BhandaryVarthe Team

BhandaryVarthe Team
Bhandary Varthe Team

Sunday 16 July 2017

ಮಳೆಗಾಲದಲ್ಲಿ ಮಾರ್ದನಿಸುವ ನೆನಪುಗಳು..!


               ಟ್‌... ಚಟ್ಟ್.. ಚಟಿಲ್ ಅಂತ ಕಣ್ಣು ಕೋರೈಸುವಂತೆ ಬೀಸೋ ಚಾಟಿ ಮಿಂಚು.. ಕಿವಿ ಕಿವುಡಾಗೋ ಹಾಗೇ ಮಾರ್ದನಿಸೋ ಸಿಡಿಲುಗುಡುಗಿನಾರ್ಭಟ.. ಇಷ್ಟಾದ್ರೆ ಸಾಕಿತ್ತು, ಇದರ ಮುಂದುವರಿದ ಭಾಗದಂತೆ ಆಕೆಯದ್ದೂ ಒಂದೇ ಸಮ ಪಲ್ಲವಿ ಶುರು.. “ ಕೊತ್ತಲಿಗೆ ಉನ್ಗುದಿಜ್ಜಿ.. ಕನಕ್ ಮೊಟ್ಟುದಿಜ್ಜಿ.. ಮಡಲ್ ಕಟ್ದಿದಿಜಿ.. ಮರ್ಯೊಲ ಶುರು ಆಂಡು..ಎಂಚ ನಿಲ್ಕೆಗು ಬೇಯ್ಪಾದು ಪಾಡ್ನಪ್ಪಾ.. ಥೋ ಥೋ.. ನಿಕ್ಲು ಗೊಬ್ಬುದೇ ಕಾಲಕಳೆಲೆಂಬೆ. ( ಕೊತ್ತಲಿಗೆ ಒಣಗಿಲ್ಲ, ಸೌದೆ ಜೋಡಿಸಿಲ್ಲ, ತೆಂಗಿನ ಗರಿ ಕಟ್ಟು ರೆಡಿಯಾಗಿಲ್ಲ.. ಮಳೆಗಾಲ ಶುರುವಾಯ್ತು..ನಿಮ್ಗೆಲ್ಲಾ ಏನು ಬೇಯಿಸಿ ಹಾಕೋದೋ ಏನೋನೀವು ಆಟ ಆಡೇ ಕಾಲಕಳೀರಿ )”  ಇದಕ್ಕೆ ಕೋರಸ್ ನಮ್ಮ ಅಜ್ಜಿ.. “ ಬುಡು..ಬುಡು.. ಬರ್ಸೋಡು ಬಂಜಿ ಕಾಯ್ನಿನಾಗ ಅಕ್ಲೆಗ್ ಗೊತ್ತಾಪುಂಡು..ಬುಡ್ಯಾ ( ಬಿಡು ಬಿಡು ಮಳೆ ಬೀಳುವಾಗ ಹಸಿವಾಗುತ್ತಲ್ಲಾ ಆಗ ಗೊತ್ತಾಗುತ್ತೆ.. ನೀ ಬಿಟ್ಟು ಬಿಡು )” ಇಷ್ಟು ಕೇಳಿದ್ಮೇಲೆ ಗೊಣಗುತ್ತಲೇ ನಮ್ಮದು ಸೌದೆ ಒಟ್ಟುವ ಕೆಲಸ ಶುರು...
ರಚ್ಚೆ ಹಿಡಿದು ಒಂದೇ ಸಮ ಸುರಿಯುತ್ತಿರೋ ಮಳೆ .. ಸೂರ್ಯನನ್ನ ಕಡೇ ಬಾರಿ ನೋಡಿದ್ದು ನಾಲ್ಕು ದಿನಗಳ ಹಿಂದೆ.. ಬೆಳಗ್ಗೆ ಜಡಿಮಳೆ ಮಧ್ಯೆನೇ ಓಡೋಡಿ ಬಾವಿಯಿಂದ ನೀರು ಸೇದಿ ತಂದು ಹಂಡೆ, ಚೆಂಬುಗಳಿಗೆಲ್ಲಾ ತುಂಬಿದಾಗ ಆಕೆಯ ಮುಂದೆ ನಾನೇನೋ ಅದ್ಭುತ ಸಾಧಿಸಿದೆ ಅನ್ನೋ ಬಿಗುಮಾನ.. ಆಮೇಲೆ ಹಸಿಯಾಗಿದ್ದ ಇದ್ದ ಯೂನಿಫಾರ್ಮ್ ಶರ್ಟನ್ನ ಕೆಂಡದ ಮುಂದೆ ಇಟ್ಟು ಒಣಗಿಸುತ್ತಾ.. ಶರ್ಟನ್ನ ಆಗಾಗ ಮೂಸಿ ನೋಡಿ ಹೊಗೆಯ ಕಮಟು ವಾಸನೆಗೆ ಮುಖ ಸಿಂಡರಿಸುತ್ತಾಗಂಟೆ ಎಂಟಾಯ್ತು .. ಲೇಟಾಯ್ತು ಶಾಲೆಗೆ, ನಂಗೆ ತಿಂಡಿ ಬೇಡಅನ್ನೋ ಅಸಮಧಾನದ ಅಬ್ಬರ ದನಿ.. ಅಷ್ಟೇರಲ್ಲೇ ಶುರು ಆಕೆಯ ಚಡಪಡಿಕೆಇಲ್ಲ್ ಪೂರ್ತಿ ತೋರೊಂದುಂಡು.. ದಿಕ್ಕೆಲ್ದಲ್ಪನೇ ನೀರು..ಥೋ ಥೋ.. ಎಂಚ ಬೇಯ್ಪಾವುನನಾ.. ಆಂಡೋ ಆಂಡ್ತಿಂಡಿ ಕೊರ್ಪೆ ಉಂತುಲಪ್ಪಾ.( ಮನೆ ಪೂರ್ತಿ ಸೋರುತ್ತಿದೆ.. ಒಲೆ ಹತ್ರನೇ ನೀರು ಬರ್ತಿದೆ.. ಹೇಗೆ ಬೇಯ್ಸೋದೋ.. ಆಯ್ತೋ ಆಯ್ತು.. ತಿಂಡಿ ಕೊಡ್ತೀನಿ ಇರಪ್ಪಾ.. )”  ಅನ್ನೋ ಮಾತಿನ ಹಿಂದೆನೇ ಕಾದ ಮಣ್ಣಿನ ಕಾವಲಿಗೆ ಚೋಂಯ್ಯ್ಅಂತ ದೋಸೆ ಹಿಟ್ಟು ಬಿದ್ದ ಸದ್ದು ಕೇಳಿದಾಗ್ಲೇ ಸಮಧಾನ.. ಜೊತೆಗೆ ಒಲೆಯ ಬೆಂಕಿಗೆ ಹಾಕ್ತಾ ಇದ್ದ ತೆಂಗಿನ ಚಿಪ್ಪು, ಗೇರುಬೀಜ ಸಿಪ್ಪೆಯ ಸಮ್ಮಿಳಿತದ ಅವರ್ಣನೀಯ ಧೂಮ ಮನೆಯಿಡೀ ತುಂಬಿದಾಗ್ಲೇ ಏನೋ ಆನಂದ.. ಇನ್ನು ನಾವುಗಳು ಗೊಣಗುತ್ತಲೇ ಘಮ್ಮೆನ್ನುವ ದೋಸೆಚಟ್ನಿ ಜೊತೆ ಬಿಸಿ ಬಿಸಿ ಚಾ ಕುಡಿದು  “ ಅಮ್ಮಾ.. ಯಾನ್ ಪಿದಾಡಿಯೇ ( ಅಮ್ಮಾ ನಾನು ಹೊರಟೆ )” ಅಂದಾಗ್ಲೇ ಆಕೆಗೆ ಪ್ರತೀ ದಿನವೂ ಅದೇನನ್ನೋ ಗೆದ್ದ ನಿಟ್ಟುಸಿರು..


             ಮನೆಯಿಂದ ಹೊರಡುವಾಗ್ಲೇ ಮೊಣಕಾಲೆತ್ತರಕ್ಕೆ ಮಡಚಿದ ಯೂನಿಫಾರ್ಮ್ ಪ್ಯಾಂಟ್.. ಗಣಿತ ಮೇಷ್ಟ್ರ  ಬೆತ್ತ ನೆನೆಸಿಕೊಂಡುನಾನು ಒದ್ದೆ ಆದ್ರೂ ಪುಸ್ತಕ ಏನೂ ಆಗ್ಬಾರ್ದು ಅನ್ನೋ ಅಪ್ರತಿಮ ಕಕ್ಕುಲಾತಿಯಿಂದ ಕೊಡೆ ಹಿಡಿದು ಹೆಜ್ಜೆ ಹಾಕ್ತಾ ಹಾಕ್ತಾ.. “ಮಳೆಯಿಂದ ಶಾಲೆಗೆ ಇವತ್ತೂ ರಜೆ ಕೊಡ್ತಾರಾ.. ಗಣಿತ ಮೇಷ್ಟ್ರು  ಇವತ್ತ್ ಬರ್ತಾರಾ.. ಲೀಸರ್ ಪಿರಿಯೆಡ್ಹೊತ್ತಿಗೆ ಆಡೋದಿಕ್ಕೆ ಹೋಗೋಕೆ ಆಗುತ್ತಾಅನ್ನೋ ನೂರಾರು ಲೆಕ್ಕಾಚಾರಗಳು..

         ಪ್ರತೀ ಜುಲೈ ಬಂದಾಗ್ಲೂ ಇವೆಲ್ಲಾ ಕಣ್ಮುಂದೆ ಬಂದು ಹೋಗುತ್ತೆ.. ಮಳೆಯ ಬಿರುಸು.. ಕಾರ್ಮೋಡ ಮುಸುಕಿ ಹಗಲಲ್ಲೂ ಕಾಡುವ ಕತ್ತಲು.. ಮಣ್ಣಿನ ಕಾವಲಿಯ ದೋಸೆಯ ಪರಿಮಳ.. ಅಡಿಗಾಸ್ ಹೊಟೇಲ್ನಲ್ಲೂ ಸಿಗದ ಚಟ್ನಿ.. ಸೂರಿನ ಕೆಳಗೆ ನಿಂತು ಮುಖದ ಮೇಲೆ ಬೀಳೋ ಹನಿಗಳನ್ನು ಅನುಭವಿಸುತ್ತಾ ಕುಡಿದ ಚಾಹದ ಸ್ವಾದ.. ಎಲ್ಲಾ ಇನ್ನು ನೆನಪು ಮಾತ್ರ ಅನ್ನೋದು ವಾಸ್ತವ.. ಆದ್ರೂ ನಮಗಾಗಿ ತನ್ನನ್ನೇ ಸವೆಸಿದ ಆಕೆಯ ಮುಖ ಯಾವಾಗ್ಲೂ ಕಣ್ಣೆದುರೇ ಇರುತ್ತೆ..

ಲೇಖನ: ಪ್ರಶಾಂತ್ .ಬಿ. ಆರ್ 
ಸಂಪಾದಕರು, ಭಂಡಾರಿ ವಾರ್ತೆ


5 comments:

  1. ಮಳೆಯಲ್ಲಿ ನೆನೀತಾ ಶಾಲೆಗೆ ಹೋದಷ್ಟು ಖುಷಿ ಆಯ್ತು ನಿಮ್ಮ ಲೇಖನ ಓದಿ.

    ReplyDelete
  2. ಸವಿ ಸವಿ ನೆನಪು ಸೂಪರ್..😄

    ReplyDelete