿ ಎಲ್ಲರಿಗೂ ಚಿರಪರಿಚಿತರಾಗಿರುವ ಶಿಕ್ಷಣ ಪ್ರೇಮಿ, ಸಮಾಜದ ಕೊಡುಗೈ ದಾನಿ , ಉದ್ಯಮಿ ಬಾಲಕೃಷ್ಣ ಭಂಡಾರಿ ಪೂನಾ ಇವರು ಪುತ್ತೂರಿನಲ್ಲಿ ತಂದೆಯ ನೆನಪಿಗಾಗಿ ಮಹಾಲಿಂಗ ಭಂಡಾರಿ ಚಾರಿಟೇಬಲ್ ಸೇವಾ ಟ್ರಸ್ಟ್ ಎಂಬ ಸಂಸ್ಥೆಯನ್ನು ಸ್ಥಾಪಿಸಿ ಕಳೆದ ಹದಿನೇಳು ವರ್ಷಗಳಿಂದ ಭಂಡಾರಿ ಸಮಾಜದಲ್ಲಿ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ಸಹಾಯ ಮಾಡುತ್ತಿದ್ದಾರೆ ಹಾಗೂ ಮುಂಬೈಯಲ್ಲಿ ತಂದೆ ದಿವಂಗತ ಮಾಲಿಂಗ ಭಂಡಾರಿ ಮತ್ತು ಅತ್ತೆ ದಿವಂಗತ ಸುಶೀಲ ಭಂಡಾರಿ ಬನ್ನಂಜೆ ನೆನಪಿಗಾಗಿ ರೂಪಾಯಿ 2,50,000.00 ಹಣವನ್ನು ಠೇವಣೆಯಾಗಿ ಇಟ್ಟು ಮುಂಬೈ ಭಂಡಾರಿ ಸೇವಾ ಸಮಿತಿಯ ವತಿಯಿಂದ ಎಸ್.ಎಸ್.ಎಲ್.ಸಿ. ಮತ್ತು ಪಿ.ಯು.ಸಿ.ಯಲ್ಲಿ ಅತ್ಯಧಿಕ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಕಳೆದ ಹನ್ನೆರಡು ವರ್ಷಗಳಿಂದ ಪ್ರೋತ್ಸಾಹ ಧನ ನೀಡುತ್ತಿದ್ದಾರೆ .

ಇವರ ಮೊದಲ ಪುತ್ರಿ ಶ್ರೀಮತಿ ಹರ್ಷಿಕಾ BE , MBA. ವ್ಯಾಸಂಗ ಮಾಡಿ ಪತಿ ಶ್ರೀ ಕಾರ್ತಿಕ್ ಇವರೊಂದಿಗೆ ಕುವೈಟ್‌ ನಲ್ಲಿ ವೃತ್ತಿ ಹಾಗೂ ಸಾಂಸಾರಿಕ ಜೀವನ ನಡೆಸುತ್ತಿದ್ದಾರೆ . ಇನ್ನೋರ್ವ ಪುತ್ರಿ ಡಾ॥ ನಮ್ರತಾ ಬಾಲಕೃಷ್ಣ ಉನ್ನತ ವೈದ್ಯಕೀಯ ಶಿಕ್ಷಣ ಪದವಿ ಪಡೆಯುವ ಸಿದ್ಧತೆಯಲ್ಲಿದ್ದಾರೆ.ಭಂಡಾರಿ ಸಮಾಜದಲ್ಲಿ ಉತ್ತಮ ಸಾಧನೆ ಮಾಡುತ್ತಿರುವ ಶ್ರೀ ಬಾಲಕೃಷ್ಣ ಭಂಡಾರಿ ಅವರಿಗೆ ಧರ್ಮಪತ್ನಿ ಶ್ರೀಮತಿ ಸುಲೋಚನಾ ಬಾಲಕೃಷ್ಣ ಇವರ ಉದ್ಯಮಕ್ಕೆ ಪ್ರೋತ್ಸಾಹ ನೀಡುತ್ತಿದ್ದಾರೆ ಎನ್ನುತ್ತಾರೆ ಬಾಲಕೃಷ್ಣ ಭಂಡಾರಿ ಪುತ್ತೂರು.

ಈ ಶುಭ ಸಂದರ್ಭದಲ್ಲಿ ತಮ್ಮ ಸಂತಸವನ್ನು ಭಂಡಾರಿ ವಾರ್ತೆ ಜೊತೆ ಕೂಡಾ ಹಂಚಿಕೊಂಡರು.ತಮ್ಮ ಉದ್ಯಮ ಕ್ಷೇತ್ರದಲ್ಲಿ ದೇಶಕ್ಕೆ ಟಾಪರ್ ಆಗಿ ಸಮಾಜಕ್ಕೆ ಉತ್ತಮ ಸೇವೆ ಲಭಿಸಲಿ ಎಂಬುದಾಗಿ ಭಂಡಾರಿ ಕುಟುಂಬದ ಮನೆ ಮನದ ಮಾತು ಭಂಡಾರಿ ವಾರ್ತೆ ಶುಭ ಹಾರೈಸುತ್ತದೆ.

-ಭಂಡಾರಿ ವಾರ್ತೆ

ಭಂಡಾರಿ ಸಮಾಜ ಸಂಘ (ರಿ) ಬೆಂಗಳೂರು ವಲಯದ ಮಾಸಿಕ ಸಭಾ ವರದಿ

 ಭಂಡಾರಿ ಸಮಾಜ ಸಂಘ (ರಿ) ಬೆಂಗಳೂರು ಇದರ ಸೆಪ್ಟೆಂಬರ್ 2021 ರ ಮಾಸಿಕ ಸಭೆಯು ದಿನಾಂಕ: 26/09/2021 ರ ಭಾನುವಾರದಂದು ಮಧ್ಯಾಹ್ನ 4 ಘಂಟೆಗೆ ಸಂಘದ ಗೌರಾವಾಧ್ಯಕ್ಷರಾದ ಶ್ರೀಯುತ ಲಕ್ಷ್ಮಣ ಭಂಡಾರಿ ಕರಾವಳಿ ರವರ ಅಧ್ಯಕ್ಷತೆಯಲ್ಲಿ ಹೋಟೆಲ್ ಕದಂಬ ರಾಜಾಜಿನಗರ ಬೆಂಗಳೂರು ಇಲ್ಲಿ ಜರಗಿತು.



ವಲಯದ ಪ್ರಧಾನ ಕಾರ್ಯದರ್ಶಿ ಶ್ರೀ ಸುಧಾಕರ ಭಂಡಾರಿಯವರು ಹಾಜರಿದ್ದ ಎಲ್ಲರನ್ನೂ ಸ್ವಾಗತಿಸಿದರು. ಮೊದಲು ಈ ಹಿಂದಿನ ಸಭೆಯಿಂದ ಇದುವರೆಗೆ ನಮ್ಮನ್ನಗಲಿದ ಸಂಘದ ಸದಸ್ಯರು ವಿಶೇಷವಾಗಿ ವಲಯದ ಮಾಜಿ ಕೋಶಾದಿಕಾರಿ ಶ್ರೀಯುತ ಗೋಪಾಲ ಕೃಷ್ಣ ಭಂಡಾರಿ, ಸಂಘದ ಸದಸ್ಯರು ಹಾಗೂ ದಾನಿಗಳೂ ಆಗಿದ್ದ ಶ್ರೀಯುತ ವಿ ಆನಂದಸ್ವಾಮಿ ಮತ್ತು ಸಂಘದ ಸದಸ್ಯರಾಗಿದ್ದ ಶ್ರೀಮತಿ ಸರೋಜಿನಿ ಭಂಡಾರಿ ಕತ್ರಿಗುಪ್ಪೆ ಹಾಗೂ ಇತರ ಪದಾಧಿಕಾರಿಗಳು ಹಾಗೂ ಬಂಧುಗಳಿಗೆ ಒಂದು ನಿಮಿಷದ ಮೌನಾಚಾರಣೆ ಮೂಲಕ ಶ್ರದ್ಧಾಂಜಲಿ ಅರ್ಪಿಸಿತು. ಪ್ರದಾನ ಕಾರ್ಯದರ್ಶಿಯವರು ಸಭೆಯ ಅಜೆಂಡಾವನ್ನು ಓದಿ ಹೇಳಿದರು.

ಚರ್ಚಿತ ವಿಷಯಗಳು:

· ಪ್ರತಿವರ್ಷದ ಪದ್ದತಿಯಂತೆ ವಲಯದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ (ವಿದ್ಯಾ ಪ್ರೋತ್ಸಾಹ) ನೀಡುವ ಬಗ್ಗೆ ಚರ್ಚಿಸಲಾಯಿತು. ವಲಯದ ಕೋಶಾಧಿಕಾರಿ ಶ್ರೀ ಕುಶಲ್ ಭಂಡಾರಿ ಯವರು ಲಭ್ಯವಿರುವ ಸಂಪನ್ಮೂಲಗಳ ಬಗ್ಗೆ ಮಾಹಿತಿ ನೀಡಿದರು. ಹಾಜರಿದ್ದ ಸದಸ್ಯರು ಪ್ರತಿ ವರ್ಷದಂತೆ ಸಮಾಜದ ಮುಖವಾಣಿ ಕಚ್ಚೂರು ವಾಣಿ ಪತ್ರಿಕೆಯಲ್ಲಿ ಸದರಿ ವಿಷಯದ ಬಗ್ಗೆ ಪ್ರಚಾರ ನೀಡಿ, ಘಟಕಗಳ ಮುಖಾಂತರ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳ ಮಾಹಿತಿಯನ್ನು ಸಂಗ್ರಹಿಸಿ ವಲಯದ ಕೇಂದ್ರ ಕಛೇರಿಯಿಂದ ಪರಿಶೀಲಿಸಿ ವಿದ್ಯಾರ್ಥಿ ವೇತನ ನೀಡುವುದು ಎಂದು ತೀರ್ಮಾನಿಸಿದರು. ಈ ಪ್ರಯುಕ್ತ ಕೂಡಲೇ ಮಾಹಿತಿಯನ್ನು ಕಚ್ಚೂರುವಾಣಿ ಪತ್ರಿಕೆಗೆ ನೀಡುವುದು ಹಾಗೂ ಅರ್ಜಿ ಸಲ್ಲಿಸಲು ನವೆಂಬರ್ 20 ನ್ನು ಕೊನೆಯ ದಿನವೆಂದು ಪರಿಗಣಿಸುವುದು ಎಂದು ತೀರ್ಮಾನಿಸಿತು. ಈ ಸಂಬಂಧ ಬೆಂಗಳೂರು ವಲಯದ ಕಾರ್ಯವ್ಯಾಪ್ತಿಯಲ್ಲಿ ಬರುವ ಘಟಕಗಳಿಗೆ ಮಾಹಿತಿ ನೀಡುವುದು ಎಂದು ತೀರ್ಮಾನಿಸಿತು.




 ಸಂಘದ ಮಾಜಿ ಅಧ್ಯಕ್ಷರಾದ ಶ್ರೀಯುತ ಬಾಲಕೃಷ್ಣ ಭಂಡಾರಿಯವರು ತಮ್ಮ ತಂದೆ ತಾಯಿಯವರ ಸ್ಮರಣೆಗಾಗಿ  ಹತ್ತನೇ ತರಗತಿ ಮತ್ತು ಪಿಯುಸಿ ಯಲ್ಲಿ ಅತೀ ಹೆಚ್ಚು ಅಂಕ ಪಡೆದಿರುವ ವಲಯದ ವಿದ್ಯಾರ್ಥಿಗಳಿಗೆ ಪ್ರತೀ ವರ್ಷ ನೀಡುತ್ತಿದ್ದ ಪ್ರತಿಭಾ ಪುರಸ್ಕಾರವನ್ನು ಈ ವರ್ಷವೂ ನೀಡುವುದೆಂದು ತೀರ್ಮಾನಿಸಿದ್ದು, ಪ್ರತಿಭಾ ಪುರಸ್ಕಾರಕ್ಕಾಗಿ ಪ್ರತ್ಯೇಕ ಅರ್ಜಿಯನ್ನು ಪಡೆದು ಆಯ್ಕೆಯಾದ ವಿದ್ಯಾರ್ಥಿಗಳನ್ನು ಸಂಘದ ವಾರ್ಷಿಕ ಮಹಾಸಭೆಯಲ್ಲಿ ಸನ್ಮಾನಿಸುವುದು ಎಂದು ತೀರ್ಮಾನಿಸಲಾಯಿತು.

· ಈಗಾಗಲೇ ಸಂಘದ ವಿದ್ಯಾರ್ಥಿ ನಿಧಿಗೆ ವಾರ್ಷಿಕ ಧನ ಸಹಾಯ ನೀಡುತ್ತಿದ್ದ ಸಂಘದ ಸದಸ್ಯರನ್ನು ಕೂಡಲೇ ಸಂಪರ್ಕಿಸಿ ಆರ್ಥಿಕ ಕ್ರೋಢೀಕರಣ ಹೆಚ್ಚು ಮಾಡುವುದು ಹಾಗೂ ಹೊಸ ದಾನಿಗಳನ್ನು ಗುರುತಿಸಿ ಸಹಾಯ ಪಡೆಯುವುದು ಎಂದು ಸಭೆ ತೀರ್ಮಾನಿಸಿತು.



 ಈ ಹಿಂದೆ ವಿದ್ಯಾರ್ಥಿ ವೇತನ ಪಡೆದು ಶಿಕ್ಷಣ ಪೂರೈಸಿ ಉದ್ಯೋಗದಲ್ಲಿ ಇರುವ ವಲಯದ ಸದಸ್ಯರನ್ನು ಘಟಕಗಳ ಮುಖಾಂತರ ಸಂಪರ್ಕಿಸಿ ಅವರು ಸಮಾಜ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹ ನೀಡುವಲ್ಲಿ ಸಹಕರಿಸುವಂತೆ ಮಾಡಬೇಕು, ಇದಕ್ಕೆ ಶೀಘ್ರವಾಗಿ ವಲಯದ ಪ್ರಮುಖರು ಕ್ರೀಯಾಶೀಲರಾಗುವಂತೆ ಮಾಡಬೇಕೆಂದು ಸಭೆ ಕಾರ್ಯಕಾರಿ ಮಂಡಳಿಯನ್ನು ಒತ್ತಾಯಿಸಿತು. ಉತ್ತಮವಾದ ಸಲಹೆಯನ್ನು ಒಪ್ಪಿದ ಗೌರವಾಧ್ಯಕ್ಷರು ಎಲ್ಲಾ ಸದಸ್ಯರು ಇದಕ್ಕೆ ಸಹರಿಸಿ ಮುಂದಿನ ದಿನಗಳಲ್ಲಿ ಆರ್ಥಿಕ ಕ್ರೋಢೀಕರಣ ಹೆಚ್ಚಿಸುವಂತೆ ಮಾಡುವಲ್ಲಿ ಎಲ್ಲರೂ ಕೈ ಜೋಡಿಸುವಂತೆ ಕೇಳಿಕೊಂಡರು.

· ಪ್ರತಿ ವರ್ಷದ ಪದ್ದತಿಯಂತೆ ಡಿಸೆಂಬರ್ ನಲ್ಲಿ ನಡೆಯಬೇಕಾದ ವಾರ್ಷಿಕ ಸ್ನೇಹ ಕೂಟ ಮತ್ತು ಕಾರ್ಯಕಾರಿ ಸಮಿತಿಯ ಬದಲಾವಣೆ ಪ್ರಕ್ರಿಯೆ ಕೊರೋನಾದ ಕಾರಣದಿಂದ ಕಳೆದ ವರ್ಷ ಆಗಿರಲಿಲ್ಲ ಆದ್ದರಿಂದ ಈ ವರ್ಷ ನಡೆಸುವುದು. ಅದಕ್ಕೆ ಅವಶ್ಯವಾದ ಹಣಕಾಸಿನ ಸಂಪನ್ಮೂಲ ಮತ್ತು ಇತರೆ ವ್ಯವಸ್ಥೆಯನ್ನು ಪ್ರಾರಂಭಿಸುವಂತೆ ಸಭೆಗೆ ತಿಳಿಸಲಾಯಿತು.

· ಅಕ್ಟೋಬರ್ 2ನೇ ತಾರೀಕು ದೇವಸ್ಥಾನದಲ್ಲಿ ವಾರ್ಷಿಕ ಮಹಾ ಸಭೆ ಇರುವುದರಿಂದ ಅಕ್ಟೋಬರ್ ತಿಂಗಳ ಮಾಸಿಕ ಸಭೆಯನ್ನು 24ನೇ ತಾರೀಕು  ನಡೆಸುವುದು ಮತ್ತು ಆ ಸಭೆಯಲ್ಲಿ ವಾರ್ಷಿಕ ಸ್ನೇಹ ಕೂಟದ ಪೂರ್ವಭಾವಿ ಚರ್ಚೆಯನ್ನು ಹಾಗೂ ಶೀಘ್ರ ಆಗಬೇಕಾದ ಕೆಲಸಗಳ ಬಗ್ಗೆ ಚರ್ಚಿಸುವುದು ಎಂದು ಸಭೆ ತೀರ್ಮಾನಿಸಿತು.

ಲಘು ಉಪಹಾರದ ನಂತರ ಕೋಶಾಧಿಕಾರಿಯವರ ವಂದನಾರ್ಪಣೆಯೊಂದಿಗೆ ಸಭೆಯನ್ನು ಮುಖ್ತಾಯಗೊಳಿಸಲಾಯಿತು.

ವರದಿ : ಸುಧಾಕರ ಭಂಡಾರಿ ಶಿರಾಳಕೊಪ್ಪ


Tuesday 28 September 2021

ಶರೀರದ ಮೇಲೆ ಸರ್ಪ ಸುತ್ತು ಗೋಚರಿಸಿದಾಗ ವೈದ್ಯೋಪಚಾರ - ನಂಬಿಕೆಗಳು -M P ಸೀತಾರಾಮ ಭಂಡಾರಿ

 ಕಳೆದ 2014ರ ಮಾರ್ಚ್ ತಿಂಗಳ ಪ್ರಥಮ ವಾರದಲ್ಲಿ ಇದ್ದಕ್ಕಿದ್ದಂತೆ ನನಗೆ ಕಿಬ್ಬೊಟ್ಟೆಯಿಂದ ಆರಂಭವಾಗಿ ಎದೆಯ ಚರ್ಮದ ಮೇಲೆ ಅಲ್ಲಲಿ ಕೆಂಪು ಗುಳ್ಳೆಗಳು ಒಂದಕ್ಕೊಂದು ತಾಗಿ ಉದ್ದನೆಯದಾಗಿ ಬಳ್ಳಿಯಂತೆ ಹರಡಿತ್ತು.

 


ಆರಂಭದ ಎರಡು ದಿನ ನಾನೇ ತರ್ಕಿಸಿ ಇದು ಮಾವಿನ ಹಣ್ಣು ಕೊಯ್ಯಲು ಹೋದಾಗ ಮಾವಿನ ಹಣ್ಣಿನ ಸೊನೆ ತಗುಲಿ ಆಗಿರಬಹುದೆಂದು ಭಾವಿಸಿದೆ.

           ಮೂರನೇ ದಿನ ಮೈ ಮೇಲಿನ ಕೆಂಪು ಗುಳ್ಳೆಗಳು ಸ್ವಲ್ಪ ಉರಿಯಲಾರಂಬಿಸಿತು. 4 ನೇ ದಿನ ಬೆಳಿಗ್ಗೆ ನಾನು ಮಲ ವಿಸರ್ಜನೆ ಮಾಡುವ ವೇಳೆ ಮಲ ಹೊರ ಬರುವ ಮೊದಲೆ ನನಗೆ ಯಾವುದೇ ರೀತಿಯ ನೋವಿನ ಅರಿವಿಲ್ಲದೆ ರಕ್ತ ಹರಿಯಿತು, ಬಳಿಕ ಮಲ ವಿಸರ್ಜನೆಯ ಕೊನೆಯಲ್ಲಿ ಮತ್ತೆ ರಕ್ತ ಬಂತು. ನನಗೆ ಸುಮಾರು 25 ವರುಷಗಳ ಹಿಂದೆ ಮೂಲ ವ್ಯಾಧಿ ಸರ್ಜರಿಯಾಗಿದ್ದು ಸಂಪೂರ್ಣ ಗುಣಮುಖವಾಗಿತ್ತು. ಆದರೂ ಸಂಶಯ ನಿವಾರಿಸಲು ಸ್ಥಳೀಯ ಮೆಡಿಕಲ್ ಕಾಲೇಜಿಗೆ ಹೋಗಿ ಒರ್ವ ಶಸ್ತ್ರ ಚಿಕಿತ್ಸಾ ತಜ್ಞರ ಬಳಿ ರಕ್ತ ಹರಿದ ಬಗ್ಗೆ ತಿಳಿಸಿದೆ. ವೈದ್ಯರು ಪರೀಕ್ಷಿಸಿ ತೊಂದರೆ ಏನು ಇಲ್ಲ ಹೇಳಿ ಕೆಲವು ಮಾತ್ರೆ ಸೇವಿಸಲು ಔಷಧಿ ಚೀಟಿ ಕೊಟ್ಟರು.


ಔಷಧಿ ಪಡೆದು ಅದೇ ದಿನ ತುರ್ತು ಕಾರಣದಿಂದ ಕೋಣಾಜೆಯಿಂದ ಹೊರಟು ನನ್ನ ಮಗಳ ಮನೆಗೆ ಪುತ್ತೂರಿಗೆ ಬಂದೆ. ಆದರೆ ನನ್ನ ಮೈ ಮೇಲಿನ ಕೆಂಪುಗುಳ್ಳೆಗಳು ಇನ್ನಷ್ಟು ಉರಿಯ ತೊಡಗಿತು. ಆದರೆ  ಕೆಂಪು ಗುಳ್ಳೆಯ ಲಕ್ಷಣಗಳು ಆರಂಭವಾದಾಗಿನಿಂದಲೂ, ಉರಿ ಶಮನ ಮಾಡುವುದಕ್ಕೆಂದು, ಕೊತ್ತಂಬರಿ ಮತ್ತು ಜೀರಿಗೆ ಕಷಾಯ, ಮೆಂತೆ ಕಷಾಯ, ಹಾಗೂ ಇನ್ನಿತರ ಸೊಪ್ಪು ತರಕಾರಿಗಳನ್ನೇ ನಾನು ಸೇವಿಸುವ ಮೂಲಕ ಸ್ವಯಂ ಪಥ್ಯೆ ಮಾಡಲಾರಂಭಿಸಿದೆ. 5 ನೇ ದಿನ ಉರಿ ತಡೆಯಲಾರದೆ, ಅಂದೇ ಬೆಳಿಗ್ಗೆ ಪುತ್ತೂರು ನಗರದಲ್ಲಿರುವ ಖ್ಯಾತ ಚರ್ಮ ರೋಗ ತಜ್ಞರ ಬಳಿ ಹೋದೆ.

           ವೈದ್ಯರು ನನ್ನನು ತಪಾಸಣೆ ಕೋಣೆಗೆ ಕರೆದು ಭೂತ ಕನ್ನಡಿ ಬಳಸಿ ಕೆಂಪು ಗುಳ್ಳೆ ಪರೀಕ್ಷಿಸಿ ಹೇಳಿದರು, ಇದು ನಿಮಗೆ ಎಷ್ಟು ದಿವಸದಿಂದ ಇದೆ, ಆರಂಭವಾದಾಗಿನಿಂದ ನೀವೇನು ಆಹಾರ ಸೇವಿಸುತಿದ್ದೀರಿ? ಎಂದು ಪ್ರಶ್ನಿಸಿದರು. ನಡೆದ ಘಟನೆಯನ್ನೆಲ್ಲಾ ವಿವರಿಸಿದೆ ಮತ್ತು ಆಹಾರ ನಿಯಂತ್ರಣ ಮತ್ತು ಕಷಾಯ ಕುಡಿದ ಬಗ್ಗೆ ಹೇಳಿದೆ. ಹಾಗೆ ಈ ಹಿಂದೆ ವೈದ್ಯರು ಕೊಟ್ಟ ಮಾತ್ರೆಯಲ್ಲಿ ಕೇವಲ 2 ಮಾತ್ರೆ ಸೇವಿಸಿದ್ದೆ ಎಂದೆ.

           ವೈದ್ಯರು ಕೇಳಿದರು ನಿಮಗೆ ಈ ಚರ್ಮ ರೋಗದ ಬಗ್ಗೆ ಸಂಶಯವಿತ್ತೇ ಎಂದು. ಇಲ್ಲಾ ಎಂದೆ. ಅದಕ್ಕೆ ವೈದ್ಯರು ಪ್ರತ್ಯುತ್ತರಿಸಿ ನನ್ನ ಪ್ರಕಾರ ನಿಮಗೆ ಇದು ಇನ್ನಷ್ಟು ತೀವ್ರವಾಗಿ ಹರಡ ಬೇಕಿತ್ತು. ಆದರೆ ನೀವು ನಿಮ್ಮ ಆಹಾರ ಪಥ್ಯದಿಂದ ನಿಮ್ಮ ದೇಹವನ್ನು ಅಪಾಯದಿಂದ ತಪ್ಪಿಸಿದ್ದೀರಿ ಎಂದರು. ನಾನು ಸ್ವಲ್ಪ ದಿಗಿಲಾಗಿ ಏನಾದರು ತೊಂದರೆ ಇದೆಯಾ ಎಂದೆ. ವೈದ್ಯರು ನನ್ನನ್ನು ಸಾವಧಾನವಾಗಿ ಕುಳ್ಳಿರಿಸಿ, ಇದೇನು ದೊಡ್ಡ ಕಾಯಿಲೆ ಅಲ್ಲ ಬರೇ “ಸರ್ಪ ಸುತ್ತು”  ಅಥವಾ ವೈದ್ಯ ಲೋಕದಲ್ಲಿ ಹರ್ಪಿಸ್ ಅನ್ನುತ್ತೇವೆ ಎಂದರು.

           ಇದಕ್ಕೆ  ಬರೇ ಸರಳವಾದ ಔಷಧಿ ಎಂದು ಹೇಳುತ್ತಾ, Soframycine ointment tube  &  ಮೂರು ದಿನಗಳ ಕಾಲ anti-biotic ಮಾತ್ರೆ ಕೊಟ್ಟು  ಅವರು ಹೇಳಿದರು, 15 ದಿನಗಳ ಕಾಲ ಖಾರದ ವಸ್ತು, ಎಣ್ಣೆ ಪದಾರ್ಥ, ಹೆಚ್ಚು ತೆಂಗಿನಕಾಯಿ ಪಲ್ಯ ಸೇವಿಸಬಾರದು ಎಂದರು. ಇದೇ ಔಷಧಿ ಸಾಕು, ಮತ್ತೆ ನೀವು ಮಂಗಳೂರಿನಿಂದ ಪುತ್ತೂರಿಗೆ ಬರುವ ಅವಶ್ಯಕತೆ ಬರುವುದಿಲ್ಲ.

           ಇದು ಯಾವ ಕಾರಣದಿಂದ ಸರ್ಪ ಸುತ್ತು ಬರುತ್ತದೆ ಎಂಬ ನನ್ನ ಪ್ರಶ್ನೆಗೆ ವೈದ್ಯರು ಉತ್ತರಿಸುತ್ತಾ ಹೀಗೆಂದರು. “ಇದೊಂದು ಕುಡಿಯುವ ನೀರಿನಿಂದ ಬರುವ “ವೈರಸ್”. ನಮ್ಮ ದೇಹವನ್ನು ಪ್ರವೇಶಿಸಿದ ಈ ವೈರಸ್  ದೇಹದ ಯಾವುದಾದರೊಂದು ನರಗಳನ್ನು ಅತಿಕ್ರಮಿಸಿ ಆ ನರಗಳನ್ನು ಸೋಂಕಿಗೀಡು ಮಾಡಿದಾಗ ಆ ನರಗಳು ನಮ್ಮ ದೇಹದ ಸೂಕ್ಷ್ಮ ನರಗಳು ಬಳ್ಳಿಯಂತೆ  ಎಲ್ಲಿಯವರೆಗೆ ಹರಡಿದೆಯೋ, ಅಲ್ಲಿಯವರೆಗೆ  ನರಗಳು ಸೊಂಕಿಗೆ ತುತ್ತಾಗುತ್ತವೆ. ಆರಂಭದಲ್ಲಿ ಎಷ್ಟೋ ದಿನಗಳ ಮೊದಲೇ ಹೊಟ್ಟೆಯ ಒಳಗೆ  ವೈರಸುಗಳು ನರಗಳ ಮೇಲೆ ದಾಳಿ ಮಾಡಿ ಒಳಗೆ ನರಗಳು ಘಾಸಿಗೊಂಡ ಬಳಿಕವೇ ಶರೀರದ ಮೇಲೆ ಕೆಂಪು ಗುಳ್ಳೆಯ ಗಾಯದ ಸ್ವರೂಪ ಹಾವಿನ಼ಂತೆ ಕಾಣುತ್ತದೆ ಎಂದು ಬೆನ್ನು ತಟ್ಟಿ ಹೋಗಲು ಸೂಚಿಸಿದರು. ನನ್ನನು ಹೊರ ಹೋಗಲು ಸೂಚಿಸಿದ ವೈದ್ಯರು, ತಕ್ಷಣವೇ ನನ್ನನ್ನು ಹಿಂದಕ್ಕೆ ಕರೆದು ಸರ್ಪಸುತ್ತು ರೋಗದ ಬಗ್ಗೆ ಓರ್ವ ವೈದ್ಯರಾಗಿ ನನಗೆ ಹೇಳಿದ ಕಿವಿ ಮಾತು ಈ ಕೆಳಗೆ ನಿಮ್ಮ ಗಮನಕ್ಕೆ ತರಬಯಸುತಿದ್ದೇನೆ.

           “ನೋಡಿ ಸರ್ಪ ಸುತ್ತು ಬರುವುದು ಸರ್ಪ ದೋಷದಿಂದಲ್ಲ. ನಿಮಗೆ ಈಗ ಬಂದಿರುವ ಹರ್ಪಸ್ ಕಾಯಿಲೆ ಗುಣ ಆಗುವವರೆಗೆ ಯಾರಲ್ಲಿಯೂ ವಿಷಯ ಹಂಚಿಕೊಳ್ಳಬೇಡಿ. ಯಾಕೆಂದರೆ ನಿಮಗೆ ಈ ವಿಷಯವನ್ನು ನೀವು ಎಷ್ಟು ಮಂದಿಗೆ ಹೇಳುತ್ತೀರೋ ಅಷ್ಟೂ ಜನರು ಬೇರೆ ಬೇರೆ ರೀತಿಯ ಔಷಧ ಮಾತ್ರವಲ್ಲ ವೈದ್ಯರನ್ನೇ ಬದಲಾಯಿಸುವಂತೆ ಹೇಳಿ ಕೆಲವು ನಾಗ ದೋಷ ಪರಿಹಾರ ಎಂದು ನಾನಾ ಪೂಜೆಗಳನ್ನು ಮಾಡಿಸುತ್ತಾರೆ. ನಾಗನ ದೋಷವಿದೆ ಎಂದು ನಂಬಿಸುತ್ತಾರೆ. ಹಾಗೆಯೇ ಕೆಲವು  ಮೂಢ ನಂಬಿಕೆಯನ್ನು ಪ್ರತಿಪಾದಿಸುತ್ತಾರೆ” ಎಂದು ಆ ಖ್ಯಾತ ವೈದ್ಯರು ತಿಳಿಸಿದರು.

           ಆದರೆ  ಹಿಂದಿನ ಪೀಳಿಗೆಯವರ ಆರೋಗ್ಯ ಪದ್ಧತಿ ಪ್ರಕಾರ  ಈ ರೋಗಕ್ಕೆ ಆಹಾರ ಪಥ್ಯವೇ ಪ್ರಥಮ ಔಷಧ ಹಾಗೂ  ಈಗ ರೋಗ ಉಲ್ಭಣಗೊಳ್ಳದಂತೆ Alopathic antibiotic ಕೊಟ್ಟರೂ ಪಥ್ಯವೇ ಪ್ರಧಾನ ಎಂದರು.

           ಆದರೆ ಬುದ್ದಿವಂತ ಕೆಲ ಜನರು ಈ ರೋಗವನ್ನು ಕಾಡಿನಲ್ಲಿರುವ ಹಾಗೂ ಮುಗ್ಧ ನಮ್ಮ ಸುತ್ತಮುತ್ತಲಿನ  ಉರಗ ಜಾತಿಗೆ ಸೇರಿದ ನಾಗರ ಸರ್ಪಗಳ ಮೇಲೆ ದೋಷಾರೋಪಣೆ ಮಾಡುತ್ತಾ ತಮ್ಮ ಉದರ ಪೊಷಣೆ ಮಾಡವರೇ ಪರಿಸ್ಥಿತಿಯ ಲಾಭ ಪಡೆಯುತ್ತಾರೆ. ಪರಿಣಾಮ ನಮ್ಮ ಕರಾವಳಿ ಜಿಲ್ಲೆಯಾದ್ಯಂತ ಇರುವ ಮುಗ್ಧ ಸರಿಸೃಪ ಪ್ರಾಣಿ ನಾಗರ ಹಾವಿನ ಹೆಸರು ಹೇಳಿ ನಮ್ಮ ಮುಗ್ಧ ಜನರ ಧಾರ್ಮಿಕ ನಂಬಿಕೆಯನ್ನು ಮತ್ತು ಮಾನಸಿಕ ಆರೋಗ್ಯವನ್ನು ಕೆಡಿಸುತ್ತಿರುವುದರ ಬಗ್ಗೆ ನಮ್ಮ ತುಳು ನಾಡಿನ ಜನರು ವೈಚಾರಿಕತೆ ಬೆಳೆಸಿಕೊಳ್ಳಬೇಕು. ಹಾಗೆಯೇ ಇವುಗಳನ್ನು ಲೇಖನ ಮೂಲಕ ಮಾತ್ರವಲ್ಲ ತುಳುನಾಡಿನ ಸಾಮಾನ್ಯ ಜನರ ನಡುವೆ ಕುಟುಂಬದ ಸಭೆ ಸಮಾರಂಭಗಳು ನಡೆಯುವಾಗ ಜನರಲ್ಲಿ ವೈಚಾರಿಕತೆ ಬೆಳೆಸುವಂತೆ ಮಾಡಬೇಕು. 

           ಜಗತ್ತಿನ ಸುಮಾರು 150 ರಾಷ್ಟ್ರಗಳಲ್ಲಿ ಕಾಣಸಿಗುವ ಉರಗ ಗುಂಪಿಗೆ ಸೇರಿದ ಸರ್ಪಗಳು ಜಗತ್ತಿನ ವಿವಿಧ ಧರ್ಮೀಯರಿಗೆ, ಇಡೀ ಭಾರತ ದೇಶದ ಜನರಿಗಾಗಲೀ ಅಥವಾ ANIMAL PLANNET ನಲ್ಲಿ ತೋರಿಸುವ ಉರಗ ತಜ್ನರಿಗಾಗಲಿ ಈ “ಸರ್ಪ ದೋಷ ಇಲ್ಲವೇ ಸರ್ಪ ಶಾಪ” ಯಾರಿಗೂ ತಟ್ಟದೆ ಇರುವಾಗ ನಮ್ಮ ಕರಾವಳಿ ಭಾಗದ ಮುಗ್ಧ ತುಳು ಬಾಂಧವರು ಮಾತ್ರ ಯಾಕೆ ನಾಗ ಹಾವಿನಿಂದ ದೋಷ ಹಾಗೂ ತಾನೇ ನಂಬಿದ ದೈವದಿಂದ ಉಪದ್ರಗಳು ಕಂಡುಬರುವುದು.

           ಈ ನಾಗದೋಷಗಳನ್ನು ಹಿಂದೆ ಅನಕ್ಷರಸ್ಥ ಬಡ ತುಳುವರು ಸರಳ ರೀತಿಯಲ್ಲಿ ಪರಿಹರಿಸಿಕೊಳ್ಳುತಿದ್ದರೆ, ಈಗ ಕೆಲ ವರುಷಗಳಿ಼ಂದ ಉನ್ನತ ವಿದ್ಯಾಭ್ಯಾಸ ಹೊಂದಿದ ಸುಶಿಕ್ಷಿತರು ಸಾಮಾಜಿಕ ಪ್ರತಿಷ್ಠೆಯೋ ಎಂಬಂತೆ ಅದ್ದೂರಿಯಾಗಿ ಪೂಜಿಸುತಿದ್ದಾರೆ.

           ನನ್ನ ತಂದೆ ಹೇಳುತ್ತಿದ್ದರು ಹಾವುಗಳು ಪರಸ್ಪರ ಮಿಲನವಾಗುವುದನ್ನು ನಾವು ನೋಡ ಬಾರದು, ನೋಡಿದರೆ ಶಾಪ ತಟ್ಟುವುದು ಎಂದು. ಹಾಗಾದರೆ ನಾಗ ಮಂಡಲದಲ್ಲಿ ಪರಸ್ಪರ ಮಿಲನದ ಕುಣಿತ ಯಾವ ಸಂದೇಶ ಸಾರುತ್ತದೆ ಎಂದು ಅನೇಕ ತುಳುವರು ನನ್ನಲ್ಲಿ ಪ್ರಶ್ನಿಸಿದ್ದಾರೆ, ನಿಮಗೆ ಗೊತ್ತೇ ಎಂದು?

          
           “ದೇವರ ಸೃಷ್ಠಿಯಲ್ಲಿ ಜಗತ್ತಿನ ಎಲ್ಲಾ ಪ್ರಾಣಿ ಪ್ರಪಂಚಗಳು ಒಂದೇ. ಎಲ್ಲದರಲ್ಲೂ ಜೀವಾತ್ಮವಿದೆ ಎಂದು ನನ್ನ ನಂಬಿಕೆ”.

           ವ್ಯತ್ಯಾಸವೇನೆಂದರೆ ಕೆಲವರು  ತಮ್ಮ ಆಹಾರ ಪದ್ಧತಿ ಎಂದು ಮಾಂಸ ತಿಂದು ಹೊಟ್ಟೆ ತುಂಬಿಸಿಕೊಳ್ಳುತ್ತಾರೆ. ಕೆಲವರು ಮಾಂಸ ತಿನ್ನದೆಯೇ ಪರೋಕ್ಷವಾಗಿ ಪ್ರಾಣಿಗಳ ಹೆಸರಲ್ಲಿ ಹೊಟ್ಟೆ ತುಂಬಿಸಿಕೊಳ್ಳುತ್ತಾರೆ.

           ಇದು ಟೀಕೆಯಲ್ಲ, ವಿಮರ್ಶೆ...

 ದೇವರ ಸೃಷ್ಟಿಯ ಸಕಲ ಪ್ರಾಣಿಗಳನ್ನು ಒಂದೇ ರೀತಿಯಲ್ಲಿ ಪೂಜಿಸೋಣ...

✍️ M P ಸೀತಾರಾಮ ಭಂಡಾರಿ, ತುಳುನಾಡು



Sunday 26 September 2021

ಜಿಡ್ಡು ಪ್ರವಚನ - ಒಳಿತಿಗೆ ಉದ್ದೇಶಗಳಿಲ್ಲ-ವೆಂಕಟೇಶ ಭಂಡಾರಿ ಕುಂದಾಪುರ.

 ( ಧ್ಯಾನ-9)

        ನಾನು ಒಳ್ಳೆಯವನಾಗಬೇಕೆಂಬ ಉದ್ದೇಶವಿದ್ದರೆ ಅದರಿಂದ ಒಳಿತು ಹುಟ್ಟುತ್ತದೆಯೇ? ಒಳ್ಳೆಯವನಾಗಬೇಕೆಂಬ ಅಪೇಕ್ಷೆಯೇ ಒಂದು ಒತ್ತಾಯ. ಒಳಿತು ಎಂಬುದು ಇಂಥ ಒತ್ತಾಯ ಮತ್ತು ಅಪೇಕ್ಷೆಗಳ ಹಂಗಿಲ್ಲದೆ ಸ್ವತಂತ್ರವಾಗಿ ಇರುತ್ತದೆಯೇ? ಒಳಿತು ಎಂಬುದು ಕೆಡುಕಿನ, ದುಷ್ಟತನದ ವಿರುದ್ಧ ಧ್ರುವವೇ? ಪರಸ್ಪರ ವಿರುದ್ಧಗಳೆಂದು ಭಾವಿಸುವ ಎರಡು ಸಂಗತಿಗಳಲ್ಲಿ ಒಂದೊಂದರಲ್ಲೂ ಇನ್ನೊಂದರ ಬೀಜಗಳು ಇರುತ್ತವೆಯಲ್ಲವೇ? ದುರಾಸೆ ಇರುವಂತೆಯೇ ಆಶಾರಹಿತವಾಗಿರಬೇಕೆಂಬ ಆದರ್ಶವೂ ಇದೆ‌. ಮನಸ್ಸು ಆಶಾರಹಿತವಾಗಿರಬೇಕೆಂದು ಪ್ರಯತ್ನಿಸುತ್ತಿರುವಾಗಲೇ ತಾನು ದುರಾಸೆಯಿಂದ ಕೂಡಿರುತ್ತದೆ.ಏಕೆಂದರೆ ಅದು ಈಗಿರುವುದಕ್ಕಿಂತ ಭಿನ್ನವಾದ ಮತ್ತೊಂದು ಸ್ಥಿತಿಯನ್ನು ಬೇಕೆಂದು ಅತಿಯಾಗಿ ಬಯಸುತ್ತಿರುತ್ತದೆ. ದುರಾಸೆಯೆಂದರೆ ಆಸೆಪಡುವುದು, ಸಂಗ್ರಹಿಸಿಟ್ಟುಕೊಳ್ಳಲು ಬಯಸುವುದು, ತನ್ನನ್ನು ತಾನು ವಿಸ್ತರಿಸಿಕೊಳ್ಳುವುದು ಎಂದರ್ಥ. ದುರಾಸೆಯಿಂದ ಫಲದೊರೆಯದು ಎಂದು ಅರಿತಾಗ ಮನಸ್ಸು ಆಶಾರಹಿತವಾಗಲು ಬಯಸುತ್ತದೆ. ದುರಾಸೆ ಮತ್ತು ಆಶಾರಹಿತ ಎರಡರ ಹಿಂದಿರುವ ಉದ್ದೇಶವೂ ಒಂದೇ-ಮತ್ತೇನೋ ಆಗುವುದು, ಯಾವುದೋ ಸ್ಥಿತಿಯನ್ನು ಸಂಪಾದಿಸುವುದು. ಬಯಕೆಗಳು ಬೇಡವೆಂಬ ಬಯಕೆ ಮನಸ್ಸಿನಲ್ಲಿರುವಾಗ ಕುಡ ಮೂಲ ಬಯಕೆ, ಏನೋ ಬೇಕೆಂಬ ಮೂಲ ಆಸೆ, ಹಾಗೇ ಉಳಿದಿರುತ್ತದೆ. ಆದ್ದರಿಂದ ಒಳಿತು ಎಂಬುದು ಕೆಡುಕಿಗೆ ವಿರುದ್ಧವಾದದ್ದಲ್ಲ, ಅದಕ್ಕಿಂತ ತೀರ ತೀರ ಭಿನ್ನವಾದ ಒಂದು ಸ್ಥಿತಿ. ಯಾವುದು ಆ ಸ್ಥಿತಿ?



        ಜಗತ್ತು ಈಗ ಎದುರಿಸುತ್ತಿರುವ ಬಿಕ್ಕಟ್ಟು ವಿಶಿಷ್ಟವಾದದ್ದು. ಚರಿತ್ರೆಯ ಉದ್ದಕ್ಕೂ ಅನೇಕ ಬಗೆಯ ಸಾಮಾಜಿಕ, ರಾಜಕೀಯ ಬಿಕ್ಕಟ್ಟುಗಳು ಕಾಣುತ್ತವೆ. ಬಿಕ್ಕಟ್ಟುಗಳು ಬಂದು ಹೋಗುತ್ತಲೇ ಇರುತ್ತವೆ. ಆರ್ಥಿಕ ಹಿಂಜರಿತ, ಆರ್ಥಿಕ ಕುಸಿತ, ಮೊದಲಾದವು ಅಷ್ಟಿಷ್ಟು ಪರಿಷ್ಕಾರಗೊಂಡು ಎದುರಾಗುತ್ತಲೇ ಇರುತ್ತವೆ‌. ಇಂಥ ಬಿಕ್ಕಟ್ಟುಗಳು ನಮಗೆಲ್ಲ ಪರಿಚಿತವಾದವೇ ಹೌದು. ಆದರೆ, ಈಗ ನಾವು ಎದುರಿಸುತ್ತಿರುವ ಬಿಕ್ಕಟ್ಟು ವಿಶಿಷ್ಟವಾದದ್ದು, ಅಲ್ಲವೇ? ಏಕೆಂದರೆ ನಾವು ಈಗ ಹಣಕಾಸಿನ ಅಥವಾ ವಸ್ತುಗಳ ಕಾರಣದಿಂದ ಉಂಟಾಗುವ ಬಿಕ್ಕಟ್ಟುಗಳ ಬಗ್ಗೆ ಮಾತನಾಡುತ್ತಿಲ್ಲ. ವಿಚಾರಗಳ ಬಿಕ್ಕಟ್ಟನ್ನು ನಾವೀಗ ಎದುರಿಸುತ್ತಿದ್ದೇವೆ. ವೈಚಾರಿಕ ವಲಯದ ಈ ಬಿಕ್ಕಟ್ಟು ವಿಶೇಷವಾದದ್ದು. ನಾವು ಐಡಿಯಾಗಳೊಡನೆ ಜಗಳವಾಡುತ್ತಾ ಕೊಲೆಗಳನ್ನು ಸಮರ್ಥಿಸುತ್ತಿದ್ದೇವೆ‌. ಒಳ್ಳೆಯ ವಿಷಯಗಳಿಗೆ ಮಾಡುವ ಕೊಲೆ ಸಮರ್ಥನೀಯ ಎಂಬ ವಿಚಾರ ಜಗತ್ತಿನ ಎಲ್ಲೆಡೆಗಳಲ್ಲೂ ಕಾಣುತ್ತಿದೆ. ಇದು ಅಭೂತಪೂರ್ವವಾದ ವಿಚಾರ. ಹಿಂದೆ ಕೆಡುಕನ್ನು ಕೆಡುಕೆಂದು, ಕೊಲೆಯನ್ನು ಕೊಲೆಯೆಂದು ಗುರುತಿಸುತ್ತಿದ್ದೇವು. ಈಗ ಕೊಲೆ ಎಂಬುದು ಉದಾತ್ತವಾದ ಪರಿಣಾಮವನ್ನು ಸಾಧಿಸಲು ಇರುವ ಒಂದು ಮಾರ್ಗವಾಗಿ ಬಿಟ್ಟಿದೆ. ಒಬ್ಬ ವ್ಯಕ್ತಿಯನ್ನೇ ಕೊಲ್ಲಲಿ, ಒಂದು ಸಮೂಹವನ್ನೇ ಕೊಲ್ಲಲಿ, ಆಗ ಕೊಲೆಗಾರ ಅಥವಾ ಕೊಲೆಗಾರ ಗುಂಪು ಮನುಷ್ಯಕುಲದ ಒಳಿತಿಗಾಗಿ ಕೊಲೆಮಾಡಿದ್ದೇವೆ ಎಂದು ಸಮರ್ಥಿಸಿಕೊಳ್ಳುವುದನ್ನು ಕಾಣುತ್ತಿದ್ದೇವೆ‌. ಅಂದರೆ ಭವಿಷ್ಯಕ್ಕಾಗಿ ವರ್ತಮಾನವನ್ನು ಬಲಿಗೊಡುತ್ತಿದ್ದೇವೆ. ನಮ್ಮ ಘೋಷಿತ ಉದ್ದೇಶ ಮನುಷ್ಯ ಕುಲದ ಭವಿಷ್ಯದ ಒಳಿತಿಗಾಗಿ ಎಂದು ಹೇಳುತ್ತಿರುವವರೆಗೆ ನಾವು ಹಿಡುಯುವ ಯಾವ ಮಾರ್ಗವು ತಪ್ಪು ಎನ್ನಿಸುತ್ತಿಲ್ಲ. ಇದರರ್ಥವೇನೆಂದರೆ, ತಪ್ಪು ದಾರಿ ಹಿಡಿದೂ ಒಳಿತನ್ನು ಸಾಧಿಸಬಹುದು, ತಪ್ಪು ದಾರಿ ಸಮರ್ಥನೀಯ ಎಂಬ ವೈಚಾರಿಕತೆ ಹುಟ್ಟಿಕೊಳ್ಳುತ್ತದೆ ಕೆಡುಕನ್ನು ಸಮರ್ಥಿಸುವ ವಿಚಾರಗಳ ಮಹಾನ್ ಸೌಧವನ್ನೇ ನಿರ್ಮಿಸಿಕೊಂಡಿದ್ದೇವೆ. ಇದು ಅಭೂತಪೂರ್ವವಾದದ್ದು. ಕೆಡುಕು ಎಂದಿಗೂ ಕೆಡುಕೇ, ಅದು ಒಳಿತನ್ನು ತರಲಾರದು. ಯುದ್ಧದ ದಾರಿಯಿಂದ ಶಾಂತಿಯನ್ನು ಪಡೆಯಲಾಗದು.


    ನಾನು ಕೆಡುಕಿನಿಂದ ಆರಂಭಿಸಿ ಒಳಿತಿನತ್ತ ಸಾಗುವ ವಿಕಾಸ, ಬೆಳವಣಿಗೆ, ಮಾನಸಿಕ ವಿಕಾಸ ಇದೆಯೇ ಎಂದು ನಾವೀಗ ಚರ್ಚಿಸುತ್ತಿದ್ದೇವೆ. ಕಾಲಕ್ರಮದಲ್ಲಿ, ಕೆಡುಕಿನ ಕೇಂದ್ರಬಿಂದುವಾದ "ನಾನು" ವಿಕಾಸಹೊಂದುತ್ತಾ, ಉದಾತ್ತವೂ ಒಳಿತು ಆಗಬಲ್ಲದೇ? ಖಂಡಿತ ಇಲ್ಲ. ಯಾವಾಗಲೂ ಕೆಡುಕೆ ಆಗಿರುತ್ತದೆ. ಆದರೆ ನಾವು ಇದನ್ನು ಒಪ್ಪಲು ತಯಾರಾಗಿಲ್ಲ, ಕಾಲ ಸರಿದಂತೆ, ಬೆಳೆಯುತ್ತಾ, ಬದಲಾಗುತ್ತಾ "ನಾನು" ಅಂತಿಮವಾಗಿ ನಿಜವಾಗುತ್ತೇನೆ, ಒಳಿತು ಆಗುತ್ತೇನೆ ಎಂದು ನಂಬುತ್ತೇವೆ. "ನಾನು " ಕಾಲಕ್ರಮದಲ್ಲಿ ಪರಿಪೂರ್ಣನಾಗುತ್ತೇನೆ ಎಂಬುದು ನಮ್ಮ ಆಸೆ, ಹಂಬಲ. ಈ "ನಾನು" ಮತ್ತು "ನನ್ನದು" ಎಂಬುದೇನು? ಅದು ಆಸೆ, ಹತಾಶೆ, ಹಂಬಲ, ನೆನಪುಗಳ ರಾಶಿ, ನೋವು,ದುಃಖ, ಬಂದು ಹೋಗುವ ಸುಖ, ಇವೆಲ್ಲವುಗಳಿಗೆ ಕೊಟ್ಟಿರುವ ಒಂದು ಹೆಸರು, ನೀಡಿರುವ ಒಂದು ರೂಪ. ಈ ನಾನು ಈಗಿರುವಂತೆಯೇ ಮುಂದುವರೆಯುತ್ತಾ, ಪರಿಪೂರ್ಣವಾಗಬೇಕು ಎಂದು ಬಯಸುತ್ತೇವೆ. "ನಾನು " ಎಂಬುದರಾಚೆಗೆ "ಪರಮ-ನಾನು" ಎಂಬುದಿದೆ, ಕಾಲಾತೀತವಾದ ಆತ್ಮವುದೆ, ಉನ್ನತ ಆತ್ಮವಿದೆ, ಎಂದುಕೊಳ್ಳತ್ತೇವೆ..
      ಒಳಿಗೆ ಉದ್ದೇಶಗಳಿಲ್ಲ. ಏಕೆಂದರೆ ಎಲ್ಲ ಉದ್ದೇಶಗಳು ನಾನು ಎಂಬ ಸ್ವ-ಅರ್ಥದಲ್ಲಿ ಬೇರುಬಿಟ್ಟಿರುತ್ತವೆ. ಉದ್ದೇಶವೆಂಬುದು ಮನಸ್ಸಿನ ಸ್ವ-ಕೇಂದ್ರತವಾದ ಚಲನೆ. ಹಾಗದರೆ ಒಳ್ಳೆಯತನ ಎಂಬುದರ ಅರ್ಥವೇನು?  ಸಂಪೂರ್ಣ ಗಮನವಿದ್ದಾಗ ಮಾತ್ರ ಒಳ್ಳೆಯತನವಿರುತ್ತದೆ. ಗಮನದಲ್ಲಿ ಉದ್ದೇಶವಿಲ್ಲ. ಗಮನಕ್ಕೂ ಒಂದು ಉದ್ದೇಶವಿದ್ದಾಗ ಗಮನವಿರಲು ಸಾಧ್ಯವೇ? ಏನನ್ನೋ ಸಾಧಿಸಬೇಕೆಂಬ, ಸಂಗ್ರಹಿಸಬೇಕೆಂಬ, ಉದ್ದೇಶದಿಂದ ಗಮನಿಸಲು ತೊಡಗಿದ್ದರೆ ಆಗ ಗಮನವಿರುವುದಿಲ್ಲ ವಿಕರ್ಷಣೆಮಾತ್ರವಿರುತ್ತದೆ. ಗಮನ ಮತ್ತು ಗಮನದ ಉದ್ದೇಶಗಳೆಂಬ ಭೇದವಿರುತ್ತದೆ‌. ಏನೋ ಆಗಬೇಕೆಂಬ ಅಥವಾ ಏನೋ ಆಗಬಾರದೆಂಬ ಯಾವ ಉದ್ದೇಶವೂ ಇಲ್ಲದ ಪರಿಪೂರ್ಣ ಗಮನವಿದ್ದಾಗ ಮಾತ್ರ ಒಳಿತು ಇರುತ್ತದೆ. (ಗಮನ=ಪ್ರೀತಿ, ಗುಣ)....

ಮೂಲ: ಜಿಡ್ಡು ಕೃಷ್ಣಮೂರ್ತಿ ಪುಸ್ತಕಗಳು
✍🏻: ವೆಂಕಟೇಶ ಭಂಡಾರಿ ಕುಂದಾಪುರ.

Friday 24 September 2021

ಬೆಂಗಳೂರಿನ ವೈಟ್ ಫೀಲ್ಡ್ ಬೋರ್ ವೆಲ್ ರೋಡ್ ನ ಆನಂದ ವಿ ಸ್ವಾಮಿ ವಿಧಿವಶ.

ಬೆಂಗಳೂರಿನ ವೈಟ್ ಫೀಲ್ಡ್ ಬೋರ್ ವೆಲ್ ರೋಡ್ ನ ಶ್ರೀ ಆನಂದ ವಿ ಸ್ವಾಮಿಯವರು ಸೆಪ್ಟೆಂಬರ್ 24 ರ ಮದ್ಯಾಹ್ನ1.30 ಕ್ಕೆ ಅಲ್ಪ ಕಾಲದ ಅಸೌಖ್ಯದಿಂದ ವಿಧಿವಶರಾದರು.ಅವರಿಗೆ ಸುಮಾರು 78 ವರ್ಷ ವಯಸ್ಸಾಗಿತ್ತು. ಇವರು ನಮ್ಮ ಸಮಾಜದ ಖ್ಯಾತ ವೈದ್ಯರಾಗಿರುವ ಡಾ| ತ್ಯಾಗರಾಜ್ ರವರ ಅಣ್ಣ.

 


ದಿವಂಗತರು ಮಗ ಸಂತೋಷ್ ಮತ್ತು ಹೆಣ್ಣು ಮಕ್ಕಳಾದ ಶ್ರೀಮತಿ ಅನಿತಾ ಮತ್ತ ಸಂಗೀತ ಹಾಗೂ ಸೊಸೆ, ಅಳಿಯಂದಿರು, ಮೊಮ್ಮಕ್ಕಳು , ಸಹೋದರರು ಹಾಗೂ ಅಪಾರ ಬಂಧು‌ ವರ್ಗವನ್ನು ಅಗಲಿದ್ದಾರೆ.
ಜನಾನುರಾಗಿ ಹಾಗು ಕೊಡುಗೈ ದಾನಿಯಾಗಿದ್ದ ಇವರು ಭಂಡಾರಿ ಸಮಾಜ ಸಂಘ ಬೆಂಗಳೂರು ವಲಯದ ಓರ್ವ ಪೋಷಕರಾಗಿದ್ದರು.

ಮೃತರ ಅಂತ್ಯಕ್ರಿಯೆಯು ಸೆಪ್ಟೆಂಬರ್ 25 ರ ಬೆಳಿಗ್ಗೆ 10.30 ಕ್ಕೆ ಮೃತರ ಸ್ವಗೃಹ ಬೆಂಗಳೂರಿನ ವೈಟ್ ಫೀಲ್ಡ್ ನ ಬೋರೆವೆಲ್ ರೋಡ್ ನಲ್ಲಿ ನಡೆಯಲಿದೆಯೆಂದು ಕುಟುಂಬದ ಮೂಲಗಳಿಂದ ತಿಳಿದು ಬಂದಿದೆ .
ಮೃತರ ಆತ್ಮಕ್ಕೆ ಚಿರಶಾಂತಿ ಸಿಗಲಿ, ಅವರ ಅಗಲಿಕೆಯ ದುಃಖವನ್ನು ಸಹಿಸುವ ಶಕ್ತಿಯನ್ನು ಭಗವಂತನು ಕುಟುಂಬಕ್ಕೆ ದಯಪಾಲಿಸಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು. ಇದಕ್ಕಾಗಿ ಭಂಡಾರಿ ವಾರ್ತೆ ಪ್ರಾರ್ಥಿಸುತ್ತದೆ.

-ಭಂಡಾರಿ ವಾರ್ತೆ

ಕಾರ್ಕಳ ಪಳ್ಳಿ ನಿಂಜೂರು ಕೊಪ್ಪಲ ಮನೆ ಶಾಂತ ಭಂಡಾರಿ ನಿಧನ

 ಕಾರ್ಕಳ ಪಳ್ಳಿ ನಿಂಜೂರು ಕೊಪ್ಪಲ ಮನೆ ದಿವಂಗತ ಹರಿಯಪ್ಪ ಭಂಡಾರಿಯವರ ಧರ್ಮ ಪತ್ನಿ ಶಾಂತ ಭಂಡಾರಿಯವರು ಅಲ್ಪ ಕಾಲದ ಅಸೌಖ್ಯದಿಂದ ಸೆಪ್ಟೆಂಬರ್ 23 ರ ಗುರುವಾರ ಕೊನೆಯುಸಿರೆಳೆದರು.

ಅವರಿಗೆ ಸುಮಾರು 55 ವರ್ಷ ವಯಸ್ಸಾಗಿತ್ತು

 


ದಿವಂಗತರು ಒಂದು ಹೆಣ್ಣು ಮತ್ತು ಎರಡು ಗಂಡು ಮಕ್ಕಳು ಹಾಗೂ ಅಪಾರ ಬಂಧುವರ್ಗವನ್ನು ಅಗಲಿದ್ದಾರೆ.

ಮೃತರ ಆತ್ಮಕ್ಕೆ ಚಿರಶಾಂತಿ ಸಿಗಲಿ, ಅವರ ಅಗಲಿಕೆಯ ದುಃಖವನ್ನು ಸಹಿಸುವ ಶಕ್ತಿಯನ್ನು ಭಗವಂತನು ಕುಟುಂಬಕ್ಕೆ ದಯಪಾಲಿಸಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು ಭಂಡಾರಿ ವಾರ್ತೆ ಪ್ರಾರ್ಥಿಸುತ್ತದೆ.

-ಭಂಡಾರಿ ವಾರ್ತೆ

ಉಜಿರೆಯ ಶ್ರೀಮತಿ ಲಲಿತ ಭಂಡಾರಿ ವಿಧಿವಶ

 ಉಜಿರೆಯ ದಿವಂಗತ ರಮೇಶ್ ಭಂಡಾರಿಯವರ ಪತ್ನಿ ಶ್ರೀಮತಿ ಲಲಿತ ಭಂಡಾರಿಯವರು ಅಲ್ಪ ಕಾಲದ ಅಸೌಖ್ಯದಿಂದ ಸೆಪ್ಟೆಂಬರ್ 24 ರ ಶುಕ್ರವಾರ ಮುಂಜಾನೆ ಕೊನೆಯುಸಿರೆಳೆದರು.ಅವರಿಗೆ ಸುಮಾರು  63 ವರ್ಷ ವಯಸ್ಸಾಗಿತ್ತು.


ದಿವಂಗತರು ಒಂದು ಗಂಡು ಎರಡು ಹೆಣ್ಣುಮಕ್ಕಳು ಮತ್ತು ಅಪಾರ ಬಂಧುವರ್ಗವನ್ನು ಅಗಲಿದ್ದಾರೆ.

ಮೃತರ ಆತ್ಮಕ್ಕೆ ಚಿರಶಾಂತಿ ಕರುಣಿಸಲಿ , ಅವರ ಅಗಲಿಕೆಯ ದುಃಖವನ್ನು ಸಹಿಸುವ ಶಕ್ತಿಯನ್ನು ಭಗವಂತನು ಕುಟುಂಬಕ್ಕೆ ದಯಪಾಲಿಸಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು ಭಂಡಾರಿ ವಾರ್ತೆ ಪ್ರಾರ್ಥಿಸುತ್ತದೆ.

ಭಂಡಾರಿ ವಾರ್ತೆ

Tuesday 21 September 2021

ಕಾರ್ -ಬಾರ್-ಐ.ಜಿ.ಭಂಡಾರಿ,ನಿವೃತ್ತ ಬ್ಯಾಂಕ್ ಮ್ಯಾನೇಜರ್, ಕಾರ್ಲ .

 ಚೆನ್ನಾಗಿದ್ದೀರಾ? ಏನು ಸಮಾಚಾರ? ಕ್ಷೇಮವೇ? ಹೀಗೆ ವಿಚಾರಿಸುವುದನ್ನು ತುಲು ಭಾಷೆಯಲ್ಲಿ "ದಾನೆ ಕಾರ್ ಬಾರ್" ಎನ್ನುವರು.ದಾನೆ ಎಂದರೆ ಏನು ಎಂಬ ಅರ್ಥ.


ತುಲು ಭಾಷೆಯಲ್ಲಿ "ಲ" ಕಾರಕ್ಕೆ "ರ" ಕಾರವಾಗಿ ಉಚ್ಛರಿಸುವ ತುಂಬ ಶಬ್ಧಗಳಿವೆ.ಅದರಂತೆ ಇಲ್ಲಿ
"ಕಾಲ"ಎಂಬ ಪದವು "ಕಾರ" ಎಂದಾಗಿದೆ.ಈ ಪದವನ್ನು ಬಳಸುವಾಗ ಉಚ್ಛಾರಣೆಯಲ್ಲಿ ಚಿಕ್ಕದಾಗಿ
"ಕಾರ"ವನ್ನು "ಕಾರ್"ಎಂದಿದ್ದಾರೆ.ಕಾಲ ಅಥವಾ ಕಾರ್ ಎಂದರೆ ಕಾಲವಾದ, ಮುಗಿದು ಹೋದ,
(ಕರಿದ್ ಪೋಯಿನ) ಸುದ್ದಿ ಸಮಾಚಾರಗಳು.ಅಂದ ರೆ ಭೂತಕಾಲದ ಸುದ್ದಿ ಸಮಾಚಾರಗಳು.ಅವುಗಳು
ಕೃಷಿ, ವ್ಯಾಪಾರ, ಆರೋಗ್ಯ ಇನ್ನಿತರ ಯಾವುದೇ ವಿಷಯಗಳು ಇದ್ದಿರಬಹುದು. ಇನ್ನು "ಬಾಲ್"(ಬಾಳು) ಎಂಬ ಪದವನ್ನು "ಬಾರ್"ಎಂದಿದ್ದಾರೆ.ಬಾರ್ ಎಂದರೆ ಪ್ರಸ್ತುತ ಅಥವಾ ವರ್ತಮಾನದ ಮತ್ತು ಭವಿಷ್ಯತ್ಕಾಲದ ಸುದ್ದಿ ಸಮಾಚಾರಗಳು.ಅಂದರೆ ಇಂದಿನ ಈಗಿನ ಬದುಕಿನ ಜೀವನದ ಸುದ್ದಿ ಸಮಾಚಾರಗಳು.ಇಲ್ಲೂ ಯಾವುದೇ ವಿಚಾರಗಳು ಇರಬಹುದು.


 ಪನ್ಲೆಗೆ (ಹೇಳಿಯಂತೆ)ಕಾರ್ ಬಾರ್ ಎಂದರೆ ಅಂದಿನ,ಇಂದಿನ, ಮುಂದಿನ ಎಲ್ಲಾ ಸುದ್ದಿ ಸಮಾಚಾರಗಳನ್ನು ಹೇಳಲು ಕೇಳುವುದು.ಅವರು ಇವರ ಕಾರ್ ಬಾರ್ ವಿಚಾರಿಸಿದಾಗ ಇವರು ಅವರ ಕಾರ್ ಬಾರ್ ಕೇಳುವರು.ನಂತರ ಪಟ್ಟಾಂಗ ಹೊಡೆಯುತ್ತಾ ಇರುತ್ತಾರೆ.



 ಅರಿ ಬಾರ್(ಅಕ್ಕಿ ಭತ್ತ)ಇಲ್ಲೂ ಅರಿ ಎಂದರೆ ಮುಗಿಯಿತು ಎಂದಾಗುತ್ತದೆ.ಅಂದರೆ ಅನ್ನ ಮಾಡಿ
ಊಟ ಮಾಡಿದರೆ ಅಕ್ಕಿಯ ಕತೆ ಮುಗಿದ ಹಾಗೆ.ಬಾರ್ ಎಂದರೆ ಮುಂದಿನ ಬದುಕು ಎಂದಾಗುತ್ತದೆ.ಭತ್ತ
ದಿಂದ ಪುನಃ ಭತ್ತ ತೆಗೆಯಲು ಬರುತ್ತದೆ.ಬಾರ್ ಅಂದರೆ ಬಾಳು‌.ಈಗಿನ ಮತ್ತು ಮುಂದಿನ ಬಾಳು.ಕಾರ್-ಬಾರ್ ಎಂದರೆ ಕಾಲವಾದ ದಿನಗಳ(Past) ಮತ್ತು ಈಗಿನ(Present)ಸುದ್ದಿ ಸಮಾಚಾರಗಳು ಹಾಗು ಮುಂದಿನ ಯೋಜನೆ ಉಪಾಯಗಳ ವಿವರಣೆಗಳನ್ನುಹಂಚಿಕೊಳ್ಳುವುದು.

-ಐ.ಜಿ.ಭಂಡಾರಿ,ನಿವೃತ್ತ ಬ್ಯಾಂಕ್ ಮ್ಯಾನೇಜರ್, ಕಾರ್ಲ . 

Sunday 19 September 2021

ದಾಂಪತ್ಯ ಜೀವನಕ್ಕೆ ಕಾಲಿಟ್ಟ ಮುಂಬಯಿಯ ಚಿ॥ಸೌ॥ ಮೇಘನಾ ಮತ್ತು ಮುಂಬಯಿಯ ಚಿ॥ ಅಶುತೋಷ್

 ಮುಂಬೈ ಸಿ.ಎ. ಶ್ರೀ ಉಮೇಶ್ ಭಂಡಾರಿ ಉಡುಪಿ ಎಳ್ಳು ಗದ್ದೆ ಮತ್ತು ಶ್ರೀಮತಿ ಗೀತಾ ಉಮೇಶ್ ಭಂಡಾರಿ ದಂಪತಿಯ ಪುತ್ರಿ

ಚಿ॥ಸೌ॥ ಮೇಘನಾ

ಮುಂಬೈ ದಿವಂಗತ ರಮೇಶ್ ಎ. ಶಿರ್ವೇಕರ್ ಮತ್ತು ಶ್ರೀಮತಿ ಸುನಂದ ರಮೇಶ್ ಶಿರ್ವೇಕರ್ ದಂಪತಿಯ ಪುತ್ರ

ಚಿ॥ಅಶುತೋಷ್

ಇವರ ದಾಂಪತ್ಯ ಜೀವನವು ಮುಂಬೈಯ ಘೋಡ್ ಬಂದರ್ ರಸ್ತೆಯ ಆರ್ - ಮಾಲ್ ನ ಮೂರನೇ ಮಹಡಿಯ ಸಭಾಂಗಣದಲ್ಲಿ ಸೆಪ್ಟೆಂಬರ್ ದಿನಾಂಕ 12 ನೇ ಆದಿತ್ಯವಾರದಂದು ಗುರುಹಿರಿಯರ ಬಂಧುಮಿತ್ರರ ಶುಭಾಶೀರ್ವಾದದೊಂದಿಗೆ ವಿಜ್ರಂಭಣೆಯಿಂದ ಜರುಗಿತು .













ನವದಂಪತಿ ನೂರಾರು ಕಾಲ ಅನ್ಯೋನ್ಯತೆಯಿಂದ ಸುಖ ಶಾಂತಿ ನೆಮ್ಮದಿ ಸಂಸಾರವನ್ನು ಮುನ್ನಡೆಸಲು ಭಗವಂತನ ಅನುಗ್ರಹ ಸದಾ ಇರಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು ಭಂಡಾರಿ ವಾರ್ತೆಯ ಹಾರ್ದಿಕ ಶುಭ ಹಾರೈಕೆ.

-ಭಂಡಾರಿ ವಾರ್ತೆ

Saturday 18 September 2021

ಜೀವನದ ಇಳಿ ವಯಸ್ಸಲ್ಲಿ ಪ್ಯಾಂಟು ZIP ಜಾರಿದಾಗ-ಸೀತಾರಾಮ ಭಂಡಾರಿ M P , ಕೋಣಾಜೆ

 Zip ಯುಗ ಬಂದು ಕೆಲವು ದಶಕಗಳೇ ಸಂದು ಹೋದವು. ಆಗ ನಾವು ಯುವ-ಕರುಗಳಾಗಿದ್ದೆವು .😃

ಆಗ ಈ Zip ಪ್ಯಾಂಟಿನ ಸಮಸ್ಯೆ ನಮಗೆ ಗೊತ್ತಾಗಲೇ ಇಲ್ಲ. ಈಗ ನಾವು ಆಗಿದ್ದೇವೆ ಮುದು- ಕರು🤓.

ನನ್ನಲ್ಲೀಗ ಕೆಲವು ವಯೋಸಹಜ ಲಕ್ಷಣಗಳು ಕಾಣಲಾರಂಬಿಸಿದೆ ಎಂದು ನನಗೆ ತಿಳಿಯುವ ಮೊದಲೇ ನನ್ನ ಪತ್ನಿ ಗುರುತಿಸಿದ್ದಳು.

ನಾನು ಕೆಲವೊಮ್ಮೆ ಪತ್ನಿಯ ಹುಕುಮಿನಂತೆ ಸಾಂಬಾರು ಜೀನಸ್ಸು ಪದಾರ್ಥಗಳನ್ನು ತರಲು ತ್ವರಿತಗತವಾಗಿ ಪ್ಯಾಂಟ್ ಶರ್ಟ್ ತೊಟ್ಟು ( inshirt) ಇನ್ನೇನು ಅಂಗಳಕ್ಕೆ ಇಳಿಯುವಷ್ಟರಲ್ಲಿ ನನ್ನವಳು ನನ್ನ ಕೈಯ್ಯಲ್ಲಿ ಹಣವಿದೆಯೇ ಎಂದು ಕೇಳುವುದಿಲ್ಲ🤔 ಆದರೆ ನಿಮ್ಮ ಪ್ಯಾಂಟಿನ ಜಿಪ್ ಎಳೆದಿದ್ದೀರಾ ಎಂದುಗೌಜಿ ಮಾಡಿ 😡 ನನಗೆ ನೋಡಲು ನಾಚಿಕೆ ಆಗುತ್ತದೆ 🤦‍♀️ ಎನ್ನುತ್ತಾಳೆ. PantZip ಎಳೆಯುವಷ್ಟು ಪುರುಸೊತ್ತು ನೀಡದೆ ಮನೆಯಿಂದ ಹೊರದಬ್ಬುವುದು ಬೇರೆ Zip ಹಾಕಿಲ್ಲ ಎಂದು ಗದರಿಸುವುದು ಬೇರೆ😩

 

ಆಯಿತು ಅಂಗಡಿಗೆ ಹೋಗಿ ಹಿಂತಿರುಗುವ ವೇಳೆ ಬಹಿರ್ದೆಸೆಯ ಸಮಸ್ಯೆ ಒಳಗಾದರೆ ತಕ್ಷಣವೇ ಆರೋಗ್ಯದ ಹಿತ ದೃಷ್ಟಿಯಿಂದ ಶ್ವಾನದಂತೆ🐕 ವಿಲೇವಾರಿ ಮಾಡ ಬೇಕೆಂದು ವೈದ್ಯರೇ ಸಲಹೆ ಕೊಟ್ಟಿದ್ದಾರೆ. ಜನ ನೋಡಿಯಾರು ಎಂಬ ಭಯದಿಂದ ಒಮ್ಮೆ ಇಲ್ಲಿಂದ ತೆರಳುವ ಗಡಿಬಿಡಿಯಲ್ಲಿ ಪ್ಯಾಂಟಿನ Zip ಹಾಕುಲು ಮರೆತು ಹೋಗುವುದು ನನ್ನ ತಪ್ಪೇ? ಅಥವಾ ಪ್ರಾಯದ ತಪ್ಪೇ? ಎಂದು ಹೌದು ಸ್ವಾಮಿ ನೀವೇ ಹೇಳಿ🤓

ಮನೆಗೆ ಸರಕು ಸರಂಜಾಮುಗಳನ್ನು ಹೆಗಲಲ್ಲಿ, ಕೈಯ್ಯಲ್ಲಿ ಕೆಲವೊಮ್ಮೆ ತಲೆಯಲ್ಲಿ ( bcz no cycle or vehicle) ಹೊತ್ತು ಕೊಂಡು ಹೋದ ಸಾಮಾನುಗಳನ್ನು ಕೆಳಗಿಳಿಸುವ ಮೊದಲೇ ಮತ್ತೇ ಅದೇ ರಾಗ. ನಿಮಗೆ ನಾಚಿಕೆ ಆಗೋಲ್ಲ! ನನಗೆ ನಾಚಿಕೆ ಆಗುತ್ತದೆ, ನೀವೀಗ ಮಾರ್ಗದಲ್ಲಿ ಬರುವಾಗ ಜನ ನೋಡಿ ಏನೆಂದಾರು? ನೋಡುವವರಿಗೆ ನಾಚುಗೆ ಆಗ್ತದೆ!! ನಿಮ್ಮ ಪ್ಯಾಂಟಿನ zip ಜಾರಿದೆಯಲ್ಲಾ, ನಿಮಗೆ zip ಮೇಲೆ ಎಳೆಯಲು ಸಂಕಟವೇ ಎಂದು ಗದರಿಸುವಳು 😬🥱



 ಇಲ್ಲ ಮಾರಾಯ್ತಿ zip ತನ್ನಷ್ಟಕ್ಕೆ ಲೂಸಾಗಿ ಕೆಳಗೆ ಜಾರಿತು. ಸರಿಪಡಿಸೋಣ ಎಂದರೆ ಕೈಗಳಲ್ಲಿ, ತಲೆಯಲ್ಲಿ ಚೀಲದ ಗಂಟುಗಳು ಮಂಗನಂತೆ ಕುಳಿತಿವೆ , ಎಲ್ಲದ್ದಕ್ಕೂ ನನಗೆ ಪ್ರಾಯವಾಗಿದೆ, ನಾನೊಬ್ಬ ಹಿರಿಯ ಜೀವಿಯಲ್ಲವೇ? ಜನರು ನೋಡಿದರೇನಾಯ್ತು? ಹಿರಿಯರಾದ ನಮಗೆ ನಾಚಿಕೆ ಯಾಗುವುದಿಲ್ಲ? ನಾಚಿಕೆ ಆಗುವುದಿದ್ದರೆ ಅವರಿಗೆ ನಾಚಿಕೆ ಆಗಬೇಕು.

ಸಾರ್ವಜನಿಕವಾಗಿ ಪ್ಯಾಂಟು ಶರ್ಟು ಧರಿಸಿ ಹಿರಿಯರು ಹೋದಾಗ ಧರಿಸಿದ ಬಟ್ಟೆ ಅಥವಾ ಪ್ಯಾಂಟ್ zip ಜಾರಿದ್ದರೆ ಅದನ್ನು ಸರಿಪಡಿಸಿಕೊಳ್ಳಿ ಅಂಕಲ್ ಅಥವಾ ಅಜ್ಜಾ ಎಂದು ಹೇಳುವ ಜವಾಬ್ದಾರಿ ಯುವ ಪೀಳಿಗೆಗೆ ಇಲ್ಲವೇ? ಎಂದು ನಾನೇ ಪ್ರಶ್ನಿಸಿ ನನ್ನನ್ನು ನಾನೇ ಸಮರ್ಥಿಸಿಕೊಂಡೆ👍

ನನಗೀಗ ಸಂಶಯ ಪ್ಯಾಂಟಿನ zip ಜಾರಿಕೊಂಡು ಬರುವುದು ಪ್ರಾಯ ಆದ ಮೇಲೆಯೇ? ಅಥವಾ ಪ್ರಾಯ ಹೋದ ಮೇಲೆಯೇ? 🤔

ಹಿರಿಯ ಗಂಡಸರಲ್ಲಿ ಕಾಣುವ ಪ್ಯಾಂಟಿನ ಈ zip ಮರೆವು ಯಾವ ರೋಗಲಕ್ಷಣದ ವ್ಯಾಪ್ತಿಯಲ್ಲಿ ಬರುತ್ತದೆ? ವೈರಸ್ ಅಲ್ಲ ಸಾಂಕ್ರಾಮಿಕವೂ ಅಲ್ಲ ಅಥವಾ Zip manufacturing defect ಆಗಿರಬಹುದೇ?🤔😝

ಅದಕ್ಕೇ ಬಹುಶಃ ನಮ್ಮ ಸಿನಿಮಾರಂಗದ ಉಪೇಂದ್ರನ ಹಾಡಲ್ಲಿ ಮೂಡಿ ಬರುವುದು ಸೊಂಟ ಸೂಪರೂ, ಅದು ಬಲು ಡೇಂಜರೂ😱😲 ಹಾಗೆಯೇ "ಸೊಂಟದ ವಿಷ್ಯಾ ಬೇಡವೋ ಶಿಷ್ಯಾ" ಎಂದು ಬಹುಶಃ ನಮ್ಮಂತಹವರ ಮರೆಗುಳಿಯ zip ಜಾರುವವರಿಗೆ ಹೇಳಿರಬೇಕು🤔🤓

ಈಗ ನನಗೆ ಪ್ರಾಯ ಹೆಚ್ಚುತ್ತಾ ಹೋದಂತೆ ನಾನು ಮನೆಯಿಂದ ನಿರ್ಗಮಿಸುವಾಗ & ಆಗಮಿಸುವಾಗ ನನ್ನ ಪತ್ನಿಗೆ ನನ್ನ ಸೊಂಟದ ಪ್ಯಾಂಟಿನ ಮೇಲೇಯೇ ತೀವ್ರ ನಿಗಾ😝

ಈಗ ಎಲ್ಲಿಯವರೆಗೆ ನನ್ನ ಸ್ಥಿತಿ ತಲುಪಿದೆ ಎಂದರೆ ನಾನು ಎಲ್ಲಿ ಓಡಾಡುತಿದ್ದರೂ ನನ್ನ Mobile phone ಗೆ ಕರೆ ಮಾಡಿ ನೀವು ಎಲ್ಲಿದ್ದೀರಾ? ಪ್ಯಾಂಟಿನ ಜಿಪ್ ಹಾಕಿದ್ದೀರಾ? ಜಾರಿದ್ದರೆzip ನ್ನು ಮೇಲಕ್ಕೆ ಎಳೆಯಿರಿ ಎಂದು warning & controlling system ಕರೆ ಬರುತ್ತದೆ.

ಹೆಚ್ಚು ಕಡಿಮೆ Mobile ನಲ್ಲಿ ಕೊರೋನಾ ಎಚ್ಚರಿಕೆ ಸಂದೇಶ ಬಂದಂತೆ😫

ನಾನು ಅವಳಿಗೆ ಹೇಳಿದೆ ಹಲವು ಬಾರಿ🙏 ನನಗೆ ಪ್ರಾಯ ಆಗಿದೆ.ನೀನು ನನ್ನ ಪ್ಯಾಂಟಿನ zip ಬಗ್ಗೆ ತಲೆ ಬಿಸಿ ಮಾಡಬೇಡ ಎಂದು.

 ಆದರೆ ಆಕೆಯ ವಾದ ಏನೆಂದರೆ ನಿಮಗೆ ಪ್ರಾಯ ಆಗಿದೆ ಸರಿ! ಆದರೆ ನಾನು ಪ್ರಾಯದಲ್ಲಿ ನಿಮಗಿಂತ ಏಷ್ಟೋ ಕಿರಿಯವಳು. ನೀವು zip ಹಾಕದೆ ಹೀಗೆ ಹೋದರೆ ನಿಮ್ಮ ಪತ್ನಿಯಾದ ನನಗೆ ನಾಚುಗೆಯಾಗುತ್ತದೆ ಅನ್ನುತ್ತಾಳೆ🤦‍♀️

ನಾನು ಅವಳಿಗೆ ಸಮಾಧಾನ ಮಾಡಿ ಹೇಳಿದೆ " ನೋಡು ಹಳ್ಳಿಯಲ್ಲಾಗಲಿ ನಗರದಲ್ಲಿಯಾಗಲಿ, ನನ್ನ ಹಾಗೆ ಕೆಲವು ಹಿರಿಯರಿಗೆ ಈ ರೀತಿಯ ಸಮಸ್ಯೆಗಳು ಸ್ವಾಭಾವಿಕ."

ಸಾರ್ವಜನಿಕ ಜೀವನದಲ್ಲಿ ಜನರು ಮೈ ಮರೆತು ಓಡಾಡುವಾಗ, ಅಥವಾ ಧರಿಸಿಕೊಂಡ ಬಟ್ಟೆಗಳು ಕೆಲವೊಮ್ಮೆ ಗೊತ್ತಿಲ್ಲದೆ ಅವ್ಯವಸ್ಥೆಯಲ್ಲಿರುವ ವೇಳೆ, ಗೊತ್ತಿಲ್ಲದೆ ಬಟನ್, zip ಗಳು ಜಾರಿದ ಸ್ಥಿತಿಯಲ್ಲಿರುವ ತಪ್ಪುಗಳನ್ನು ನೋಡುಗರ ಕಣ್ಣುಗಳು ಬೇಗನೆ ಗಮನಿಸುತ್ತಿರುತ್ತದೆ, ಆದರೆ ನಮಗರಿವಿಲ್ಲದ ನಮ್ಮ ನ್ಯೂನತೆಗಳನ್ನು ಸರಿಪಡಿಸಿಕೊಳ್ಳಿ ಎಂದು ಪುರುಷ ಸಮಾಜ ಪುರುಷರಿಗೂ ಹೇಳುವುದಿಲ್ಲ ಇಲ್ಲವೇ ಮಹಿಳೆಯರು ಕೂಡಾ ಕೆಲವು ಸಂಧರ್ಭಗಳಲ್ಲಿ ಮಹಿಳೆಯರಿಗೆ ಹೇಳಲು ಮಹಿಳೇಯರೇ ಸಂಕೋಚಿಸುವುದು ತಪ್ಪೆಂದು ಹಿರಿಯವನಾದ ನನ್ನ ಭಾವನೆ

ಅಂತಿಮ ಸಂಶೋಧನೆ

Zip ಪುರಾಣದಿಂದ ಪಾರಾಗಲು ನಮ್ಮ ತಂಡ ಯಾವುದೇ fellowship ಇಲ್ಲದೆ ಸಂಶೋಧನೆ ನಡೆಸಿದೆ.
70 ವರುಷ ದಾಟಿದ ( zip ಜಾರುವವರಿಗೆ ಮಾತ್ರ) ನಾನು ಸೇರಿದಂತೆ ಇತರ ಹಿರಿಯ ಪ್ಯಾಂಟು ಧರಿಸುವ ಹಿರಿಯ ಗಂಡಸರಿಗೆ zip ಪ್ಯಾಂಟು ಬದಲು ಜಿಪ್ಪೇ ಇಲ್ಲದ Sports pant ನ್ನು ಖಡ್ಡಾಯವಾಗಿ ಧರಿಸುವಂತೆ
ಆಯಾಯ ಮನೆಯ care taker ನವರು ಒತ್ತಾಯಿಸುವ ಪದ್ಧತಿಯನ್ನು ಜ್ಯಾರಿಗೊಳಿಸುವಂತೆ ತಾತ್ಕಾಲೀಕ ಸಂಶೋಧನಾ ವರದಿ ಅಂತಿಮ ಹಂತದಲ್ಲಿದೆ🤓🙏🙏🙏

ಇಲ್ಲಿಗೆ zip ಪುರಾಣ ಕಥೆ ಮುಗಿಯಿತು. ಈ ಲೇಖನ ಬರೆಯಲು ನನ್ನಾಕೆಯ ಮೌಖಿಕ ಅಪ್ಪಣೆ ಪಡೆದಿದ್ದೇನೆ ಮತ್ತು ನನ್ನ ನಿತ್ಯ ಬದುಕಿನ ವ್ಯವಹಾರದ ಜವಾಬ್ದಾರಿ ಆಕೆಯೇ ಹೊತ್ತುಕೊಂಡಿರುವುದರಿಂದ ನನ್ನ ಈ ಹಾಸ್ಯ/ದುಖಃದ ಲೇಖನವನ್ನು ನನ್ನ ಮಡದಿಗೆ ಅರ್ಪಣೆ 🙏🙏🙏


 

 

 


-ಸೀತಾರಾಮ ಭಂಡಾರಿ M P , ಕೋಣಾಜೆ


Thursday 16 September 2021

ವಿಶ್ವ ಕ್ಷೌರಿಕ ದಿನ (ಇತಿಹಾಸದ ವೈಭವ ಮರುಕಳಿಸುವಂತೆ ಮಾಡಬೇಕಿದೆ. ) - ವಿಜಯ್ ನಿಟ್ಟೂರು

 ಸಾಮಾನ್ಯವಾಗಿ ನಾವು ಕ್ಷೌರಿಕದಿನವನ್ನು ಎಂದಿಗೂ ಆಚರಿಸಿರುವುದಿಲ್ಲ. ಅದಕ್ಕೆ ನಮ್ಮ ಸಮಾಜದ ಸಂಖ್ಯಾಬಲವೋ ಅಥವಾ ಇಚ್ಚಾಶಕ್ತಿಯ ಕೊರತೆಯೂ ಆಗಿರಬಹುದು. ಸಮಾಜದ ಸವಿತಾ ಮಹರ್ಷಿ ದಿನಾಚರಣೆಯೂ ಕೂಡಾ ಇತ್ತೀಚಿಗೆ ಪ್ರಚಲಿತದಲ್ಲಿದೆ. ಆ ದಿನಾಚರಣೆಗೆ ಸರಕಾರವೂ ಕೂಡ ಮನ್ನಣೆ ನೀಡುತ್ತಿದೆ ಮತ್ತು ಸಮಾಜದ ಸಂಘಟನೆ ಕೂಡ ಹಲವು ಕವಲುಗಳು ಒಡೆದು ದೊಡ್ಡದಾದ ಒಂದು ಗಟ್ಟಿ ಸಂಘಟನೆ ಕನಸಿನ ಮಾತೇ ಆಗಿದೆ. ಅಂತಹುದರಲ್ಲಿ ಕಿವಿಗೆ ಖುಷಿಕೊಡುವ ಮನಕ್ಕೆ ಹೆಮ್ಮೆ ಎನ್ನಿಸುವ ವಿಶ್ವಮಟ್ಟದಲ್ಲಿ ಕ್ಷೌರಿಕ ದಿನಾಚರಣೆ ನೆಡೆದರೆ ಹೇಗಿರಬೇಡ ? ಹೌದು ವಿಶ್ವದ ಕ್ಷೌರಿಕರೆಲ್ಲಾ ಒಗ್ಗೂಡಿ ಇಂತಹದೊಂದು ಆಚರಣೆ ನೆಡೆಸಿದರೆ ಕ್ಷೌರಿಕರ ಬಲ ನೂರ್ಮಡಿ ಆಗುವುದಿಲ್ಲವೇ ! ಸಾಕಷ್ಟು ನೂನ್ಯತೆಗಳೂ ಕರಗಿ ಹೋಗುವುದಲ್ಲವೇ‌ ?

 

ಕೇಶಕರ್ತನವೆಂಬುದು ಲಿಂಗಭೇದವಿಲ್ಲದೇ ಪ್ರಪಂಚದಾದ್ಯಂತ ಅನೇಕರಿಗೆ ಬದುಕನ್ನು ಕಟ್ಟಿಕೊಟ್ಟಿದೆ. ಧರ್ಮ, ಜಾತಿ, ಲಿಂಗ, ರೂಪ, ವಯಸ್ಸಿನ ಭೇದವಿಲ್ಲದೆ ತಮ್ಮ ಸೇವೆಯನ್ನು ನೀಡುತ್ತಿರುವ ಕ್ಷೌರಿಕರು ವಿಶ್ವ ಮಟ್ಟದಲ್ಲಿ ಒಂದಾಗಿ ಜಾಗತಿಕ ಸಮಸ್ಯೆಗಳಿಗೆ ಪರಸ್ಪರ ಸ್ಪಂದಿಸುವ ಸಲುವಾಗಿ ಪ್ರತಿ ವರ್ಷದ ಸೆಪ್ಟೆಂಬರ್ ಹದಿನಾರನೆ ತಾರೀಖನ್ನು ವಿಶ್ವ ಕ್ಷೌರಿಕರ ದಿನವೆಂದು 2018 ರಲ್ಲಿ ಮೊಟ್ಟಮೊದಲಬಾರಿಗೆ ಆಚರಿಸಲಾಯಿತು.

ಯುರೋಪ್ ಖಂಡದಲ್ಲಿ ರೋಮನ್ನರ ಚಕ್ರಾಧಿಪತ್ಯದ ಅಂತ್ಯವಾಗಿ ಆಧುನಿಕ ಯುರೋಪ್ ನಾಗರೀಕತೆ ಆರಂಭವಾಗುವ ಮಧ್ಯಯುಗದ ಕಾಲಗಟ್ಟದಲ್ಲಿ ಕ್ಷೌರಿಕರು ಕೇವಲ ಕೇಶಕರ್ತನದ ಕಾಯಕವಲ್ಲದೇ ದಂತವೈದ್ಯರಾಗಿಯೂ, ಗಾಯಗೊಂಡ ಭಾಗಗಳನ್ನು ಶುದ್ಧೀಕರಿಸಿ ಉಪಚರಿಸುವ ಮತ್ತು ಶಸ್ತ್ರಚಿಕಿತ್ಸೆಗಳನ್ನು ಮಾಡುತ್ತಾ ಗುರುತಿಸಿಕೊಂಡಿದ್ದರು. ಇವರೆಲ್ಲಾ ಒಗ್ಗೂಡಿ ಒಂದು ಸಂಘಟನೆಯ ಅವಶ್ಯಕತೆಯನ್ನು ಆಲೋಚಿಸಿ 1096ರಲ್ಲಿ ಕ್ಷೌರಿಕರ-ಶಸ್ತ್ರಚಿಕಿತ್ಸಕರ ಸಂಟನೆಯನ್ನು ಆರಂಭಿಸಿದರು. ಇಂತಹದೊಂದು ಸಂಘಟನೆಯನ್ನು ಅಂದಿನ ಕಾಲದಲ್ಲಿ ಒಗ್ಗೂಡಿಸಿದ ವಿಷಯ ಹೆಮ್ಮೆಯಲ್ಲವೆ ! ಈ ಸಂಘಟನೆಯ ಆರಂಭದ ಸವಿನೆನಪಿಗಾಗಿ ಸೆಪ್ಟೆಂಬರ್ (09) ತಿಂಗಳ 16 ನೇ ತಾರೀಖನ್ನು (1096) ಸಂಯೋಜಿಸಿ ಪ್ರತೀ ವರ್ಷದ ಸೆಪ್ಟೆಂಬರ್ 16 ರಂದು ವಿಶ್ವ ಕ್ಷೌರಿಕರ ದಿನಾಚರಣೆ ಆಚರಿಸಲು ತೀರ್ಮಾನಿಸಲಾಯಿತು.

ವಿಶ್ವ ಕ್ಷೌರಿಕರ ದಿನದ ಚಿಹ್ನೆಯಾಗಿ ಕೆಂಪು ಬಿಳಿ ಹಾಗೂ ನೀಲಿ ಬಣ್ಣಗಳನ್ನು ಸುರುಳಿಯಾಕಾರದಲ್ಲಿ ಹೊಂದಿದ ಕ್ಷೌರಿಕ ಕಂಬ (Barber Pole) ಮತ್ತು ಅದರ ಮೇಲೆ ಭೂಮಿಯ ಗುರುತನ್ನ ಹೊಂದಿರುವ ಚಿತ್ರವನ್ನು ಸಾಂಕೇತಿಕವಾಗಿ ಬಳಸಲಾಗಿದೆ.

ವಿಶ್ವ ಕ್ಷೌರಿಕರ ದಿನಾಚರಣೆಯ ವಿಶೇಷವೆಂದರೆ ವಿಶ್ವಾದ್ಯಂತ ಕೆಂಪು, ಬಿಳಿ ಮತ್ತು ನೀಲಿ ಬಣ್ಣದ ತಿರುಗುವ ಕೋಲು” ಹೊಂದಿರುವ ಲಾಂಛನವನ್ನು ಪ್ರದರ್ಶಿಸಿರುವ ಕ್ಷೌರಿಕರ ಅಂಗಡಿಗಳಲ್ಲಿ ಸೇವೆ ಪಡೆದ ಗ್ರಾಹಕರು ನೀಡುವ ಶುಲ್ಕದ ಸ್ವಲ್ಪ ಭಾಗವನ್ನು ಜೊತೆಗೆ ದೇಣಿಗೆಯನ್ನು ಸಂಗ್ರಹಿಸಿ ನೇರವಾಗಿ ಅಂತಾರಾಷ್ಟ್ರೀಯ ಕ್ಷೌರಿಕರ ಸಂಘಟನೆಯು ವಿಶ್ವಸಂಸ್ಥೆಯೊಂದಿಗೆ ಕೈ ಜೋಡಿಸಿ ಅಪೌಷ್ಟಿಕತೆಯಿಂದ ಬಳಲುತ್ತಿರುವ ಹಾಗು ಶಿಕ್ಷಣ ವಂಚಿತ ಮಕ್ಕಳಿಗೆ ನೆರವಾಗಲು “ಸಂಯುಕ್ತ ರಾಷ್ಟ್ರಗಳ ಅಂತರರಾಷ್ಟ್ರೀಯ ಮಕ್ಕಳ ತುರ್ತುನಿಧಿ.” (UNICEF- United Nations International Children’s Emergency Fund.) ಗೆ ತಲುಪಿಸುವ ಪ್ರಯತ್ನವನ್ನು ಮಾಡುತ್ತಾರೆ..

ಅಂತರರಾಷ್ಟ್ರೀಯ ಕ್ಷೌರಿಕರ ಸಂಘಟನೆ ಕೇವಲ ಲಾಭ ಗಳಿಸುವ ಸಂಘಟನೆಯಾಗಿ ಗುರುತಿಸಿಕೊಳ್ಳದೇ, ವಿಶ್ವದಾದ್ಯಂತ ಕ್ಷೌರಿಕರು ತಮ್ಮ ಜಾಗತಿಕ ಮಟ್ಟದ ಸಂಘಟನೆಯನ್ನು ಬಲಪಡಿಸುಪಡಿಸುವುದರ ಜೊತೆಗೆ ಅಶಕ್ತರ, ಅಸಹಾಯಕರ ನೆರವಿಗೆ ದೇಣಿಗೆಯನ್ನು ಸಂಗ್ರಹಿಸುವ ಹಾಗು ನೀಡುವ ಮೂಲಕ ಆದರ್ಶಪ್ರಾಯರಾಗಿ ಆಚರಿಸುವ ಉದ್ದೇಶವನ್ನು ಹೊಂದಿದ್ದಾರೆ.

ಒಂದಷ್ಟು ಸಾಂಪ್ರದಾಯಿಕ, ಸಾಮಾಜಿಕ ನೆಲೆಗಟ್ಟಿನಿಂದ ಕುಗ್ಗಿಹೋಗಿರುವ ಕ್ಷೌರಿಕರು ಹೆಮ್ಮೆಯಿಂದ ನಾನೊಬ್ಬ ಕ್ಷೌರಿಕ ಎಂದು ಹೇಳಿಕೊಳ್ಳುವ ಕಾಲ ಕೂಡಿಬಂದಿದೆ. ಮತ್ತೊಮ್ಮೆ ನಾವು ಕುಗ್ಗಿದ ಮನಸ್ಥಿತಿಯನ್ನು ಕಿತ್ತೊಗೆದು ಒಡೆದ ಕವಲುಗಳನ್ನು ಒಟ್ಟಗೂಡಿಸಿ ಗಟ್ಟಿಯಾಗಿ ಸಂಘಟಿತರಾಗಿ ಅಶಕ್ತರನ್ನು ಶಕ್ತರನ್ನಾಗಿಸಿ ಸಮಾಜವನ್ನು ಬಲಗೊಳಿಸಬೇಕಾಗಿದೆ.

ವಿಶ್ವ ಕ್ಷೌರಿಕ ದಿನಾಚರಣೆಯ ಜೊತೆಗೆ ಸವಿತಾ ಮಹರ್ಷಿ ದಿನಾಚರಣೆಯೂ ನಮ್ಮೆಲ್ಲರ ಅವಿಭಾಜ್ಯ ಅಂಗವಾಗಬೇಕಾಗಿದೆ. ಇದರೊಂದಿಗೆ ಗತಕಾಲದ ರಾಜ್ಯವಾಳಿದ, ಶಸ್ತ್ರಚಿಕಿತ್ಸಕರಾದ, ದಂತವೈದ್ಯರಾದ ಇತ್ಯಾದಿ ಇತಿಹಾಸಗಳನ್ನು ಮನನ ಮಾಡಿ ನಮ್ಮೊಳೊಗೆ ಬೇರು ಬಿಟ್ಟಿರುವ ಸಂಕುಚಿತತೆಯನ್ನು ತೊಡೆದುಹಾಕಿ ಮತ್ತೊಮ್ಮೆ ಇತಿಹಾಸದ ವೈಭವ ಮರುಕಳಿಸುವಂತೆ ಮಾಡಬೇಕಿದೆ.

ಜೈ ಕ್ಷೌರಿಕ್...ಜೈ ಜೈ ಕ್ಷೌರಿಕ್...!!!

ಮತ್ತೊಮ್ಮೆ "ಅಂತರರಾಷ್ಟ್ರೀಯ ಕ್ಷೌರಿಕ ದಿನ" ದ ಹಾರ್ದಿಕ ಶುಭಾಶಯಗಳು.

-✍️ ವಿಜಯ್ ನಿಟ್ಟೂರು

Wednesday 15 September 2021

ಕಣ್ಣಿನ ಆರೋಗ್ಯಕ್ಕೆ ಆಯುರ್ವೇದ ಸೂತ್ರಗಳು.

 ಕಣ್ಣಿನ ಆರೋಗ್ಯ ರಕ್ಷಿಸಿ ಪೋಷಿಸುವುದು ಬಹಳ ಅವಶ್ಯಕ. ಕಣ್ಣುಗಳು ಮಾನವನಿಗೆ ಪ್ರಮುಖವಾದ ಇಂದ್ರಿಯ ಅಥವಾ ಅಂಗ. ಹೊರ ಜಗತ್ತನ್ನು ನೋಡಿ ಆನಂದಿಸಲು ಇರುವ ಪ್ರಮುಖ ಸಾಧನ ನಯನ ಅಥವಾ ಕಣ್ಣುಗಳು.

 


ಕಣ್ಣುಗಳು ಬಹಳ ಸೂಕ್ಷ್ಮವಾದ ಅಂಗಗಳು. ಇವುಗಳನ್ನುರಕ್ಷಿಸಿ ಪೋಷಿಸುವುದು ಬಹಳ ಅವಶ್ಯಕ. ಬದಲಾದ ಜೀವನ ಶೈಲಿ, ಆಹಾರ ಮತ್ತು ವಾತಾವರಣದಲ್ಲಿನ ಪ್ರದೂಷಣೆ ಕಣ್ಣಿನ ಆರೋಗ್ಯವನ್ನು ನಾಶಗೊಳಿಸುತ್ತದೆ. ಆಯುರ್ವೇದ ಕಣ್ಣುಗಳಿಗೆ ಮಹತ್ವವನ್ನು ನೀಡುತ್ತಾ "ಸರ್ವೇಂದ್ರಿಯಾಣಾಮ್ ನಯನಂ ಪ್ರಧಾನಂ" ಅಂದರೆ ಎಲ್ಲ ಇಂದ್ರಿಯಗಳಲ್ಲಿ ಕಣ್ಣು ಪ್ರಧಾನವಾದದ್ದು ಎಂದು ಅರ್ಥ.

ಕಣ್ಣಿನ ಆರೋಗ್ಯಕ್ಕೆ ಸುಲಭ ಸೂತ್ರಗಳು :

  • ನೀರಿನಿಂದ ಶುದ್ಧಗೊಳಿಸುವುದು : ಬೆಳಗ್ಗೆ ಎದ್ದ ಕೂಡಲೇ ಮುಖ ತೊಳೆಯುವಾಗ, ಬಾಯಲ್ಲಿ ನೀರು ತುಂಬಿಸಿಕೊಂಡು ಕಣ್ಣುಗಳಿಗೆ ನೀರು ಸಿಂಪಡಿಸುವುದರಿಂದ ಕಣ್ಣುಗಳು ಶುದ್ಧ ಹಾಗೂ ಫ್ರೆಶ್ ಆಗುತ್ತದೆ. ಆದರೆ ಅತಿಯಾದ ಶೀತ ಮತ್ತು ಬಿಸಿ ನೀರಿನಿಂದ ಕಣ್ಣನ್ನು ಶುದ್ಧಗೊಳಿಸಬಾರದು.

 

  • ಸೂರ್ಯನನ್ನು ನೋಡುವುದು: ಸೂರ್ಯೋದಯವಾಗುವ ಸಮಯದಲ್ಲಿ ಸೂರ್ಯನನ್ನು ನೋಡುವುದರಿಂದ ದೃಷ್ಟಿ ಉತ್ತಮವಾಗುತ್ತದೆ. ಆಲ್ಲದೆ ಮೂರನೇ ಕಣ್ಣು ಎಂದು ತಿಳಿಸುವ ಪೀನಲ್ ಗ್ರಂಥಿಯು ಪ್ರಚುರವಾಗುತ್ತದೆ. ಸೂರ್ಯನ ತೀಕ್ಷ್ಣ ಕಿರಣಗಳನ್ನು ನೋಡಬಾರದು.

 

  • ತ್ರಾಟಕ ಕ್ರಿಯೆ: ಕಣ್ಣಿನ ತೊಂದರೆಗಳನ್ನು ನಿವಾರಿಸಲು ಬಹು ಉಪಕಾರಿ. ಕಣ್ಣುಗಳನ್ನು ಮಿಟುಕಿಸದೆ ಕತ್ತಲೆ ಕೋಣೆಯಲ್ಲಿತುಪ್ಪದ ದೀಪದ ಜ್ಯೋತಿಯನ್ನು 2-3  ನಿಮಿಷ ಸತತವಾಗಿ ನೋಡುವುದರಿಂದ ದೃಷ್ಟಿಯ ಶಕ್ತಿ ಮತ್ತು ಕಣ್ಣಿನ ಕಾಂತಿ ಹೆಚ್ಚುವುದು.

 

  • ಪಾದಾಭ್ಯಂಜನ: ಪಾದಗಳನ್ನು ಗಿಡಮೂಲಿಕೆಯುಕ್ತವಾದ ಎಣ್ಣೆಯನ್ನು ಸ್ವಲ್ಪ ಬೆಚ್ಚಗೆ ಮಾಡಿ ಹಚ್ಚಿ ಮೃದುವಾಗಿ ಅಭ್ಯಂಜನ ಮಾಡುವುದರಿಂದ ರಕ್ತ ಸಂಚಾರ ಹೆಚ್ಚಾಗಿ ದೃಷ್ಟಿಯ, ಮಾನಸಿಕ ಆರೋಗ್ಯ ಮತ್ತು ಮನಸ್ಥಿತಿ ಉತ್ತಮಗೊಳ್ಳುತ್ತದೆ. ಅಭ್ಯಂಜನದಿಂದ ಪಾದಗಳಲ್ಲಿನ ದೃಷ್ಟಿಗೆ ಸಂಬಂಧಿಸಿದ ಕೆಲವು ನಿರ್ದಿಷ್ಟ ಬಿಂದುಗಳು ಪ್ರಚುರವಾಗುತ್ತವೆ. ಆದರೆ ಜ್ವರ ಶೀತ, ನೆಗಡಿ ಇರುವಾಗ ಮಾಡಬಾರದು.
  •  
  • ಕಣ್ಣಿಗೆ ಆಯುರ್ವೇದ ವಿಶೇಷ ಚಿಕಿತ್ಸೆಗಳು: ಅಕ್ಷಿ ತರ್ಪಣ, ಕ್ರೀಯಾ ಕಲ್ಪ ಚಿಕಿತ್ಸೆಗಳು, ನಸ್ಯ ಕರ್ಮಾ ಬಹು ಉಪಯೋಗಿ-ಆದರೆ ಆಯುರ್ವೇದ ವೈದ್ಯರ ನಿರ್ದೇಶನದ ಮೇಲೆ ಚಿಕಿತ್ಸೆ ಪಡೆಯಬೇಕು

ಕಣ್ಣಿನ ರೋಗಗಳಿಗೆ ಸಾಮಾನ್ಯ ಕಾರಣಗಳು:

  • ಬದಲಾದ ಜೀವನ ಪದ್ಧತಿ
  • ಪೋಷಕಾಂಶಗಳ ಕೊರತೆ
  • ದುರಭ್ಯಾಸಗಳು
  • ಕೊಬ್ಬು, ಜಿಡ್ಡಿನ ಅತಿಯಾದ ಸೇವನೆ
  • ಜಂಕ್ ಆಹಾರಗಳು
  • ಅತಿಯಾದ ಮಾನಸಿಕ ಒತ್ತಡ
  • ಟಿ.ವಿ , ಮೊಬೈಲ್ ಮತ್ತು ಕಂಪ್ಯೂಟರ್ ನ ಅತಿಯಾದ ವೀಕ್ಷಣೆ
  • ನಿದ್ರಾ ಹೀನತೆ
  • ಮಧುಮೇಹ, ರಕ್ತದೊತ್ತಡ,ರೆಟಿನೋಪತಿ, ಕಂಪ್ಯೂಟರ್ ಸಿಂಡ್ರೋಮ್ ನಂತಹ ರೋಗಗಳು

ನೈಸರ್ಗಿಕವಾಗಿ ಕಣ್ಣಿನ ದೃಷ್ಟಿಯನ್ನು ಉತ್ತಮಗೊಳಿಸುವ ವಿಧಾನಗಳು.

  • ಕೆಲವೊಂದು ಯೋಗ ಅಥವಾ ಕಣ್ಣಿನ ವ್ಯಾಯಾಮಗಳು : ಸುಖಾಸನದಲ್ಲಿ ಕುಳಿತು ಕಣ್ಣಿನ ಗುಡ್ಡೆಯನ್ನು ಮೇಲೆ , ಕೆಳಗೆ , ಎಡ -ಬಲ ಹೀಗೆ ಪುನರಾವರ್ತಿತವಾಗಿ ಬಹಳಷ್ಟು ಸಲ ಮಾಡಬೇಕು.

 

  • 2 ನಿಮಿಷ ವಿಶ್ರಾಂತಿ - ಕಂಪ್ಯೂಟರ್ ನಲ್ಲಿ ಸತತವಾಗಿ ಕೆಲಸ ಮಾಡುವಾಗ 2 ನಿಮಿಷ ವಿಶ್ರಾಂತಿ ಪಡೆದು ದೂರದ ವಸ್ತುವನ್ನು ನೋಡಿ ಮನೆ ಹತ್ತಿರದ ವಸ್ತುವನ್ನು ಒಂದರ ನಂತರ ಒಂದರಂತೆ ನೋಡುವುದರಿಂದ ಕಣ್ಣಿಗೆ ಆಗುವ ಒತ್ತಡ ನಿವಾರಣೆಯಾಗುತ್ತದೆ.

 

  • ಕಣ್ಣು ಮಿಟುಕಿಸುವುದು-ಸರಿಯಾಗಿ ಕಣ್ಣು ಮಿಟುಕಿಸುವುದರಿಂದ ಕಣ್ಣಿನ ಒತ್ತಡ ಕಡಿಮೆಯಾಗಿ ಕಣ್ಣುಗಳು ಆರಾಮವಾಗುತ್ತದೆ.ಸುಖಾಸನದಲ್ಲಿ ಕುಳಿತು 10 ಸೆಕೆಂಡ್ ಕಣ್ಣು ಮಿಟುಕಿಸಿ, ನಂತರ ಕಣ್ಣು ಮುಚ್ಚಿ 20 ಸೆಕೆಂಡ್ ವಿಶ್ರಾಂತಿ ಪಡೆಯಬೇಕು.

ಕೆಲವು ಮನೆ ಮದ್ದುಗಳು:

  • ಎರಡು ಹನಿ ಅರಳೆಣ್ಣೆಯನ್ನು ಎರಡು ಕಣ್ಣುಗಳಿಗೆ ಮಲಗುವಾಗ ಹಾಕುವುದರಿಂದ ಕಣ್ಣಿನ ಕಾರ್ಯ ಕ್ಷಮತೆ ಹೆಚ್ಚುತ್ತದೆ.(ಪ್ರಿಸರ್ವೇಟಿವ್ ಇಲ್ಲದ ಒಳ್ಳೆಯ ಎಣ್ಣೆಯನ್ನು ಬಳಸಬೇಕು)

 

  • ಸಣ್ಣ ಹತ್ತಿಯ ಉಂಡೆಯನ್ನು ಮೇಕೆಯ ಹಾಲಿನಲ್ಲಿ ಅದ್ದಿ, ಕಣ್ಣುಗಳ ಮೇಲೆ ಇರಿಸುವುದರಿಂದ ಕಣ್ಣಿನ ಒತ್ತಡ ನಿವಾರಣೆಯಾಗುತ್ತದೆ.ಮತ್ತು ಹಿತಕರ ಅನುಭವ ನೀಡುತ್ತದೆ.

 

  • ಕಣ್ಣಿನ ಮೇಲೆ ಹಚ್ಚಿದ ಸೌತೆಕಾಯಿ ತುಂಡುಗಳನ್ನು ಇಡುವುದರಿಂದ ಕಣ್ಣಿಗಾಗುವ ಕಿರಿ ಕಿರಿ ಊಟ ಕಡಿಮೆಯಾಗುವುದು, ನೀರಿನಂಶ ಸಿಗುವುದರಿಂದ ಒಣ ಕಣ್ಣಿನ ಸಮಸ್ಯೆ ನಿವಾರಣೆಯಾಗುವುದು.

 

  • ಕಣ್ಣಿನ ಸುತ್ತ ಒಣ ಚರ್ಮ, ಕಪ್ಪು ಕಲೆಯಿದ್ದರೆ ಬಾದಾಮಿ ಎಣ್ಣೆಯಿಂದ ಅಭ್ಯಂಜನ ಮಾಡುವುದರಿಂದ ನಿವಾರಣೆಯಾಗುತ್ತದೆ.

ಇವುಗಳನ್ನು ನಿಷೇಧಿಸಬೇಕು

  • ಅತೀ ಹೆಚ್ಚಿನ ಖಾರ, ಉಪ್ಪಿನ ಪದಾರ್ಥಗಳು
  • ಕಾರ್ಬೊನೇಟೆಡ್ ಪಾನೀಯ
  • ಅತಿಯಾದ ಬಿಸಿ ನೀರಿನ ಸ್ನಾನ
  • ರಾತ್ರಿ ಜಾಗರಣೆ , ಹಗಲಲ್ಲಿ ನಿದ್ರಿಸುವುದು
  • ತುಂಬಾ ಎತ್ತರದ ಅಥವಾ ಸಣ್ಣ ತಲೆದಿಂಬಿನ ಬಳಕೆ
  • ಅತಿಯಾದ ಕೋಪ, ದುಃಖ, ಅಳು
  • ಕಲುಷಿತ ಗಾಳಿಯಲ್ಲಿ ವಿಹರಿಸುವುದು.
  • ಧೂಮಪಾನ, ಮದ್ಯಪಾನ , ತಂಬಾಕು
  • ಟಿ. ವಿ , ಕಂಪ್ಯೂಟರ್, ಮೊಬೈಲ್ ಅತಿಯಾದ ಬಳಕೆ

ಕಣ್ಣಿನ ಆರೋಗ್ಯಕ್ಕೆ ಹಿತಕರವಾದ ಆಹಾರ

  • ವಿಟಮಿನ್ ಎ ಯುಕ್ತ ಹಣ್ಣು , ತರಕಾರಿಯ ಸೇವನೆ, ಉದಾ : ಕ್ಯಾರಟ್, ಖರ್ಜೂರ, ಬೀಟ್ ರೂಟ್ , ಎಲೆಕೋಸು
  • ಬಸಳೆ ಸೊಪ್ಪು, ಪಾಲಕ್ ಸೊಪ್ಪು, ಹೊನಗೊನ್ನೆ ಸೊಪ್ಪು
  •  ಬಾದಾಮಿ, ನೆಲ್ಲಿಕಾಯಿ, ಕೆಂಪು ಅಕ್ಕಿ, ಗೋದಿ , ಬಾರ್ಲಿ
  • ತ್ರಿಫಲ, ಸೋಂಪು
  • ಶುದ್ಧವಾದ ನೀರು , ಹಾಲು , ದಾಳಿಂಬೆ
  • ಕಲ್ಲುಪ್ಪು, ಹೆಸರು ಕಾಳು, ಹೆಸರು ಬೇಳೆ
  • ಸರಿಯಾದ ನಿದ್ದೆ

 

ಹೀಗೆ ಆಯುರ್ವೇದದಲ್ಲಿ ಹೇಳಿರುವ ದಿನಚರಿ, ಋತುಚರಿ ಪಾಲಿಸುವುದರಿಂದ ಕೆಲವು ವಿಶೇಷ ನೇತ್ರ ಚಿಕಿತ್ಸೆಗಳನ್ನು ಪಡೆಯುವುದರಿಂದ ಕಣ್ಣಿನ ರೋಗ ತಡೆಯಬಹುದು.ಉತ್ತಮ ದೃಷ್ಟಿಯನ್ನು ಹಲವು ವರ್ಷಗಳ ಉಳಿಸಿಕೊಳ್ಳಬಹುದು.

ಸಂಗ್ರಹ : ಕುಶಲ್ ಭಂಡಾರಿ, ಬೆಂಗಳೂರು



Tuesday 14 September 2021

ಮನುಷ್ಯನ ತಲೆಯ ಮೇಲೆ ಮನುಷ್ಯನ ಮಲದ ಹೊರೆ - ನಾನು ಕಂಡಂತೆ-ಸೀತಾರಾಮ ಭಂಡಾರಿ M P , ಕೋಣಾಜೆ

 ಈ ಪದ್ಧತಿ 1975-77 ರ ಮಧ್ಯದ ತುರ್ತು ಪರಿಸ್ಥಿತಿಯ ವೇಳೆ ಮಾನ್ಯ ದೇವರಾಜ್ ಅರಸು ಮುಖ್ಯ ಮಂತ್ರಿ ಕಾಲಾವಧಿಯಲ್ಲಿ ಕ್ಯಾಬಿನೆಟ್ ದರ್ಜೆಯ ಪೌರಾಡಳಿತ ಸಚಿವರಾಗಿದ್ದ ನೇರ ನಡೆಯ ಶ್ರೀ ಬಸವ ಲಿಂಗಪ್ಪನವರ ಖಡಕ್ಕ್ ರಾಜ್ಯಾದೇಶದ ಪ್ರಕಾರ ಕರ್ನಾಟಕದಲ್ಲಿ ಬಹಳಷ್ಟು ಪಾಲು ಈ ಪದ್ಧತಿ ನಿಗದಿತ ಅವಧಿಯೊಳಗೆ ನಿಂತೇ ಹೋಯ್ತು.

ಈ ಪದ್ಧತಿಯನ್ನು ಕಳೆದ 45 ವರುಷಗಳ ಹಿಂದೆ ಕಠಿಣ ಆದ್ಯಾದೇಶದ ಮೂಲಕ ಮನುಷ್ಯನ ಮಲವನ್ನು ಮನುಷ್ಯನೇ ಹೊರುವ ಜೀತ ಪದ್ಧತಿಯನ್ನು ತತ್ಕ್ಷಣವೇ ನಿಲ್ಲಿಸಲು ಆಜ್ನಾಪಿಸಿದ ಮಾನ್ಯ ಬಸವ ಲಿಂಗಪ್ಪನವರಿಗೆ ಅನಂತ ಕೃತಜ್ಞತೆಗಳು.

ಮೇಲೆ ಹೇಳಿದ ರೀತ್ಯಾ ಮಲ ಹೊರುವ ಪದ್ಧತಿಯ ವಿಚಾರ ಕನಿಷ್ಟ 55 ವರುಷಗಳ ಆಸುಪಾಸಿನವರಿಗೆ ತಿಳಿದಿಲಿಕ್ಕಿಲ್ಲ.

ಈ ವಿಷಯವನ್ನು ನಾನು ಬರೆಯಲು ಕಾರಣ ಇಂತಹ ಪದ್ಧತಿ ಕೇವಲ 50 ವರುಷಗಳ ಹಿಂದೆ ಕರ್ನಾಟಕದ ನಗರ ಭಾಗಗಳಲ್ಲಿ ಅರ್ಥಾತ್ municipality area ದಲ್ಲಿತ್ತು.
ಉಳಿದ ಗ್ರಾಮೀಣ ಪ್ರದೇಶದಲ್ಲಿ ಬಯಲು ಶೌಚಾಲಯವಾದರೆ ನಗರ ಪ್ರದೇಶದಲ್ಲಿ ಮಾರ್ಗದ ಇಕ್ಕೆಲಗಳಲ್ಲಿ ರಾತ್ರಿ ಹಾಗೂ ಬೆಳ್ಳಂಬೆಳಿಗ್ಗೆ ಕದ್ದು ಮುಚ್ಚಿ ಮಲ ವಿಸರ್ಜಿಸಿ ಕಣ್ಮರೆಯಾಗುವ ಪಧ್ಧತಿ ಇತ್ತು.


1967 ರಲ್ಲಿ ನಮ್ಮ ಕುಟುಂಬ ಮಂಗಳೂರಿಗೆ ಬಂದು ಮಲ್ಲಿಕಟ್ಟೆಯ ಬಾಡಿಗೆ ಮನೆಯಲ್ಲಿ ನೆಲೆಸಿದ ಕಾಲ. ತಾಗಿಕೊಂಡ ದೊಡ್ಡ ಮನೆ, ಮನೆ ಮಾಲೀಕರ ಸಂಸಾರ.

ಮನೆಯ ಅಂಗಳದ ಮುಂದೆ ಎರಡು ಜೋಡಿ ಪಾಯಿಖಾನೆಗಳು. ಒಂದು ಮಾಲೀಕರಿಗೆ ಮತ್ತೊಂದು ಬಾಡಿಗೆಯಲ್ಲಿರುವ ನಮ್ಮ ಮನೆ ಸದಸ್ಯರಿಗೆ.

ಪಾಯಿಖಾನೆಗೆ ನನ್ನ ಪ್ರಥಮ ಪ್ರವೇಶದ ಅನುಭವ

ಉರಿನಿಂದ ಬಂದ ಮಾರನೆಯ ಬೆಳಿಗ್ಗೆ ಬಯಲು ಶೌಚಾಲಯ ಇಲ್ಲದ ನನಗೆ ಮನಸ್ಸಿಗೆ ಸ್ವಲ್ಪ ಅಂಜಿಕೆ ಮುಜುಗುರವಾದರೂ ತೀವ್ರ ಕೆಳಮುಖ ಒತ್ತಡ ತಡೆಯಲಾರದೆ ನನ್ನ ನಡೆ ಪಾಯಿಖಾನೆ ಕಡೆ ಬಳಿಹೋಗಿ ಬಾಗಿಲು ತೆರೆದು ಬಾಗಿಲು ಮುಚ್ಚಿದೆ..

ಪಾಯಿಖಾನೆಯಲ್ಲಿ ಈಗಿನ ತರಹ ಬೇಸಿನೇ ಇಲ್ಲ. ಅದರ ಬದಲು ಬೇಸಿನ್ ಬದಲು ಅಷ್ಟು ಜಾಗ ಖಾಲಿಯಾಗಿ ಕೆಳಗೆ 4-6 ಅಡಿ ಆಳದ ಚೌಕಾಕಾರದ ಸಿಮೆಂಟಿನ ಹೊಂಡ. ಹೊಂಡದ ಎತ್ತರ ಭಾಗದಲ್ಲಿ ನಮ್ಮ ಕಾಲುಗಳನ್ನು ಎಡ ಬಲಕ್ಕೆ ಸರಿಸಿ ಮಲ ವಿಸರ್ಜನೆ ಮಾಡುವ ರೀತಿ ಹೇಗಿತ್ತೆಂದರೆ ನಮ್ಮೂರಿನ ಕೊಟ್ಟಿಗೆಯಲ್ಲಿರುವ ಗೋವುಗಳು ಸೆಗಣಿ ಹಾಕಿ ಅದರ ಮೇಲೆ ಮೂತ್ರ ವಿಸರ್ಜಿಸಿದಂತೆ ಆಗುತಿತ್ತು. ಆದರೆ ಮನುಷ್ಯ್ ಇನ್ನೂ ಹೆಚ್ಚುವರಿಯಾಗಿ ಅಂಗಾಂಗ ಶುದ್ಧಗೊಳಿಸಲು ನೀರು ಬಳಸುವುದರಿಂದ ಕೆಳಗೆ ಬಿದ್ದ ಅನೇಕ ಮಂದಿಯ ಮಲ ಮೂತ್ರಗಳ ರಾಶಿಯನ್ನು ಯಾವುದಕ್ಕೂ ಹೋಲಿಸಲಾರೆ.

                                            ಸಾಂದರ್ಭಿಕ ಚಿತ್ರ 

ಪಾಯಿಖಾನೆಯ ಈ ಮಲದ ರಾಶಿಯನ್ನು ಕೊಂಡು ಹೋಗಲು ಮುನ್ಸಿಪಾಲಿಟಿ ವತಿಯಿಂದ ಶುಚಿಗೊಳಿಸುವ ಕಾರ್ಮಿಕರು ಬರುತಿದ್ದರು. ಆದರೆ ಈ ಕಾರ್ಮಿಕರಿಗೆಮುಖ ಕವಚವಾಗಲಿ, ಕೈಗೆ ಗ್ಲೌಸುಗಳಾಗಲಿ, ಕಾಲಿಗೆ ಬೂಟ್ಸುಗಳು ಯಾವುದೂ ಇಲ್ಲದೆ ಬರಿಗೈಯ್ಯಲ್ಲಿಯೆ ತಗಡನ್ನು ಬಳಸಿ ಕೆರೆಯುತ್ತಾ ದೊಡ್ಡ ಗಾತ್ರದ ಬಕೆಟ್ ಗೆ ಹಾಕುತಿದ್ದರು. ಬಕೆಟ್ ತುಂಬಿದ ಬಳಿಕ ಬಕೆಟ್ ನ್ನು ತಲೆಯ ಮೇಲಿಟ್ಟು ತಲೆ ಹೊರೆಯಲ್ಲೇ ಮಲವನ್ನು ಮಂಗಳೂರು ನಗರದ ನಿರ್ಧಿಷ್ಟ ಪ್ರದೇಶಕ್ಕೆ ಹಲವು ಮೈಲು ನಡೆದುಕೊಂಡೇ ಹೋಗಿ ಆ ದಿನದ ತ್ಯಾಜ್ಯವನ್ನು ವಿಲೇವಾರಿ ಮಾಡುತಿದ್ದರು.

ನನ್ನ ಮನಸ್ಸಿನಲ್ಲಿ ಅತೀ ಆಳವಾಗಿ ಮನನೋಯಿಸಿದ ಸನ್ನಿವೇಶ ಏನೆಂದರೆ, ಮಲವನ್ನು ತಲೆ ಹೊರೆಯಲ್ಲಿ ಕೊಂಡು ಹೋಗುವಾಗ ತಗಡಿನ ಡಬ್ಬದೊಳಗೆ ಕಲಕಿತಗೊಂಡ ನೀರು ಮಿಶ್ರಿತ ತೆಳು ಮಲವು ಹೊತ್ತುಕೊಂಡವನ ತಲೆಗೆ ಬಿದ್ದು, ಅಲ್ಲಿಂದ ಮುಖ ಭಾಗದ ಅಂಗಾಂಗಳ ಮೇಲೆ ಹರಿದು ಆಮೇಲೆ ಧರಿಸಿದ ಖಾಕಿ ಅಂಗಿ ಚಡ್ಡಿಯ ಮೇಲೆ ಮಲ ಹರಿದು ಕೊನೆಗೆ ಹೊತ್ತುಕೊಂಡವನ ಕಾಲಿನ ಪಾದದವರೆಗೂ ಹರಿಯುತಿತ್ತು ಕಣ್ಣಾರೆ ಕಾಣುತಿದ್ದ ಹಾಗು ಕಂಡಿದ್ದ ಹಿರಿಯ ಪೀಳಿಗೆಯವರಿಗೆ ಸ್ಪಷ್ಟ ಅರಿವು ಇರಬಹುದು.

ನಾನು 9ನೇ ತರಗತಿಯಲ್ಲಿರುವ ವೇಳೆ ಅದೊಂದು ದಿನ ನಾನು ಶಾಲೆಯಿಂದ ಹಿಂತಿರುಗುವ ವೇಳೆ ಮಾರ್ಗದ ಬದಿಯಲ್ಲಿ ಮಲದ ಡಬ್ಬಿಯನ್ನು ತಲೆಯಿಂದ ಕೆಳಗಿರಿಸಿ ಹೊರುವ ಕಾರ್ಮಿಕ ವಿಶ್ರಾಂತಿಯಲ್ಲಿದ್ದರು.

ನನ್ನನ್ನು ಕಂಡು "ಓ ಬಾಲೆ ಎಂಕ್ ದಾಲ ತೀರುಜಿ, ಕೈಕಾರ್ ಬಚ್ಚಿದ್ಂಡ್ ಒಂತೆ ಡಬ್ಬಿ ದೆರ್ಪರೆ ಕೈ ಕೊರೋಲಿಯಾ" ಎಂದು ಆ ಕಾರ್ಮಿಕ ಮಾರ್ಮಿಕವಾಗಿ ಕ್ಷೀಣ ಧ್ವನಿಯಲ್ಲಿ ನುಡಿದಾಗ ನಾನು ನನ್ನ ಯೋಚನೆಯ ಪೂರ್ವಾನುಮತಿ ಪಡೆಯದೆ ಡಬ್ಬ ಎತ್ತಲು ಹಸ್ತ ನೀಡಿದೆ.


                                              ಸಾಂದರ್ಭಿಕ ಚಿತ್ರ 

ಆದರೆ ಕಾರ್ಮಿಕ ಹೇಳಿದ ಕೈಟ್ಟ್ ಮುಟ್ಟೊಡ್ಚಿ ಬಾಲೆ ಇಂದ ಈ ಪಜ್ಜಿ ಇರೆ ಪತೋನು, ಇಜಿಂಡ ನಿನ್ನ ಕೈ ಹೇಸಿಗೆ ಆಪುಂಡತ್ತಾ ಎಂದು.

ಜ್ಯೋತಿ ಟಾಕೀಸಿನ ಬಸ್ಟೇಂಡ್ ಬಳಿ ನಡೆದ ಈ ಸಹಾಯಹಸ್ತದ ಸನ್ನಿವೇಶವನ್ನು ಬಸ್ಟೇಂಡಿನಲ್ಲಿದ್ದ ಜನರು ಮೂಗನ್ನು ಕೈಯ್ಯಲ್ಲಿ ಮುಚ್ಚಿ ನಮ್ಮನ್ನು ನೋಡುತಿದ್ದರು

ಆದರೆ ಈ ಪದ್ಧತಿ ನಗರದ ಪ್ರತಿಷ್ಟಿತ ಹೋಟೇಲುಗಳಲ್ಲಿ, ವಸತಿಗ್ಗೃಹದಲ್ಲಿ, ಆಸ್ಪತ್ರೆಗಳಲ್ಲಿ
ಬೇಸಿನ ಇರಿಸಿದ ಈಗಿನ ಇಂಗು ಗುಂಡಿಯ ಪದ್ಧತಿಯಲ್ಲಿತ್ತು.

ಆದರೆ ಬಹುಪಾಲು ಈ ಪದ್ಧತಿ ನಗರದ ಹೊರವಲಯದ ಮನೆಗಳಲ್ಲಿ ಮಾತ್ರ ಆಚರಣೆಯಲ್ಲಿತ್ತು.

ಈ ಪದ್ಧತಿ ಕರ್ನಾಟಕದ ರಾಜ್ಯಾದ್ಯಂತ ಹೀಗೆಯೇ ಮುಂದುವರಿದು 1975 ನೇ ಇಸವಿಯಲ್ಲಿ ಮಾನ್ಯ ಪೌರಾಡಳಿತ ಸಚಿವ ಶ್ರೀ ಬಸವ ಲಿಂಗಪ್ಪನವರ ಕಠಿಣ ಆಧ್ಯಾದೇಶದ ಮೂಲಕ ನಾಗರಿಕರಿಗೆ ಎಚ್ಚರಿಕೆ ಕೊಟ್ಟು ಮೂರು ತಿಂಗಳಾವಧಿಯ ಒಳಗೆ ಎಲ್ಲಾ ಮನೆಯವರು ಪಾಯಿಖಾನೆಯನ್ನು ಆಧುನೀಕರಿಸತಕ್ಕದ್ದು ಎಂದು ಕಟ್ಟಪ್ಪಣೆ ಮಾಡಿದರು

ನಿಗದಿತ ಸಮಯದೊಳಗೆ ಪಾಯಿಖಾನೆ ಆಧುನೀಕರಿಸದಿದ್ದಲ್ಲಿ, ಅವರವರ ಮನೆಯ ಮಲವನ್ನು ಅವರೇ ವಿಲೇವಾರಿ ಮಾಡತಕ್ಕದ್ದು ಮತ್ತು ಈ ವರೆಗೆ ಶುಚಿಗೊಳಿಸಲು ಬರುತಿದ್ದ ಕಾರ್ಮಿಕರಿಗೆ ಮುನ್ಸಿಪಾಲಿಟಿಯಲ್ಲಿ ಬದಲೀ ಹುದ್ದೆ ನೀಡಲಾಗುವುದೆಂದರು

ಮೇಲಿನ ಹೀನ ಪದ್ಧತಿ ವಜಾಗೊಳಿಸಿದ ಸರಕಾರದ ಆಜ್ಞೆಯ ವಿರುದ್ಧ ಅಂದು ಯಾರೂ ಪ್ರತಿಭಟಿಸಲಿಲ್ಲ, ಕೋರ್ಟು ಮೆಟ್ಟಲೇರಲಿಲ್ಲ, ಈಗೀನ ಹಾಗೆ ಸರಕಾರದ/ ಪಂಚಾಯತ್ ವಿರುದ್ಧ ಪೂರ್ವಾಗ್ರಹ ಪೀಡಿತರಾಗಿ ತ್ಯಾಜ್ಜಗಳನ್ನು ಎಲ್ಲೆಂದರಲ್ಲಿ ಬಿಸಾಡಿದಂತೆ ಅಂದು ಅವರವರ ಮಲವನ್ನು ಬೀದಿ ಬದಿ ಚೆಲ್ಲದೆ ಸರಕಾರದ ಕಾನೂನಿಗೆ ಗೌರವ ಕೊಟ್ಟು ನಿಗದಿತ ಸಮಯದೊಳಗೆ ಪಾಯಿಖಾನೆ ನಿರ್ಮಿಸಿ ಸರಕಾರದ ಆಜ್ಞೆಯನ್ನು ನಾಗರಿಕರು ಶಿರಸಾ ಪಾಲಿಸಿದ
ಕಾನೂನು ಅದು ಮನುಷ್ಯನ ಮಲವನ್ನು ಮನುಷ್ಯನೇ ಹೊರುವ ಜೀತ ಪದ್ಧತಿ

ಮಂತ್ರಿಗಳು ಏಷ್ಟೇ ಒಳ್ಳೆಯ ಕೆಲಸ ಮಾಡಬಹುದು. ಆದರೆ ಸಮಾಜದ ಅನಿಷ್ಟ ಪದ್ಧತಿಯನ್ನು ಯಾವುದೇ ಪ್ರತಿರೋಧನೆ ಇಲ್ಲದೆ ಶಾಶ್ವತವಾಗಿ ತೊಡೆದು ಹಾಕಿದ ಬಸವಲಿಂಗಪ್ಪನವರ ಈ ಕ್ರಮ ಮುಂದಿನ ಪೀಳಿಗೆಗೂ ತಿಳಿದಿರಲಿ ಎಂದು ಕಾಲ್ಪನಿಕವಲ್ಲದ ವಾಸ್ತವಿಕ ಘಟನೆಯನ್ನು ನನ್ನ ನೆನಪಿನ ಬುತ್ತಿಯಿಂದ ಹೊರತೆಗೆದು ನಿಮ್ಮೊಡನೆ ಹಂಚಿಕೊಂಡೆ.







-ಸೀತಾರಾಮ ಭಂಡಾರಿ M P , ಕೋಣಾಜೆ


Monday 13 September 2021

ಗರ್ಭಕೋಶದ ಆರೋಗ್ಯ ಕಾಪಾಡಿಕೊಳ್ಳುವುದು ಹೇಗೆ? ಇಲ್ಲಿದೆ ಕೆಲ ಸಲಹೆಗಳು...

 ಗರ್ಭಕೋಶ ಮಹಿಳೆಯರಿಗೆ ಬಹುಮುಖ್ಯವಾದ ಅಂಗವಾಗಿದೆ. ಗರ್ಭಕೋಶ ಸಂತಾನೋತ್ಪತ್ತಿಗೆ ಪ್ರಮುಖವಾಗಿದ್ದು, ಪ್ರತಿಯೊಬ್ಬ ಹೆಣ್ಣಿಗೂ ಪ್ರತೀ ತಿಂಗಳು ಋತುಸ್ರಾವವಾಗಲು ಗರ್ಭಕೋಶವೇ ನೆರವಾಗುತ್ತದೆ. ಅಂಡಾಶಯದಿಂದ ಬಿಡುಗಡೆಯಾಗುವ ಅಂಡಾಣು ಗರ್ಭನಾಳದ ಮುಖಾಂತರ ಗರ್ಭಕೋಶಕ್ಕೆ ತಲುಪಿ, ಅಲ್ಲಿ ವೀರ್ಯಾಣುವಿನ ಸಂಪರ್ಕಕ್ಕೆ ಬಂದಾಗ ಭ್ರೂಣವನ್ನು ಹಿಡಿದಿಟ್ಟುಕೊಂಡು ಅದರ ಬೆಳವಣಿಗೆಗೆ ಸಹಕಾರ ನೀಡುತ್ತಿದೆ. ಇಂತಹ ಮಹತ್ತರ ಕೆಲಸಕ್ಕೆ ನೆರವಾಗುವ ಗರ್ಭಕೋಶದ ಆರೋಗ್ಯ ಕಾಪಾಡಿಕೊಳ್ಳುವುದು ಬಹುಮುಖ್ಯವಾಗಿದೆ.

ಗರ್ಭಕೋಶ ಆರೋಗ್ಯಕರವಾಗಿದ್ದರೆ, ಅನಿಯಮಿತ ಋತುಸ್ರಾವ, ಸೋಂಕುಗಳು, ಫೈಬ್ರಾಯ್ಡ್, ಗರ್ಭಕೋಶದಲ್ಲಿ ಉಂಟಾಗುವ ನೋವು, ಮುಟ್ಟಿನ ಸಮಯದಲ್ಲಿ ಸೆಳೆತ ಸಮಸ್ಯೆಗಳಿಂದ ದೂರ ಇರಬಹುದು.

ಹಾಗಾದರೆ ಗರ್ಭಕೋಶ ಆರೋಗ್ಯ ಕಾಪಾಡುವುದು ಹೇಗೆ...?
ಇಂದಿನ ಜೀವನ ಶೈಲಿ ಹಾಗೂ ಆಹಾರ ಕ್ರಮಗಳು ನಮ್ಮ ದೇಹಕ್ಕೆ ಆರೋಗ್ಯವನ್ನು ಒದಗಿಸುವುದಕ್ಕಿಂತ ಅನಾರೋಗ್ಯ ಸೃಷ್ಟಿಸುವುದೇ ಹೆಚ್ಚು. ಹಾಗಾಗಿ ನಾವು ಆಯ್ಕೆ ಮಾಡಿಕೊಳ್ಳುವ ಆಹಾರ ಹಾಗೂ ಜೀವನ ಕ್ರಮ ಉತ್ತಮವಾಗಿರಬೇಕು.


ಸೊಪ್ಪು ಮತ್ತು ತರಕಾರಿ ನಮ್ಮ ದೇಹದ ಸಂಪೂರ್ಣ ಆರೋಗ್ಯದ ವಿಚಾರದಲ್ಲಿ ಬಹಳಷ್ಟು ಉತ್ತಮ ಲಾಭಗಳನ್ನು ತಂದುಕೊಡುತ್ತದೆ. ಸೊಪ್ಪಿನಲ್ಲಿರುವ ಅನೇಕ ಅಂಶಗಳು ಮಹಿಳೆಯರ ದೇಹದ ಬಹುತೇಕ ಸಮಸ್ಯೆಗಳಿಗೆ ಸಹಕಾರಿಯಾಗಿ ಕೆಲಸ ಮಾಡುತ್ತವೆ.

ವೈಜ್ಞಾನಿಕವಾಗಿ ಹಾರ್ಮೋನುಗಳ ಸಮತೋಲನದಿಂದ ಹಿಡಿದು ಸೊಪ್ಪಿನಲ್ಲಿರುವ ಆಂಟಿ - ಇಂಪ್ಲಾಮೇಟರಿ ಗುಣಲಕ್ಷಣಗಳು, ಮಹಿಳೆಯರ ದೇಹದಲ್ಲಿ ಉಂಟಾಗುವ ಹಲವು ಸಮಸ್ಯೆಗಳನ್ನು ನಿವಾರಣೆ ಮಾಡಿ ಗರ್ಭಕೋಶದ ಆರೋಗ್ಯವನ್ನು ಹೆಚ್ಚಿಸುತ್ತದೆ. ಹಾಗಾಗಿ ನಿಮ್ಮ ಪ್ರತಿ ದಿನದ ಆಹಾರ ಪದ್ಧತಿಯಲ್ಲಿ ಮಾಂಸಾಹಾರಕ್ಕೆ ಬದಲಾಗಿ ಹೆಚ್ಚು ಹಣ್ಣುಗಳು, ಸೊಪ್ಪು ಮತ್ತು ತರಕಾರಿಯನ್ನು ಸೇವಿಸುವ ಅಭ್ಯಾಸ ಇಟ್ಟುಕೊಂಡರೆ ಒಳ್ಳೆಯದು.



ಹೆಚ್ಚಾಗಿ ಕಾಫಿ ಕುಡಿಯುವವರು ಅಭ್ಯಾಸವನ್ನು ಬಿಡುವುಡು ಒಳ್ಳೆಯದು. ಹೆಚ್ಚಿನ ಪ್ರಮಾಣದ ಕೆಫೀನ್ ಸೇವನೆಯು ಗರ್ಭಪಾತ ಸಮಸ್ಯೆಗಳಿಗೆ ಕಾರಣವಾಗಬಹುದು. ಹೆಚ್ಚಿನ ಪ್ರಮಾಣದ ಕೆಫೀನ್ ಸೇವನೆಯು ಈಸ್ಟ್ರೊಜೆನ್ ಉತ್ಪಾದನೆಯನ್ನು ಹೆಚ್ಚಿಸುತ್ತದೆ ಮತ್ತು ಗರ್ಭಾಶಯದ ಫೈಬ್ರಾಯ್ಡ್‌ಗಳು ಪ್ರಚೋದನೆಗೊಳ್ಳುವಂತೆ ಮಾಡುತ್ತದೆ.

ಸಕ್ಕರೆ ಪ್ರಮಾಣ ದೇಹದಲ್ಲಿ ಹೆಚ್ಚಾದಂತೆಲ್ಲಾ ದೇಹದ ಉರಿಯೂತ ಸಮಸ್ಯೆ ತೀವ್ರಗೊಂಡು ದೇಹದ ಹಲವು ಭಾಗಗಳಲ್ಲಿ ನೋವು ಹೆಚ್ಚಾಗಿ ಆಂತರಿಕ ರೋಗ ನಿರೋಧಕ ವ್ಯವಸ್ಥೆ ತಗ್ಗುತ್ತಾ ಹೋಗುತ್ತದೆ. 

ಇದರಿಂದ ದೇಹದಲ್ಲಿ ಉತ್ಪತ್ತಿಯಾಗುವ ಹಾರ್ಮೋನುಗಳು ಕ್ಷೀಣಿಸಿ ಸಮತೋಲನ ಕಳೆದುಕೊಂಡು ಯುಟಿರೈನ್ ಫೈಬ್ರಾಯ್ಡ್ ಸಮಸ್ಯೆ ಉದ್ಭವವಾಗಲು ಕಾರಣವಾಗುತ್ತದೆ. 

ಮಹಿಳೆಯರ ದೇಹದ ರಕ್ತದ ಒತ್ತಡವನ್ನು ನಿಯಂತ್ರಣ ಮಾಡಿ ಇನ್ಸುಲಿನ್ ಸೂಕ್ಷ್ಮತೆಯನ್ನು ಹೆಚ್ಚಿಸಲು ವ್ಯಾಯಾಮ ಅತ್ಯಗತ್ಯ. ಜೊತೆಗೆ ದೇಹದ ತೂಕ ನಿರ್ವಹಣೆಯಲ್ಲಿ ಮತ್ತು ದೇಹದ ಹಾರ್ಮೋನುಗಳ ಸಮತೋಲನವನ್ನು ಕಾಪಾಡಲು ಮಹಿಳೆಯರು ವ್ಯಾಯಾಮ ಮಾಡಬೇಕು.


ಮದ್ಯಪಾನ ಆರೋಗ್ಯದ ವಿಚಾರದಲ್ಲಿ ಅದರಲ್ಲೂ ಮಹಿಳೆಯರ ಆರೋಗ್ಯದ ವಿಚಾರವನ್ನು ನೋಡುವುದಾದರೆ, ದೇಹದಲ್ಲಿ ಬಹಳಷ್ಟು ಬದಲಾವಣೆಗಳನ್ನು ಪರೋಕ್ಷವಾಗಿ ತಂದು ಮುಂದಿನ ದಿನಗಳಲ್ಲಿ ವಿಪರೀತ ದೈಹಿಕ ಯಾತನೆಯನ್ನು ಅನುಭವಿಸುವಂತೆ ಮಾಡುತ್ತದೆ. 

ಮದ್ಯಪಾನದಿಂದ ದೇಹದಲ್ಲಿ ಉರಿಯೂತ ಉಂಟಾಗಿ ದೇಹದ ತೂಕ ಹೆಚ್ಚಾಗುವಂತೆ ಪ್ರೇರೇಪಿಸಿ, ಹಾರ್ಮೋನುಗಳ ವ್ಯತ್ಯಾಸ ಮತ್ತು ಅಸಮತೋಲನತೆಗೆ ಕಾರಣವಾಗುತ್ತದೆ. ಹೀಗಾಗಿ ಗರ್ಭಕೋಶದ ಆರೋಗ್ಯ ಕಾಪಾಡಿಕೊಳ್ಳಲು ಬಯಸುವವರು ಇದರಿಂದ ದೂರ ಉಳಿದರೆ ಒಳ್ಳೆಯದು. 

ಗರ್ಭಕೋಶದ ಆರೋಗ್ಯ ಹೆಚ್ಚಿಸುವ ಆಹಾರಗಳು ಪದಾರ್ಥಗಳಿವು...
ಸಿಟ್ರಸ್ ಹಣ್ಣುಗಳು
ಕಿತ್ತಳೆ, ದ್ರಾಕ್ಷಿ, ಮೂಸಂಬಿ ಸೇರಿದಂತೆ ಇನ್ನಿತರ ಸಿಟ್ರಸ್ ಹಣ್ಣುಗಳು ವಿಟಮಿನ್-ಸಿ ಅನ್ನು ಸಮೃದ್ಧವಾಗಿ ಪಡೆದಿರುತ್ತವೆ. ಅವು ಪೊಟ್ಯಾಸಿಯಮ್, ಕ್ಯಾಲ್ಸಿಯಮ್, ಫೋಲೇಟ್, ವಿಟಮಿನ್-ಬಿ ಯ ಅತ್ಯುತ್ತಮ ಮೂಲವೂ ಹೌದು.

ಇವುಗಳನ್ನು ನಿತ್ಯ ನಮ್ಮ ಆಹಾರ ಕ್ರಮದಲ್ಲಿ ಸೇರಿಸಿಕೊಂಡರೆ ಅದ್ಭುತ ಆರೋಗ್ಯವನ್ನು ಪಡೆದುಕೊಳ್ಳಬಹುದು. ಈ ಆರೋಗ್ಯಕರ ಅಂಶಗಳು ಗರ್ಭಕೋಶದ ಆರೋಗ್ಯವನ್ನು ಹೆಚ್ಚಿಸುತ್ತದೆ.

ತರಕಾರಿ/ಸೊಪ್ಪು
ಸೊಪ್ಪು ಮತ್ತು ತರಕಾರಿ ನಮ್ಮ ದೇಹದ ಸಂಪೂರ್ಣ ಆರೋಗ್ಯದ ವಿಚಾರದಲ್ಲಿ ಬಹಳಷ್ಟು ಉತ್ತಮ ಲಾಭಗಳನ್ನು ತಂದುಕೊಡುತ್ತದೆ. ಸೊಪ್ಪಿನಲ್ಲಿರುವ ಅನೇಕ ಅಂಶಗಳು ಮಹಿಳೆಯರ ದೇಹದ ಬಹುತೇಕ ಸಮಸ್ಯೆಗಳಿಗೆ ಸಹಕಾರಿಯಾಗಿ ಕೆಲಸ ಮಾಡುತ್ತವೆ.


ವೈಜ್ಞಾನಿಕವಾಗಿ ಹಾರ್ಮೋನುಗಳ ಸಮತೋಲನದಿಂದ ಹಿಡಿದು ಸೊಪ್ಪಿನಲ್ಲಿರುವ ಆಂಟಿ - ಇಂಪ್ಲಾಮೇಟರಿ ಗುಣಲಕ್ಷಣಗಳು, ಮಹಿಳೆಯರ ದೇಹದಲ್ಲಿ ಉಂಟಾಗುವ ಹಲವು ಸಮಸ್ಯೆಗಳನ್ನು ನಿವಾರಣೆ ಮಾಡಿ ಗರ್ಭಕೋಶದ ಆರೋಗ್ಯವನ್ನು ಹೆಚ್ಚಿಸುತ್ತದೆ. ಹಾಗಾಗಿ ನಿಮ್ಮ ಪ್ರತಿ ದಿನದ ಆಹಾರ ಪದ್ಧತಿಯಲ್ಲಿ ಮಾಂಸಾಹಾರಕ್ಕೆ ಬದಲಾಗಿ ಹೆಚ್ಚು ಹಣ್ಣುಗಳು, ಸೊಪ್ಪು ಮತ್ತು ತರಕಾರಿಯನ್ನು ಸೇವಿಸುವ ಅಭ್ಯಾಸ ಇಟ್ಟುಕೊಂಡರೆ ಒಳ್ಳೆಯದು.

ಅವಕಾಡೂಸ್/ ಬೆಣ್ಣೆ ಹಣ್ಣು
ದೈನಂದಿನ ಫೋಲೇಟ್ ಪ್ರಮಾಣವನ್ನು ಪಡೆದುಕೊಳ್ಳಲು ಇನ್ನೊಂದು ಉತ್ತಮ ಮಾರ್ಗ ಎಂದರೆ ಬೆಣ್ಣೆ ಹಣ್ಣಿನ ಮೊರೆ ಹೋಗುವುದು. ಹಸಿರು ಚರ್ಮದ ಹಣ್ಣಾದ ಇದು ವಿಟಮಿನ್-ಕೆ ಅನ್ನು ಸಮೃದ್ಧವಾಗಿ ಪಡೆದುಕೊಂಡಿರುತ್ತದೆ. ಇದು ಹಾರ್ಮೋನ್‍ಗಳ ಸಮತೋಲನವನ್ನು ಕಾಯ್ದುಕೊಳ್ಳುವುದರ ಮೂಲಕ ದೇಹಕ್ಕೆ ಅಗತ್ಯವಾದ ಪೋಷಕಾಂಶವನ್ನು ನೀಡುವುದು.


ರಕ್ತದೊತ್ತಡವನ್ನು ನಿಯಂತ್ರಿಸುವಂತಹ ಪೊಟ್ಯಾಸಿಯಮ್ ಅನ್ನು ಸಹ ಹೊಂದಿದೆ. ದೇಹಕ್ಕೆ ಅಗತ್ಯವಾದ ಎಲ್ಲಾ ಪೋಷಕಾಂಶಗಳನ್ನು ಒದಗಿಸಿ, ಗರ್ಭಕೋಶದ ಆರೋಗ್ಯ ಹೆಚ್ಚಿಸುತ್ತದೆ.

ಡೈರಿ ಉತ್ಪನ್ನ


ಕಡಿಮೆ ಪ್ರಮಾಣದ ಕೊಬ್ಬನ್ನು ಹೊಂದಿರುವ ಡೈರಿ ಉತ್ಪನ್ನಗಳು ಆರೋಗ್ಯಕ್ಕೆ ಉತ್ತಮ ಆಯ್ಕೆಯಾಗಿರುತ್ತವೆ. ಇವು ನಮ್ಮ ಮೂಳೆಗಳ ಬೆಳವಣಿಗೆ, ಬಲವನ್ನೂ ಹೆಚ್ಚಿಸುತ್ತದೆ. ಹಾಲು, ಬೆಣ್ಣೆ, ಮೊಸರು ಪದಾರ್ಥಗಳ ಸೇವನೆ ಮಾಡುವುದರಿಂದ ಫೈಬ್ರಾಯ್ಡ್ ಸಮಸ್ಯೆಯಿಂದ ದೂರ ಉಳಿಯಬಹುದು.

ಧಾನ್ಯಗಳು
ದೈನಂದಿನ ಆಹಾರದಲ್ಲಿ ನೀವು ಕನಿಷ್ಠ ಶೇ.50 ರಷ್ಟು ಧಾನ್ಯಗಳ ಆಹಾರವನ್ನು ಹೊಂದುವ ಗುರಿ ಇಟ್ಟುಕೊಳ್ಳಬೇಕು. ಅಂಟು ರಹಿತವಾದ ಈ ಧಾನ್ಯವು ಪ್ರೋಟೀನ್, ಫೋಲೇಟ್ ಮತ್ತು ಸತುಗಳ ಉತ್ತಮ ಮೂಲವಾಗಿದೆ. ಇದರಲ್ಲಿ ಸಮೃದ್ಧವಾದ ನಾರಿನಂಶ ಇರುವುದರಿಂದ ಮಲಬದ್ಧತೆಯನ್ನು ತಡೆಯಬಹುದು.


ಜೊತೆಗೆ ಉತ್ತಮ ಚಯಾಪಚಯ ಕ್ರಿಯೆಗೆ ಪ್ರೇರಣೆ ದೊರೆಯುವುದು. ನವಣೆ ಅಕ್ಕಿಯಂತಹ ಧಾನ್ಯಗಳಿಂದ ಪ್ರೋಟೀನ್ ಪಡೆದರೆ ಫಲವತ್ತತೆ ಸುಧಾರಣೆಯಾಗುವುದು. ಅಲ್ಲದೆ ಗರ್ಭಧಾರಣೆಗೆ ಉತ್ತಮ ವಾತಾವರಣವನ್ನು ಸೃಷ್ಟಿಸುವುದು. ಇದು ರಕ್ತದಲ್ಲಿ ಸಕ್ಕರೆ ಪ್ರಮಾಣವನ್ನು ನಿಯಂತ್ರಿಸುವುದರಿಂದ ಗರ್ಭಾವಸ್ಥೆಗೆ ಉಂಟಾಗುವ ತೊಡಕುಗಳನ್ನು ನಿವಾರಿಸುತ್ತದೆ.

ವಾಲ್‍ನಟ್
ವಾಲ್‍ನಟ್ ಅದ್ಭುತ ಬೀಜಗಳಲ್ಲಿ ಒಂದು. ಇದು ಉತ್ತಮ ನಾರಿನಂಶ ಮತ್ತು ಒಮೆಗಾ-3 ಅನ್ನು ಹೊಂದಿರುವ ಏಕೈಕ ಸಸ್ಯಹಾರಿ ಉತ್ಪನ್ನ. ಅಧಿಕ ಪ್ರಮಾಣದ ಮೆಗ್ನೀಷಿಯಮ್ ಹೊಂದಿರುವ ಇದು ಪ್ರೊಜೆಸ್ಟರಾನ್ ಉತ್ಪಾದಿಸಲು ಮತ್ತು ಗರ್ಭಾಶಯಕ್ಕೆ ರಕ್ತ ಪೂರೈಕೆ ಮಾಡಲು ಸಹಾಯ ಮಾಡುವುದು.


ಗರ್ಭಾವಸ್ಥೆಯಲ್ಲಿ ಇರುವಾಗ ಮೊದಲ ತ್ರೈಮಾಸಿಕದ ಆರೋಗ್ಯ ಸಮಸ್ಯೆಗಳನ್ನು ಸುಲಭವಾಗಿ ನಿಯಂತ್ರಿಸುವುದು. ಅಧಿಕ ಕ್ಯಾಲೋರಿಯನ್ನು ಹೊಂದಿರುವ ವಾಲ್‍ನಟ್ ಅನ್ನು ದಿನಕ್ಕೆ ಎರಡು ಟೇಬಲ್ ಚಮಚದಷ್ಟು ಮಾತ್ರ ಸೇವಿಸಬೇಕು.

ಮೊಟ್ಟೆ


ಸಾವಯವ ಮೊಟ್ಟೆಯಲ್ಲಿ ಅಧಿಕ ಪ್ರಮಾಣದ ಜೀವಸತ್ವಗಳು ಮತ್ತು ಖನಿಜಗಳು ತುಂಬಿರುತ್ತವೆ. ಇದರಲ್ಲಿ ಇರುವ ಕೋಲೀನ್ ಗುಣಗಳು ಅಮೈನೋ ಆಮ್ಲ ಕೋಶದ ಗುಣಮಟ್ಟವನ್ನು ಸುಧಾರಿಸುತ್ತವೆ. ಪೋಲೇಟ್ ನಂತೆ ಮೆದುಳಿನ ಬೆಳವಣಿಗೆ, ಜನನಾಂಗದ ದೋಷಗಳನ್ನು ನಿವಾರಿಸುತ್ತದೆ.

ಮೂಲ ಕನ್ನಡ ಪ್ರಭ
ಸಂಗ್ರಹ: ಕುಶಲ್ ಭಂಡಾರಿ , ಬೆಂಗಳೂರು




Sunday 12 September 2021

ಬಂಟ್ವಾಳ ತಾಲೂಕಿನ ಸರಪಾಡಿ ಜನಾರ್ದನ ಭಂಡಾರಿ ವಿಧಿವಶ

 ಬಂಟ್ವಾಳ ತಾಲೂಕಿನ ಸರಪಾಡಿ ನಿವಾಸಿ, ಗಣೇಶ್ ಬೀಡಿ ಗುತ್ತಿಗೆದಾರ ಜನಾರ್ದನ ಭಂಡಾರಿ(60)ಅವರು ಅಲ್ಪಕಾಲದ ಅಸೌಖ್ಯದಿಂದ ಸೆಪ್ಟೆಂಬರ್ 12ರಂದು ಮುಂಜಾನೆ ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ವಿಧಿವಶರಾದರು.

ನಾಟಕ ರಚನೆಗಾರರಾಗಿದ್ದ ಜನಾರ್ದನ ಭಂಡಾರಿ ಹವ್ಯಾಸಿ ಕಲಾವಿದರಾಗಿದ್ದರು. ಉತ್ತಮ ವಾಲಿಬಾಲ್ ಆಟಗಾರರಾಗಿದ್ದರು. ದೈವಸ್ಥಳ ಯುವಕ ಮಂಡಲ, ಮುಲ್ಕಾಜೆಮಾಡ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ, ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಸರಪಾಡಿ ಘಟಕದ ಸಕ್ರಿಯ ಸದಸ್ಯರಾಗಿದ್ದರು. ಸಾಮಾಜಿಕ ಹಾಗೂ ಧಾರ್ಮಿಕ ಕಾರ್ಯಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು .

ಇವರು ಪತ್ನಿ ಶ್ರೀಮತಿ ಶಾಂತಾ ಮತ್ತು ಮೂರು ಮಂದಿ ಪುತ್ರರಾದ ಉದಯವಾಣಿ ಪತ್ರಿಕೆಯ ವರದಿಗಾರಾದ ಕಿರಣ್ ಸರಪಾಡಿ , ಕಿಶನ್ , ಕೀರ್ತನ್ ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ .

 ಜನಾರ್ಧನ ಭಂಡಾರಿ ಅವರ ಆತ್ಮಕ್ಕೆ ದೇವರು ಚಿರಶಾಂತಿಯನ್ನು ಕರುಣಿಸಿ ಪತ್ನಿ ಮಕ್ಕಳಿಗೆ ಇವರ ಅಗಲುವಿಕೆಯ ದುಃಖವನ್ನು ಸಹಿಸುವ ಶಕ್ತಿಯನ್ನುಭಗವಂತ ದಯಪಾಲಿಸಲಿ ಎಂದು ಭಂಡಾರಿ ಕುಟುಂಬ ಮನೆ ಮನದ ಮಾತು ಭಂಡಾರಿ ವಾರ್ತೆಯ ಪ್ರಾರ್ಥನೆ.

-ಭಂಡಾರಿ ವಾರ್ತೆ


ತುಂಬಾ ಹೊತ್ತು ಮೊಬೈಲ್ ಪರದೆ ದಿಟ್ಟಿಸುವ ಮಕ್ಕಳಲ್ಲಿ ಸಮೀಪದೃಷ್ಟಿ ದೋಷ

 ಕೊರೊನಾ ಕಾರಣದಿಂದ ಶಾಲೆಗಳು ಮುಚ್ಚಿರುವುದರಿಂದ ಈಗ ಎಲ್ಲಾ ಮಕ್ಕಳು ವಿದ್ಯಾಭ್ಯಾಸಕ್ಕಾಗಿ ಮೊಬೈಲ್ ಅನ್ನೇ ಅವಲಂಬಿಸಿದ್ದಾರೆ. ಇದರಿಂದ ಅವರ ಓದು ಮುಂದುವರಿಯುತ್ತಿದೆ ನಿಜ. ಆದರೆ ಹೊಸದೊಂದು ಸಮಸ್ಯೆಯನ್ನು ಇದು ತಂದೊಡ್ಡಿದೆ.

ಕೊರೊನಾ ಸಾಂಕ್ರಾಮಿಕ ಈಗ ಮಕ್ಕಳಿಗೆ ಬೇರೆ ತೆರನಾದ ಸಮಸ್ಯೆಯನ್ನು ತಂದೊಡ್ಡುತ್ತಿದೆ. ಮಕ್ಕಳು ಹೆಚ್ಚು ಹೊತ್ತು ಮೊಬೈಲ್ ಪರದೆ ದಿಟ್ಟಿಸುವುದರಿಂದ ಅವರಲ್ಲಿ ಮಯೋಪಿಯ ಅಂದರೆ ಸಮೀಪದೃಷ್ಟಿ ಸಮಸ್ಯೆ ಉಂಟಾಗುವ ಸಾಧ್ಯತೆ ಹೆಚ್ಚು ಎಂದು ನೂತನ ಸಂಶೋಧನೆ ತಿಳಿಸಿದೆ. ಕಳೆದೊಂದು ವರ್ಷದಲ್ಲಿ ಮಯೋಪಿಯ ಸಮಸ್ಯೆಗೆ ತುತ್ತಾಗುತ್ತಿರುವ ಮಕ್ಕಳ ಸಂಖ್ಯೆ ದುಪ್ಪಟ್ಟಾಗಿದೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.


ಹೆಚ್ಚಾಗಿ 8- 16 ವರ್ಷದೊಳಗಿನ ಮಕ್ಕಳು ಈ ಕಣ್ಣಿನ ಸಮಸ್ಯೆಗೆ ತುತ್ತಾಗುತ್ತಿರುವುದಾಗಿ ಸಂಶೋಧನೆಯಿಂದ ತಿಳಿದುಬಂದಿದೆ. ಈ ಹಿಂದೆ 10- 15 ಪ್ರತಿಶತ ಮಕ್ಕಳು ಕಣ್ಣಿನ ಸಮಸ್ಯೆ ಹೇಳಿಕೊಂಡು ವೈದ್ಯರ ಬಳಿಗೆ ಬರುತ್ತಿದ್ದರು. ಈಗ ಆ ಸಂಖ್ಯೆ ಶೇ. 30- 40 ಪ್ರತಿಶತಕ್ಕೆ ಏರಿಕೆಯಾಗಿದೆ.

ದೀರ್ಘ ಕಾಲ ಡಿಜಿಟಲ್ ಪರದೆಯನ್ನು ದಿಟ್ಟಿಸುವುದರಿಂದ ಕಣ್ನಲ್ಲಿನ ನೀರಿನಂಶ ಬೇಗನೆ ಒಣಗಿ ಹೋಗುತ್ತದೆ. ಇದರಿಂದ ತುರಿಕೆ ಕಂಡುಬರುತ್ತದೆ. ಆಗ ಮಕ್ಕಳು ಕಣ್ಣನ್ನು ಪದೇ ಪದೇ ಉಜ್ಜಿಕೊಳ್ಳುತ್ತಾರೆ. ಇದರಿಂದ ಒಳಪದರಕ್ಕೆ ಹಾನಿಯಾಗುತ್ತದೆ ಎಂದು ವೈದ್ಯರು ಹೇಳಿದ್ದಾರೆ. 

ಕೊರೊನಾ ಕಾರಣದಿಂದ ಶಾಲೆಗಳು ಮುಚ್ಚಿರುವುದರಿಂದ ಈಗ ಎಲ್ಲಾ ಮಕ್ಕಳು ವಿದ್ಯಾಭ್ಯಾಸಕ್ಕಾಗಿ ಮೊಬೈಲ್ ಅನ್ನೇ ಅವಲಂಬಿಸಿದ್ದಾರೆ. ಇದರಿಂದ ಅವರ ಓದು ಮುಂದುವರಿಯುತ್ತಿದೆ ನಿಜ. ಆದರೆ ಹೊಸದೊಂದು ಸಮಸ್ಯೆಯನ್ನು ಇದು ತಂದೊಡ್ಡಿದೆ. ಈ ಬಗ್ಗೆ ಪಾಲಕರು ಗಮನ ಹರಿಸಬೇಕು. ಕಂಪ್ಯೂಟರ್ ಲ್ಯಾಪ್ ಟಾಪ್ ಆದರೆ ಅದರಿಂದ ದೂರ ಕುಳಿತುಕೊಳ್ಲಬಹುದು ಆದರೆ ಮೊಬೈಲ್ ಅನ್ನು ಕಣ್ನ ಹತ್ತಿರದಲ್ಲೇ ಇಡಬೇಕಾಗಿರುವುದೇ ಸಮಸ್ಯೆಗೆ ಕಾರಣ ಎಂದು ವೈದ್ಯರು ತಿಳಿಸಿದ್ದಾರೆ. 

ಇದಕ್ಕೆ ಪರಿಹಾರ

ಮಕ್ಕಳು ಪದೇ ಪದೆ ಕಣ್ಣುಜ್ಜದಂತೆ ಎಚ್ಚರ ವಹಿಸಿ. ಪ್ರತಿ 20 ನಿಮಿಷಗಳಿಗೊಮ್ಮೆ ಮಕ್ಕಳ ಕಣ್ಣುಗಳಿಗೆ ವಿರಾಮ ನೀಡುವಂತೆ ಮಾಡಿ. ಕಂಪ್ಯೂಟರ್, ಲ್ಯಾಪ್ ಟಾಪ್ ಮತ್ತು ಟಿವಿ ಬಳಸುತ್ತಿದ್ದರೆ ಪರದೆಯಿಂದ ಮಕ್ಕಳು ಕನಿಷ್ಟ 33 ಸೆ.ಮೀ ದೂರ ಕುಳಿತುಕೊಳ್ಳುವಂತೆ ಮಾಡಿ. ತೊಂದರೆ ಇದೆ ಎಂದು ಅನ್ನಿಸಿದಲ್ಲಿ ಮಕ್ಕಳನ್ನು ನೇತ್ರ ವೈದ್ಯರ ಬಳಿ ಕರೆದೊಯ್ದು ತಪಾಸಣೆ ಮಾಡಿಸಿ.

ಮೂಲ ಕನ್ನಡ ಪ್ರಭ
ಸಂಗ್ರಹ: ಕುಶಲ್ ಭಂಡಾರಿ , ಬೆಂಗಳೂರು


ಪ್ರೀತಿ ಇರುವಲ್ಲಿ "ನಾನು" ಇರುವುದಿಲ್ಲ ( ಧ್ಯಾನ-8)-ವೆಂಕಟೇಶ ಭಂಡಾರಿ ಕುಂದಾಪುರ.

 

  ಧ್ಯಾನ-8

ಮ್ಮ ಅಧಿಕಾರ ,ಸ್ಥಾನ, ಮಾನ,ಸಂಪತ್ತು, ಆಸೆಗಳ ಪೂರೈಕೆಗಾಗಿ ನಡೆಸುವ ಹೋರಾಟ ಇತ್ಯಾದಿಗಳೆಲ್ಲ "ನಾನು" ಎಂಬುದರ ಬೇರೆ ಬೇರೆ ರೂಪಗಳು. ನೀವು ಮತ್ತು ನಾನು  ನಿರ್ದಿಷ್ಟ ಗುಂಪಿಗೆ, ವರ್ಗಕ್ಕೆ, ಸಮಾಜಕ್ಕೆ, ಹವಾಮಾನದ ಪ್ರದೇಶಕ್ಕೆ ಸೇರಿದವರಾಗಿಯಲ್ಲದೆ,ಬಿಡಿ ವ್ಯಕ್ತಿಗಳಾಗಿ ಇದನ್ನು ಅರ್ಥಮಾಡಿಕೊಂಡು ಬದುಕಲು ಸಾಧ್ಯವಾದರೆ ಆಗ ನಿಜವಾದ ಕ್ರಾಂತಿಯಾಗುತ್ತದೆ.ಆದರೆ ನಾನು ಹೇಳುತ್ತೀರುವುದು ಸರ್ವಮಾನ್ಯವಾದ ,ವ್ಯವಸ್ಥಿತವಾದ ಸಂಘಟನೆಯಾಗಿಬಿಟ್ಟರೆ ಆಗ ನಮ್ಮೊಳಗಿನ ನಾನು ಆ ವ್ಯವಸ್ಥೆಯ ನೆರಳಲ್ಲಿ ಆಶ್ರಯಪಡೆದುಬಿಡುತ್ತದೆ. ನೀವು ಮತ್ತು ನಾನು ವ್ಯಕ್ತಿಗಳಾಗಿ ನಮ್ಮ ನಮ್ಮ ಬದುಕಿನಲ್ಲಿ ಪ್ರೀತಿಸಬಲ್ಲವರಾದರೆ ಆಗ ತೀರ ಅಗತ್ಯವಾಗಿ ಆಗಬೇಕಾಗಿರುವ ಕ್ರಾಂತಿ ಸಂಭವಿಸುತ್ತದೆ...



ನಾನು ಎಂಬ ಮಾತನ್ನು ಯಾವ ಅರ್ಥದಲ್ಲಿ ಬಳಸುತ್ತಿದ್ದೇನೆ,ಗೊತ್ತೆ ? ನಾನು ಎಂಬುದು ಒಂದು ಐಡಿಯಾ, ನೆನಪು, ತೀರ್ಮಾನ, ಅನುಭವ, ಹೇಳಿಕೊಳ್ಳಬಹುದಾದ ಮತ್ತು ಹೇಳಿಕೊಳ್ಳಲಾರದ ಆಸೆಗಳು, ಏನೋ ಆಗುವ ಅಥವಾ ಆಗದಿರುವ ಪ್ರಜ್ಞಾಪೂರ್ವಕ ಪ್ರಯತ್ನಗಳು, ಸುಪ್ತ ಪ್ರಜ್ಞೆಯಲ್ಲಿರುವ ವೈಯಕ್ತಿಕವಾದ,ಗುಂಪಿಗೆ ಸಂಬಂಧಿಸಿದ,ಕುಲ ಸಂಬಂಧಿಯಾದ ನೆನಪುಗಳ ಇಡೀ ಉಗ್ರಾಣ;  ಇವುಗಳನ್ನೆಲ್ಲ ಬಹಿರಂಗವಾಗಿ ಕ್ರಿಯೆಯಲ್ಲಿ ವ್ಯಕ್ತಪಡಿಸುವ ಅಥವಾ ಆಧ್ಯಾತ್ಮಿಕ ಬಿಂಬಗಳಾಗಿ ಮೂಡಿಸುವ ಪ್ರಯತ್ನದಲ್ಲಿ ತೊಡಗಿರುವುದೇ "ನಾನು" ಇದು ಸ್ಪರ್ಧೆಯಲ್ಲಿ ಏನೋ ಆಗುವ ಆಸೆಯಲ್ಲಿ ಸೇರಿಕೊಂಡಿರುತ್ತದೆ. ನಾನು ಎಂಬುದು ನಿಜವಾಗಿ ನಮಗೆದರಾದಾಗ ಅದು ಕೆಡುಕೆಂದು ತಿಳಿಯುತ್ತದೆ. ನಾನು ಎಂಬುದು ಸದಾ ಭೇದವನ್ನು ಹುಟ್ಟಿಸುತ್ತಿರುತ್ತದೆ,ಸ್ವಮಗ್ನವಾಗಿರುತ್ತದೆ,ತನ್ನನ್ನೇ ಬೇರೆಯಾಗಿ ಎಣಿಸುತ್ತಿರುತ್ತದೆ. ನಾನು ತೊಡಗುವ ಯಾವುದೇ ಚಟುವಟಿಕೆ,ಅದು ಎಷ್ಟೇ ಉದಾತ್ತವಾದದ್ದಾಗಿರಲಿ, ಪ್ರತ್ಯೇಕವಾದ, ಖಂಡವಾದ ಚಟುವಟಿಕೆಯೇ ಆಗಿರುತ್ತದೆ. ನಾನು ಇಲ್ಲದ,ಪ್ರಯತ್ನಪಡುವುದೆಂಬುದಿಲ್ಲದ,ಹೋರಾಟವಿಲ್ಲದ ಅಪರೂಪದ ಕೆಲವು ಕ್ಷಣಗಳನ್ನೂ ನಾವು ಬಲ್ಲೆವು.  ಪ್ರೀತಿ ಇದ್ದಾಗ ಇಂಥ ಕ್ಷಣಗಳು ಇರುತ್ತವೆ..

 

ವಾಸ್ತವವನ್ನು, ಸತ್ಯವನ್ನು ಕಾಣುವುದಕ್ಕೆ ಸಾಧ್ಯವಿಲ್ಲ. ಸತ್ಯವು ಇರಬೇಕೆಂದರೆ ಆಗ ನಂಬಿಕೆ,ಜ್ಞಾನ, ಅನುಭವಿಸುವುದು,ಗುಣವನ್ನು ಬೆಂಬತ್ತುವುದು ಇವೆಲ್ಲವೂ ಇಲ್ಲವಾಗಬೇಕು. ಗುಣವೇ ಬೇರೆ,ಗುಣವಂತರಾಗಿರುವುದೇ ಬೇರೆ.ಗುಣವನ್ನು ಪಡೆಯಬೇಕೆಂದು ಉದ್ದೇಶಪೂರ್ವಕವಾಗಿ ಪ್ರಯತ್ನ ಪಡುತ್ತಿರುವವರು ಎಂದೂ ಸತ್ಯವನ್ನು ಕಾಣಲಾರರು. ಅವರು ಸಜ್ಜನರಾಗಿರಬಹುದು,ಅದರೆ ಸತ್ಯವಂತರು,ಅರಿವುಳ್ಳವರು ಆಗಿರಲು ಸಾಧ್ಯವಿಲ್ಲ. ಸತ್ಯವಂತರಲ್ಲಿ ಸತ್ಯ ತಾನೇ ತಾನಾಗಿ ಇರುತ್ತದೆ. ಗುಣವಂತನಾದವನು ಒಳ್ಳೆಯ ಮನುಷ್ಯ ‌.ಒಳೆಯ ಮನುಷ್ಯ ಸತ್ಯವೆಂದರೇನು ಎಂದು ಅರಿಯಲಾರ.ಏಕೆಂದರೆ ಗುಣವೆಂಬುದು ಅವನಲ್ಲಿರುವ "ನಾನು" ಎಂಬುದನ್ನು ಹೊದಿಕೆಯಂತೆ ಅವರಿಸಿರುತ್ತದೆ.ಆತ ಆತ ಗುಣದ ಬೆನ್ನು ಹತ್ತಿರುವುದರಿಂದ ಅವನೊಳಗಿನ "ನಾನು" ಮತ್ತಷ್ಟು ಬಲಗೊಳ್ಳುತ್ತಿರುತ್ತದೆ. ನಾನು ದುರಾಸೆ ಇಲ್ಲದವನಾಗಬೇಕು,ಎಂದು ಬಯಸುತ್ತಿರುವಾಗ ಆತ ದುರಾಸೆ ಇಲ್ಲದ ಸ್ಥಿತಿಯನ್ನು ಒಂದು ಅನುಭವವಾಗಿ ಪಡೆಯುತ್ತಾ ತನ್ನೊಳಗಿನ "ನಾನು" ಎಂಬುದನ್ನು ಬಲಗೊಳಿಸಿಕೊಳ್ಳುತ್ತಿರುತ್ತಾನೆ. ಆದ್ದರಿಂದ ಈ ಲೋಕದ ವಸ್ತುಗಳಲ್ಲಿ ಮಾತ್ರವಲ್ಲ ಜ್ಞಾನ ಮತ್ತು ನಂಬಿಕೆಗಳಲ್ಲೂ ಬಡವರಾಗಿರುವುದೇ ವಾಸಿ.ಲೌಕಿಕವಾಗಿ .

ಆದರೆ ನೀವು ಮತ್ತು ನಾನು ವ್ಯಕ್ತಿಗಳಾಗಿ "ನಾನು" ಎಂಬುದರ ಕೆಲಸಗಳನ್ನು ಇಡಿಯಾಗಿ ಕಾಣಲು ಸಾಧ್ಯವಾದಾಗ ಪ್ರೀತಿ ಎಂದರೇನು ಎಂಬುದು ನಮಗೆ ತಿಳಿಯುತ್ತದೆ.ಕೇವಲ ಈ ಸುಧಾರಣೆಯೊಂದೇ ಜಗತ್ತನ್ನು ಬದಲಾಯಿಸಬಹುದು. ಪ್ರೀತಿ ಎಂದರೆ "ನಾನು " ಎಂಬುದಲ್ಲ,ನಾನು ಎಂಬುದು ಪ್ರೀತಿಕಾಣಲಾರದು.ನಾನು ಪ್ರೀತಿಸುತ್ತೇನೆ ಎನ್ನುತೀರಿ,ಆದರೆ ಹಾಗೆನ್ನುತ್ತೀರುವಾಗಲೇ,ಹಾಗೆ ಅನುಭವಿಸುತ್ತಿರುವಾಗಲೇ ಪ್ರೀತಿ ಇಲ್ಲವಾಗಿರುತ್ತದೆ.ನಿಮಗೆ ಪ್ರೀತಿ ತಿಳಿದಾಗ "ನಾನು" ಇರುವುದಿಲ್ಲ.ಪ್ರೀತಿ ಇದ್ದಾಗ "ನಾನು" ಇರುವುದಿಲ್ಲ...

ಮೂಲ:ಜಿಡ್ಡು ಕೃಷ್ಣಮೂರ್ತಿ ಪುಸ್ತಕಗಳು
ಭಂಡಾರಿವಾರ್ತೆಗಾಗಿ;ವೆಂಕಟೇಶ ಭಂಡಾರಿ ಕುಂದಾಪುರ.

Saturday 11 September 2021

ದಾಲ್ಚಿನ್ನಿ (ಚಕ್ಕೆ) ಯ ಬಗ್ಗೆ ಮಾಹಿತಿ-ಸುಪ್ರೀತ ಪ್ರಶಾಂತ್ ಭಂಡಾರಿ, ಸೂರಿಂಜೆ

 ಸಸ್ಯಲೋಕ  -13 

 
ಪ್ರಕೃತಿಯಲ್ಲಿ ತಾನಾಗಿ ಬೆಳೆಯುವ ಅನೇಕ ಸಸ್ಯಗಳಲ್ಲಿ ದಾಲ್ಚಿನ್ನಿ ಕೂಡ ಒಂದು. ವರ್ಣರಂಜಿತ ಚಿಗುರಿನ ಮೂಲಕ ತನ್ನ ಸೌಂದರ್ಯವನ್ನು ಪ್ರದರ್ಶಿಸುವ ಮರಗಳಲ್ಲಿ ದಾಲ್ಚಿನ್ನಿ ಮರ ಬಹಳ ಆಕರ್ಷಕ. ದಾಲ್ಚಿನ್ನಿ ಮರ ಚಿಗುರಿದಾಗ ನಸುಗೆಂಪನೆಯ ಚಿಗುರು ಎಲೆಗಳಿಂದ ಇಡೀ ಮರವೇ‌ ಸುಂದರ ರಂಗು ರಂಗಿನ ಹೂವಿನ ಹಾಗೆ ನೋಟಕರಿಗೆ ಮುದ ನೀಡುತ್ತದೆ. ಈ ಚಿಗುರೆಲೆ ಬೆಳೆದಾಗ ಹಸಿರು ಬಣ್ಣಕ್ಕೆ ತಿರುಗುತ್ತದೆ.
ದಾಲ್ಚಿನ್ನಿಯು ಲಾರೆಸಿಯಾ ಕುಟುಂಬಕ್ಕೆ ಸೇರಿದ್ದು ಸಸ್ಯಶಾಸ್ತ್ರದಲ್ಲಿ ಇದನ್ನು 'cinnamon' ಎನ್ನುತ್ತಾರೆ. ತುಳುವಿನಲ್ಲಿ 'ಇಜಿನ್' , ಸಂಸ್ಕೃತದಲ್ಲಿ 'ತಮಾಲಪತ್ರ' ಕನ್ನಡದಲ್ಲಿ 'ಸಾಂಬಾರ ಪತ್ರೆ', 'ಕಾಡುಲವಂಗ' ಹಾಗೂ ಇಂಗ್ಲೀಷ್ ನಲ್ಲಿ ಚೈನೀಸ್ ಕ್ಯಾಶಿಯಾ ಹಾಗೂ ಸಿನ್ನಮನ್ ಎಂದು ಕರೆಯಲ್ಪಡುವ ದಾಲ್ಚಿನ್ನಿ ಯ ಮೂಲ ಶ್ರೀಲಂಕಾ ಹಾಗೂ ಕೇರಳದ ಮಲಬಾರ್.   ಈ ಮರದ ಚಕ್ಕೆ ಅಂದರೆ ತೊಗಟೆ ಮತ್ತು ಎಲೆಗಳನ್ನು ಮಾಂಸದ ಪದಾರ್ಥಗಳಲ್ಲಿ ಉಪಯೋಗಿಸುತ್ತಾರೆ. ಮಾಂಸಾಹಾರಿಗಳು ಹೆಚ್ಚಾಗಿ ಮನೆಯ ಬಳಿ ಈ ಮರವನ್ನು ಬೆಳೆಸುತ್ತಾರೆ. ಇದರ ಎಲೆ ಹೂ ಮತ್ತು ಚಕ್ಕೆಗಳು ಪದಾರ್ಥವಾಗಿ ಬಳಕೆಯಾದರೆ ಕಾಯಿಗಳು ಎಣ್ಣೆ ತಯಾರಿಕೆಗೆ ಬಳಕೆಯಾಗುತ್ತದೆ ಹಾಗಾಗಿ ಮಾರುಕಟ್ಟೆಯಲ್ಲಿ ಇದಕ್ಕೆ ಬಹಳ ಬೇಡಿಕೆ ಇದೆ.


ಇದರಲ್ಲಿ ಕಬ್ಬಿಣ, ಪೊಟ್ಯಾಷಿಯಂ, ಕ್ಯಾಲ್ಸಿಯಂ, ಸತು, ರಂಜಕ, ಮೇಗ್ನೀಸಿಯಂ ಜೊತೆಗೆ ಸಾರಭೂತ ತೈಲಗಳು  ಸಮೃದ್ಧವಾಗಿವೆಯಂತೆ.  ಮಾರುಕಟ್ಟೆಯಲ್ಲಿ ಅತಿ ಬೇಡಿಕೆ ಇರುವ ಸಾಂಬಾರ ಪದಾರ್ಥಗಳಲ್ಲಿ ದಾಲ್ಚಿನ್ನಿ ಯೂ ಒಂದು. ಇದಕ್ಕಾಗಿಯೇ ಅಲ್ವೇ ಬ್ರಿಟಿಷರು ವ್ಯಾಪಾರಕ್ಕೆಂದು ಬಂದು ಇಲ್ಲೇ ನೆಲೆಯೂರಿ ನಮ್ಮನ್ನೆಲ್ಲ ಅವರ ಕಪಿಮುಷ್ಠಿಯಲ್ಲಿ ಇರಿಸಿದ ಕಥೆ ನಿಮಗೆ ಗೊತ್ತೆ ಇದೆ.
ಹೆಚ್ಚಾಗಿ ಕಾಡಿನ ಭಾಗದಲ್ಲಿ ಇರುವ ದಾಲ್ಚಿನ್ನಿ ಮರವನ್ನು ನಾವು ನೋಡಿರುತ್ತೇವೆ. ಆದರೆ ಇದು ಒರಿಜಿನಲ್ ದಾಲ್ಚಿನ್ನಿ ಅಲ್ಲವಂತೆ. ಇದು ದಾಲ್ಚಿನ್ನಿ ಜಾತಿಗೆ ಸೇರಿದ ಮತ್ತೊಂದು ಗಿಡ. ದಾಲ್ಚಿನ್ನಿ ಗುಣ ಇದ್ದರೂ ಒರಿಜಿನಲ್ ದಾಲ್ಚಿನ್ನಿಯಲ್ಲ. ಯಾಕೆಂದರೆ ದಾಲ್ಚಿನ್ನಿಯಲ್ಲಿ ಅನೇಕ ಪ್ರಭೇದಗಳಿವೆ. ಶ್ರೀಲಂಕಾ ಹಾಗೂ ಕೇರಳ ಮೂಲದ ಸಿಲೋನ್ ದಾಲ್ಚಿನ್ನಿ ಒರಿಜಿನಲ್ ಆಗಿದ್ದು. ಮಾರುಕಟ್ಟೆಗೆ ಸಿಗುವ  ಎಲ್ಲಾ ದಾಲ್ಚಿನ್ನಿ ಒರಿಜಿನಲ್ ಅಲ್ಲ ಹೆಚ್ಚಿನ ದಾಲ್ಚಿನ್ನಿಯೂ ಚೈನೀಸ್ ಕ್ಯಾಶಿಯಾ ಎಂಬ ಹೆಸರಿನ ದಾಲ್ಚಿನ್ನಿ. ಇದು ಆರೋಗ್ಯಕ್ಕೂ ಅಷ್ಟು ಒಳ್ಳೆಯದಲ್ಲ.

 ಮಾರುಕಟ್ಟೆಯಲ್ಲಿ ನಿಜವಾದ ದಾಲ್ಚಿನ್ನಿ ಯ ಬೆಲೆ ಎಷ್ಟು ಗೊತ್ತೆ!??

 1ಕೆ.ಜಿ ಮೊಗ್ಗಿಗೆ 800ರೂ.
ಎಲೆಗೆ 60ರೂ ಹಾಗೂ
ಚಕ್ಕೆ ಗೆ 600ರೂ ಬೆಲೆ ಇದೆ



ಹಾಗಾದರೆ ನಿಜವಾದ ದಾಲ್ಚಿನ್ನಿಯನ್ನು ಪತ್ತೆ ಹಚ್ಚುವುದು ಹೇಗೆ!!!?
 
ನಿಜವಾದ ದಾಲ್ಚಿನ್ನಿ ಹಗುರವಾದ ಬಣ್ಣದೊಂದಿಗೆ ಸೂಕ್ಕ್ಮ ಪರಿಮಳ ಮತ್ತು ಸ್ವಲ್ಪ ಕಟುವಾದ ಹಾಗೂ ಸಿಹಿ ರುಚಿಯನ್ನು ಹೊಂದಿದೆ.
ಕ್ಯಾಶಿಯಾ ಕಡು ಬಣ್ಣದೊಂದಿಗೆ ಕೆಂಪು ಬಣ್ಣದ ಛಾಯೆಯನ್ನು ಹೊಂದಿದೆ. ತೀವ್ರವಾದ ವಾಸನೆ ಹಾಗೂ ಕಹಿ ರುಚಿಯನ್ನು ಹೊಂದಿರುತ್ತದೆ. ಇದು ದಪ್ಪವಾಗಿ ಒರಟಾಗಿದ್ದು ಸ್ವಲ್ಪ ಸುರುಳಿಯಾಗಿರುತ್ತದೆ. ಹಾಗಾಗಿ ಇನ್ನು ಮುಂದೆ ದಾಲ್ಚಿನ್ನಿಯ ಆಯ್ಕೆಯನ್ನು ಸರಿಯಾಗಿ ಮಾಡಿಕೊಳ್ಳಿ
ದಾಲ್ಚಿನ್ನಿ ಯ ಬೆಳೆ:-
ಒಣ ಹಾಗೂ ಕಲ್ಲು ಮಿಶ್ರಿತ ಭೂಮಿಗೆ ಯೋಗ್ಯವಾದ ದಾಲ್ಚಿನ್ನಿಯ ಗಿಡವನ್ನು ನರ್ಸರಿಯಿಂದ ತಂದು ಬೆಳೆಸಬಹುದು. ವಿಶೇಷ ಆರೈಕೆ ಬೇಕಾಗದ ಈ ಮರಕ್ಕೆ ಲವಂಗ ಮರದಂತೆ ಗೊಬ್ಬರ ನೀಡಿದರೆ ಸಾಕು.
ಉಪಯೋಗ:-
ದಾಲ್ಚಿನ್ನಿ ಯ ಚಕ್ಕೆಯನ್ನು ಜಗಿದು ತಿನ್ನುವುದರಿಂದ ವಾಕರಿಕೆ ಮತ್ತು ವಾಂತಿ ನಿಲ್ಲುತ್ತದೆ.
ಚಕ್ಕೆಯ ಗಂಧವನ್ನು ಮೊಡವೆಗಳಿಗೆ ಲೇಪಿಸಿದರೆ ಮೊಡವೆಯ ಕಲೆ ಮಾಯವಾಗುತ್ತದೆ.
ದಾಲ್ಚಿನ್ನಿಯ ಚೂರ್ಣಕ್ಕೆ ಸ್ವಲ್ಪ ಜೇನುತುಪ್ಪ ಸೇರಿಸಿ ನೆಕ್ಕಿದರೆ ಕಫ ಕಡಿಮೆಯಾಗುತ್ತದೆ.
ಹಲ್ಲು ನೋವು ನಿವಾರಣೆಗೆ ಹಾಗೂ ಬಾಯಿಯ ದುರ್ವಾಸನೆಯನ್ನು ತಡೆಗಟ್ಟಲು ಇದನ್ನು ಬಳಸುತ್ತಾರೆ.
ನಂಜುನಿರೋಧಕ
ಗ್ಯಾಸ್ಟ್ರಿಕ್ ‌ಸಮಸ್ಯೆಗಳಿಗೆ ದಾಲ್ಚಿನ್ನಿಯಲ್ಲಿದೆ ಪರಿಹಾರ.
ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ ಹಾಗೂ ಚೈತನ್ಯವನ್ನು ಹೆಚ್ಚಿಸುವ ಗುಣ ಇದಕ್ಕಿದೆ ಆದರೆ ನೆನಪಿರಲಿ ಅತಿಯಾದ ದಾಲ್ಚಿನ್ನಿ ಸೇವನೆಯು ಆರೋಗ್ಯಕ್ಕೆ ಒಳ್ಳೆಯದಲ್ಲ.









✍️ ಸುಪ್ರೀತ ಪ್ರಶಾಂತ್ ಭಂಡಾರಿ, ಸೂರಿಂಜೆ