BhandaryVarthe Team

BhandaryVarthe Team
Bhandary Varthe Team

Friday 8 October 2021

ನಾನು ಮಹತಿ - ಎ.ಆರ್.ಭಂಡಾರಿ.ವಿಟ್ಲ.

 

ಕಥೆ - 2

ನಾನು ಮಹತಿ

ಕನ್ನಡಿಯೆದುರು ನಿಂತವಳಿಗೆ ಕೆನ್ನೆ ಸೋಕುತ್ತಿರುವ ಮುತ್ತಿನ ಜುಮುಕಿ ಗಳು ನನ್ನನ್ನೇ ಅಣಕಿಸಿದಂತಾಯಿತು.ಅಮ್ಮ ತಂದಿಟ್ಟಿದ್ದ ಹಸಿರು ರೇಷ್ಮೆ ಸೀರೆ ನೆನಪಿನಾಳಕ್ಕೆ ಕರೆತಂದಂತಾಗಿತ್ತು .

ಹೌದು, ಪ್ರೌಢಶಾಲಾ ಶಿಕ್ಷಕರ ಮಗ ನಾನು. ಹೆಸರು "ಅಭಿಷೇಕ" .‌ ಎಳವೆಯಲ್ಲಿ ಅಪ್ಪನ ಕೈ ಹಿಡಿದು ಶಾಲೆಯ ಅಂಗಳಕ್ಕೆ ಕಾಲಿಟ್ಟ ನನಗೆ ಅವರ ವಿದ್ಯಾರ್ಥಿಗಳೆಲ್ಲರೂ ಅಣ್ಣ ಅಕ್ಕಂದಿರು. ನನ್ನ ತುಂಟಾಟಕ್ಕೆ ಅವರೆಲ್ಲ ಹಾತೊರೆಯುವವರು ಆಗಿದ್ದರು. ನಾನು ಬೆಳೆದು ದೊಡ್ಡವನಾಗ ತೊಡಗಿದೆ.ವಿಧಿ ನಿಯಮವೋ ಏನೋ ಎಂಬಂತೆ ಅಮ್ಮ ಮತ್ತೆ ಗರ್ಭ ಧರಿಸಲಿಲ್ಲ.ಬಯಸಿ ಪಡೆದ ನನ್ನನ್ನೆ ಪ್ರೀತಿಯಿಂದ ಬೆಳೆಸ ತೊಡಗಿದರು.ಬೆಳೆಯತ್ತಾ ಹೊದಂತೆ ನನ್ನೊಳಗಿನ ಭಾವನೆಗಳು ವ್ಯತಿರಿಕ್ತವಾಗತೊಡಗಿದವು.ಅದಾಗಲೇ ನನ್ನ ವರ್ತನೆಯ ಮೇಲೆ ಕಣ್ಣಿರಿಸಿದ್ದ ತಂದೆಯವರು ನೇರವಾಗಿ ವೈದ್ಯರ ಬಳಿ ಕರೆದೊಯ್ದಿದ್ದರು. ಅವರ ಅನುಮಾನ ನಿಜವಾಗಿತ್ತು.ನಾನು ಅವಳಾಗ ತೊಡಗಿದೆ. ಅಲ್ಲಿವರೆಗೆ ನನ್ನೊಳಗೆ ನಡೆಯುತ್ತಿದ್ದ ತುಮುಲಗಳಿಗೆ ನಿಜರೂಪ ದೊರಕಿತ್ತು.ಯಾವ ಔಷಧಗಳೂ,ಪೂಜೆ ಹೋಮಗಳು ನನ್ನನ್ನು ಬದಲಾಯಿಸಲ್ಲಿಲ್ಲ.ನಾನು ಅವಳಾಗ ತೊಡಗಿದೆ.ಅಪ್ಪ, ಅಮ್ಮನಿಗೂ ವಿಷಯ ಮನವರಿಕೆ ಮಾಡಿ ನನ್ನನ್ನು 'ಮಹತಿ'ಯನ್ನು ಮನಃಪೂರ್ವಕವಾಗಿ ಒಪ್ಪಿಕೊಂಡಿದ್ದರು.ತವರು ಮನೆಯವರ ಗಂಡನ ಮನೆಯವರ ನಿಂದನೆಗೂ ಒಳಗಾದರು.ಕುಟುಂಬಿಕರ , ಸಹೋದ್ಯೋಗಿಗಳ ಕಟು ಮಾತಿಗೆ ಆಹಾರವಾಗುವುದನ್ನು ತಪ್ಪಿಸಲು ದೂರದ ಈ "ಮುಗಿಲು ಪೇಟೆಗೆ" ವರ್ಗವಾಗಿ ಬಂದರು. ವಿಪರ್ಯಾಸವೆಂದರೆ ಈ ಊರಲ್ಲಿ ಮನೆಗೊಂದರಂತೆ ನನ್ನಂತ ಅಮಾಯಕ ಮಕ್ಕಳ ಜನನವಾಗುತ್ತಿತ್ತು.ಅವರೆಲ್ಲ ಬೀದಿಗೆ ಬಿದ್ದು ಎಲ್ಲೋ ಊರು ಬಿಟ್ಟು ನಡೆಯುತ್ತಿದ್ದರು.ವಿಷಯ ತಿಳಿದ ಅಪ್ಪ ಅವರನ್ನೆಲ್ಲಾ ಒಟ್ಟು ಸೇರಿಸಿದರು.ಊರಿನವರಿಗೆ ಶಿಕ್ಷಣದ ಮನವರಿಕೆ ಮಾಡಿದರು.ಮನೆ ಮಕ್ಕಳನ್ನು ಹೆತ್ತವರೇ ಕಾಪಾಡಬೇಕೆಂದು ಮನವರಿಕೆ ಮಾಡಿದರು.ಯಾವುದೇ ತಪ್ಪಿಲ್ಲದೆ ಮಂಗಳ ಮುಖಿಯಾರಾಗಿ ಬದಲಾದ ಮಕ್ಕಳ ಜತೆ ಮಾನಸಿಕವಾಗಿ ದೈಹಿಕವಾಗಿ ಹೆತ್ತವರಿರಬೇಕಾದ ಅನಿವಾರ್ಯತೆಯನ್ನು ತಿಳಿಸಿದರು.ಪರಿಣಾಮ ಊರ ಮಕ್ಕಳೆಲ್ಲಾ ಒಂದಾಗಿದ್ದೇವೆ.ನಾನಿಂದು ಹೆಸರುವಾಸಿಯಾದ ವೀಣಾವಾದಕಿ ಆಗಿದ್ದೇನೆ.ಇದೇ ರೀತಿ ಅನೇಕ ಸಾಧಕರು ನನ್ನೂರಿನೊಳಗಿದ್ದಾರೆ. ನನ್ನೊಳಗಿನ ಕಲೆಗೆ ಪೋಷಣೆ ನೀಡಿದವರು ನನ್ನ ತಾಯಿಯವರು.ಇಡೀ ಸಮಾಜ ತುಚ್ಚವಾಗಿ ಕಂಡರೂ ನನ್ನೂರಿನ ಜನರಿಗೆ ನಾನು ಮನೆಮಗಳು. ನನ್ನ ಹೆತ್ತವರಂತೆ ನನ್ನ ಸಾಧನೆಗೆ ಬೆನ್ನೆಲುಬಾಗಿ ನಿಂತವರು. "ಅಭಿಷೇಕ" ನನ್ನು"ಮಹತಿ"ಯನ್ನಾಗಿ ಪ್ರೀತಿಸಿದವರು.
ಇವರಿಗಾಗಿಯೇ ನನ್ನ ಜೀವನವನ್ನು ಮುಡಿಪಾಗಿಟ್ಟಿದ್ದೇನೆ.ಬಂಧು ಬಳಗದಿಂದ ದೂರಾಗಿ ಬಂದ ನಮಗೆ ಇವರೇ ಕುಟುಂಬಿಕರು.


ಊರ ಶಾಲೆ ಇಂದು ಹಲವು ಶಿಕ್ಷಣ ಸಂಸ್ಥೆಗಳೊಂದಿಗೆ ವಿಶಾಲವಾಗಿ ಬೆಳೆದಿದೆ. ನನ್ನಂತೆ ಮಂಗಳಮುಖಿ ಎನಿಸಿಕೊಂಡ ಎಷ್ಟೋ ಜೀವಗಳಿಗೆ ಆಸರೆಯಾಗಿದೆ. ಹೊರ ಊರಿಂದ ಅನೇಕ ನಮ್ಮಂತ ಜನರು ಇಲ್ಲಿ ಬಂದು ಸೇರಿದ್ದಾರೆ.ದುಡಿಮೆಯ ಬದುಕನ್ನು ಸಂತೋಷದಿಂದ ಬದುಕಲು ಅನೇಕ ಸ್ವ ಉದ್ಯೋಗಗಳು ಇಲ್ಲಿದೆ.ಇಲ್ಲಿನ ವಸ್ತುಗಳು ವಿಶ್ವ ಮಟ್ಟದಲ್ಲಿ ಹೆಸರುವಾಸಿಯಾಗಿವೆ.ಎಷ್ಟೋ ಮಂಗಳಮುಖಿಯರಿಗೆ ಗೌರವದ ಬದುಕು ಲಭಿಸಿದೆ.ಹೆತ್ತವರ ಪ್ರೀತಿ ಲಭಿಸಿದೆ.ಕುಟುಂಬದ ಭದ್ರತೆ ದೊರಕಿದೆ.ಸ್ವಾಭಿಮಾನಿಯಾಗಿ ಬದುಕಲು ಪ್ರೇರಣೆಯಾಗಿದೆ.ಊರು ಬಿಟ್ಟು ಹೋದವರೂ ಮರಳಿ ಬಂದಿದ್ದಾರೆ.ವಿಕಲಚೇತನರು, ಅನಾಥರೂ ನಮ್ಮ ಜತೆ ಸೇರಿದ್ದಾರೆ‌.ಒಟ್ಟಂದಿನಲ್ಲಿ ಪರಿಪೂರ್ಣ ಕುಟುಂಬ ನಮ್ಮದಾಗಿದೆ.


ಮರೆತೆ ಬಿಟ್ಟಿದ್ದೆ. ನಾನಿಂದು ಈ ಊರಲ್ಲಿ ತಂದೆ-ತಾಯಿಯರ ಹೆಸರಿನಲ್ಲಿ ನಿರ್ಮಿಸಿದ ಸುಸಜ್ಜಿತ ಆಸ್ಪತ್ರೆಯ ಉದ್ಘಾಟನೆಗೆ ತಯಾರಾಗುತ್ತಿದ್ದೇನೆ. ಅದಾಗಲೇ ವೇಳೆಯಾಯಿತು ಎಂದನಿಸುತಿದೆ‌‌.ಅಷ್ಟರಲ್ಲಿ "ಪುಟ್ಟಾ,.... ಅದಾಗಲೇ ಎಲ್ಲರೂ ಹೊರಟಾಯ್ತು" ಎಂಬ ಅಮ್ಮನ ದನಿಯೊಂದಿಗೆ ಅವರೇ ನೇಯ್ದ ಮಲ್ಲಿಗೆಯ ದಂಡೆ ನನ್ನ ತುರುಬೇರಿತು. ಎಲ್ಲರ ಒಡಗೂಡಿ ಆಸ್ಪತ್ರೆಯ ಅಂಗಳಕ್ಕೆ ಬಂದವಳಿಗೆ ಊರವರ ಹಾರೈಕೆ ಪ್ರೀತಿ ಮೈಮರೆಸಿ ನಿಲ್ಲಿಸಿದೆ.ಆಸ್ಪತ್ರೆಯ ಉದ್ಘಾಟನೆ ನನ್ನ ಹೆತ್ತವರಿಂದಲೇ ನಡೆಯುತ್ತಿದೆ. ಸಭಾಕಾರ್ಯಕ್ರಮದಲ್ಲಿ ವೇದಿಕೆಯೇರಿದ ನಾನು ಎದ್ದು ನಿಂತು ಈ ದಿನದ ನೆನಪಿಗಾಗಿ "ನನ್ನ ದೇಹವನ್ನು ವೈದ್ಯಕೀಯ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಆಸ್ಪತ್ರೆಗೆ ದಾನ ಇರಿಸಿದ್ದೇನೆ ನನ್ನ ನಡೆ ನನ್ನಂಥ ಎಷ್ಟೋ ಮಂಗಳಮುಖಿಯರಿಗೆ ಸ್ಪೂರ್ತಿಯಾಗಲಿ. ಮುಂದೆ ವೈದ್ಯಕೀಯ ಪ್ರಯೋಗಗಳು ನಡೆದು ಮಂಗಳಮುಖಿಯರ ಜನನ ಆಗದಿರಲಿ ಎಂಬುದಷ್ಟೇ ನನ್ನ ಆಶಯ "ಎಂದು ನುಡಿದೆ‌. ಊರಿಗೆ ಊರೇ ಎದ್ದುನಿಂತು ನನ್ನ ಹರಸಿದ್ದು ಕಂಡು ಸಾರ್ಥಕತೆಯ ಭಾವ ನನ್ನ ಹೆತ್ತವರ ಮೊಗದಲ್ಲಿತ್ತು.ನಾನು ಪಾವನಳಾದೆ ಎಂದೆನಿಸಿತು.ದೇವರಿತ್ತ‌ ಜನ್ಮ ಕೊನೆಗೂ ಶಾಪವಾಗಲಿಲ್ಲ . ಎಷ್ಟೋ ಅಮಾಯಕರಿಗೆ ದಾರಿದೀಪ ಮಾಡಲು ಅವಕಾಶವಿತ್ತ ಹೆತ್ತವರ ಬಗ್ಗೆ ಹೆಮ್ಮೆ ಎನಿಸಿತು.


✍🏻ಎ.ಆರ್.ಭಂಡಾರಿ.ವಿಟ್ಲ.

No comments:

Post a Comment