BhandaryVarthe Team

BhandaryVarthe Team
Bhandary Varthe Team

Friday 8 October 2021

ಅಂತರಾಳ - ಭಾಗ 2

 

ಇಲ್ಲಿಯವರೆಗೆ: ಶಮಿಕಾ ತಾಯಿ ಜೊತೆ ಇರುತ್ತಾಳೆ...ಇವಳ ತಂದೆ ಬಗ್ಗೆ ತಾಯಿ ಭವಾನಿ ಎನೂ ಹೇಳಿರುವುದಿಲ್ಲ.. ಹಾಗಾಗಿ ತಾಯಿ ಗ್ರಂಥಾಲಯಕ್ಕೆ ಹೋದ ಸಂದರ್ಭದಲ್ಲಿ ತಾಯಿಯ ಡೈರಿ ತೆಗೆದು ಓದುತ್ತಾಳೆ.....

ಅಂತರಾಳ - ಭಾಗ 2

 "ನನಗೆ ಆಗಿನ್ನೂ 2 ವರ್ಷ ನನ್ನ ತಂದೆ ತೋಟದ ಕೆಲಸಕ್ಕೆ ಹೋದವರು ಕುಸಿದು ಬಿದ್ದರಂತೆ ಮನೆಗೆ ತಂದಾಗ ಬಾಗಶಃ ಪ್ರಾಣ ಹೋಗಿತ್ತು.ನೆರೆ ಮನೆಯವರ ಸಹಾಯದಿಂದ ವೈದ್ಯರು ಮನೆಗೆ ಬಂದಾಗ ಪ್ರಾಣ ಹೋಗಿತ್ತು. ವೈದ್ಯರು ಹೃದಯಾಘಾತವಾಗಿದೆ ಎಂದರು. ನನ್ನ ಅಮ್ಮ ಸಣ್ಣ ಮಗುವನ್ನು ಅಪ್ಪಿ ತಲೆ ಚಚ್ಚಿಕೊಂಡು ರೋಧಿಸಿದರಂತೆ.ವಿಷಯ ತಿಳಿದು ದೂರದಲ್ಲಿರುವ ತಾಯಿ ಮನೆಯಿಂದ ನನ್ನ ಮಾವ ಬಂದು ಶವ ಸಂಸ್ಕಾರ ಮಾಡಿ ತಂಗಿ ಮಗುವನ್ನು ಜೊತೆಯಲ್ಲಿ ಮನೆಗೆ ಕರೆ ತಂದರು.ಅಲ್ಲಿಂದ ಬಂದ ಮೇಲೆ ನಮ್ಮ ಕಷ್ಟ ಹೇಳತೀರದಾಯಿತು.


ಅಮ್ಮನನ್ನು ದಿನವಿಡೀ ಕೂಲಿಯಾಳಾಗಿ ದುಡಿಸುತ್ತಿದ್ದರು. ಅಮ್ಮ ಮರು ಮಾತನಾಡದೆ ವಿಧಿಯನ್ನು ಹಳಿಯುತ್ತಾ ಮಗುವನ್ನು ಅಪ್ಪಿ ಮರೆಯಲ್ಲಿ ಅತ್ತು ಕೆಲಸ ಮಾಡುತ್ತಿದ್ದರು. ಹಾಗೂ ಹೇಗೂ ನನಗೆ 6 ವರ್ಷ ತುಂಬಿ ಮಾವ ನೆರೆ ಹೊರೆಯವರ ಮಾತಿಗೆ  ನನ್ನನ್ನು ಶಾಲೆಗೇ ಸೇರಿಸಿದರು.ಅಮ್ಮನಿಗೆ ಅದೊಂದು ನೆಮ್ಮದಿ ಇತ್ತು. ನನ್ನ ಮಗಳು ಭವಾನಿ ಶಾಲೆಗೆ ಹೋಗುತ್ತಿದ್ದಾಳೆ. ಮುಂದೆ ಅವಳೂ ನಾನು ಬೇರೆ ಮನೆ ಮಾಡಿ ಯಾರ ಹಂಗೂ ಇಲ್ಲದೆ ಬದುಕುತ್ತೇವೆ ಎಂದು ದಿನಾ ಕನಸು ಕಟ್ಟುತ್ತಿದ್ದಳು....ಹೀಗೆ ವರ್ಷ ಕಳೆದು ನಾನು ಹದಿ ಹರೆಯಕ್ಕೆ ಬಂದೆ. ನನ್ನ ಎಸ್ ಎಸ್ ಎಲ್ ಸಿ ಮುಗಿಸಿ ಕಾಲೇಜಿಗೆ ಕಳುಹಿಸಲು ನನ್ನ ಮಾವ ಒಪ್ಪಲಿಲ್ಲ. ಹಳ್ಳಿಯಿಂದ ದೂರದ ಪೇಟೆ ಉಡುಪಿಗೆ ಬಸ್ಸು ಇಲ್ಲ. ಅಲ್ಲೇ ಎಲ್ಲಾದರೂ ಹಾಸ್ಟೆಲ್ ಗೆ ಸೇರಿಸಬೇಕು. ತುಂಬಾ ಖರ್ಚು ಕೂಡಾ ಆಗುತ್ತದೆ ಎಂದಾಗ ಅಮ್ಮ ಮರೆಯಲ್ಲಿ ನಿಂತು ಅತ್ತರು. ಎದುರು ಮಾತನಾಡಿದರೆ ಹೊಡೆಯಲೂ ಹಿಂಜರಿಯದ ಅಣ್ಣ. ಅತ್ತಿಗೆ ಸ್ವಲ್ಪ ಕರುಣೆ ತೋರಿಸಿದರೂ ಅಣ್ಣ ಬೈಯ್ಯುತ್ತಿದ್ದರು. ಬಿಟ್ಟಿಯಾಗಿ ತಾಯಿ ಮಗಳು ತಿನ್ನುತ್ತಾರೆ ಎಂದು ತಾತ್ಸಾರ ಮಾಡುತ್ತಿದ್ದರು. ನನ್ನ ಶಾಲಾ ಮುಖ್ಯೋಪಾಧ್ಯಾಯಿನಿ ತುಂಬಾ ಒಳ್ಳೆಯ ವ್ಯಕ್ತಿಯಾಗಿದ್ದರು. ಅವರು ಮನೆಗೆ ಬಂದು ನನ್ನ ಮಗಳು ಕಾಲೇಜಿಗೆ ಸೇರುತ್ತಾಳೆ, ನಿಮ್ಮ ಸೊಸೆ ಭವಾನಿಯನ್ನೂ ಸೇರಿಸಿ , ಓದುವುದರಲ್ಲೂ ಮುಂದಿದ್ದಾಳೆ ನಿಮಗೆ ಕಷ್ಟವಾದರೆ ನಾನೇ ದುಡ್ಡು ವ್ಯವಸ್ಥೆ ಮಾಡುತ್ತೇನೆ ಎಂದು ಮಾವನಲ್ಲಿ ಹೇಳಿದಾಗ ದುಡ್ಡಿಗೆ ಏನೂ ಕಷ್ಟವಿಲ್ಲದ ಮಾವನಿಗೆ ಯಾಕೋ ಕಳುಹಿಸುವುದಿಲ್ಲ ಎಂದು ಮುಖ್ಯೋಪಾಧ್ಯಾಯಿನಿಯವರಲ್ಲಿ ಹೇಳಲು ಆಗದೆ ಕಾಲೇಜಿಗೆ ಸೇರಿಸಲು ಒಪ್ಪಿಕೊಂಡರು. ಅಂತೂ ಬಂದ ಕಷ್ಟ ಪರಿಹಾರವಾಯ್ತಲ್ಲ ಎಂದು ಅಮ್ಮ ನನ್ನನ್ನು  ರಾತ್ರಿ ಅಪ್ಪಿಕೊಂಡು ಮುದ್ದಾಡಿದರು ಹಾಗೂ ಮೆಲ್ಲಗೆ ಹೇಳಿದರು ನೀನು ಚೆನ್ನಾಗಿ ಓದಿ ಒಳ್ಳೆಯ ಕೆಲಸ ಪಡೆದು ನನನ್ನು ಕರೆದುಕೊಂಡು ಹೋಗು ಭವಾನಿ, ತಿಂಗಳಿಗೊಮ್ಮೆ ಮನೆಗೆ ಬಾ. ನಾನು ನಿನಗಾಗಿ ಬದುಕುತ್ತಿದ್ದೇನೆ. ನೀನು ಇಲ್ಲದಿದ್ದರೆ ನಿನ್ನ ಅಪ್ಪನ ಜೊತೆ ನಾನೂ ಸಾಯುತ್ತಿದ್ದೆ ಭವಾನಿ..  ಈ ಕಷ್ಟ ಅವಮಾನ ಎಲ್ಲವನ್ನೂ ನನ್ನ ಮಗಳಿಗಾಗಿ ಸಹಿಸುತ್ತೇನೆ ಮಗಳೇ .. ಚೆನ್ನಾಗಿ ಓದು. ನಿನ್ನ ಗಮನ, ಆಸಕ್ತಿ ಬೇರೆಲ್ಲೂ ಕಳೆದು ಹೋಗಲು ಬಿಡಬೇಡ.. ಪತ್ರ ಬರೆಯುತ್ತಾ ಇರು ಎಂದು ಅಮ್ಮ ಬಿಕ್ಕಿ ಬಿಕ್ಕಿ ಅತ್ತರು. ನಾನೂ ಅಮ್ಮನ ಜೊತೆ ದುಃಖಿಸಿದೆ. ಅಮ್ಮನನ್ನು ನಾನೇ ಸಂತೈಸಿದೆ. ಅಳಬೇಡ ಅಮ್ಮ ನಾನು ಖಂಡಿತ ನಿನ್ನನ್ನು ಬೇರೆ ಮನೆ ಮಾಡಿ ಕರೆದುಕೊಂಡು ಹೋಗುತ್ತೇನೆ ಖುಷಿಯಾಗಿರು ಎಂದೆ.

ಮರುದಿನ ನಾನು ಕಾಲೇಜಿಗೆ ಸೇರಲು ಮಾವನ ಜೊತೆಗೆ ಉಡುಪಿಗೆ ಬಂದೆ.ಕಾಲೇಜಿಗೆ ಸೇರಿ , ಮೂರು ದಿನ ಬಿಟ್ಟು ಎಲ್ಲಾ ಪುಸ್ತಕ, ಸಾಮಾನು ತಂದು ಹಾಸ್ಟೆಲ್ ಗೆ ಸೇರಿ ಆಯಿತು. ನನ್ನ ಜೀವನ 2 ವರ್ಷದಿಂದ 15 ವರ್ಷಗಳ ವರೆಗೆ ಮಾವನ ಮನೆಯಲ್ಲಿ ಕಳೆಯಿತು.ಈಗ ಹಾಸ್ಟೆಲ್ ನಲ್ಲಿ ಬೇರೆಯೇ ಲೋಕ ಎಂಬುದು ತಿಳಿಯಿತು. ಕೆಲವು ಹೆಣ್ಣು ಮಕ್ಕಳ  ಅಪ್ಪ ಅಮ್ಮ ವಾರಕೊಮ್ಮೆ ಬರುತ್ತಿದ್ದರು.ಬರುವಾಗ ತಿಂಡಿ ತಿನಿಸುಗಳನ್ನೂ ತರುತ್ತಿದ್ದರು. ಎಲ್ಲರ ಅಪ್ಪ ಅಮ್ಮ ಕನಿಷ್ಠ ತಿಂಗಳಿಗೆ ಒಮ್ಮೆಯಾದರೂ ಬರುತ್ತಿದ್ದರು.

ಆದರೆ ನನ್ನ ಮನೆಯಿಂದ ಮಾತ್ರ ಯಾರೂ ಬರುತ್ತಿರಲಿಲ್ಲ. ಎಲ್ಲ ಮಕ್ಕಳು ನನಗೆ ತಿಂಡಿ ನೀಡಿ ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದರು. ನಮ್ಮಹಿಂದಿನ ಶಾಲೆಯ ಮುಖ್ಯೋಪಾದ್ಯಾಯಿನಿಯ ಮಗಳು ಪದ್ಮಜಾ ಕೂಡಾ ನನ್ನೊಂದಿಗೆ ಇದ್ದಳು. ಅವಳ ಅಮ್ಮ ಬಂದಾಗ ಅವರು ನನ್ನನ್ನು ಅವರ ಮಗಳಂತೆ ನನ್ನ ಬೇಕು ಬೇಡಗಳನ್ನು ಕೇಳಿ ತಿಂಡಿ, ಪುಸ್ತಕ ತಂದು ಕೊಡುತ್ತಿದ್ದರು. 6 ತಿಂಗಳಿಗೆ ಒಮ್ಮೆ ಮಾವ ಬಂದು ಮನೆಗೆ ಕರೆದುಕೊಂಡು ಹೋದಾಗ ಅಮ್ಮ ಕಡ್ಡಿಯಾಗಿ ಹೋಗಿದ್ದರು. ಕಣ್ಣು ಆಳಕ್ಕೆ ಹೋಗಿತ್ತು. ಯಾಕೋ ಅಮ್ಮನನ್ನು ನೋಡಿ ಮನಸ್ಸಿನಲ್ಲೇ ಭಯವಾಯ್ತು.ಯಾಕೆ ಅಮ್ಮ ಈ ರೀತಿ ಆಗಿದ್ದೀಯಾ. ಹುಷಾರಿಲ್ವಾ ಎಂದು ಕಕ್ಕುಲತೆಯಿಂದ ವಿಚಾರಿಸಿದಾಗ ಎರಡು ಹನಿ ಕಣ್ಣೀರು ಅಮ್ಮನ ಉತ್ತರವಾಯಿತು. ನೆರೆಮನೆಯವರಿಂದ ತಿಳಿಯಿತು ಅಮ್ಮನಿಗೆ ಮಾವ ಆಗಾಗ ಕೋಣ ಓಡಿಸುವ ಬೆತ್ತದಿಂದ ಹೊಡೆಯುತ್ತಿದ್ದಾರೆ ಎಂದು.!.ನಾನು ಏನನ್ನೂ ಹೇಳುವ ಸ್ಥಿತಿಯಲ್ಲಿ ಇರಲಿಲ್ಲ....ಎರಡು ದಿನ ಇದ್ದು ಪುನಃ ಹಾಸ್ಟೆಲ್ ಗೆ ಕಳುಹಿಸಿದರು. ಹೀಗೆ ಎರಡು ವರ್ಷ ಕಳೆದು ನನ್ನ ಪಿ. ಯು. ಸಿ.ಯನ್ನು ಪ್ರಥಮ ಶ್ರೇಣಿಯಲ್ಲಿ ಪಾಸು ಮಾಡಿದೆ. ಪಿ ಯು ಸಿ ಕೊನೆಯ ಹಂತದಲ್ಲಿ ಇರುವಾಗಲೇ ಹಾಸ್ಟೆಲ್ ನ ವಾರ್ಡನ್ " ಇಲ್ಲೇ ಸಮೀಪದ ಗ್ರಂಥಾಲಯಕ್ಕೆ ಸಹಾಯಕಿ ಒಬ್ಬರು ಬೇಕಂತೆ  ನೀನೆ ಯಾಕೆ ವಿಚಾರಿಸಬಾರದು ಭವಾನಿ" ಎಂದರು.ನನಗೆ ಎಲ್ಲೂ ಅಳುಕು. ಪದ್ಮಜಾಳಲ್ಲಿ ಕೇಳಿದೆ. ಅವಳೂ ಅವಳ ಅಮ್ಮನಿಗೆ ಪತ್ರ ಬರೆದು ವಿಚಾರಿಸಿದಳು.

ಅವರು ನೇರ ಹಾಸ್ಟೆಲ್ ಗೆ ಬಂದರು. ನಾನೇ ವಿಚಾರಿಸುತ್ತೇನೆ, ಕೆಲಸ ಸಿಕ್ಕಿದರೆ ಒಳ್ಳೆಯದು ಭವಾನಿ, ಪುನಃ ಊರಿಗೆ ಹೋಗಿ ಮಾವನ ಜೊತೆ ಇದ್ದರೆ ವಾಪಸು ಕಳುಹಿಸಲಾರರು. ಹೇಗೂ ರಿಸಲ್ಟ್ ಬರುವಾಗ 1 ತಿಂಗಳು ಆಗುತ್ತದೆ. ಹೋಗೋಣ ವಿಚಾರಿಸುವ ಎಂದು ನನ್ನನ್ನು ಜೊತೆಯಲ್ಲಿ ಕರೆದುಕೊಂಡು ಹೋದರು. ಹೋಗಿ ಮಾತನಾಡಿ ಬೆಳಿಗ್ಗೆ 9 .30  ರಿಂದ ಸಂಜೆ 7 ಗಂಟೆ.ಮದ್ಯಾಹ್ನ 1 ಗಂಟೆ ವಿರಾಮ.ಒಳ್ಳೆಯ ಕೆಲಸ. ನಿನಗೂ ಬೇರೆ ಬೇರೆ ಪುಸ್ತಕ ಓದಬಹುದು ಎಂದರು. ನನಗೆ ಸಂತೋಷದಿಂದ ಮಾತೇ ಹೊರಡಲಿಲ್ಲ. ಆದರೂ ಹೇಳಿದೆ ಮಾವ ಒಪ್ಪುವರಾ?. ನಾನು ಎಲ್ಲಿ ಇರುವುದು? ಎಂದು. ಅದಕ್ಕೆ ಮಾವನನ್ನು ನಾನೂ ಒಪ್ಪಿಸುತ್ತೇನೆ. ಹಾಸ್ಟೆಲ್ ವಾರ್ಡನ್ ನಲ್ಲಿ ಕೇಳೋಣ ಅವರು ನಿನಗೆ ಸಹಾಯ ಮಾಡುವರು ಎಂದರು. ಹಾಗೇನೇ ವಾರ್ಡನ್ ನಲ್ಲಿ ಕೇಳಿದಾಗ ನನ್ನ ಪರಿಸ್ಥಿತಿ ನೋಡಿ ಅಲ್ಲಿಯೇ ಇರಲು ಒಪ್ಪಿಕೊಂಡರು.ಬೇರೆ ಯಾರಲ್ಲೂ ಹೇಳಬೇಡಿ ಎಂದರು. ಮುಖ್ಯೋಪಾಧ್ಯಾಯಿನಿಯವರು ನೀನು ಊರಿಗೆ ಬರಬೇಡ ಇಲ್ಲೇ ಇರು,ಕೆಲಸಕ್ಕೆ ಸೇರು ನಿನ್ನ ಅಮ್ಮನಲ್ಲಿ ನಾನು ಹೇಳುತ್ತೇನೆ . ಮಾವನನ್ನು ಒಪ್ಪಿಸುತ್ತೇನೆ. ನೋಡೋಣ 6 ತಿಂಗಳು ಕಳೆದು ಸಾಧ್ಯವಾದರೆ ಅಮ್ಮನನ್ನು ನಿನ್ನ ಬಳಿ ನೋಡಲು ಕರೆ ತರುತ್ತೇನೆ" ಎಂದು ಧೈರ್ಯ ಹೇಳಿ ಹೋದರು.

ವಾರ್ಡನ್ ನನಗೆ ಸೀರೆ ತೆಗೆದುಕೊಳ್ಳಲು ಇತರೆ ಖರ್ಚಿಗಾಗಿ ಮುಂಗಡ ಹಣ ನೀಡಿ ಸಹಕರಿಸಿದರು. ಕಾಲೇಜಿನ ಜೀವನದಿಂದ ಕೆಲಸದ ಜೀವನಕ್ಕೆ ಕಾಲಿರಿಸಿದೆ......

(ಮುಂದುವರಿಯುವುದು)

✍️ಶ್ರೀಮತಿ ವನಿತಾ ಅರುಣ್ ಭಂಡಾರಿ ಬಜ್ಪೆ


No comments:

Post a Comment