BhandaryVarthe Team

BhandaryVarthe Team
Bhandary Varthe Team

Tuesday 27 July 2021

ಒಮ್ಮೆ ಭೇಟಿ ಕೊಡಲೇಬೇಕಾದ ವರದಹಳ್ಳಿ ಭಗವಾನ್ ಶ್ರೀ ಶ್ರೀಧರ ಸ್ವಾಮಿಗಳ ಕ್ಷೇತ್ರ- -ಹರೀಶ್ ನಾರ್ವೆ

 ಹಾರಾಷ್ಟ್ರದ ಒಂದು ಹಳ್ಳಿಯಲ್ಲಿ 7 ಡಿಸೆಂಬರ್ 1908 ರಂದು ಶ್ರೀಧರ ಎನ್ನುವ ಮಹಾಪುರುಷನ ಜನನ ಆಗುತ್ತದೆ . ಆಧ್ಯಾತ್ಮವನ್ನು ಹುಡುಕಿಕೊಂಡು ದೇಶ ಸಂಚಾರ ಆರಂಭಿಸಿದ ಶ್ರೀಧರರಿಗೆ ಗುರುಗಳಾಗಿ ಸಿಕ್ಕಿದ್ದು ಶ್ರೀ ಸಮರ್ಥ ರಾಮದಾಸರು ಇವರಿಂದ 1942 ರಲ್ಲಿ ಸನ್ಯಾಸ ದೀಕ್ಷೆ ಸ್ವೀಕರಿಸಿ ಮತ್ತೆ ದೇಶ ಸಂಚಾರದಲ್ಲಿ ತೊಡಗಿದರು .ಹೀಗೆ ಹೋಗುವಾಗ ಸುಂದರ ಮಲೆನಾಡಿನ ಪ್ರಶಾಂತ ವಾತಾವರಣವಾದ ಸಾಗರದ ಸಮೀಪದ ವರದಹಳ್ಳಿ ಇವರನ್ನು ಕೈ ಬೀಸಿ ಕರೆದು ಇವರನ್ನು ಇಲ್ಲಿಯೇ ನೆಲೆಸುವಂತೆ ಮಾಡಿತು .

ಶ್ರೀ ಶ್ರೀಧರರು ಇಲ್ಲಿ ನೆಲೆನಿಂತ ಮೇಲೆ ಅಲ್ಲಿನ ಪುಣ್ಯ ಭೂಮಿ ಒಂದು ಶಕ್ತಿ ಮತ್ತು ಭಕ್ತಿ ಕೇಂದ್ರವಾಗಿ ಮಾರ್ಪಟ್ಟಿತು .ಶ್ರೀ ಶ್ರೀಧರರು 1963ರ ಚಾತುರ್ಮಾಸದಲ್ಲಿ ವಿಜಯದಶಮಿಯ ಶುಭ ಮುಹೂರ್ತದಲ್ಲಿ ಧರ್ಮಧ್ವಜವನ್ನು ಸ್ಥಾಪನೆ ಮಾಡಿದರು .ತಮ್ಮ ಆಶ್ರಮಕ್ಕೆ ಶ್ರೀ ಶ್ರೀಧರಾಶ್ರಮ ಎಂದು ನಾಮಕರಣ ಮಾಡಿದರು . ನಂತರ ಅದೆಷ್ಟೋ ಭಕ್ತರ ಕಷ್ಟಗಳನ್ನು ನಿವಾರಿಸಿ ಪವಾಡಗಳನ್ನು ಮಾಡಿದ್ದರು .ಭಕ್ತರಿಗೆ ಭೂಮಿಯ ಮೇಲಿನ ದೇವರಾಗಿ ಕಣ್ಣಿಗೆ ಕಾಣುತ್ತಿದ್ದರು ಇಂತಹ ಮಹಾನ್ ಶಕ್ತಿ ಶ್ರೀ ಶ್ರೀಧರರು .ಇವರು 19 - o4-1972 ರಂದು ಧ್ಯಾನಾಸಕ್ತರಾಗಿ ದೇಹತ್ಯಾಗ ಮಾಡಿದರು .ಇಂತಹ ದೈವಿ ಸ್ವರೂಪ ಶ್ರೀಧರರ ಪವಾಡಗಳು ಇಂದಿಗೂ ನಡೆಯುತಿದೆ ‌. 
ವರದಹಳ್ಳಿ (ವರದಪುರ) ಹೆಸರೇ ಹೇಳುವಂತೆ ಜೀವನದ ಕಷ್ಟದಲ್ಲಿ ಬರುವ ಶ್ರೀಧರ ಸ್ವಾಮಿಗಳ ಭಕ್ತರಿಗೆ ವರ ನೀಡುವ ಒಂದು ಮಹಾನ್ ಚೇತನದ ಸ್ಥಳ .  ಜೀವನದಲ್ಲಿ ನೊಂದು ಬೆಂದು ಬರುವ ಎಷ್ಟೋ ಜನರಿಗೆ ಶ್ರೀ ಶ್ರೀಧರ ಸ್ವಾಮಿಗಳ ಅನುಗ್ರಹದಿಂದ ಮತ್ತೆ ಹೊಸ ಜೀವನ ದೊರೆತಿದೆ . ಆಡಂಬರದ ಶಕ್ತಿಯ ಭಕ್ತಿಕ್ಕಿಂತ ಮನಸ್ಸಿನ ಮುಗ್ಧ ಭಕ್ತಿಗೆ ದೇವನ ಅನುಗ್ರಹ ದೊರಕುತ್ತದೆ ಎಂಬ ಮಾತು ಶ್ರೀ ವರದಹಳ್ಳಿಯಲ್ಲಿ ಸತ್ಯ ಎಂದು ಎನಿಸುತ್ತದೆ. ಮಾತು ಬರದ ಎಷ್ಟೋ ಜನರಿಗೆ ಮಾತು ಬರಿಸಿದ ಜೀವಂತ ಉದಾಹರಣೆ ಶ್ರೀ ಕ್ಷೇತ್ರದಲ್ಲಿ ದೊರಕುತ್ತದೆ. ಶ್ರೀಧರರ ಪುಣ್ಯಕ್ಷೇತ್ರದಲ್ಲಿ ಭಕ್ತರ ಪಾಪಗಳನ್ನು ತೊಳೆದು ಅಮೃತದಂತ ತೀರ್ಥ ಸಿಗುತ್ತದೆ ಅದು ಶ್ರೀ ಶ್ರೀಧರ ತೀರ್ಥ .
ಈ ತೀರ್ಥದಲ್ಲಿ ಮಿಂದು ಗುಡ್ಡದ ತುದಿಯನ್ನು ಹತ್ತಿದರೆ ಸಿಗುವುದು ಶ್ರೀ ಶ್ರೀಧರ ಆಶ್ರಮ . ಶ್ರೀಧರರು ಧ್ಯಾನಾಸಕ್ತರಾಗಿ ಕುಳಿತ ಅವರ ಸ್ಥಳ ಮತ್ತು ಅವರ ಪಾದಕೆಯೇ ಪವಾಡಗಳ ತಾಣ ಇಲ್ಲಿ ಭಕ್ತಿಗೆ ಆದ್ಯತೆ .ಭಕ್ತಿಯಿಂದ ಕುಳಿತು ಶ್ರೀಧರರ ಮುಂದೆ ನಮ್ಮ ಕಷ್ಟಗಳನ್ನು ಮನಸ್ಸಿನಲ್ಲಿ ಹೇಳಿಕೊಂಡರೆ ಎಷ್ಟೇ ಕಷ್ಟದ ಪರಿಸ್ಥಿತಿ ಕೂಡ ಬಗೆಹರಿಯುತ್ತದೆ ಎಂಬ ನಂಬಿಕೆ ಇಲ್ಲಿಗೆ ಬರುವ ಭಕ್ತಾಧಿಗಳಲ್ಲಿ ಇದೆ .ಎಷ್ಟೋ ಕಷ್ಟಗಳು ನಿವಾರಣೆ ಸಹ ಆಗಿದೆ ಎಂಬುವುದು ಶ್ರೀಧರರ ಪವಾಡಕ್ಕೆ ಸಾಕ್ಷಿ . ಶ್ರೀ ಕ್ಷೇತ್ರದಲ್ಲಿ ನೊಂದ ಮನಸ್ಸಿಗೆ ನೆಮ್ಮದಿ ಅಂತೂ ಸಿಕ್ಕೆ ಸಿಗುತ್ತದೆ . ಶ್ರೀಧರರ ಕ್ಷೇತ್ರದಲ್ಲಿ ಕಣ್ಣಿಗೆ ಕಾಣದಿದ್ದರೂ ಅವರ ಪವಾಡಗಳು ನಡೆಯುತ್ತಲೇ ಇದೆ. ಇಹಲೋಕ ತ್ಯಜಿಸಿದರು ಅವರ ಶಕ್ತಿ ಅಪಾರವಾಗಿ ಭಕ್ತರನ್ನು ಕಾಯುತ್ತಿದೆ. ಇಂದಿಗೂ ಹಲವು ಭಕ್ತರಿಗೆ ಅವರ ಚಲನವಲನಗಳು ಗೋಚರಿಸುತ್ತದೆ 
ಎಂದು ಹೇಳಲಾಗುತ್ತದೆ. ವರದಹಳ್ಳಿಗೆ ಭಕ್ತಿಯಿಂದ ಬಂದವರು ವರವನ್ನು ಪಡೆಯುತ್ತಾರೆ ಎಂಬುವುದು ಇವರ ದೈವಿ ಶಕ್ತಿಯ ಪವಾಡದಿಂದ ತಿಳಿಯುತ್ತದೆ. ಶ್ರೀ ಕ್ಷೇತ್ರದಲ್ಲಿ ಗುರುಕುಲ ಪದ್ಧತಿಯಲ್ಲಿ ಆಧ್ಯಾತ್ಮಿಕ ಶಿಕ್ಷಣ ನೀಡಲಾಗುತ್ತಿದೆ . ಎಷ್ಟೋ ಹೇಳಿದರು ಶ್ರೀ ಶ್ರೀಧರ ಸ್ವಾಮಿಗಳನ್ನು ಪದಗಳಿಂದ ಬಣ್ಣಿಸಲು ಸಾಧ್ಯವಿಲ್ಲ . ಇಂತಹ ವರದಹಳ್ಳಿ ಶ್ರೀ ಗುರು ಶ್ರೀಧರರ ದರ್ಶನ ಪಡೆಯಲು ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ  ಭಕ್ತಿಯಿಂದ  ಆಗಮಿಸಿ ಶ್ರೀಧರ ಸ್ವಾಮಿಗಳ ದರ್ಶನ ಪಡೆದು  ಕಷ್ಟಗಳನ್ನು ದೂರ ಮಾಡಿಕೊಳ್ಳುತ್ತಾರೆ .  
ಕೊರೊನ ನಿಯಮವನ್ನು ಹೊರತುಪಡಿಸಿ ಭಕ್ತಾದಿಗಳಿಗೆ ಶ್ರೀಧರಾಶ್ರಮದಲ್ಲಿ ಊಟದ ವ್ಯವಸ್ಥೆ ಮತ್ತು ವಸತಿ ಸೌಕರ್ಯ ಇದೆ.
 
ವರದಹಳ್ಳಿಯ ಹತ್ತಿರದಲ್ಲಿ ಇರುವ ಭಕ್ತಿಕೇಂದ್ರಗಳು ಹಾಗೂ ಪ್ರೇಕ್ಷಣೀಯ ಸ್ಥಳಗಳೆಂದರೆ
 
ಇಕ್ಕೇರಿಯ ಅಘೋರೇಶ್ವರ ದೇವಾಲಯ . ವರದಮೂಲ . ಸಿಗಂಧೂರು ಚೌಡೇಶ್ವರಿ ಅಮ್ಮನವರ ದೇವಾಲಯ. ಜೋಗ್ ಜಲಪಾತ.
 
 
ವರದಹಳ್ಳಿ ಶ್ರೀಧರ ಆಶ್ರಮದ ವಿಳಾಸ
 
ವರದಹಳ್ಳಿ
ಸಾಗರ ತಾಲ್ಲೂಕು
ಶಿವಮೊಗ್ಗ ಜಿಲ್ಲೆ
 
ಶ್ರೀ ಕ್ಷೇತ್ರಕ್ಕೆ ಹೋಗುವ ಮಾರ್ಗ
ಸಾಗರದಿಂದ ಕೇವಲ 7 ಕಿಮೀ ದೂರದಲ್ಲಿ ಇದೆ . ಸಾಗರದಿಂದ ಬಸ್ ಹಾಗೂ ಆಟೋ ವ್ಯವಸ್ಥೆಯಲ್ಲಿ ಶ್ರೀ ಕ್ಷೇತ್ರಕ್ಕೆ ಹೋಗಬಹುದು .ಹಾಗೆಯೇ ಇಕ್ಕೇರಿಯ ಮೂಲಕವು ಶ್ರೀಧರ ಆಶ್ರಮಕ್ಕೆ ಹೋಗಬಹುದು.
 

 
  
 
✒
-ಹರೀಶ್ ನಾರ್ವೆ
 

No comments:

Post a Comment