BhandaryVarthe Team

BhandaryVarthe Team
Bhandary Varthe Team

Wednesday 28 July 2021

ಮಂಗಳೂರಿನ ಗೋರಿಗುಡ್ಡೆಯ ದಿವಂಗತ ನಾರಾಯಣ ಭಂಡಾರಿಯವರಿಗೆ ಮೊದಲನೇ ವರ್ಷದ ಭಾವಪೂರ್ಣ ಶ್ರದ್ಧಾಂಜಲಿ

 ಮಂಗಳೂರಿನ ದಿವಂಗತ ಗೋರಿಗುಡ್ಡೆ ನಾರಾಯಣ ಭಂಡಾರಿ ಯವರು ವಿಧಿವಶರಾಗಿ ಇಂದಿಗೆ ಒಂದು ವರ್ಷ.ಭಾರತೀಯ ಸೇನೆಯಲ್ಲಿ ಸೇವೆಗೈದು ನಿವೃತ್ತರಾಗಿದ್ದ ದಿವಂಗತ ನಾರಾಯಣ ಭಂಡಾರಿಯವರು ಆ ಕಾಲದಲ್ಲಿಯೇ ಬಸ್ , ಲಾರಿ ಮುಂತಾದ ಸಾರಿಗೆ ಯ ಮಾಲಕರಾಗಿದ್ದರು.

 


ಈ ಸಂದರ್ಭದಲ್ಲಿ ಧರ್ಮಪತ್ನಿ ಸುಶೀಲ, ಮಕ್ಕಳು, ಸೊಸೆಯಂದಿರು , ಮೊಮ್ಮಕ್ಕಳು  ಮೃತರ ಆತ್ಮಕ್ಕೆ ಚಿರಶಾಂತಿ ಬಯಸುತ್ತಿದ್ದಾರೆ.

ಭಂಡಾರಿ ವಾರ್ತೆ

Tuesday 27 July 2021

ಒಮ್ಮೆ ಭೇಟಿ ಕೊಡಲೇಬೇಕಾದ ವರದಹಳ್ಳಿ ಭಗವಾನ್ ಶ್ರೀ ಶ್ರೀಧರ ಸ್ವಾಮಿಗಳ ಕ್ಷೇತ್ರ- -ಹರೀಶ್ ನಾರ್ವೆ

 ಹಾರಾಷ್ಟ್ರದ ಒಂದು ಹಳ್ಳಿಯಲ್ಲಿ 7 ಡಿಸೆಂಬರ್ 1908 ರಂದು ಶ್ರೀಧರ ಎನ್ನುವ ಮಹಾಪುರುಷನ ಜನನ ಆಗುತ್ತದೆ . ಆಧ್ಯಾತ್ಮವನ್ನು ಹುಡುಕಿಕೊಂಡು ದೇಶ ಸಂಚಾರ ಆರಂಭಿಸಿದ ಶ್ರೀಧರರಿಗೆ ಗುರುಗಳಾಗಿ ಸಿಕ್ಕಿದ್ದು ಶ್ರೀ ಸಮರ್ಥ ರಾಮದಾಸರು ಇವರಿಂದ 1942 ರಲ್ಲಿ ಸನ್ಯಾಸ ದೀಕ್ಷೆ ಸ್ವೀಕರಿಸಿ ಮತ್ತೆ ದೇಶ ಸಂಚಾರದಲ್ಲಿ ತೊಡಗಿದರು .ಹೀಗೆ ಹೋಗುವಾಗ ಸುಂದರ ಮಲೆನಾಡಿನ ಪ್ರಶಾಂತ ವಾತಾವರಣವಾದ ಸಾಗರದ ಸಮೀಪದ ವರದಹಳ್ಳಿ ಇವರನ್ನು ಕೈ ಬೀಸಿ ಕರೆದು ಇವರನ್ನು ಇಲ್ಲಿಯೇ ನೆಲೆಸುವಂತೆ ಮಾಡಿತು .

ಶ್ರೀ ಶ್ರೀಧರರು ಇಲ್ಲಿ ನೆಲೆನಿಂತ ಮೇಲೆ ಅಲ್ಲಿನ ಪುಣ್ಯ ಭೂಮಿ ಒಂದು ಶಕ್ತಿ ಮತ್ತು ಭಕ್ತಿ ಕೇಂದ್ರವಾಗಿ ಮಾರ್ಪಟ್ಟಿತು .ಶ್ರೀ ಶ್ರೀಧರರು 1963ರ ಚಾತುರ್ಮಾಸದಲ್ಲಿ ವಿಜಯದಶಮಿಯ ಶುಭ ಮುಹೂರ್ತದಲ್ಲಿ ಧರ್ಮಧ್ವಜವನ್ನು ಸ್ಥಾಪನೆ ಮಾಡಿದರು .ತಮ್ಮ ಆಶ್ರಮಕ್ಕೆ ಶ್ರೀ ಶ್ರೀಧರಾಶ್ರಮ ಎಂದು ನಾಮಕರಣ ಮಾಡಿದರು . ನಂತರ ಅದೆಷ್ಟೋ ಭಕ್ತರ ಕಷ್ಟಗಳನ್ನು ನಿವಾರಿಸಿ ಪವಾಡಗಳನ್ನು ಮಾಡಿದ್ದರು .ಭಕ್ತರಿಗೆ ಭೂಮಿಯ ಮೇಲಿನ ದೇವರಾಗಿ ಕಣ್ಣಿಗೆ ಕಾಣುತ್ತಿದ್ದರು ಇಂತಹ ಮಹಾನ್ ಶಕ್ತಿ ಶ್ರೀ ಶ್ರೀಧರರು .ಇವರು 19 - o4-1972 ರಂದು ಧ್ಯಾನಾಸಕ್ತರಾಗಿ ದೇಹತ್ಯಾಗ ಮಾಡಿದರು .ಇಂತಹ ದೈವಿ ಸ್ವರೂಪ ಶ್ರೀಧರರ ಪವಾಡಗಳು ಇಂದಿಗೂ ನಡೆಯುತಿದೆ ‌. 
ವರದಹಳ್ಳಿ (ವರದಪುರ) ಹೆಸರೇ ಹೇಳುವಂತೆ ಜೀವನದ ಕಷ್ಟದಲ್ಲಿ ಬರುವ ಶ್ರೀಧರ ಸ್ವಾಮಿಗಳ ಭಕ್ತರಿಗೆ ವರ ನೀಡುವ ಒಂದು ಮಹಾನ್ ಚೇತನದ ಸ್ಥಳ .  ಜೀವನದಲ್ಲಿ ನೊಂದು ಬೆಂದು ಬರುವ ಎಷ್ಟೋ ಜನರಿಗೆ ಶ್ರೀ ಶ್ರೀಧರ ಸ್ವಾಮಿಗಳ ಅನುಗ್ರಹದಿಂದ ಮತ್ತೆ ಹೊಸ ಜೀವನ ದೊರೆತಿದೆ . ಆಡಂಬರದ ಶಕ್ತಿಯ ಭಕ್ತಿಕ್ಕಿಂತ ಮನಸ್ಸಿನ ಮುಗ್ಧ ಭಕ್ತಿಗೆ ದೇವನ ಅನುಗ್ರಹ ದೊರಕುತ್ತದೆ ಎಂಬ ಮಾತು ಶ್ರೀ ವರದಹಳ್ಳಿಯಲ್ಲಿ ಸತ್ಯ ಎಂದು ಎನಿಸುತ್ತದೆ. ಮಾತು ಬರದ ಎಷ್ಟೋ ಜನರಿಗೆ ಮಾತು ಬರಿಸಿದ ಜೀವಂತ ಉದಾಹರಣೆ ಶ್ರೀ ಕ್ಷೇತ್ರದಲ್ಲಿ ದೊರಕುತ್ತದೆ. ಶ್ರೀಧರರ ಪುಣ್ಯಕ್ಷೇತ್ರದಲ್ಲಿ ಭಕ್ತರ ಪಾಪಗಳನ್ನು ತೊಳೆದು ಅಮೃತದಂತ ತೀರ್ಥ ಸಿಗುತ್ತದೆ ಅದು ಶ್ರೀ ಶ್ರೀಧರ ತೀರ್ಥ .
ಈ ತೀರ್ಥದಲ್ಲಿ ಮಿಂದು ಗುಡ್ಡದ ತುದಿಯನ್ನು ಹತ್ತಿದರೆ ಸಿಗುವುದು ಶ್ರೀ ಶ್ರೀಧರ ಆಶ್ರಮ . ಶ್ರೀಧರರು ಧ್ಯಾನಾಸಕ್ತರಾಗಿ ಕುಳಿತ ಅವರ ಸ್ಥಳ ಮತ್ತು ಅವರ ಪಾದಕೆಯೇ ಪವಾಡಗಳ ತಾಣ ಇಲ್ಲಿ ಭಕ್ತಿಗೆ ಆದ್ಯತೆ .ಭಕ್ತಿಯಿಂದ ಕುಳಿತು ಶ್ರೀಧರರ ಮುಂದೆ ನಮ್ಮ ಕಷ್ಟಗಳನ್ನು ಮನಸ್ಸಿನಲ್ಲಿ ಹೇಳಿಕೊಂಡರೆ ಎಷ್ಟೇ ಕಷ್ಟದ ಪರಿಸ್ಥಿತಿ ಕೂಡ ಬಗೆಹರಿಯುತ್ತದೆ ಎಂಬ ನಂಬಿಕೆ ಇಲ್ಲಿಗೆ ಬರುವ ಭಕ್ತಾಧಿಗಳಲ್ಲಿ ಇದೆ .ಎಷ್ಟೋ ಕಷ್ಟಗಳು ನಿವಾರಣೆ ಸಹ ಆಗಿದೆ ಎಂಬುವುದು ಶ್ರೀಧರರ ಪವಾಡಕ್ಕೆ ಸಾಕ್ಷಿ . ಶ್ರೀ ಕ್ಷೇತ್ರದಲ್ಲಿ ನೊಂದ ಮನಸ್ಸಿಗೆ ನೆಮ್ಮದಿ ಅಂತೂ ಸಿಕ್ಕೆ ಸಿಗುತ್ತದೆ . ಶ್ರೀಧರರ ಕ್ಷೇತ್ರದಲ್ಲಿ ಕಣ್ಣಿಗೆ ಕಾಣದಿದ್ದರೂ ಅವರ ಪವಾಡಗಳು ನಡೆಯುತ್ತಲೇ ಇದೆ. ಇಹಲೋಕ ತ್ಯಜಿಸಿದರು ಅವರ ಶಕ್ತಿ ಅಪಾರವಾಗಿ ಭಕ್ತರನ್ನು ಕಾಯುತ್ತಿದೆ. ಇಂದಿಗೂ ಹಲವು ಭಕ್ತರಿಗೆ ಅವರ ಚಲನವಲನಗಳು ಗೋಚರಿಸುತ್ತದೆ 
ಎಂದು ಹೇಳಲಾಗುತ್ತದೆ. ವರದಹಳ್ಳಿಗೆ ಭಕ್ತಿಯಿಂದ ಬಂದವರು ವರವನ್ನು ಪಡೆಯುತ್ತಾರೆ ಎಂಬುವುದು ಇವರ ದೈವಿ ಶಕ್ತಿಯ ಪವಾಡದಿಂದ ತಿಳಿಯುತ್ತದೆ. ಶ್ರೀ ಕ್ಷೇತ್ರದಲ್ಲಿ ಗುರುಕುಲ ಪದ್ಧತಿಯಲ್ಲಿ ಆಧ್ಯಾತ್ಮಿಕ ಶಿಕ್ಷಣ ನೀಡಲಾಗುತ್ತಿದೆ . ಎಷ್ಟೋ ಹೇಳಿದರು ಶ್ರೀ ಶ್ರೀಧರ ಸ್ವಾಮಿಗಳನ್ನು ಪದಗಳಿಂದ ಬಣ್ಣಿಸಲು ಸಾಧ್ಯವಿಲ್ಲ . ಇಂತಹ ವರದಹಳ್ಳಿ ಶ್ರೀ ಗುರು ಶ್ರೀಧರರ ದರ್ಶನ ಪಡೆಯಲು ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ  ಭಕ್ತಿಯಿಂದ  ಆಗಮಿಸಿ ಶ್ರೀಧರ ಸ್ವಾಮಿಗಳ ದರ್ಶನ ಪಡೆದು  ಕಷ್ಟಗಳನ್ನು ದೂರ ಮಾಡಿಕೊಳ್ಳುತ್ತಾರೆ .  
ಕೊರೊನ ನಿಯಮವನ್ನು ಹೊರತುಪಡಿಸಿ ಭಕ್ತಾದಿಗಳಿಗೆ ಶ್ರೀಧರಾಶ್ರಮದಲ್ಲಿ ಊಟದ ವ್ಯವಸ್ಥೆ ಮತ್ತು ವಸತಿ ಸೌಕರ್ಯ ಇದೆ.
 
ವರದಹಳ್ಳಿಯ ಹತ್ತಿರದಲ್ಲಿ ಇರುವ ಭಕ್ತಿಕೇಂದ್ರಗಳು ಹಾಗೂ ಪ್ರೇಕ್ಷಣೀಯ ಸ್ಥಳಗಳೆಂದರೆ
 
ಇಕ್ಕೇರಿಯ ಅಘೋರೇಶ್ವರ ದೇವಾಲಯ . ವರದಮೂಲ . ಸಿಗಂಧೂರು ಚೌಡೇಶ್ವರಿ ಅಮ್ಮನವರ ದೇವಾಲಯ. ಜೋಗ್ ಜಲಪಾತ.
 
 
ವರದಹಳ್ಳಿ ಶ್ರೀಧರ ಆಶ್ರಮದ ವಿಳಾಸ
 
ವರದಹಳ್ಳಿ
ಸಾಗರ ತಾಲ್ಲೂಕು
ಶಿವಮೊಗ್ಗ ಜಿಲ್ಲೆ
 
ಶ್ರೀ ಕ್ಷೇತ್ರಕ್ಕೆ ಹೋಗುವ ಮಾರ್ಗ
ಸಾಗರದಿಂದ ಕೇವಲ 7 ಕಿಮೀ ದೂರದಲ್ಲಿ ಇದೆ . ಸಾಗರದಿಂದ ಬಸ್ ಹಾಗೂ ಆಟೋ ವ್ಯವಸ್ಥೆಯಲ್ಲಿ ಶ್ರೀ ಕ್ಷೇತ್ರಕ್ಕೆ ಹೋಗಬಹುದು .ಹಾಗೆಯೇ ಇಕ್ಕೇರಿಯ ಮೂಲಕವು ಶ್ರೀಧರ ಆಶ್ರಮಕ್ಕೆ ಹೋಗಬಹುದು.
 

 
  
 
✒
-ಹರೀಶ್ ನಾರ್ವೆ
 

Sunday 25 July 2021

ಆಧ್ಯಾತ್ಮಿಕತೆ ಅಂದರೆ ಮನೋವಿಜ್ಞಾನ.. ಹೆಜ್ಜೆ ಹೆಜ್ಜೆಗು ಬದಲಾಗುವ ಮನಸ್ಸು,ಮುಖವಾಡಗಳ ಸಂಪೂರ್ಣ ಅಧ್ಯಯನ..-ವೆಂಕಟೇಶ ಭಂಡಾರಿ ಕುಂದಾಪುರ

.....................................................................................................................
ಪ್ರಿಯ ಭಂಡಾರಿ ಬಂಧುಗಳೇ.. ಭಂಡಾರಿ ಸಮುದಾಯದ ಸರ್ವತೋಮುಖ ಬೆಳವಣಿಗೆ ಮತ್ತು ಅಭಿವೃದ್ಧಿಯ ಆಶಯ ಹೊತ್ತು ಹೊರಬಂದ ಭಂಡಾರಿವಾರ್ತೆ ಅಲ್ಪ ಸಮಯದಲ್ಲೇ ವಿಶ್ವದ ಮೂಲೆಮೂಲೆಯ ನೆಲಸಿರುವ ಭಂಡಾರಿ ಬಂಧುಗಳನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ..  ಅವರ ನಿರೀಕ್ಷೆಗೆ ತಕ್ಕಂತೆ ಎಲ್ಲಾ ರಂಗದ ಮೇಲೆ ಬೆಳಕು ಚೆಲ್ಲುವ ಪ್ರಯತ್ನವನ್ನು ಭಂಡಾರಿವಾರ್ತೆ ಮಾಡಲಿದೆ..  ಇದಕ್ಕೆ ಪೂರಕವಾಗಿ ಆಧ್ಯಾತ್ಮದ ಬಗ್ಗೆ ಕೂಡ ಭಂಡಾರಿವಾರ್ತೆ ಕುಡಿನೋಟ ಬೀರಲಿದೆ.. ಈ ವಿಷಯವಾಗಿ ಕಣಬ್ರಹ್ಮ ವೆಂಕಿ (ವೆಂಕಟೇಶ ಭಂಡಾರಿ ಕುಂದಾಪುರ) ತಮ್ಮ ಬರಹದ ಮೂಲಕ ಇಂದಿನಿಂದ ಆಧ್ಯಾತ್ಮದ ಅರಿವು ಮೂಡಿಸುವ ಪ್ರಯತ್ನ ಮಾಡಲಿದ್ದಾರೆ..
                                                                                                             ‘’’’’’’’’’ಸಂಪಾದಕ, ಭಂಡಾರಿವಾರ್ತೆ
................................................................................................................................. 
ವಿಶ್ವದ ಪ್ರತಿಯೊಂದು ದೇಶ, ಭೂ ಭಾಗವು ತನ್ನದೇ ವಿಶೇಷತೆಯನ್ನು ಹೊಂದಿದೆ ಅಂತೆಯೇ ನಮ್ಮ ಭಾರತ ದೇಶಕ್ಕೆ ಅಧ್ಯಾತ್ಮಿಕ ಚಿಂತನೆ ಮತ್ತು ಆಚರಣೆಯಲ್ಲಿ ವಿಶಿಷ್ಟವಾದ ಹೆಸರು, ಗೌರವವಿರುವುದು ನಮಗೆ ನಿಮಗೆಲ್ಲ ತಿಳಿದಿರುವ ವಿಷಯವೆ. ನಮ್ಮ ದೇಶದಲ್ಲಿ ಸಾವಿರಾರು ಮಹಾತ್ಮರು ಆಗಿ ಹೋಗಿದ್ದಾರೆ, ಪ್ರತಿಯೊಬ್ಬರೂ ತಮ್ಮದೇ ಸನ್ಮಾರ್ಗದಿಂದಾಗಿ ವಿಶಿಷ್ಠವಾಗಿ ಗುರುತಿಸಿಕೊಂಡಿದ್ದರೆ ಮತ್ತು ಕೊಡುಗೆ ನೀಡಿದ್ದಾರೆ.
ಆಧ್ಯಾತ್ಮ ಅಂದರೆ ಏನು? ಕೆವಲ ವೇಷಧಾರಿ ಸ್ವಾಮಿಜಿಗಳೆ? ಮಂಕು ಬೂದಿ ಎರಚುವ ಬಾಬಾಗಳೆ? ಸಂಪನ್ಮೂಲಗಳನ್ನು ಕ್ರೋಡೀಕರಿಸುವ ಮಠಮಂದಿರಗಳೇ? ನಿಜವಾದ ಅರ್ಥದಲ್ಲಿ ಆಧ್ಯಾತ್ಮ ಅಂದರೆ ಏನು, ಇದಕ್ಕೆ ಸಾಕಷ್ಟು ಮಹಾತ್ಮರು ಉತ್ತರಿಸಿದ್ದಾರಾದರೂ,ಮನಸ್ಸು ವೇಗದ ಜೀವನದ ಶೈಲಿಯಿಂದಾಗಿ ಮತ್ತೆ ಮತ್ತೆ ಗೊಡ್ಡು ಸಂಪ್ರದಾಯಗಳಿಗೆ ಅಂಟಿಕೊಂಡು ನೈಜ ಆಧ್ಯಾತ್ಮಿಕ ಚಿಂತನೆಯಿಂದ ದೂರ ಉಳಿಯುತ್ತಿದೆ.
         ಆಧ್ಯಾತ್ಮಿಕತೆ ಅಂದರೆ ಮನೋವಿಜ್ಞಾನವು ಹೌದು ಆ ನಿಟ್ಟಿನಲ್ಲಿ ಪ್ರತಿಯೊಂದು ಹೆಜ್ಜೆ ಹೆಜ್ಜೆಗು ಬದಲಾಗುವ (ತಮ್ಮದೇ) ಮನಸ್ಸುಗಳ,ಮುಖವಾಡಗಳ ಸಂಪೂರ್ಣ ಅಧ್ಯಯನವೇ ಆಧ್ಯಾತ್ಮ.
 ಇಲ್ಲಿ ನನ್ನ ಗಮನವನ್ನು ಸೆಳೆದ ಜಿಡ್ಡು ಕೃಷ್ಣಮೂರ್ತಿ ಯವರ ಪುಸ್ತಕಗಳಿಂದ ಆಯ್ದುಕೊಂಡ ಭಾಗಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳವ ಆಸೆಯಿಂದಾಗಿ ಮತ್ತು ಅವರ ಮಾತುಗಳು ವ್ಯಕ್ತಿತ್ವ ವಿಕಸನಕ್ಕೆ ಪೂರಕವು ಅದ್ದರಿಂದ ನಮ್ಮ ಸಮಾಜಕ್ಕೆ ಒಂದಿಷ್ಟು  ಜೀವನ ಪ್ರೇರಣೆಯು ಸಿಗಬಹುದೆಂಬ ಸ್ವಾರ್ಥದಿಂದ,ಹಂತ ಹಂತವಾಗಿ ಜಿಡ್ಡು ಪ್ರವಚನ ಎಂಬ ಲೇಖನದಿಂದ ಹಂಚಿಕೊಳ್ಳತ್ತೇನೆ,ಸ್ವೀಕರಿಸಿ.

ಜಿಡ್ಡು ಪ್ರವಚನ
(ಧ್ಯಾನ-1)
ಸುಮ್ಮನೆ ಕೇಳಿ ಯಾವುದರ ಮೇಲೂ ಗಮನವಿಡದೆ,ಏಕಾಗ್ರತೆ ಪ್ರಯತ್ನಪಡದೆ,ಮನಸ್ಸನ್ನು ಮೌನವಾಗಿಟ್ಟುಕೊಂಡು,ನಿಜವಾಗಿ ನಿಶ್ಛಲವಾಗಿಟ್ಟುಕೊಂಡು, ಸುಮ್ಮನೆ ಕುಳಿತಿದ್ದೀರಾ? ಆಗ ನಿಮಗೆ ಎಲ್ಲವೂ ಕೇಳಿಸುತ್ತದೆ,ಅಲ್ಲವೇ? ದೂರದ ಸದ್ದು,ಹತ್ತಿರದ ಸದ್ದು,ತತ್‌ಕ್ಷಣದಲ್ಲಿ ಆಗುವ ಸಣ್ಣಪುಟ್ಟ ಸದ್ದು ಎಲ್ಲವನ್ನೂ ಕೇಳುತ್ತೀರುತ್ತೀರಿ.ನಿಮ್ಮ ಮನಸ್ಸು ಯಾವುದೇ ಕಿರು ಕಾಲುವೆಯಲ್ಲಿ ಹರಿಯುತ್ತಿರುವುದಿಲ್ಲ.ಸುಮ್ಮನೆ ಕೇಳುತ್ತೀರತ್ತೀರಿ.ಶ್ರಮವಿಲ್ಲದೆ,ಆಯಾಸವಿಲ್ಲದೆ ಸುಮ್ಮನೆ ಕೇಳುತ್ತೀರುವಾಗ ನಿಮ್ಮೊಳಗೆ ಅಸಾಮಾನ್ಯ ಬದಲಾವಣೆ ಆಗುತ್ತಿರುವುದು ಗಮನಕ್ಕೆ ಬರುತ್ತದೆ. ನಿಮ್ಮ ಇಚ್ಛೆ ಇಲ್ಲದೆ,ನೀವು ಕೇಳದೆ,ನೀವು ಬಯಸದೆ ಬದಲಾವಣೆಯೊಂದು ಆಗುತ್ತದೆ.ಆ ಬದಲಾವಣೆಯಲ್ಲಿ ಆಗಾಧ ಚೆಲುವು,ಅಗಾಧ ಒಳನೋಟ ದೊರೆಯುತ್ತದೆ.


          ಕೇಳುವ ಕಲೆ ಸುಲಭವಲ್ಲ. ಆದರೆ ಕೇಳುವ ಕಲೆಯಿಂದ ಅಪಾರವಾದ ಚೆಲುವು,ಅಪಾರವಾದ ಅರಿವು ದೊರೆಯುತ್ತದೆ.ನಾವು ನಮ್ಮೊಳಗೆ ಬೇರೆ ಬೇರೆ ಆಳಗಳಲ್ಲಿ ನಿಂತು ಕೇಳಿಸಿಕೊಳ್ಳುತ್ತೇವೆ.ಆದರೆ ಕೇಳಿಸಿಕೊಳ್ಳುವಾಗ ನಮ್ಮ ಮನಸ್ಸಿನಲ್ಲಿ ಆಗಲೇ ರೂಪಗೊಂಡ ಯಾವುದೇ ಕಲ್ಪನೆ,ಯಾವುದೇ ದೃಷ್ಟಿಕೋನ ಸಿದ್ಧಮಾಡಿ ಇಟ್ಟುಕೊಂಡಿರುತ್ತೇವೆ.ನಾವು ಸುಮ್ಮನೆ ಕೇಳಿಸಿಕೊಳ್ಳುವುದೇ ಇಲ್ಲ.ಯಾವಾಗಲೂ ಆಲೋಚನೆಯ ತೆರೆ,ತೀರ್ಮಾನಗಳ ತೆರೆ ,ಪೂರ್ವಾಗ್ರಹಗಳ ತೆರೆಗಳು ಕಸಿದುಕೊಂಡಿರುತ್ತವೆ. ಕೇಳಬೇಕಾದರೆ  ನಮ್ಮೊಳಗೆ ಶಾಂತಿ ಇರಬೇಕು.ನಮಗೆ ಏನೋ ಬೇಕು,ನಮ್ಮದಾಗಬೇಕು ಎಂಬ ಜಂಜಡ ಇರಬಾರದು.ಆರಾಮವಾದ ಎಚ್ಚರ ಇರಬೇಕು. ಈ ಎಚ್ಚರದ ಆದರೂ ನಿಷ್ಕ್ರಿಯವಾದ ಸ್ಥಿತಿಯಲ್ಲಿ ಶಬ್ದಗಳ, ಮಾತಿನ ರೂಪದಲ್ಲಿರುವ ತೀರ್ಮಾನಗಳ  ಆಚೆಗೂ ಇರುವುದು ನಮಗೆ ಕೇಳಿಸುತ್ತದೆ.ಪದಗಳು ಗೊಂದಲ ಹುಟ್ಟಿಸುತ್ತವೆ.ಅವೇನಿದ್ದರೂ ಸಂಪರ್ಕದ ಹೊರ ಉಪಕರಣಗಳು.ನಿಜವಾಗಿ ಕೇಳಿಸಿಕೊಂಡಾಗ ಮಾತ್ರ ಶಬ್ದಗಳ ಸಂಗೀತವನ್ನು ಆಲಿಸುತ್ತೇವೆ‌.
ನೀವೀಗ ನನ್ನನ್ನು ಕೇಳಿಸಿಕೊಳ್ಳುತ್ತಿದ್ದೀರಿ.ಗಮನಕೊಡಬೇಕೆಂಬ ಯತ್ನವಿಲ್ಲದೆ,ಸುಮ್ಮನೆ ಕೇಳುತ್ತೀರಿ.ನೀವು ಕೇಳುತ್ತಿತುವುದು ಸತ್ಯವಾಗಿದ್ದರೆ ನಿಮ್ಮೊಳಗೆ ಅಗಾಧವಾದ ಬದಲಾವಣೆಯಾಗುತ್ತಿದೆ‌.ಯೋಚಿಸಿ ಉಂಟುಮಾಡಿಕೊಂಡ ಬದಲಾವಣೆಯಲ್ಲ,ಬಯಸಿ ಆದ ಬದಲಾವಣೆಯಲ್ಲ,ಅದೊಂದು ಸಂಪೂರ್ಣ ಪಲ್ಲಟ.ಕೇವಲ ನಾನು ಹೇಳುತ್ತಿರುವುದನ್ನು ಮಾತ್ರವಲ್ಲ ಎಲ್ಲವನ್ನೂ ಹೀಗೆಯೇ ಕೇಳಿಸುಕೊಳ್ಳಬೇಕು.ಬೇರೆ ಜನರ ಮಾತು,ಹಕ್ಕಿಗಳ ಸದ್ದು, ರೈಲಿನ ಸಿಳ್ಳೆ,ಅಲ್ಲಿ ಹೋಗುತ್ತಿರುವ ಬಸ್ಸಿನ ಶಬ್ದ-ಎಲ್ಲವನ್ನೂ.ಎಲ್ಲವನ್ನೂ ಹೆಚ್ಚು ಹೆಚ್ಚು ಕೇಳಿಸಿಕೊಂಡಾಗ ಮಾತ್ರ ಅಗಾಧವಾದ ಮೌನ ಇರುತ್ತದೆ.ಸದ್ದು ಆ ಮೌನವನ್ನು ಕಲಕುವುದಿಲ್ಲ‌.
ಆಡುವಾತನ ಮಾತುಗಳನ್ನು ಕೇಳಿಸಿಕೊಳ್ಳುತ್ತಾ ನಿಮ್ಮನ್ನೇ ಕೇಳಿಸಿಕೊಳ್ಳಲು ಸಾಧ್ಯಾವಾದರೆ,ಹಾಗೆ ಕೇಳುವ ಮುಖಾಂತರ ಸ್ಪಷ್ಟತೆ, ಸೂಕ್ಷ್ಮತೆಗಳು ಹುಟ್ಟುತ್ತವೆ.ಹಾಗೆ ಕೇಳುವುದರಿಂದ ಮನಸ್ಸು ಆರೋಗ್ಯವಾಗಿ,ದೃಢವಾಗಿ ಇರುತ್ತದೆ. ವಿಧೇಯತೆಯೂ ಇಲ್ಲದೆ‌,ವಿರೋಧವೊ ಇಲ್ಲದೆ,ಮನಸ್ಸು ಜೀವಂತವಾಗುತ್ತದೆ,ತೀವ್ರವಾಗುತ್ತದೆ.ಅಂಥ ಮನುಷ್ಯ ಜೀವಿ ಮಾತ್ರ ಹೊಸ ತಲೆಮಾರನ್ನು,ಹೊಸ ಜಗತ್ತನ್ನು ಕಟ್ಟಬಲ್ಲ.


 (ಮುಂದುವರೆಯುವುದು)
........................................................
ಮೂಲ: ಜಿಡ್ಡು ಕೃಷ್ಣಮೂರ್ತಿ ಪುಸ್ತಕಗಳು
: ಕಣಬ್ರಹ್ಮವೆಂಕಿ(ವೆಂಕಟೇಶ ಭಂಡಾರಿ), ಭಂಡಾರಿ ವಾರ್ತೆ

Saturday 24 July 2021

ಗುರುಪೂರ್ಣಿಮೆಯ ಮಹತ್ವ -ಕುಶಲ್ ಭಂಡಾರಿ , ಬೆಂಗಳೂರು

 ಆಷಾಢ ಶುದ್ದ ಪೂರ್ಣಿಮೆಯ ದಿನವಾದ ಇಂದು ಸಮಸ್ತ ಪ್ರಪಂಚಕ್ಕೆ ಪರಮೋಚ್ಚ ಸಂದೇಶ ನೀಡಿದ ವ್ಯಾಸ ಮಹರ್ಷಿಗಳನ್ನು ಸ್ಮರಿಸುವ ದಿನ. ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಗುರುವಿಗೆ ಪ್ರಥಮ ಸ್ಥಾನವಿದೆ. ಗುರುಗಳು ಜನರಲ್ಲಿ ಆವರಿಸಿರುವ ಅಜ್ಞಾನ, ಅಂಧಕಾರವನ್ನು ಹೋಗಲಾಡಿಸಿ ಜ್ಞಾನದ ಬೆಳಕನ್ನು ನೀಡುತ್ತಾರೆ. ನವಗ್ರಹಗಳ ಪೈಕಿ ಗುರು ಬೃಹಸ್ಪತಿಯೇ ದೊಡ್ಡ ಗ್ರಹವಾಗಿದೆ. ಗುರುವಿಗೆ ನಮಃ. ಗುರುವಿನಷ್ಟು ಹಿರಿಯದಾದುದು ಬೇರಾವುದೂ ಇಲ್ಲ. ಮಾತೃದೇವೋ ಭವ, ಪಿತೃ ದೇವೋ ಭವ, ಆಚಾರ್ಯ ದೇವೋ ಭವ ಎನ್ನುವಂತೆ ಆಚಾರ್ಯರನ್ನು ದೇವರಿಗೆ ಸಮಾನವೆಂದೇ ಪರಿಗಣಿಸಲಾಗಿದೆ.

ಗುರು ಎನ್ನುವ ಎರಡು ಪದಗಳೇ ಅತ್ಯುತ್ತಮ ಅರ್ಥವನ್ನು ನೀಡುತ್ತವೆ. ಗು ಮತ್ತು ರು ಎನ್ನುವ ಮೂಲ ಪದಗಳನ್ನು ಹೊಂದಿದೆ. ಸಂಸ್ಕೃತ ಭಾಷೆಯಲ್ಲಿ "ಗು" ಅಂದರೆ ಅಂಧಕಾರ ಅಥವಾ ಅಜ್ಞಾನ. "ರು" ಅಂದರೆ ಕಳೆಯುವ ಅಥವಾ ದೂರ ಮಾಡುವ ಎಂದರ್ಥ.

ಅದಕ್ಕೆ ಗುರು ಅಂದರೆ ಅಂಧಕಾರ ಅಥವಾ ಅಜ್ಞಾನವನ್ನು ದೂರ ಮಾಡುವವರು ಎಂದರ್ಥ. ಬಹುತೇಕ ಜನರು ಗುರುವನ್ನು ತಮ್ಮ ಜೀವನದ ಅವಿಭಾಜ್ಯ ಅಂಗವಾಗಿ ಪರಿಗಣಿಸುತ್ತಾರೆ. ನಮ್ಮ ಬುದ್ಧಿಯಲ್ಲಿ ಇದ್ದ ಕತ್ತಲು ಅಥವಾ ಅಜ್ಞಾನವನ್ನು ಓಡಿಸಿ, ಜ್ಞಾನ ಎನ್ನುವ ಬೆಳಕನ್ನು ನೀಡುವವನೇ ಗುರು. ಅಂತಹ ಗುರುವಿಗೆ ಗುಲಾಮನಾದರೆ ಸಾಕಷ್ಟು ವಿದ್ಯೆ ಮತ್ತು ಜ್ಞಾನ ದೊರೆಯುವುದು. ಜೀವನದಲ್ಲಿ ಉತ್ತಮ ಸ್ಥಾನವನ್ನು ಪಡೆದುಕೊಳ್ಳಲು ಸಾಧ್ಯವಾಗುವುದು ಎಂದು ಹೇಳಲಾಗುತ್ತದೆ.

ಪುರಂದರದಾಸರು ಹೇಳಿದೆ ಹಾಗೆ " ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣಾ ಮುಕುತಿ" ಯಾವುದೇ ವಿದ್ಯೆ ಫಲಪ್ರದವಾಗಬೇಕಾದರೆ ಗುರುಕೃಪೆ , ಆಶೀರ್ವಾದ ಬೇಕೇ ಬೇಕು. ಯಾಕೆಂದರೆ ಗುರುಕೊಟ್ಟ ವಿದ್ಯೆಯೇ ಸಂಪತ್ತು, ಗುರು ನೀಡುವ ಸಂಪತ್ತು ಕಳೆದುಹೋಗದು. ಗುರುಗಳು ಜನರಿಗೆ ಮಾತ್ರವಲ್ಲದೆ ದೇವತೆಗಳಿಗೂ ಇದ್ದರು ಎನ್ನುವುದನ್ನು ಪುರಾಣಗಳಿಂದ ಓದಿದ್ದೇವೆ. ಶ್ರೀರಾಮಚಂದ್ರನಿಗೆ ವಸಿಷ್ಠ ಮಹರ್ಷಿಗಳಿದ್ದಂತೆ ಎಲ್ಲಾ ರಾಜ ಮಹಾರಾಜರಿಗೂ ರಾಜಗುರುಗಳಿದ್ದರು.

ಜನರಿಗೆ ವಿದ್ಯೆ ಮತ್ತು ಜ್ಞಾನದ ಬೆಳಕನ್ನು ನೀಡಿ ಮನಸ್ಸನ್ನು ಶುದ್ದಗೊಳಿಸಿ ಉತ್ತಮ ಮಾರ್ಗ ತೋರುವ ಗುರುಗಳನ್ನು ಶ್ರದ್ದಾ ಭಕ್ತಿಯಿಂದ ಗೌರವಿಸುವ ದಿನವಾದ ಇಂದು ಶಿಷ್ಯರೆಲ್ಲಾ ಸೇರಿ ತಮ್ಮ ಗುರುಗಳನ್ನು ಪೂಜಿಸಿ ಗೌರವಿಸಿ ಭಕ್ತಿ ಸಮರ್ಪಿಸುವುದು ಭಾರತೀಯ ಪರಂಪರೆಯ ಅವಿಭಾಜ್ಯ ಅಂಗ.ನೀವು ನಿಮ್ಮ ಗುರುಗಳಿಗೆ 'ಗುರುವಂದನೆ' ಸಲ್ಲಿಸಿ.

-ಕುಶಲ್ ಭಂಡಾರಿ , ಬೆಂಗಳೂರು

ಬೊಟ್ಯಾಡಿ ದಿವಂಗತ ರಾಮಣ್ಣ ಭಂಡಾರಿ ಯವರ ಧರ್ಮಪತ್ನಿ ಶ್ರೀಮತಿ ಲೀಲಾ ಭಂಡಾರಿ ವಿಧಿವಶ

 ಬೊಟ್ಯಾಡಿ ದಿವಂಗತ ರಾಮಣ್ಣ ಭಂಡಾರಿ ಯವರ ಧರ್ಮಪತ್ನಿ ಶ್ರೀಮತಿ ಲೀಲಾ ಭಂಡಾರಿಯವರು ಅಲ್ಪಕಾಲದ ಅಸೌಖ್ಯದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಇಂದು ಬೆಳಿಗ್ಗೆ 5.45 ರ ಸುಮಾರಿಗೆ ವಿಧಿವಶರಾದರು. ಅವರಿಗೆ ಸುಮಾರು 65 ವರ್ಷ ವಯಸ್ಸಾಗಿತ್ತು.


ದಿವಂಗತರು ಮೂವರು ಮಕ್ಕಳಾದ ಸೌಮ್ಯ, ರಚನಾ ಮತ್ತು ಕಿರಣ್ , ಅಳಿಯಂದಿರು,ಸೊಸೆ ಮತ್ತು ಮೊಮ್ಮಕ್ಕಳು , ಅಪಾರ ಬಂಧುವರ್ಗವನ್ನು ಅಗಲಿದ್ದಾರೆ.

ಮೃತರ ಆತ್ಮಕ್ಕೆ ಭಗವಂತ ಚಿರಶಾಂತಿ ಕರುಣಿಸಲಿ , ಕುಟುಂಬಕ್ಕೆ ಅವರ ಅಗಲಿಕೆಯ ಶಕ್ತಿಯನ್ನು ಭರಿಸುವ ಶಕ್ತಿಯನ್ನು ನೀಡಲಿ ಎಂದು ಭಂಡಾರಿ ಕುಟುಂಬದ ಮನೆಮನದ ಮಾತು ಭಂಡಾರಿ ವಾರ್ತೆ ಪ್ರಾರ್ಥಿಸುತ್ತದೆ.

-ಭಂಡಾರಿ ವಾರ್ತೆ

ಭಂಡಾರಿ ಸಮಾಜ ಸಂಘ ಬೆಂಗಳೂರು ವಲಯದ ಮಾಜೀ ಕೋಶಾಧಿಕಾರಿ ಉಡುಪಿ ಕಲ್ಯಾಣಪುರ ಗೋಪಾಲಕೃಷ್ಣ ಕೆ ವಿಧಿವಶ

  ಭಂಡಾರಿ ಸಮಾಜ ಸಂಘ ಬೆಂಗಳೂರು ವಲಯದ ಮಾಜೀ ಕೋಶಾಧಿಕಾರಿ ಉಡುಪಿ ಕಲ್ಯಾಣಪುರ ಗೋಪಾಲಕೃಷ್ಣ. ಕೆ ಅಲ್ಪ ಕಾಲದ ಅಸೌಖ್ಯದಿಂದ ತಾರೀಕು 24 ಜುಲೈ 2021 ರ ಶನಿವಾರ ಮುಂಜಾನೆ 3 ಗಂಟೆಗೆ ಬೈಕಾಡಿಯ ತಮ್ಮ ಮನೆಯಲ್ಲಿ ಕೊನೆಯುಸಿರೆಳೆದರು. ಅವರಿಗೆ ಸುಮಾರು 71 ವರ್ಷ ವಯಸ್ಸಾಗಿತ್ತು.



ದಿವಂಗತರು ಪತ್ನಿ ಬಿ ಶಾರದ, ಮೂವರು ಮಕ್ಕಳಾದ ಶ್ರೀಮತಿ ಮೀರಾ , ಶ್ರೀಮತಿ ತಾರಾ ರಾಘವೇಂದ್ರ, ಶ್ರೀಮತಿ ವಾಣಿ ಸಚಿನ್ ಮತ್ತು ಮೊಮ್ಮಕ್ಕಳು ಹಾಗೂ ಓರ್ವ ಸಹೋದರನನ್ನು ಅಗಲಿದ್ದಾರೆ .

ಬೆಂಗಳೂರಿನ ಪ್ರಸಿದ್ಧ ಸಂಸ್ಥೆಯಾದ ಮೈಕೋ ಬಾಷ್ ನಲ್ಲಿ ದೀರ್ಘ ಕಾಲ ಸೇವೆ ಸಲ್ಲಿಸಿರುವ ಶ್ರೀ ಗೋಪಾಲಕೃಷ್ಣರವರು 2008 ರ ಮಾರ್ಚ್ ನಲ್ಲಿ ನಿವೃತ್ತಿ ಹೊಂದಿದರು.

ಸಮಾಜ ಸೇವೆಯಲ್ಲಿ ಒಲವು ಹೊಂದಿದ್ದ ಗೋಪಾಲಕೃಷ್ಣರವರು ಭಂಡಾರಿ ಸಮಾಜ ಸಂಘ ಬೆಂಗಳೂರು ವಲಯದಲ್ಲಿ 2008 ರಿಂದ 2010 ರ ವರೆಗೆ ಕೋಶಾಧಿಕಾರಿಯಾಗಿ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿದ್ದಾರೆ. ಬೆಂಗಳೂರು ಭಂಡಾರಿ ಸಮಾಜ ಸಂಘದ ಉಸ್ತುವಾರಿಯಲ್ಲಿ 2010 ರಲ್ಲಿ ನಡೆದ ಕಚ್ಚೂರು ಶ್ರೀ ನಾಗೇಶ್ವರ ದೇವಸ್ಥಾನದ ಉತ್ಸವದ ಸಂದರ್ಭದಲ್ಲಿ ಕೋಶಾಧಿಕಾರಿಯಾಗಿ ಅತ್ಯಂತ ಪಾರದರ್ಶಕತೆ ಮತ್ತು ಪ್ರಾಮಾಣಿಕತೆಯಿಂದ ಕೆಲಸ ಮಾಡಿ ಉತ್ಸವ ಯಶಸ್ವಿಯಾಗಿ ನಡೆಯುವಲ್ಲಿ ಶ್ರಮ ವಹಿಸಿದ್ದರು.

ಅತ್ಯಂತ ಸೌಮ್ಯ, ಸರಳ ಸ್ವಭಾವದ ವ್ಯಕ್ತಿಯಾಗಿದ್ದ ಗೋಪಾಲಕೃಷ್ಣರವರು ಯಾವುದೇ ವ್ಯಕ್ತಿಯೊಂದಿಗೆ ಬಹಳ ಬೇಗ ಹೊಂದಿಕೊಳ್ಳುತ್ತಿದ್ದರು.

ಅವರ ಆತ್ಮಕ್ಕೆ ಚಿರಶಾಂತಿ ದೊರಕಲಿ , ಕುಟುಂಬಕ್ಕೆ ಅವರ ಅಗಲಿಕೆಯ ದುಃಖವನ್ನು ಭರಿಸುವ ಶಕ್ತಿಯನ್ನು ಭಗವಂತ ಕರುಣಿಸಲೆಂದು ಭಂಡಾರಿ ಕುಟುಂಬದ ಮನೆ ಮನದ ಮಾತು ಭಂಡಾರಿ ವಾರ್ತೆ ಈ ಸಂದರ್ಭದಲ್ಲಿ ಪ್ರಾರ್ಥಿಸುತ್ತದೆ .

-ಭಂಡಾರಿ ವಾರ್ತೆ

ಭಂಡಾರಿ ಸಮಾಜ ಸಂಘ ಬೆಂಗಳೂರು ವಲಯದ ಮಾಜೀ ಕೋಶಾಧಿಕಾರಿ ಉಡುಪಿ ಕಲ್ಯಾಣಪುರ ಗೋಪಾಲಕೃಷ್ಣ ಕೆ ವಿಧಿವಶ

  ಭಂಡಾರಿ ಸಮಾಜ ಸಂಘ ಬೆಂಗಳೂರು ವಲಯದ ಮಾಜೀ ಕೋಶಾಧಿಕಾರಿ ಉಡುಪಿ ಕಲ್ಯಾಣಪುರ ಗೋಪಾಲಕೃಷ್ಣ. ಕೆ ಅಲ್ಪ ಕಾಲದ ಅಸೌಖ್ಯದಿಂದ ತಾರೀಕು 24 ಜುಲೈ 2021 ರ ಶನಿವಾರ ಮುಂಜಾನೆ 3 ಗಂಟೆಗೆ ಬೈಕಾಡಿಯ ತಮ್ಮ ಮನೆಯಲ್ಲಿ ಕೊನೆಯುಸಿರೆಳೆದರು. ಅವರಿಗೆ ಸುಮಾರು 71 ವರ್ಷ ವಯಸ್ಸಾಗಿತ್ತು.



ದಿವಂಗತರು ಪತ್ನಿ ಬಿ ಶಾರದ, ಮೂವರು ಮಕ್ಕಳಾದ ಶ್ರೀಮತಿ ಮೀರಾ , ಶ್ರೀಮತಿ ತಾರಾ ರಾಘವೇಂದ್ರ, ಶ್ರೀಮತಿ ವಾಣಿ ಸಚಿನ್ ಮತ್ತು ಮೊಮ್ಮಕ್ಕಳು ಹಾಗೂ ಓರ್ವ ಸಹೋದರನನ್ನು ಅಗಲಿದ್ದಾರೆ .

ಬೆಂಗಳೂರಿನ ಪ್ರಸಿದ್ಧ ಸಂಸ್ಥೆಯಾದ ಮೈಕೋ ಬಾಷ್ ನಲ್ಲಿ ದೀರ್ಘ ಕಾಲ ಸೇವೆ ಸಲ್ಲಿಸಿರುವ ಶ್ರೀ ಗೋಪಾಲಕೃಷ್ಣರವರು 2008 ರ ಮಾರ್ಚ್ ನಲ್ಲಿ ನಿವೃತ್ತಿ ಹೊಂದಿದರು.

ಸಮಾಜ ಸೇವೆಯಲ್ಲಿ ಒಲವು ಹೊಂದಿದ್ದ ಗೋಪಾಲಕೃಷ್ಣರವರು ಭಂಡಾರಿ ಸಮಾಜ ಸಂಘ ಬೆಂಗಳೂರು ವಲಯದಲ್ಲಿ 2008 ರಿಂದ 2010 ರ ವರೆಗೆ ಕೋಶಾಧಿಕಾರಿಯಾಗಿ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿದ್ದಾರೆ. ಬೆಂಗಳೂರು ಭಂಡಾರಿ ಸಮಾಜ ಸಂಘದ ಉಸ್ತುವಾರಿಯಲ್ಲಿ 2010 ರಲ್ಲಿ ನಡೆದ ಕಚ್ಚೂರು ಶ್ರೀ ನಾಗೇಶ್ವರ ದೇವಸ್ಥಾನದ ಉತ್ಸವದ ಸಂದರ್ಭದಲ್ಲಿ ಕೋಶಾಧಿಕಾರಿಯಾಗಿ ಅತ್ಯಂತ ಪಾರದರ್ಶಕತೆ ಮತ್ತು ಪ್ರಾಮಾಣಿಕತೆಯಿಂದ ಕೆಲಸ ಮಾಡಿ ಉತ್ಸವ ಯಶಸ್ವಿಯಾಗಿ ನಡೆಯುವಲ್ಲಿ ಶ್ರಮ ವಹಿಸಿದ್ದರು.

ಅತ್ಯಂತ ಸೌಮ್ಯ, ಸರಳ ಸ್ವಭಾವದ ವ್ಯಕ್ತಿಯಾಗಿದ್ದ ಗೋಪಾಲಕೃಷ್ಣರವರು ಯಾವುದೇ ವ್ಯಕ್ತಿಯೊಂದಿಗೆ ಬಹಳ ಬೇಗ ಹೊಂದಿಕೊಳ್ಳುತ್ತಿದ್ದರು.

ಅವರ ಆತ್ಮಕ್ಕೆ ಚಿರಶಾಂತಿ ದೊರಕಲಿ , ಕುಟುಂಬಕ್ಕೆ ಅವರ ಅಗಲಿಕೆಯ ದುಃಖವನ್ನು ಭರಿಸುವ ಶಕ್ತಿಯನ್ನು ಭಗವಂತ ಕರುಣಿಸಲೆಂದು ಭಂಡಾರಿ ಕುಟುಂಬದ ಮನೆ ಮನದ ಮಾತು ಭಂಡಾರಿ ವಾರ್ತೆ ಈ ಸಂದರ್ಭದಲ್ಲಿ ಪ್ರಾರ್ಥಿಸುತ್ತದೆ .

-ಭಂಡಾರಿ ವಾರ್ತೆ

Thursday 22 July 2021

ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ನಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ


 


ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ನಿಂದ ಅನುಷ್ಠಾನಗೊಳ್ಳುತ್ತಿರುವ ಸಂಜೀವಿನಿ -ಎನ್ ಆರ್ ಎಲ್ ಎಂ ಯೋಜನೆಯ ಜಿಲ್ಲಾ ಹಾಗೂ ತಾಲೂಕು ಅಭಿಯಾನ ನಿರ್ವಹಣಾ ಘಟಕಗಳಿಗೆ ಹೊರಗುತ್ತಿಗೆ ಸಂಸ್ಥೆ ಮೆ. ಪನ್ನಗ ಎಂಟರ್ಪ್ರೈಸೆಸ್ ಮೈಸೂರ್ ಮೂಲಕ ಈ ಕೆಳಗಿನ ಹುದ್ದೆಗಳನ್ನು ಭರ್ತಿ ಮಾಡಲು ದಿನಾಂಕ 14 ಜುಲೈ 2021 ರಿಂದ 29 ಜುಲೈ 2021 ರ ವರೆಗೆ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಿದೆ .

ವಯೋಮಿತಿ 45 ವರ್ಷಗಳ ಒಳಗಡೆ ಇರಬೇಕು.

ಆಯ್ಕೆ ವಿಧಾನ : ನಿಯಮಾನುಸಾರ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಲ್ಲಿ ಪ್ರಸ್ತುತಪಡಿಸಿದ ದಾಖಲೆಗಳ ಆಧಾರದಲ್ಲಿ ಹೆಚ್ಚು ಅಂಕ ಗಳಿಸಿದ 3 ಜನರನ್ನು ( ಖಾಲಿ ಹುದ್ದೆಗೆ 1:3 ರ ಅನುಪಾತದಲ್ಲಿ) ಸಂದರ್ಶನಕ್ಕೆ ಆಹ್ವಾನಿಸಲಾಗುವುದು.

ಹೆಚ್ಚಿನ ಮಾಹಿತಿಗೆ http://jobsksrlps.karnataka.gov.in/ ಕ್ಲಿಕ್ ಮಾಡಿ

ಮಾಹಿತಿ ಸಂಗ್ರಹ : ವನಿತಾ ಅರುಣ್ ಭಂಡಾರಿ ಬಜ್ಪೆ

ಕನಸಲ್ಲಿ ನಾಗದೇವರು

 ಪ್ರತಿಯೋರ್ವ ಮನುಷ್ಯನೂ ಜೀವನದಲ್ಲಿ ಒಂದಲ್ಲ ಒಂದು ದಿನ ಹಾವಿನ ಕನಸು ಕಾಣುತ್ತಾನೆ. ದೇವರಲ್ಲಿ ಅತಿ ಹೆಚ್ಚು ಭಕ್ತಿ ಉಳ್ಳವನಾಗಿದ್ದರೆ ನಾಗನನ್ನು ಆರಾಧಿಸುವವನು ಆಗಿದ್ದರೆ ಆತನು ಆಗಾಗ್ಗೆ ಹಾವಿನ ಕನಸು ಕಾಣುತ್ತಾನೆ. ಕನಸಲ್ಲಿ ವಿವಿಧ ಭಂಗಿಯಲ್ಲಿ ಹಾವನ್ನು ಕಾಣುತ್ತಾನೆ.ನಮ ಗೆ ನಿಜವಾದ ಪ್ರತ್ಯಕ್ಷ ದೇವರೆಂದರೆ ಸೂರ್ಯ. ಆದರೆ ಜೀವ ಇರುವ ಪ್ರತ್ಯಕ್ಷ ದೇವರೆಂದರೆ ಅದು ನಾಗದೇವರು ಮಾತ್ರ. ಹೆಚ್ಚಿನ ಎಲ್ಲಾ ಹಿಂದೂ ದೇವರಲ್ಲಿ ನಾಗ ದೇವರು ಇರುತ್ತಾರೆ ಎಂಬ ನಂಬಿಕೆ.ಆ ದೇವರುಗಳೇ ನಾಗದೇವರನ್ನು ಭಕ್ತರ ಕಡೆಗೆ ಕಳುಹಿಸಿರಬಹುದು.

ಕನಸಲ್ಲಿ ನಾಗನು ಹೆಡೆ ಎತ್ತಿ ನಿಂತಿರುವುದು, ಹೆಡೆ ಎತ್ತಿ ಟಾಟಾ ಮಾಡುವುದು, ದಾರಿಯಲ್ಲಿ ಸಂಚರಿಸುವುದು, ಹಾವನ್ನು ಅಡ್ಡಲಾಗಿ ದಾಟುವುದು, ಹಾವನ್ನು ಒದೆಯುವಂತೆ ಭಾಸ ಆಗುವುದು, ಹಾವು ಕಚ್ಚುವುದು, ಕಚ್ಚಿ ರಕ್ತ ಬರುವುದು, ಹಾವನ್ನು ಹುತ್ತದಲ್ಲಿ ಕಾಣುವುದು, ಹಾವನ್ನು ನಾಗಬನದಲ್ಲಿ ಕಾಣುವುದು, ಮನೆಯೊಳಗೆ ಕಾಣುವುದು, ಮಲಗಿದ್ದ ಚಾಪೆಯಲ್ಲಿ ಹಾಸಿಗೆಯಲ್ಲಿ ಉರುಳಿದಂತೆ ಕಂಡುಬರುವುದು, ಆದಿಶೇಷನಂತೆ ಹಲವು ಹೆಡೆಗಳನ್ನು ಬಿಚ್ಚಿರುವ ದೃಶ್ಯಾ, ಹಲವು ಹೆಡೆಗಳನ್ನು ತೋರುವ ನಾಗನನ್ನುನಾವು ಸ್ಪರ್ಶಿಸಿದಂತೆ ಭಾಸ ಆಗುವುದು, ಹಲವು ಹೆಡೆಗಳಿರುವ ಹಾವನ್ನು ನಾವು ಕೈಯಲ್ಲಿ ಸವರುವುದು, ಸವರುವಸಮಯದಲ್ಲಿ ನಾಗನು ತಲೆತಗ್ಗಿಸಿ ಇನ್ನಷ್ಟು ಸವರುವಂತೆಮಾಡುವುದು, ತಲೆ ತಗ್ಗಿಸಿ ಮಂದಹಾಸ ಬೀರುವುದು,ಇತ್ಯಾದಿ. ಈ ಎಲ್ಲಾ ಕನಸುಗಳು ನಾಗನೇ ಕೊಡುವ ಶುಭಸೂಚನೆಗಳು.ಇವರಿಗೆಲ್ಲಾ ದೈವ ದೇವರುಗಳ ದಯೆ, ಕರುಣೆ,ಆಶೀರ್ವಾದ ಇದೆ ಎಂದು ಭಾವಿಸ ಬೇಕು. ಇವುಗಳೆಲ್ಲನಾಗ ದೋಷಗಳಲ್ಲ. ಬದಲಾಗಿ ಪುಣ್ಯದ ಫಲಗಳು. ಈ ಕಾರಣದಿಂದಲೇ ತುಲುವರು ಆದಿ ಆರಂಭದಲ್ಲೇ ನಾಗದೇವರನ್ನು ಕಲ್ಲು ಹಾಕಿ ನಂಬಿ ಆರಾಧಿಸುತ್ತಾ ಬಂದರು.ಈಕನಸುಗಳು ಕಂಡರೆ ಭಯಪಟ್ಟು ಜೋತಿಷ್ಯರ ಹತ್ತಿರ ಓಡುವುದಲ್ಲ.

ಕನಸಲ್ಲಿ ನಾಗನ ತಲೆಯನ್ನು ಪ್ರೀತಿಯಿಂದ ಸವರುವ ಸಮಯಕ್ಕೆ ನಾಗನು ತನ್ನ ಹೆಡೆಯನ್ನು ತಗ್ಗಿಸಿ ಭಕ್ತನಲ್ಲಿಇನ್ನಷ್ಟು ಸವರುವಂತೆ ಪ್ರೇರೆಪಿಸುತ್ತಾ ಮಂದಹಾಸ ಬೀರಿದರೆ ಆ ಕನಸು ಅದ್ಭುತ. ಅಂತವರಿಗೆ ನಾಗನಿಂದ ವಿಶೇಷಶಕ್ತಿ ಒದಗಿ ಬರುತ್ತದೆ. ಅಂತವರಿಗೆ ನಾಗದೇವರು ಪ್ರೇರಣಾಶಕ್ತಿ ಒದಗಿಸುವರು.ಆತನು ಒಂದು ಊರಿನ, ಪ್ರದೇಶದ, ಸ್ಥಳೀಯ ಚರಿತ್ರೆ, ಮಹಿಮೆಗಳನ್ನು ಈವರೆಗೆ ಬಿಚ್ಚಿಡದ ಸತ್ಯ ಸಂಗತಿಗಳನ್ನು ಅರಿಯುತ್ತಾನೆ.ತನ್ನ ಹಿಂದಿನ ಜನ್ಮಗಳದೃಶ್ಯಗಳು ಅಂತವರಿಗೆ ಲಭಿಸುತ್ತದೆ. ಬಾಲ್ಯದಲ್ಲಿ ಕಂಡ ಕನಸುಗಳು ಮುಂದಿನ ವರ್ಷಗಳಲ್ಲಿ ಅದು ಸತ್ಯವಾಗಿ ಪರಿಣಮಿಸುತ್ತದೆ.ನಾವು ನಂಬಿರುವ ಬೂತೊಲು ಕೂಡಾ ಕನಸಲ್ಲಿ ಬಂದು " ನಾವು ನಿಮ್ಮ ಬೆನ್ನ ಹಿಂದೆ ಇದ್ದೇವೆ " ಎಂಬ ಮಾಹಿತಿ ಯನ್ನು ಕೊಡುತ್ತವೆ. ಕನಸಲ್ಲಿ ದೈವಗಳು ಎಂದರೆನಾಗ ಮತ್ತು ಬೂತೊಲು ಬಂದರೆ ಅವುಗಳು ಶುಭ ಫಲಗಳೇ ಆಗಿರುತ್ತದೆ.

ನಾಗನು ದೇವ ದೂತನಾಗಿರುವನು. ಈ ಧೂತನು ತನ್ನಭಕ್ತರಿಗೆ ಪ್ರತ್ಯಕ್ಷವಾಗಿ ಹಾರೈಸುವನು."ನಾನು ಸದಾ ನಿಮ್ಮಬೆನ್ನಲ್ಲೇ ಇರುವೆನು" ಎಂದು ದೃಢ ಪಡಿಸಲು ಕನಸಲ್ಲಿ ಅಥವಾ ನನಸಲ್ಲಿ ಕಾಣುವನು. ಯಾವುದೇ ದೇವರನ್ನುಕಾಣುವುದು ಸಾಧ್ಯವಿಲ್ಲ. ಅವನ ನಿಜ ಸ್ವರೂಪ ಹೇಗಿರಬಹುದು ಎಂದು ಊಹಿಸಲು ಅಸಾಧ್ಯ. ನಾವು ಕಾಣುವ ದೇವರ ಫೋಟೋಗಳು ಕಾಲ್ಪನಿಕ ರೂಪದ್ದು ಆಗಿರುತ್ತದೆ. ನಾವು ಪೃತ್ಯಕ್ಷ ಕಾಣುವ ದೇವರೆಂದು ಅರಿತು ಅಂದು ತುಲುವರು ತುಲುನಾಡ್ ಇಲ್ಲಿ ಹೊಲ ಗದ್ದೆಗಳ ನಿರ್ಮಾಣ ಮಾಡುವ ಕಾಲದಲ್ಲಿ ನಾಗನಿಗಾಗಿ ಪ್ರತ್ಯೇಕವಾಗಿ ವಿಶಾಲವಾದ ಭೂಮಿಯನ್ನು ಬಿಟ್ಟರು. ಅಲ್ಲಿ ಕಾಡು ಬೆಳೆಸಿದರು. ನಾಗನಿಗಾಗಿ ಬಿಟ್ಟ ಕಾಡು ಎಂದರು. ನಾಗ ಬನ ಎಂದು ಕರೆದರು.ಈ ಭೂಮಿಯಲ್ಲಿ ನಾಗಗಳ ವಂಶಾಭಿವೃಧ್ಧಿ ಆಗಲೆಂದು ಬಯಸಿದರು.ಸ್ವಾಭಾವಿಕವಾಗಿ, ತಸ್ಮೋಸದಿಂದ ಸತ್ತ ನಾಗಸರ್ಪ ಮರಿ ಉಚ್ಚುಗಳನ್ನು ಈ ನಾಗ ಬನದಲ್ಲಿ ದಫನ ಮಾಡಿದರು. ಕಲ್ಲು ಹಾಕಿ ನಂಬಿದರು. ನಾಗಪ್ರೇತಗಳನ್ನು ಆರಾಧಿಸುತ್ತಾ ಬಂದರು. ಆದಿ ಶೇಷನೇ ಇಡೀ ಭೂಮಿಯನ್ನು ತನ್ನ ಹೆಡೆಯಲ್ಲಿಟ್ಟು ಎಲ್ಲರನ್ನೂ ರಕ್ಷಿಸುತ್ತಾಇದ್ದಾನೆ ಎಂಬ ಹಿರಿಯರು ಹೇಳಿದ ಮಾತನ್ನು ನಂಬುತ್ತಾಬಂದರು.

ನಾಗ ದೇವರು ಭಕ್ತರಿಗೆ ತಮ್ಮ ಕುಟುಂಬದಲ್ಲಿ ಮುಂದೆ ಬರುವ ಅಶುಭ ಫಲ ಸೂಚನೆಗಳನ್ನು ಕೊಡುವರು. ಜಾಗ್ರತೆ ವಹಿಸಲು ಸೂಚಿಸುವರು. ಸಾವು,ನೋವು, ಆಘಾತ,ಅಪಘಾತಗಳ ಮುನ್ಸೂಚನೆಯನ್ನು ಕನಸಿನಲ್ಲಿ ತೋರಿಸುವರು.ಆ ಕನಸುಗಳು ಎಂದರೆ ನಾಗನು ಪೆಟ್ಟಾಗಿ ಬಿದ್ದಿರುವುದು.ಜೀವನ್ಮರಣದಲ್ಲಿ ಹೊರಳಾಡುವುದು ,ನಾಗ ಸತ್ತಿರುವುದು,ಸತ್ತ ನಾಗನನ್ನು ದಫನ ಮಾಡಲು ಅಥವಾ ಭಸ್ಮ ಮಾಡಲು ಒಯ್ಯುವ ದೃಶ್ಯ , ಸರಾಗವಾಗಿ ನಾಗನಿಗೆ ಸಂಚರಿಸಲು ಆಗದಿರುವುದು ಇತ್ಯಾದಿ. ಇವೆಲ್ಲಾ ನಾಗ ದೋಷಗಳು ಅಲ್ಲ. ಬದಲಾಗಿ ನಮ್ಮನ್ನು ನಾವು ರಕ್ಷಿಸಿ ಕೊಳ್ಳಲು ನಾಗ ದೇವರೇ ಕೊಡುವ ಸೂಚನೆಗಳು. ಇಂತಹ ಅಶುಭ ಕನಸುಗಳು ಬಿದ್ದರೆ ಭಯಪಡದೆ ನಾಗಬನದಲ್ಲಿ ತಂಬಿಲ ಇತ್ಯಾದಿ ಪೂಜಾರಾಧನೆ ಮಾಡಬೇಕು.ಸಂಸಾರ ಕುಟುಂಬದಲ್ಲಿ ಯಾವುದೇ ತರದಸಾವು ನೋವು, ಆಘಾತ, ಅಪಘಾತಗಳು ನಡೆಯಬಾರದೆಂದು ದೈವದೇವರಲ್ಲಿ ಸ್ಮರಿಸಬೇಕು. ನಾಗಬನಕ್ಕೆ ಹೋಗಿ ನಾಗಬನದ ಮಣ್ಣನ್ನು ಹಣೆಗೆ ಇಡುವುದು.ನಾಗಬನದ ಪ್ರದೇಶದಲ್ಲಿ ನಿರ್ಮಿಸಿದ ಆಲಡೆ ಕ್ಷೇತ್ರ,ತಮ್ಮಆದಿಮೂಲದಲ್ಲಿ ನಾಗನಲ್ಲಿ ಪ್ರಾರ್ಥನೆ ಮಾಡುವುದು.ದುಃಸ್ವಪ್ನ ನಿವಾರಣೆಗೆ ನಾಗದೇವರಲ್ಲೇ ಬೇಡುವುದು. ಜ್ಯೋತಿಷಿಗಳು, ಅರ್ಚಕರು ತಮ್ಮ ಮನೆ ಪಕ್ಕದಲ್ಲಿ ಪ್ರತಿಷ್ಟೆಮಾಡಿದ ನಾಗಕಲ್ಲುಗಳು ಇಂತಹಾ ಶಾಂತಿ ಪೂಜೆಗಳಿಗೆಯೋಗ್ಯವಲ್ಲ.ಏಕೆಂದರೆ ಇದು ನಾಗಬನವಲ್ಲ.ಈ ಕಾಲದಲ್ಲಿನಾಗಬನ ರಚಿಸಲು ಸಾಧ್ಯವಿಲ್ಲ. ಆದಿಮೂಲ ಅಥವಾ ಮಹಾಲಿಂಗೇಶ್ವರ ದೇವಾಲ ಯ ಎಂದು ಕರೆಯುವ ದೇವಾಲಯವು ಬಲು ಪವಿತ್ರ.ಏಕೆಂದರೆ ಇಲ್ಲಿ ನಾಗಬನದಲ್ಲೇ ಶಿವಾಲಯವನ್ನು ನಿರ್ಮಾಣ ಮಾಡಿದ್ದಾರೆ. ಇದು ಎಲ್ಲಾ ಸೂದ್ರರನ್ನೂಆಕರ್ಷಿಸುವ ಅಂದಿನ ಉಪಾಯ ಆಗಿತ್ತು. ದೈವದೊದೊಡನೆ ದೇವರನ್ನೂ ಆರಾಧಿಸಲೆಂಬ ಬಯಕೆ.ನಾಗಕನಸಲ್ಲಿ ಸೂಚಿಸಿದ ದುಸ್ವಪ್ನದ ಶಾಂತಿಗೆ ನಾಗಬನ,ನಾಗಕ್ಷೇತ್ರಗಳಂತೆ,ಈ ಹೆಸರುಳ್ಳ ದೇವಾಲಯಗಳೂಸೂಕ್ತ.ದೊಡ್ಡ ಪೂಜೆ ಮಾಡಿದರೆ ಬೇಗ ಪ್ರಾಯಶ್ಚಿತ್ತ ಆಗುವುದು ಎಂದಿಲ್ಲ.ಹತ್ತಿರದ ಯಾವುದೇ ನಾಗಬನದಲ್ಲಿ ಕೈಮುಗಿದು ಪ್ರಾರ್ಥನೆ ಮಾಡಿದರೂ ಸಾಲುತ್ತದೆ.

 

ನನಸಲ್ಲಿ ಅಂದರೆ ನಿಜ ಜೀವನದಲ್ಲಿ ನಾಗದೇವರನ್ನುಅಂದರೆ ಹಾವು ಕಂಡರೆ ಎಲ್ಲವೂ ಶುಭ ಸೂಚನೆಗಳೇಆಗಿವೆ. ಯಾವುದೇ ರೀತಿಯ ಭಂಗಿಯಲ್ಲಿದ್ದರೂ ಸರಿ.ಹಗಲಲ್ಲಿ ಅಂದರೆ ನನಸಲ್ಲಿ ಸತ್ತ ನಾಗನನ್ನು ಕಂಡರೆ ಅವುಗಳನ್ನು ದಫನ ಇಲ್ಲವೇ ಭಸ್ಮ ಮಾಡುವುದು. ಕ್ರಿಯೆಇತ್ಯಾದಿಗಳನ್ನು ಮಾಡಿ ಪುಣ್ಯಾತ್ಮರಾಗುವುದು. ನಾಗನನ್ನು ಉದ್ದೇಶಪೂರ್ವವಾಗಿ ಹಿಂಸಿಸುವುದು,ಸಾಯಿಸುವುದು, ಸಾಯಿಸುವಂತೆ ಪ್ರಚೋದಿಸುವುದುಇವುಗಳು ಪಾಪ ದೋಷಗಳು. ಈ ದೋಷಗಳು ಪ್ರಚೋದಿಸಿದವರಿಗೆ ಮತ್ತು ಸಾಯಿಸಿದವರಿಗೆ ಮಾತ್ರ. ಅದು ಅವರ ಮರುಜನ್ಮದಲ್ಲೂ ತಟ್ಟುತ್ತದೆ. ತಸ್ಮೋಸದಿಂದನಾಗ ಮಾನವನ ಕೈಯಲ್ಲಿ ನಾಶವಾದರೆ ಪ್ರಾಯಶ್ಚಿತ್ತಕ್ಕಾಗಿನಾಗಬನ, ಕ್ಷೇತ್ರಗಳಲ್ಲಿ ಶಾಂತಿ ಮಾಡುವುದು. ತಪ್ಪನ್ನುಮನ್ನಿಸಲು ಆತನಲ್ಲೇ ಸದಾ ಪ್ರಾರ್ಥಿಸುವುದು.ಮೈಯ ಚರ್ಮ ಬಿಳಿಯಾಗುವುದು ನಾಗದೋಷ ಅಲ್ಲ ಅದು ಒಂದು ಕಾಯಿಲೆ.

 

ಆದಿ ಮೂಲದಲ್ಲಿ ಎಕ್ರೆಗಟ್ಟಲೆ ಭೂಮಿಯನ್ನು ನಾಗಬನಕ್ಕಾಗಿ ಮೀಸಲಾಗಿಟ್ಟಿದ್ದರು. ವಿವಿಧ ಮರಗಳು ದಟ್ಟವಾಗಿ ಬೆಳೆಯುತ್ತಿತ್ತು. ಹಣ್ಣು ಹಂಪಲುಗಳಿದ್ದವು. ವಿವಿಧ ಪಕ್ಷಿಗಳು ಹಣ್ಣಿಗಾಗಿ ಬರುತ್ತಿದ್ದವು. ಅವುಗಳ ಕೂಗು ದೂರದವರೆಗೂ ಕೇಳಿಬರುತ್ತಿತ್ತು. ಬನದಲ್ಲಿ ಹಾವುಗಳ ವಂಶಾಭಿವೃಧ್ಧಿಆದಂತೆ ಮೃಗ ಪಕ್ಷಿಗಳ ವಂಶವು ಈ ಬನದಲ್ಲಿ ಬೆಳೆಯುತ್ತಿತ್ತು.ನಾಗಸರ್ಪ ಮರಿ ಉಚ್ಚುಗಳಿಗೂ ಆಹಾರ ಈ ವನದಲ್ಲಿ ದೊರೆಯುತ್ತಿತ್ತು.

ಅಂದು ನಾಗಬನ ಇಂದು ನಾಗರಣ
ಅಂದು ಊರೊಳಗಿನ ಬೊಟ್ಟು ಹೊಲಗಳ, ಗದ್ದೆಗಳ,ಪಡ್ಪು,ಲಚ್ಚಿಲ್ ಇತ್ಯಾದಿ ಭೂಮಿಗಳ ಹೊರತು ಪಡಿಸಿ ಉಳಿದ ಎಲ್ಲಾ ಭೂಮಿಯು ನಾಗಬನಕ್ಕೆ ಸೇರಿತ್ತು. ನಾಗಬನಕ್ಕೆ ಸೇರಿದ ಭೂಮಿಯಿಂದ ಸೊಪ್ಪು ಕಟ್ಟಿಗೆ ಮನೆಗಳಿಗೆ ತರಬಹುದಾಗಿತ್ತು. ಕಾಡು ಉತ್ಪತ್ತಿಗಳನ್ನು ಉಪಯೋಗಿಸ ಬಹುದಾಗಿತ್ತು. ಆದರೆ ಯಾವುದೇ ಕೃಷಿ ಮಾಡುವ ಹಾಗಿರಲಿಲ್ಲ.ವಾಸ ಮಾಡುವಂತಿರಲಿಲ್ಲ.ಆದರೆ ಇಂದು ಅದೇ ನಾಗಬನದ ಭೂಮಿಯನ್ನು ಸರಕಾರದ ಭೂಮಿ ಎಂದು ಎಲ್ಲರೂ ಆಕ್ರಮಣ ಮಾಡಿದ್ದಾರೆ. ನಾಗಬನದಲ್ಲಿ ಬೃಹತ್ ಮರಗಳಿಲ್ಲ. ಮೃಗ ಪಕ್ಷಿಗಳಿಲ್ಲ.ಆದರೆ ಮಾನವನು ವಾಸಮಾಡುತ್ತಿದ್ದಾರೆ.ಅಂದಿನ ತಂಪಾದ ನಾಗಬನವು ನಾಗರಣವಾಗಿದೆ. ರಣಬಿಸಿಲಿನಿಂದ ಸುಡುವತಾಪದಿಂದ ಕೂಡಿದೆ.ನಾಗಬನದ ಭೂಮಿಯನ್ನು ಸರಕಾರದ ಭೂಮಿ ಎಂದು ಆಕ್ರಮಿಸಲು ರಣರಂಗವೇ ,ಕಾಳಗವೇ ನಡೆಯುತ್ತಿದೆ. ಒಟ್ಟಾರೆ ನಾಗಬನ ಅಥವಾ ನಾಗವನ, ನಾಗನ ಕಾಡ್ ಅಥವಾ ನಾಗನ ಕಾಡು ಎಂಬ ಹೆಸರು ಹೆಸರಿಗೆ ಮಾತ್ರ ಇದೆ. ನೋಡಲು ನಾಗಬನ ಇಲ್ಲದೆ ಅದು ನಾಗರಣ ಆಗಿದೆ.ನಾಗಬನವನ್ನು ಜೀರ್ಣೋದ್ಧಾ ರ ಎಂದು ಕೆಡವಿದ್ದಾರೆ.ಆದಿಮೂಲದ ಕಲ್ಲುಗಳನ್ನು ಹೊಳೆಗೆ ಎಸೆಯಲಾಗಿದೆ.ನಾಗನಿಗೆ ಎತ್ತರದ ಕಟ್ಟೆಕಟ್ಟಿ ಮಾಡು ನಿರ್ಮಿಸಲಾಗಿದೆ. ಇದು ನಾಗನಿಗಾಗಿ ಮಾಡಿದ ವ್ಯವಸ್ಥೆ ಅಲ್ಲ. ಬದಲಾಗಿ ವೈದಿಕರನ್ನು ಮಳೆ ಮತ್ತು ಬಿಸಿಲಿನಿಂದ ರಕ್ಷಿಸಲು ಆಗಿರುತ್ತದೆ.

 

ದೈವರಾಧನೆ (ನಾಗ ಮತ್ತು ಬೂತೊಲು)ಯನ್ನು ನಮ್ಮಪೂರ್ವಜರು ಆಚರಣೆ ಮಾಡುವ ಕಾಲದಲ್ಲಿ ಈಗಿನ ಜ್ಯೋತಿಷ್ಯ,ನಾಗದೋಷಗಳು,ಬೂತದ ಉಪದ್ರ,ಪ್ರೇತಬಾಧೆ,ಭಯ ಆತಂಕಗಳು ಇರಲೇ ಇಲ್ಲ.ಈಗಲೂ ಇದನ್ನುಹಚ್ಚಿಕೊಳ್ಳಬಾರದು.ದೈವದೇವರ ನಂಬಿಕೆ ಇದ್ದರೆ ಸಾಕು.ನಮಗೆ ಬರುವ ತೊಂದರೆಗಳು ದೈವದೇವರಿಂದಲ್ಲವೇ ಅಲ್ಲ.ಅದು ಅವರವರ ಕರ್ಮಗಳ ಫಲ.ದೈವ ದೇವರಲ್ಲಿನಂಬಿಕೆ ಇಟ್ಟು ಕಷ್ಟ ಪಟ್ಟು ಸಂಪಾದಿಸಿದ ಹಣವನ್ನು ದೈವದೇವರ ಹೆಸರಲ್ಲಿ ಪೋಲು ಮಾಡಬಾರದು.ನಮ್ಮ ಭವಿ ಷ್ಯ ಹೇಳಲು ಆಗುವುದಿಲ್ಲ.ನಮ್ಮ ತಲೆಗೆ ನಮ್ಮ ದೇ ಕೈ. ಸಹಾಯಕ್ಕಾಗಿ ಯಾರೂ ಬರೊಲ್ಲ. ಹಣ ಉಳಿದರೆ ಊಟಕ್ಕಾಗಿ ಕಷ್ಟಪಡುವವರಿಗೆ ಕೊಡಿ.ಆದರೆ ನಾವು ನಮ್ಮನ್ನೇ ವಂಚಿಸಿ ಕೊಂಡು ಕೂಡಿಡುವುದಲ್ಲ ಜಾಗ್ರತರಾಗೋಣ. ನಿಮಗೆ ಇರುವ ದೈವ ದೇವರ ಭಯ ಹೆದರಿಕೆಗಳನ್ನುನಿಮ್ಮ ಕಿರಿಯರಿಗೆ ಹರಡಿಸಬೇಡಿ.ಈಗಿನ ದೈವ ದೇವರುಗಳ ಕತೆಯನ್ನು ತಿಳಿಸುವುದು ಬೇಡ.ಹಿರಿಯರಿಗೆ ಗೌರವಕೊಡಲು ಕಳಿಸಿ.ನಮ್ಮ ಮುಂದಿನ ಪೀಳಿಗೆ ವಿದ್ಯಾವಂ ರಾಗಬೇಕು.

ದೈವ ದೇವರಲ್ಲಿ ನಂಬಿಕೆ ಇಟ್ಟು ಅವರಿಗೆ ಭಯಪಡದೆ ಯಾರಿಗೂ ತೊಂದರೆ ಕೊಡದೆ ಬದುಕುವ ಜೀವನವನ್ನುದೈವದೇವರು ಮೆಚ್ಚುವರು.ಸದಾ ದೈವ ದೇವರುಗಳನ್ನೇಹಚ್ಚಿ ಕೊಂಡವರು ತುಂಬಾ ಭಯಭೀತರಾಗುವರು.ಅವರಲ್ಲದೆ ಕೆಳಗಿನ ಪೀಳಿಗೆಗೆ ಆ ಕಾಯಿಲೆಯನ್ನು ಹರಡಿಸಿ ಬಿಡುತ್ತಾರೆ.ಎಚ್ಚರಿಕೆ....

  ಇಗೋ.ಭಂಡಾರಿ (ನಿವೃತ್ತ ಬ್ಯಾಂಕ್ ಮ್ಯಾನೇಜರ್) ಕಾರ್ಕಳ

ರೋಟರಿ ಕ್ಲಬ್ ಮೂಡುಬಿದಿರೆ ಮಿಡ್ ಟೌನ್ ಅಧ್ಯಕ್ಷರಾಗಿ ಪ್ರಶಾಂತ್ ಭಂಡಾರಿ ಮೂಡಬಿದ್ರೆ ಪದಗ್ರಹಣ

 ಜಗತ್ತಿನ ಪ್ರತಿಷ್ಠಿತ ಅಂತಾರಾಷ್ಟ್ರೀಯ ಸೇವಾ ಸಂಸ್ಥೆ ರೋಟರಿ ಇಂಟರ್ನ್ಯಾಷನಲ್.

ರೋಟರಿ ಎನ್ನುವುದು ಒಂದು ಸಮಾಜಮುಖಿ ಚಿಂತನೆಯ ಸಂಘಟನೆಯಾಗಿದ್ದು, ಜಗತ್ತಿನ ಹಲವು ರಾಷ್ಟ್ರಗಳಲ್ಲಿ ಸಾಮಾಜಿಕ ಕಾರ್ಯಗಳಲ್ಲಿ ತನ್ನನ್ನು ನಿರಂತರವಾಗಿ ತೊಡಗಿಸಿಕೊಳ್ಳುತ್ತಿದೆ. ರೋಟರಿ ಸಂಸ್ಥೆಯು ಜನರಿಗೆ ನೀತಿ, ಮಾನವೀಯತೆ, ಸಾಂಸ್ಕೃತಿಕ ಅರಿವು ಹಾಗೂ ಜನರ ಕೌಶಲ್ಯವನ್ನು ಹೆಚ್ಚಿಸುವತ್ತ ಹೆಚ್ಚು ಗಮನ ನೀಡುತ್ತಿದ್ದು ಎಲ್ಲಾ ರೀತಿಯ ಸಹಾಯ ಮಾಡುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸುತ್ತಿದೆ.

ಅಂತಾರಾಷ್ಟ್ರೀಯ ರೋಟರಿ ಸಂಸ್ಥೆಗೆ ಈ ವರ್ಷ ಅಧ್ಯಕ್ಷರಾಗಿ ಆಯ್ಕೆಯಾಗಿರುವವರು ನಮ್ಮ ಭಾರತ ದೇಶದವರೇ ಆದ ಮೇಜರ್ ಡೋನರ್ ಶೇಖರ್ ಮೆಹ್ತಾ . ಇದು ದೇಶದ ಎಲ್ಲಾ ರೋಟರಿ ಸದಸ್ಯರಿಗೆ ಹೆಮ್ಮೆಯ ವಿಷಯವಾಗಿದೆ . ರೋಟರಿ ಇಂಟರ್ನ್ಯಾಷನಲ್ ಇದರ ರೋಟರಿ 3181 ಜಿಲ್ಲೆಯ ಅಡಿಯಲ್ಲಿ ಬರುವ ಮೂಡಬಿದ್ರೆ ರೋಟರಿ ಕ್ಲಬ್ ನ 2021 -2022 ನೇ ಸಾಲಿನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯು ಮೂಡಬಿದ್ರೆಯ ಸಮಾಜ ಭವನದಲ್ಲಿ ತಾರೀಕು 16 ಜುಲೈ 2021 ರಂದು ನಡೆಯಿತು.
ನಮ್ಮ ಸಮಾಜದ ಪ್ರಶಾಂತ್ ಭಂಡಾರಿ ಮೂಡಬಿದ್ರೆ ಯವರನ್ನು ಅಧ್ಯಕ್ಷರಾಗಿ ಆಯ್ಕೆ ಮಾಡಲಾಯಿತು .


ಕಾರ್ಯಕ್ರಮದಲ್ಲಿ ಜಿಲ್ಲಾ ಕಾರ್ಯದರ್ಶಿ ಹಾಗೂ ರೋಟರಿ ಸಂಸ್ಥೆಯ ಸಾಧಕ ಪ್ರಶಸ್ತಿ ಆಯ್ಕೆಯ ಸದಸ್ಯರಾದ ವಿಕ್ರಂ ದತ್ತರವರು ನಮ್ಮ ಹೃದಯದಲ್ಲಿ ಸಹನೆ, ಶಾಂತಿ ಮತ್ತು ನೆಮ್ಮದಿಯಿದ್ದರೆ ಕೊರೋನಾದಂತಹ ಸಂಕಷ್ಟದ ಕಾಲದಲ್ಲೂ ಯಶಸ್ಸನ್ನು ಕಾಣಲು ಸಾಧ್ಯ ಎಂದು ನುಡಿದರು.

ಸಭಾ ಕಾರ್ಯಕ್ರಮದಲ್ಲಿ ರೋಟರಿ ಇಂಟರ್ನ್ಯಾಷನಲ್ 3181 ಜಿಲ್ಲೆಯ ಅಸಿಸ್ಟೆಂಟ್ ಗವರ್ನರ್ ಅರುಣ್ ಭಂಡಾರಿ ಬಜ್ಪೆ ಮಾತನಾಡಿ ರೋಟರಿ ಸಂಸ್ಥೆಯಲ್ಲಿ ಮಹಿಳಾ ಸದಸ್ಯರನ್ನು ಹೆಚ್ಚಿನ ಸಂಖ್ಯೆಯಲ್ಲಿ ಸೇರಿಸಿ ಸಂಸ್ಥೆಯನ್ನು ಇನ್ನಷ್ಟು ಸದೃಢಗೊಳಿಸಲು ಕರೆ ನೀಡಿದರು.

ನಿಕಟಪೂರ್ವ ಗವರ್ನರ್ ರಂಗನಾಥ್ ಭಟ್, ನಿಕಟಪೂರ್ವ ಅಧ್ಯಕ್ಷ ಸುಶಾಂತ್ ಕರ್ಕೇರ ಮಾರೂರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ನೂತನ ಅಧ್ಯಕ್ಷರಾದ ಶ್ರೀ ಪ್ರಶಾಂತ್ ಭಂಡಾರಿ ಈ ವರ್ಷದ ಯೋಜನೆಗಳ ಮಾಹಿತಿ ನೀಡಿ ಎಲ್ಲರ ಸಹಕಾರ ಕೋರಿದರು. ಇಂತಹ ಪ್ರತಿಷ್ಠಿತ ಸಮಾಜ ಸೇವಾ ಸಂಸ್ಥೆಯ ಉನ್ನತ ಸ್ಥಾನಗಳಿಗೆ ನಮ್ಮ ಸಮಾಜದ ಸದಸ್ಯರು ಹೆಚ್ಚು ಹೆಚ್ಚು ಆಯ್ಕೆಗೊಳ್ಳುತ್ತಿದ್ದು ನಾವೆಲ್ಲರೂ ಹೆಮ್ಮೆಪಡಬೇಕಾದ ವಿಷಯ.

ಪ್ರಶಾಂತ್ ಭಂಡಾರಿ ವ್ಯಕ್ತಿ ಪರಿಚಯ ::

ಪ್ರಶಾಂತ್ ಭಂಡಾರಿ ಮೂಡಬಿದ್ರೆ ಇವರು ಪುತ್ತಿಗೆ ಮುಪ್ಪರಪ್ಪು ದಿವಂಗತ ಕೃಷ್ಣಪ್ಪ ಮತ್ತು ಶ್ರೀಮತಿ ಗೌರಿ ಭಂಡಾರಿ ದಂಪತಿಯ ಮಗನಾಗಿ ಆಗಸ್ಟ್ 22, 1976 ರಂದು ಜನಿಸಿದರು. ಇವರು ಪ್ರಾಥಮಿಕ ವಿದ್ಯಾಭ್ಯಾಸವನ್ನು ಗುಡ್ಡೆಯಂಗಡಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ, ಪ್ರೌಢ ಮತ್ತು ಪದವಿಪೂರ್ವ ಶಿಕ್ಷಣವನ್ನು ಮೂಡಬಿದ್ರೆಯ ಜೈನ್ ಹೈಸ್ಕೂಲ್ ನಲ್ಲಿ, ಪದವಿ ಶಿಕ್ಷಣವನ್ನು ಧವಳಾ ಮಹಾವಿದ್ಯಾಲಯದಲ್ಲಿ ಪೂರೈಸಿದ ನಂತರ ಮಣಿಪಾಲ್ ಕಂಪ್ಯೂಟರ್ ವಿದ್ಯಾ ಸಂಸ್ಥೆಯಲ್ಲಿ ಕಂಪ್ಯೂಟರ್ ಡಿಪ್ಲೋಮ ಪೂರೈಸಿಕೊಂಡು ಮುಂಬೈಯತ್ತ ಮುಖ ಮಾಡಿ ಸಿಂಘ್ವಿ ಇಂಪೆಕ್ಸ್ ಪ್ರೈವೇಟ್ ಲಿಮಿಟೆಡ್ ನಲ್ಲಿ ಅಕೌಂಟ್ಸ್ ವಿಭಾಗದಲ್ಲಿ ವೃತ್ತಿಯನ್ನು ಮಾಡಿದರು. ನಂತರ ವರ್ತ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯಲ್ಲಿ ಅಕೌಂಟೆಂಟ್ ಆಗಿ ಸುಮಾರು 13 ವರ್ಷ ಕೆಲಸ ನಿರ್ವಹಿಸಿದರು.ಪ್ರಸ್ತುತ ಸ್ವಂತ ಉದ್ಯಮವನ್ನು ನಡೆಸುತ್ತಿದ್ದಾರೆ. 

ಸಾಮಾಜಿಕ ಕೆಲಸಗಳಲ್ಲಿ ನಿರಂತರ ತನ್ನನ್ನು ತಾನು ತೊಡಗಿಸಿಕೊಂಡಿರುವ ಪ್ರಶಾಂತ್ ಭಂಡಾರಿ ಹಲವು ಸಂಘ ಸಂಸ್ಥೆಗಳಲ್ಲಿ ವಿವಿಧ ಹುದ್ಧೆಗಳನ್ನು ಅಲಂಕರಿಸಿದ್ದಾರೆ. ನೆಲ್ಲಿಗುಡ್ಡೆ (ರಿ) ಮಿತ್ರಮಂಡಳಿ ಪುತ್ತಿಗೆ ಇದರಲ್ಲಿ ಕೋಶಾಧಿಕಾರಿಯಾಗಿ, ಕಾರ್ಯದರ್ಶಿಯಾಗಿ,ಉಪಾಧ್ಯಕ್ಷರಾಗಿ,ಪ್ರಸ್ತುತ ಅಧ್ಯಕ್ಷರಾಗಿ ಸುದೀರ್ಘ 32 ವರ್ಷಗಳ ಕಾಲ ಈ ಸಂಘಟನೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

ಭಂಡಾರಿ ಸಮಾಜ ಸೇವಾ ಸಂಘ (ರಿ) ಮೂಡಬಿದ್ರೆ ಇದರಲ್ಲಿ 4 ವರ್ಷಗಳ ಕಾಲ ಕಾರ್ಯದರ್ಶಿಯಾಗಿ, ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಪುತ್ತಿಗೆ ಸೋಮನಾಥೇಶ್ವರ ದೇವಾಲಯದ ಜೀರ್ಣೋದ್ಧಾರ ಸಮಿತಿಯ ವಾರ್ಡ್ ಸಮಿತಿಯ ಕಾರ್ಯದರ್ಶಿಯಾಗಿದ್ದಾರೆ.ಭಂಡಾರಿ ಸಮಾಜದ ಕಚ್ಚೂರು ಶ್ರೀ ನಾಗೇಶ್ವರ ದೇವಸ್ಥಾನದ ಟ್ರಸ್ಟಿಯಾಗಿ, ಗುಡ್ಡೆಯಂಗಡಿ ಹಿರಿಯ ಪ್ರಾಥಮಿಕ ಶಾಲೆಯ ಹಳೆ ವಿದ್ಯಾರ್ಥಿ ಸಂಘದ ಕಾರ್ಯದರ್ಶಿಯಾಗಿ, ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಾ ಬಂದಿದ್ದಾರೆ. 2018 -2019 ರಲ್ಲಿ ರೋಟರಿ ಸಂಸ್ಥೆಯ ಸದಸ್ಯರಾಗಿ ಸೇರ್ಪಡೆಗೊಂಡ ಪ್ರಶಾಂತ್ ಭಂಡಾರಿ 2020 - 2021 ನೇ ಸಾಲಿನಲ್ಲಿ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ್ದರು. ಶ್ರೀಮತಿ ಶ್ರೀದೇವಿಯವರನ್ನು ಮದುವೆಯಾಗಿರುವ ಪ್ರಶಾಂತ್ ಭಂಡಾರಿ ಪುತ್ರ ಲಿಖಿತ್ ಭಂಡಾರಿ ಯೊಂದಿಗೆ ಸುಖೀ ಜೀವನ ನಡೆಸುತ್ತಿದ್ದಾರೆ.

 

ಇಂತಹ ಸಮಾಜ ಸೇವಕರನ್ನು ಸಮಾಜಕ್ಕೆ ಪರಿಚಯಿಸುವುದು ಭಂಡಾರಿ ವಾರ್ತೆಗೆ ಕೂಡಾ ಹೆಮ್ಮೆಯ ವಿಷಯ. ಅವರ ಸಾಮಾಜಿಕ ಜೀವನ, ವ್ಯಾವಹಾರಿಕ ಜೀವನ ಉತ್ತಮವಾಗಿರಲಿ, ಅವರಿಗೆ ಮತ್ತು ಅವರ ಕುಟುಂಬಕ್ಕೆ ದೇವರು ಆಯಸ್ಸು, ಆರೋಗ್ಯ, ಸಕಲಸ್ಟೈಶ್ವರ್ಯ ಕರುಣಿಸಿ ಇನ್ನಷ್ಟು ಸಮಾಜ ಸೇವೆ ಮಾಡುವ ಶಕ್ತಿ ಕೊಡಲಿ ಎಂದು ಬೇಡುತ್ತಾ ಭಂಡಾರಿ ಕುಟುಂಬದ ಮನೆ ಮನದ ಮಾತು ಭಂಡಾರಿ ವಾರ್ತೆ ಶುಭ ಹಾರೈಸುತ್ತದೆ.

ವರದಿ : ವನಿತಾ ಅರುಣ್ ಭಂಡಾರಿ, ಬಜ್ಪೆ

Tuesday 20 July 2021

ರೋಟರಿ ಇಂಟರ್ನ್ಯಾಷನಲ್ 3181 ಜಿಲ್ಲಾ ನೂತನ ಅಸಿಸ್ಟೆಂಟ್ ಗವರ್ನರ್ ಅರುಣ್ ಭಂಡಾರಿ ಬಜ್ಪೆ ಪದಗ್ರಹಣ

 ನಮ್ಮ ಸಮಾಜದಲ್ಲಿ ಅನೇಕ ಸಂಘ ಸಂಸ್ಥೆಗಳು ಸಮಾಜಮುಖಿ ಕಾರ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಿವೆ. ಅದರಲ್ಲಿ ಒಂದು ಉತ್ತಮ ಸಂಸ್ಥೆ ರೋಟರಿ ಕ್ಲಬ್. ರೋಟರಿ ಕ್ಲಬ್ ಎನ್ನುವುದು ಒಂದು ಅಂತಾರಾಷ್ಟ್ರೀಯ ಸಂಸ್ಥೆಯಾಗಿದ್ದು ಇದು ಸಮಾಜಮುಖಿ ಸಂಘಟನೆಯಾಗಿದ್ದು, ಜಗತ್ತಿನ ಹಲವು ರಾಷ್ಟ್ರಗಳಲ್ಲಿ ಸಾಮಾಜಿಕ ಕಾರ್ಯದಲ್ಲಿ ನಿರಂತರವಾಗಿ ತೊಡಗಿಸಿಕೊಳ್ಳುತ್ತಿದೆ. ಈ ಸಂಸ್ಥೆಯು ಜನರಿಗೆ ನೀತಿ, ಮಾನವೀಯತೆ, ಸಾಂಸ್ಕೃತಿಕ ಅರಿವು, ಜನರ ಕೌಶಲ್ಯವನ್ನು ಹೆಚ್ಚಿಸುವತ್ತ ಹೆಚ್ಚಿನ ಗಮನ ನೀಡುತ್ತಿದ್ದು ಎಲ್ಲಾ ರೀತಿಯ ಸಹಾಯ ಮಾಡುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸುತ್ತಿದೆ.

 

ಶಾಂತಿ ಸ್ಥಾಪನೆ, ರೋಗಗಳ ವಿರುದ್ಧ ಹೋರಾಡುವುದು, ಶುದ್ಧ ನೀರು, ನೈರ್ಮಲ್ಯದ ಅರಿವು, ತಾಯಂದಿರು ಮತ್ತು ಮಕ್ಕಳ ಸುರಕ್ಷತೆ, ಶಿಕ್ಷಣಕ್ಕೆ ಪ್ರೋತ್ಸಾಹ, ಸ್ಥಳೀಯ ಆರ್ಥಿಕತೆ ಹೆಚ್ಚಳಕ್ಕೆ ಕ್ರಮ, ಹೀಗೆ ರೋಟರಿಯು ಜಗತ್ತಿನಲ್ಲಿ ಶಾಂತಿಯುತ ವಾತಾವರಣವನ್ನು ಸೃಷ್ಟಿಸುವತ್ತ ಶ್ರಮಿಸುವುದರ ಜೊತೆಗೆ ವಿವಿಧ ಕಾರ್ಯಕ್ರಮಗಳ ಮೂಲಕ ಜಗತ್ತನ್ನು ಉತ್ತಮ ಬದಲಾವಣೆಯತ್ತ ಕೊಂಡೊಯ್ಯುತ್ತಿದೆ.

ಇಂತಹ ಒಂದು ಸಮಾಜಮುಖಿ ಸಂಸ್ಥೆಗಳಲ್ಲಿ ನಮ್ಮ ಸಮಾಜದ ಅನೇಕರು ತೊಡಗಿಸಿಕೊಂಡಿದ್ದು ನಿಜಕ್ಕೂ ಹೆಮ್ಮೆಯ ವಿಚಾರ. ಜುಲೈ 7, 2021ರ ಬುಧವಾರ ಮೈಸೂರಿನಲ್ಲಿ ನಡೆದ ಅನುಸ್ಥಾಪನ ಸಮಾರಂಭದಲ್ಲಿ ನಮ್ಮ ಸಮಾಜದ ಖ್ಯಾತ ಬಿಲ್ಡರ್ ಅರುಣ್ ಭಂಡಾರಿ ಬಜ್ಪೆ ಅಸಿಸ್ಟೆಂಟ್ ಗವರ್ನರ್ ಆಗಿ ಆಯ್ಕೆಯಾಗಿದ್ದಾರೆ. ರೋಟರಿ ಇಂಟರ್ನ್ಯಾಷನಲ್‌ನ 3181 ಜಿಲ್ಲೆಯ 9 ವಲಯಗಳಲ್ಲಿ ಒಂದು ವಲಯಕ್ಕೆ ಅರುಣ್ ಭಂಡಾರಿ ಅಸಿಸ್ಟೆಂಟ್ ಗವರ್ನರ್ ಆಗಿ ಕಾರ್ಯ ನಿರ್ವಹಿಸಲಿದ್ದಾರೆ. ರೋಟರಿ ಇಂಟರ್ನ್ಯಾಷನಲ್‌ನ ಒಂದನೇ ವಲಯದಲ್ಲಿ ಒಟ್ಟು 4 ರೋಟರಿ ಕ್ಲಬ್‌ಗಳಿದ್ದು, ಇದರಲ್ಲಿ ರೋಟರಿ ಕ್ಲಬ್ ಬಜ್ಪೆ, ರೋಟರಿ ಕ್ಲಬ್ ಕಿನ್ನಿಗೋಳಿ, ರೋಟರಿ ಕ್ಲಬ್ ಮುಲ್ಕಿ ಮತ್ತು ರೋಟರಿ ಕ್ಲಬ್ ಮೂಡಬಿದ್ರೆ ಸೇರಿವೆ. ಈ ಬಾರಿ ಇನ್ನೂ ಎರಡು ಕ್ಲಬ್‌ಗಳನ್ನೂ ಸೇರ್ಪಡೆಗೊಳಿಸುವ ಪ್ರಕ್ರಿಯೆ ಚಾಲನೆಯಲ್ಲಿದ್ದು, ಕೈಕಂಬ ಮತ್ತು ಹಳೆಯಂಗಡಿಯಲ್ಲಿ ರೋಟರಿ ಕ್ಲಬ್‌ಗಳು ಪ್ರಾರಂಭಗೊಳ್ಳಲಿದೆ.

ಅನುಸ್ಥಾಪನ ಸಭೆಯಲ್ಲಿ ಅಧ್ಯಕ್ಷರೂ ಸೇರಿದಂತೆ ಉಳಿದ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು. ಸೇವಾ ಯೋಜನೆಗಳಲ್ಲಿ ನಮ್ಮನ್ನು ನಾವು ಹೆಚ್ಚಾಗಿ ತೊಡಗಿಸಿಕೊಂಡಾಗ ಅದು ಇತರರ ಜೀವನವನ್ನು ಬದಲಾಯಿಸುವುದರ ಜೊತೆಗೆ ನಮ್ಮ ಜೀವನದಲ್ಲೂ ಬದಲಾವಣೆಯನ್ನು ತರುತ್ತದೆ. ಈ ಮೂಲಕ "serve to change lives"ಎಂಬ ಧ್ಯೇಯ ವಾಕ್ಯವನ್ನು ಪಾಲಿಸುವುದು ರೋಟರಿ ಇಂಟರ್ನ್ಯಾಷನಲ್‌ನ ಮುಖ್ಯ ಉದ್ಧೇಶವಾಗಿದೆ. ಅರುಣ್ ಭಂಡಾರಿ ತಾವು ಪ್ರತಿನಿಧಿಸುವ ವಲಯದಲ್ಲಿ ಪ್ರಮುಖವಾಗಿ ಸದಸ್ಯತ್ವವನ್ನು ಹೆಚ್ಚಿಸುವುದರ ಜೊತೆಗೆ ಪ್ರಥಮ ಚಿಕಿತ್ಸೆ, ರಕ್ತದಾನ, Each One Teach One (ಪ್ರತಿಯೊಬ್ಬರೂ ಒಂದು ವಿಷಯವನ್ನು ಕಲಿಸುವುದು) ಮುಂತಾದ ಕಾರ್ಯಕ್ರಮವನ್ನು ಮುಂಬರುವ ದಿನಗಳಲ್ಲಿ ಹಮ್ಮಿಕೊಳ್ಳುವ ಯೋಜನೆ ಇಟ್ಟುಕೊಂಡಿದ್ದಾರೆ.


ಶ್ರೀಯುತ ವಸಂತ ಕುಮಾರ್ ಮತ್ತು ಶ್ರೀಮತಿ ನಳಿನಿ ದಂಪತಿಯ ಮೊದಲ ಮಗನಾಗಿ ತಾರೀಕು 15-5-1975 ರಂದು ಬಜಪೆ ಯಲ್ಲಿ ಜನಿಸಿದ ಅರುಣ್ ಭಂಡಾರಿ ದುಬೈ‌ನಲ್ಲಿ ಸಾಫ್ಟ್‌ವೇರ್ ಸಂಸ್ಥೆಯಲ್ಲಿ 5 ವರ್ಷಗಳ ಕಾಲ ಸೇವೆ ಸಲ್ಲಿಸಿ, ತದನಂತರ ಹೈದರಾಬಾದ್‌‌ನ ವಿಪ್ರೊ ಸಂಸ್ಥೆಯಲ್ಲಿ 2019 ರವರೆಗೆ ಕೆಲಸ ನಿರ್ವಹಿಸಿದರು. ತದನಂತರ ಸ್ವಂತ ರಿಯಲ್ ಎಸ್ಟೇಟ್ ವ್ಯವಹಾರ ಪ್ರಾರಂಭಿಸಿ ಅರುಣ್ ಭಂಡಾರಿ ಬಿಲ್ಡರ್ಸ್ & ಡೆವಲಪರ್ಸ್ ಎಂಬ ಹೆಸರಿನ ಸಂಸ್ಥೆ ಮೂಲಕ ಗೃಹ ನಿರ್ಮಾಣದ ಕನಸು ಹೊತ್ತ ಅದೆಷ್ಟೋ ಜನರಿಗೆ ಅತೀ ಕಡಿಮೆ ದರದಲ್ಲಿ ಮನೆ ನಿರ್ಮಿಸಿ ಕೊಡುವ ಮೂಲಕ ಅತೀ ಕಡಿಮೆ ಅವಧಿಯಲ್ಲಿ ಖ್ಯಾತಿಯನ್ನು ಪಡೆದರು.


ಸ್ವಂತ ವ್ಯವಹಾರದ ಜೊತೆಗೆ ಸಮಾಜ ಸೇವೆಯಲ್ಲಿ ಆಸಕ್ತಿ ಹೊಂದಿರುವ ಅರುಣ್ 2013 ರಲ್ಲಿ ಬಜ್ಪೆಯ ರೋಟರಿ ಕ್ಲಬ್‌ಗೆ ಸೇರ್ಪಡೆಗೊಳ್ಳುತ್ತಾರೆ. ಅಲ್ಲಿ 2017 -2018 ರ ಅವಧಿಯಲ್ಲಿ ರೋಟರಿ ಕ್ಲಬ್‌ನ ಅಧ್ಯಕ್ಷರಾಗಿ ನಿಯುಕ್ತಿಗೊಳ್ಳುತ್ತಾರೆ. ನಂತರ ರೋಟರಿ ಕ್ಲಬ್‌ನ 3181 ಜಿಲ್ಲೆಯ ಝೋನಲ್ ಲೆಫ್ಟಿನೆಂಟ್ ಆಗಿ 2018 -2019 ರಲ್ಲಿ ಆಯ್ಕೆಯಾಗುತ್ತಾರೆ .ರೋಟರಿ ಇಂಟರ್ನ್ಯಾಷನಲ್‌ನ ಅನೇಕ ಜವಾಬ್ದಾರಿಗಳನ್ನು ಯಶಸ್ವಿಯಾಗಿ ನಿರ್ವಹಿಸಿಕೊಂಡು 2020 -2021 ರಲ್ಲಿ ರೋಟರಿ ಯೂಥ್ ಲೀಡರ್‌ಶಿಪ್ (RYLA ) ನ ಉಪಾಧ್ಯಕ್ಷರಾಗಿ ಆಯ್ಕೆಯಾಗುತ್ತಾರೆ. 2020 -2021 ರಲ್ಲಿ ಫೆಲೋಶಿಪ್‌ನ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿಕೊಂಡು ಇದೀಗ ಕಳೆದ ಜುಲೈ 7 ರಿಂದ ಅಸಿಸ್ಟೆಂಟ್ ಗವರ್ನರ್ ಆಗಿ ಆಯ್ಕೆಯಾಗಿರುವುದು ನಮ್ಮ ಭಂಡಾರಿ ಸಮಾಜಕ್ಕೊಂದು ಹೆಮ್ಮೆಯ ವಿಷಯ.

ಅರುಣ್ ಭಂಡಾರಿ ಪತ್ನಿ ವನಿತಾ ಅರುಣ್ ಭಂಡಾರಿ , ಇಬ್ಬರು ಮಕ್ಕಳಾದ ಅನೀಶ್ ಭಂಡಾರಿ ಮತ್ತು ಅಮನ್ ಭಂಡಾರಿ ಜೊತೆ ಬಜ್ಪೆಯ ಸ್ವಾಮಿಲ ಪದವು ಎಂಬಲ್ಲಿ ವಾಸವಾಗಿದ್ದಾರೆ. ಇವರ ಸಮಾಜ ಸೇವೆಗೆ ಇಡೀ ಸಂಸಾರ ಕೈಜೋಡಿಸಿದೆ ಎಂದರೆ ‌ ತಪ್ಪಾಗಲಾರದು. ಅರುಣ್ ಭಂಡಾರಿ ಅವರು ಭಂಡಾರಿ ವಾರ್ತೆಯ ಪ್ರಾರಂಭದ ದಿನದಿಂದಲೂ ಬೆನ್ನೆಲುಬಾಗಿ ನಿಂತಿದ್ದು ಇದೀಗ ಪತ್ನಿ ವನಿತಾ ಅರುಣ್ ಭಂಡಾರಿ ಉತ್ತಮ ಲೇಖನಗಳನ್ನು ಬರೆಯುವ ಮೂಲಕ ಭಂಡಾರಿ ವಾರ್ತೆಗೆ ಸಹಕಾರ ನೀಡುತ್ತಿದ್ದಾರೆ.

ಅರುಣ್ ಭಂಡಾರಿಯವರು ಸಾಮಾಜಿಕ ಸೇವೆಯಲ್ಲಿ ಇನ್ನಷ್ಟು ಖ್ಯಾತಿ ಗಳಿಸಲಿ, ಇನ್ನಷ್ಟು ಮೇಲ್ಮಟ್ಟದ ಸ್ಥಾನವು ಅವರಿಗೆ ದೊರೆಯಲಿ ಆ ಮೂಲಕ ವ್ಯವಹಾರದಲ್ಲಿ ಅಭಿವೃದ್ಧಿ ಕಾಣಲಿ, ದೇವರು ಅವರಿಗೆ ಅವರ ಕುಟುಂಬಕ್ಕೆ ಆಯಸ್ಸು, ಆರೋಗ್ಯ, ನೆಮ್ಮದಿಯನ್ನು ಕರುಣಿಸಿ ಕಾಪಾಡಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು ಭಂಡಾರಿ ವಾರ್ತೆ ಶುಭ ಹಾರೈಸುತ್ತಿದೆ.

--ಭಂಡಾರಿ ವಾರ್ತೆ

Monday 19 July 2021

ಮುಂಬಯಿನ ಶಿವಾಸ್ ಹೇರ್ ಡಿಸೈನ್ ಪ್ರೈವೇಟ್ ಲಿ.ನ 22ನೇ ಶಾಖೆ ಸಲೂನ್ ಶಿವಾಸ್ ಸ್ಯಾಲ್ಯೂಟ್ (SALUTE) ಶುಭಾರಂಭ

 ಬಾಲಿವುಡ್ ಸೆಲೆಬ್ರಿಟಿಗಳು ಸೇರಿದಂತೆ ಹಲವು ಪ್ರತಿಷ್ಠಿತ ಗಣ್ಯರ ಕೇಶ ವಿನ್ಯಾಸದ ಮೂಲಕ ಹೆಸರುವಾಸಿಯಾಗಿರುವ ಕಾರ್ಕಳ ಮೂಲದ ಹೇರ್ ಎಕ್ಸ್ ಪರ್ಟ್ ಡಾ| ಶಿವರಾಮ ಕೃಷ್ಣ ಭಂಡಾರಿ ಅವರ ಶಿವಾಸ್ ಹೇರ್ ಡಿಸೈನ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ 22ನೇ ಶಾಖೆ ಸಲೂನ್ ಶಿವಾಸ್ ಸ್ಯಾಲ್ಯೂಟ್ ಮುಂಬಯಿ ಕಾರ್ ಪಶ್ಚಿಮದ ಸೂರ್ಯಲೋಕ್ ಸಂಕೀರ್ಣದಲ್ಲಿ ಶುಭಾರಂಭಗೊಂಡಿತು.  

 

 


ನೂತನ ಸಂಸ್ಥೆಗೆ ಶುಭಹಾರೈಸಿದ ಭಾರತೀಯ ನೌಕಾಪಡೆಯ ನಿವೃತ್ತ ಕಮಾಂಡರ್ ಸಿ.ಕೆ.ದಾವರ್, ಕೇಶ ವಿನ್ಯಾಸವು ವೃತ್ತಿ ಸೌಂದರ್ಯದ ಮೆರುಗನ್ನು ಇಮ್ಮಡಿಗೊಳಿಸುತ್ತಿದ್ದು, ಕೇಶ ಸಂರಕ್ಷಣೆಯು ಜೀವನದ ಪ್ರತಿಷ್ಠೆ ರೂಪಿಸುವಲ್ಲಿಯೂ ಮಹತ್ತರ ಪಾತ್ರ ವಹಿಸುತ್ತದೆ. ಅಂತಾರಾಷ್ಟ್ರೀಯ ಪ್ರಸಿದ್ಧಿಯ ಡಾ| ಶಿವರಾಮ ಭಂಡಾರಿ ಅವರು ಕೇಶ ವಿನ್ಯಾಸ ತಜ್ಞರಾಗಿ ಚಿರಪರಿಚಿತರಾಗಿದ್ದು, ದೇಶ ಕಾಯುವ ಸೈನಿಕ ಸೇವೆಯ ಮಹತ್ವವನ್ನು ಸಾರುವ ನಿಟ್ಟಿನಲ್ಲಿ ವಿಭಿನ್ನ ಪ್ರಯತ್ನವಾಗಿ ನೂತನ ಸಂಸ್ಥೆ ಲೋಕಾರ್ಪಣೆಗೊಳಿಸಿರುವುದು ಹೆಮ್ಮೆಯ ವಿಚಾರ ಎಂದರು.

[video width="512" height="640" mp4="https://www.bhandaryvarthe.in/wp-content/uploads/2021/07/sivas-salute-1.mp4"][/video]

ಭಾರತ-ಪಾಕಿಸ್ಥಾನ ಯುದ್ಧದಲ್ಲಿ ಮಡಿದ ಹುತಾತ್ಮ ಯೋಧ ಕ್ಯಾ| ವಿನಾಯಕ್ ವಿಷ್ಣುಗೋರೆ ಅವರ ತಾಯಿ, ಪಾರ್ಲೆ ತಿಲಕ್ ವಿದ್ಯಾಲಯದ ಮುಖ್ಯಶಿಕ್ಷಕಿ ಅನುರಾಧ ವಿ.ವಿಷ್ಣುಗೋರೆ ಅವರು ರಿಬ್ಬನ್ ಕತ್ತರಿಸುವ ಮೂಲಕ ಸಲೂನ್ ಶಿವಾಸ್ ಸ್ಯಾಲ್ಯೂಟ್ ಉದ್ಘಾಟಿಸಿ ಮಾತನಾಡಿ, ವರ್ಷಗಳು ಕಳೆದಂತೆ ಜೀವನ ಶೈಲಿಗಳು ಬಲಾಗುತ್ತಿದ್ದು, ಅದಕ್ಕೆ ಪೂರಕವಾಗಿ ಕೇಶ ವಿನ್ಯಾಸವೂ ವಿಭಿನ್ನ ಶೈಲಿಯನ್ನು ಪಡೆಯುತ್ತಿದೆ. ಹೇರ್ ಸ್ಟೈಲ್ ಕ್ರೇಝ್ ಪುರುಷ-ಮಹಿಳೆ ಎಂಬ ಬೇಧವಿಲ್ಲದೆ ಮಹತ್ವವನ್ನು ಪಡೆದುಕೊಳ್ಳುತ್ತಿದೆ ಎಂದರು.


ಸಹೃದಯಿ ವ್ಯಕ್ತಿತ್ವದ ಸಜ್ಜನ ವ್ಯಕ್ತಿಯಾಗಿರುವ ಶಿವ ನನ್ನ ಆಪ್ತಮಿತ್ರನಿಗಿಂತಲೂ ಮಿಗಿಲಾಗಿ ಬಂಧುವೂ ಆಗಿದ್ದು, ನನ್ನ ಚಿತ್ರಗಳಲ್ಲೂ ಅಭಿನಯಿಸಿದ್ದಾರೆ. ಅವರ ಕೆಲಸವೇ ಪ್ರತಿಷ್ಠೆಯನ್ನು ತಿಳಿಸುತ್ತಿದ್ದು, ಸಿನಿಮಾ, ಕ್ರೀಡಾ, ರಾಜಕೀಯ ಹೀಗೆ ಎಲ್ಲಾ ಪ್ರತಿಷ್ಠಿತ ವ್ಯಕ್ತಿತ್ವಗಳ ಕೇಶ ವಿನ್ಯಾಸದ ಗರಿಮೆ ಶಿವ ಅವರಿಗೆ ಸಲ್ಲುತ್ತದೆ ಎಂದು ಭಾರತೀಯ ಚಿತ್ರ ನಿರ್ದೇಶಕ ಮಧೂರ್ ಭಂಡಾರ್ಕಾರ್ ಅವರು ಶುಭಹಾರೈಸಿದರು.


ವಿದ್ವಾನ್ ಕೆ.ಕೃಷ್ಣರಾಜ ತಂತ್ರಿ ಬೊರಿವಿಲಾ ಅವರು ವಾಸ್ತುಪೂಜೆ, ಸತ್ಯನಾರಾಯಣ ಪೂಜೆ ನೆರವೇರಿಸಿದರು. ಕೃಷ್ಣ ಭಟ್, ರಾಮದಾಸ ಭಟ್, ಕುಶ ತಿವಾರಿ, ಪ್ರಸಾದ್ ಭಟ್ ಅವರು ಧಾರ್ಮಿಕ ವಿಧಿ ವಿಧಾನ ನೆರವೇರಿಸಿದರು. ರಾಘವ ವಿ.ಭಂಡಾರಿ, ಶ್ವೇತಾ ಆರ್.ಭಂಡಾರಿ, ಶಿವರಾಮ ಕೆ.ಭಂಡಾರಿ, ಅನುಶ್ರೀ ಎಸ್.ಭಂಡಾರಿ ಅವರು ಪೂಜೆಯಲ್ಲಿ ಪಾಲ್ಗೊಂಡರು. ಮಕ್ಕಳಾದ ರೋಹಿಲ್ ಭಂಡಾರಿ, ಆರಾಧ್ಯ ಭಂಡಾರಿ ಪಾಲ್ಗೊಂಡಿದ್ದರು. ಪ್ರವರ್ತಕರ ಕುಲದೇವರಾದ ಕಚ್ಚೂರು ಶ್ರೀ ನಾಗೇಶ್ವರ ದೇವರಿಗೆ ಆರತಿಯನ್ನು ಬೆಳಗಿ ಸ್ವರ್ಗಸ್ಥರಾದ ತಾಯಿ ಗುಲಾಬಿ ಕೆ.ಭಂಡಾರಿ ಅವರನ್ನು ಸ್ಮರಿಸಿ ಚಾಲನೆ ನೀಡಲಾಯಿತು.

ಭಾರತೀಯ ರಕ್ಷಣಾ ಪಡೆಗಳಿಂದ ಪ್ರೇರಿತನಾಗಿ ಸ್ಯಾಲ್ಯೂಟ್ ಹೆಸರಿನೊಂದಿಗೆ ಈ ಸೆಲೂನ್ ಕೆಲಸ ಮಾಡಲಿದ್ದು, ರಾಷ್ಟ್ರ ರಕ್ಷಣಾ ಯೋಧರ ಶೌರ್ಯ, ತ್ಯಾಗದ ಸೇವೆಗಾಗಿ ಇದನ್ನು ಸಮರ್ಪಿಸುತ್ತಿದ್ದೇವೆ. ಈ ಸೆಲೂನ್‌ನಲ್ಲಿ ಮಿಲಿಟಿರಿ ಕ್ಷೌರ ಮಾಡುವ ಪರಿಣಿತ ಕೇಶ ವಿನ್ಯಾಸಕರಿದ್ದು, ವಿಶೇಷ ತರಬೇತಿಯೊಂದಿಗೆ ಕೆಲಸ ಮಾಡಲಿದ್ದಾರೆ. ಕೋವಿಡ್ ನಿಯಮಾನುಸಾರ ಇದು ಕಾರ್ಯಾಚರಿಸಲಿದೆ ಎಂದು ಪ್ರವರ್ತಕ ಡಾ| ಶಿವರಾಮ ಕೃಷ್ಣ ಭಂಡಾರಿ ತಿಳಿಸಿದರು.
ವಿಶೇಷ ಆಹ್ವಾನಿತರಾಗಿ ನಟ ಅರ್ಜುನ್ ಬದ್ಪಾ, ಮುಂಬಯಿ ದಕ್ಷಿಣ ಮಧ್ಯ ಕ್ಷೇತ್ರದ ಸಂಸದ ರಾಹುಲ್ ಆರ್.ಶಿವಾಲೆ, ಸೆಲೂನ್ ನಿರೂಪಕ ರಾಜು ಕನ್ವಾಲಾಲ್, ಡಿಸಿಪಿ ಜಯಂತ್ ಶಿತ್ರೆ, ಎಸಿಪಿಗಳಾದ ಸಂದೀಪ್ ಕಾರ್ಣಿಕ್, ವಿಲಾಸ್ ಸಿಂಗ್ ಸಂಜಯ್, ಬ್ರೈಟ್ ಪಬ್ಲಿಸಿಟಿಯ ಆಡಳಿತ ನಿರ್ದೇಶಕ ಯೋಗೇಶ್ ಲಕಾನಿ, ಅನಿಲ್‌ಕುಮಾರ್ ಶರ್ಮ, ಛಾಯಾಗ್ರಾಹಕ ಗೋಪಾಲ ಶೆಟ್ಟಿ, ಅಶೋಕ್ ದಮನ್‌ಕರ್, ರಾಕಿ ಜುಂಜುನ್‌ವಾಲಾ ಸೇರಿದಂತೆ ಹಲವು ಗಣ್ಯರು, ಶಿವಾಸ್ ಪರಿವಾರದ ಪ್ರಮುಖರು ಸಮಾರಂಭದಲ್ಲಿ ಪಾಲ್ಗೊಂಡಿದ್ದರು. 

ಭಂಡಾರಿ ಕುಟುಂಬದ ಮನೆ ಮನದ ಮಾತು ಭಂಡಾರಿವಾರ್ತೆ ತಂಡ ಶ್ರೀ ಶಿವರಾಮ್ ಹಾಗೂ ಅವರ ತಂಡಕ್ಕೆ ಉತ್ತರೋತ್ತರ ಯಶಸ್ಸು ಸಿಗಲೆಂದು ಶುಭ ಹಾರೈಸಿ SALUTE ಮಾಡುತ್ತಿದೆ.

Sunday 18 July 2021

ಮಣಿಪಾಲ ಮಂಚಿ , ದುಗ್ಲಿಪದವು, ಕಾರ್ತಿಕ್ ಭಂಡಾರಿ ಕೈಚಳಕದಿಂದ ಮೂಡಿಬಂದ ಬಣ್ಣದ ಚಿತ್ತಾರ

 ಮಾನವನ ಕ್ರಿಯಾಶಕ್ತಿಯ ಕುಶಲ ಅಭಿವ್ಯಕ್ತಿಯೇ ಕಲೆ. ಇಂಥ ಅಭಿವ್ಯಕ್ತಿಯ ಹಂಬಲ ಮಾನವನ ಹುಟ್ಟುಗುಣ. ಇದು ಬೇರೆ ಬೇರೆ ರೀತಿಯಲ್ಲಿ ಪ್ರಕಟಗೊಂಡಿದೆ. ಸುಂದರ ಗುಲಾಬಿಯನ್ನು ಕಂಡಾಗ ಮನಸ್ಸಿಗೆ ಸಂತೋಷವಾಗುತ್ತದೆ ಅತ್ಯುತ್ತಮ ಶಿಲ್ಪ , ಚಿತ್ರ, ಸಂಗೀತ ಮುಂತಾದವು ನಮಗೆ ಆನಂದವನ್ನು ಕೊಡಬಲ್ಲವು .

ಸುತ್ತಮುತ್ತಲಿನ ಪರಿಸರ, ಘಟನೆ, ಪ್ರಸಂಗ ಇವು ಮಾನವನಲ್ಲಿ ಸುಪ್ತವಾಗಿರುವ ಕಲಾಪ್ರಜ್ಞೆ ಹೊರಹೊಮ್ಮಲು ಸಹಾಯಕವಾಗುತ್ತವೆ. ಇದರಲ್ಲಿ ಮನಸ್ಸಿನ ಮೇಲೆ ಅಧಿಕ ಪ್ರಭಾವ ಬೀರುವಂಥದನ್ನು ಮಾನವ ಚಿತ್ರಿಸುವ ಪ್ರಯತ್ನ ನಡೆಸುತ್ತಾನೆ. ಪ್ರಕೃತಿಯನ್ನು ಮತ್ತು ಅದು ಪ್ರಚೋದಿಸುವ ಭಾವನೆಗಳನ್ನು ಅನುಕರಿಸಿ ಅದರ ಪ್ರತಿಕೃತಿಗಳನ್ನು ಚಿತ್ರಿಸಲು ರೂಪಿಸಲು ಪ್ರಯತ್ನಿಸುತ್ತಾನೆ ಅನುಕರಣೆ ಕಲಾಸೃಷ್ಟಿಯ ಒಂದು ಅವಿಭಾಜ್ಯ ಅಂಗ.

ಪ್ರಾಚೀನ ಕಾಲದಿಂದಲೂ ಮಾನವ ತಾನು ವಾಸಮಾಡುತ್ತಿದ್ದ ಗವಿ, ಬಂಡೆ, ಗೋಡೆಗಳ ಮೇಲೆ ಚಿತ್ರಗಳನ್ನು ಬರೆದ ಆ ನಂತರ ನದಿ ಜಲಾನಯನ ಪ್ರದೇಶಗಳಲ್ಲಿ ವಾಸಿಸುತ್ತಿದ್ದಾಗಲೂ ಸಹ ತನ್ನ ಈ ಕಲಾ ಸಂಸ್ಕೃತಿ ಕಲಾದೃಷ್ಟಿ, ಕಲಾಸೃಷ್ಟಿಗಳನ್ನು ಮುಂದುವರೆಸಿಕೊಂಡು ಬಂದಿದ್ದಾನೆ. ಚಿತ್ರ ಮಾಧ್ಯಮಗಳ ಜೊತೆಗೆ ಮಣ್ಣು , ಶಿಲೆ , ಲೋಹ ಇತ್ಯಾದಿ ಉಪಯೋಗಿಸಿಕೊಂಡು ಮೂರ್ತಿ ನಿರ್ಮಾಣ, ಮುದ್ರಿಕಾ ರಚನೆ ಮುಂತಾದುವುಗಳಲ್ಲಿ ಪರಿಣತಿ ಪಡೆದಿರುವುದನ್ನು ಗಮನಿಸಬಹುದು. ಇಂತಹ ಕಲೆಯ ಪರಿಣತಿಯನ್ನು ಪಡೆದ ನಮ್ಮ ಸಮಾಜದ ಅಪರೂಪದ ಕಲಾವಿದ ಉಡುಪಿ ಜಿಲ್ಲೆಯ ಮಣಿಪಾಲ ದುಗ್ಲಿಪದವು ಕಾರ್ತಿಕ್ ಭಂಡಾರಿ ಕೂಡಾ ಒಬ್ಬರು.

ಉಡುಪಿ ಜಿಲ್ಲೆಯ ಮಣಿಪಾಲ ನಿವಾಸಿಗಳಾದ ಶ್ರೀ ಕೃಷ್ಣ ಭಂಡಾರಿ ಮತ್ತು ಶ್ರೀಮತಿ ಪ್ರಮೀಳಾ ಭಂಡಾರಿ ದಂಪತಿಯ ಪುತ್ರ ಕಾರ್ತಿಕ್ ಭಂಡಾರಿ ಉಡುಪಿ ಪೂರ್ಣಪ್ರಜ್ಞ ಕಾಲೇಜಿನಲ್ಲಿ ಪ್ರಥಮ ವರ್ಷದ ವಾಣಿಜ್ಯ ವಿಭಾಗದ ಸ್ನಾತಕೋತ್ತರ ಪದವಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಯಾಗಿದ್ದಾರೆ.

ಕಳೆದ ಲಾಕ್ ಡೌನ್ ಸಮಯದಲ್ಲಿ ಹವ್ಯಾಸ ರೂಪದಲ್ಲಿ ತಯಾರಿಸಿದ ಚಿತ್ರಗಳು ನೋಡುಗರ ಗಮನ ಸೆಳೆಯುತ್ತಿದೆ. ಮೊದಮೊದಲು ಗೋಡೆಯ ಮೇಲೆ ಚಿತ್ರ ಬಿಡಿಸುತ್ತಿದ್ದು ಈಗ ಬಿಳಿಯ ಕ್ಯಾನ್ವಸ್ ಮೇಲೆ ಕುಂಚ ಹಿಡಿದು ಸರಸರನೆ ಚಿತ್ರ ಬಿಡಿಸುವ ವಿಶೇಷ ಕಲೆಯನ್ನು ಶೈಕ್ಷಣಿಕವಾಗಿ ಅಧ್ಯಯನ ಮಾಡದೆ ಸ್ವಪ್ರಯತ್ನದಿಂದ ಕರಗತ ಮಾಡಿಕೊಂಡಿದ್ದಾರೆ. ಕಷ್ಟದ ಕೆಲಸಕ್ಕೆ, ಇಷ್ಟದ ಲೇಪನ ಕೊಟ್ಟು ಕುಂಚದಲ್ಲೇ ಮನಸೊರೆಗೊಳಿಸುವ ಚಿತ್ರಗಳನ್ನು ಬಿಡಿಸುತ್ತಾರೆ. ಈಗಾಗಲೇ ಇವರ ಕೈಯಲ್ಲಿ ಅರಳಿದ ಅದ್ಭುತ ಕಲಾಕೃತಿಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

ಪೆನ್ಸಿಲ್ ಚಿತ್ರ, ತೈಲವರ್ಣ,ವರ್ಲಿಕಲೆಯಲ್ಲಿ ಪರಿಣತಿ ಸಾಧಿಸಿದ್ದಾರೆ. ಬಣ್ಣಗಳ ಸಂಯೋಜನೆಯಲ್ಲೋ ಇವರ ಕೈ ಚಳಕವನ್ನು ಗುರುತಿಸಬಹುದು. ಉಡುಪಿಯ ಪೂರ್ಣ ಪ್ರಜ್ಞಾ ಸಂಜೆ ಕಾಲೇಜಿನಲ್ಲಿ ಪ್ರಥಮ ವರ್ಷದ ಎಮ್. ಕಾಂ ವ್ಯಾಸಂಗ ಮಾಡುತ್ತಿರುವ ಇವರು ಬಿಡುವಿನ ವೇಳೆಯಲ್ಲಿ ಮೆಕ್ಯಾನಿಕ್ ಆಗಿ ಕಾರ್ಯ ನಿರ್ವಹಿಸುತ್ತಾರೆ.
ಯಶಸ್ಸನ್ನು ಸಂಭ್ರಮಿಸಲು ಮನುಷ್ಯನಿಗೆ ಬಹಳಷ್ಟು ಸಂಕಷ್ಟಗಳು ಬೇಕಾಗುತ್ತವೆ ಎಂಬ ಮಾತಿನಂತೆ ಕೋವಿಡ್ ಸಂಕಷ್ಟದ ಸಮಯದಲ್ಲಿ ಹಲವಾರು ಚಿತ್ರಗಳನ್ನು ಬಿಡಿಸಿ ಸೈ ಅನಿಸಿಕೊಂಡು ಪ್ರಬುದ್ಧತೆಯ ಮೆಟ್ಟಿಲನೇರುತ್ತಾ ಬರುತ್ತಿರುವ ಕಾರ್ತಿಕ್ ಭಂಡಾರಿಯವರಿಗೆ ಶ್ರೀ ಕಚ್ಚೂರು ನಾಗೇಶ್ವರ ದೇವರ ಅನುಗ್ರಹವಿರಲಿ.
ಭಂಡಾರಿವಾರ್ತೆ ಬಳಗ ನಿಮಗೆ ಯಶಸ್ಸನ್ನು ಕೋರುತ್ತಿದೆ.


✍️ ಸುಪ್ರಿಯ ಪ್ರಕಾಶ್ ಭಂಡಾರಿ, ಕಾರ್ಕಳ, ಬೈಲೂರು .