BhandaryVarthe Team

BhandaryVarthe Team
Bhandary Varthe Team

Tuesday 12 October 2021

"ಜೀವನ್ಮುಖಿ" - ಎ.ಆರ್.ಭಂಡಾರಿ.ವಿಟ್ಲ.


 ಕಥೆ - 6

"ಜೀವನ್ಮುಖಿ"

ಕಡಲಕಿನಾರೆಯಲ್ಲಿ ಕುಳಿತು ತೆರೆಗಳ ಏರಿಳಿತ ನೋಡುತ್ತಿದ್ದ "ತಸ್ಮಯಿ"  ಅಮೋಘನ ಕಣ್ಣಿಗೆ ದೇವತೆಯಂತೆ ಕಾಣುತ್ತಿದ್ದಾಳೆ. ನನ್ನ ಬಾಳಿನ "ಜೀವನ್ಮುಖಿ" ಈಕೆ.ಇನ್ನಾದರೂ ಈ ಪ್ರೀತಿ ದೇವತೆ ನಗುತಿರಬೇಕು. ಅವಳ ನೋವೆಲ್ಲ ಈ ಸಾಗರದ ನೀರಲ್ಲಿ ಕರಗಿ ಹೋಗಲಿ ಎಂದು ಅವನ ಮನಸ್ಸು ಆಶಿಸುತ್ತಿದೆ. ಆದರೆ ತಸ್ಮಯಿ ಅದಾವುದರ ಪರಿವೆ ಇಲ್ಲದೆ ದಿಗಂತದ ಅಂಚಿಗೆ ದೃಷ್ಟಿ ನೆಟ್ಟಿದ್ದಾಳೆ. ಅಂದು ಮುಂಜಾನೆ "ತನ್ಮಯಿ" ನಡೆದುಕೊಂಡ ನಡವಳಿಕೆಯ ಸುತ್ತಲೇ ಮನಸ್ಸು ಗಿರಕಿ ಹೊಡೆಯುತ್ತಿದೆ. ಅಂದು "ಅಮೋಘ"ನನ್ನು ನಿರ್ದಾಕ್ಷಿಣ್ಯವಾಗಿ ತಿರಸ್ಕರಿಸಿದವಳು, ಇಂದು ಅವನು ನನಗಿತ್ತ ಉಡುಗೊರೆ ಯಾದ 'ಮುತ್ತಿನ ಹಾರ'ವನ್ನು ತನಗಿಷ್ಟ ವೆಂದು ಯಾವುದೇ ಮುಲಾಜಿಲ್ಲದೆ ಪಡೆದುಕೊಂಡಿದ್ದಳು. ಅತ್ತಿಗೆ 'ಹಿತಾ' ಆ ಬಗ್ಗೆ ಗದರಿದಾಗ "ಇರಲಿ ಬಿಡಿ ನನ್ನ ತಂಗಿ ಅಲ್ವಾ" ಎಂದು ಸಮಾಧಾನಿಸಿದೆ. ಅಷ್ಟರಲ್ಲಿ ತನ್ಮಯಿ, "ಮುತ್ತಿನಹಾರ ಮಾತ್ರ ಯಾಕೆ ಅವಳ ಗಂಡನನ್ನು ಬೇಕಾದರೂ ನನಗೆ ಬಿಟ್ಟುಕೊಡುತ್ತಾಳೆ" ಎಂದಾಗ ಅತ್ತಿಗೆ ಸಿಡಿದಿದ್ದರು. "ತನು, ನಿನ್ನದು ಯಾಕೋ ಅತಿಯಾಯಿತು. ಅವಳು ದೊಡ್ಡ ತ್ಯಾಗಮಯಿ ನೋಡು. ಎಲ್ಲವನ್ನು ನಿನಗಾಗಿ ಬಿಟ್ಟುಕೊಡುತ್ತಾಳೆ.ನೀನು ತಗೋತಿಯಾ.ಎಂಥ ಮಾತೂಂತ ಆಡ್ತೀಯಾ?ನೀನು ಮಾಡಿದ ತಪ್ಪನ್ನು ಸರಿಪಡಿಸಲು ಅವಳೆಷ್ಟು ಕಷ್ಟ ಪಟ್ಟಿದ್ದಾಳೆ ಗೊತ್ತಾ? ಎಂದಾದರೂ ಅವಳ ಆಸೆ ಕನಸುಗಳೇನು? ಅಂತ ತಿಳ್ಕೊಂಡಿದ್ದಿಯಾ?" ಎಂದು ಮಾತನಾಡುತ್ತಲೇ ಇದ್ದರು. ಆದರೆ ತನು ಅತ್ತಿಗೆಯ ಮಾತಿಗೆ ಸಂಬಂಧವೇ ಇಲ್ಲವೆಂಬಂತೆ ಸರಿದು ಹೋಗಿದ್ದಳು.

 


ನನ್ನ ಮನದಲ್ಲಿ ಬೆಳಗಿನ ಘಟನೆಯೇ ತಲೆ ಕೊರೆಯುತ್ತಿತ್ತು. ಅವಳಂದ ಮಾತನ್ನು ಅರಗಿಸಿಕ್ಕೊಳ್ಳಲಾಗುತ್ತಿರಲಿಲ್ಲ.ಅಮೋಘನಿಲ್ಲದ ಜೀವನ ನನ್ನಿಂದ ಊಹಿಸಿಕ್ಕೊಳ್ಳೋಕೆ ಸಾಧ್ಯನಾ? ಏನು ಬೇಕಾದರೂ ಹಂಚಿಕ್ಕೊಳ್ಳುವ ಹೆಣ್ಣು ತನ್ನ ಗಂಡನನ್ನು ಮಾತ್ರ ಯಾರೋಂದಿಗೂ ಹಂಚಿಕ್ಕೊಳ್ಳಲಾರಳು ಅಂತ ವಿದೇಶಿ ಸಂಸ್ಕೃತಿಗೆ ಮಾರು ಹೋದ ಅವಳಿಗೇಗೆ ಅರ್ಥವಾದೀತು?
ನಾನು ಮತ್ತು ಅವಳು ಒಂದೇ ಗರ್ಭ ಹಂಚಿಕೊಂಡವರು. ನಮ್ಮಿಬ್ಬರನ್ನು ಯಾರೆಂದು ಗುರುತಿಸಲಾಗದಷ್ಟು ಸಾಮ್ಯತೆ. ನನ್ನ ಬಲಗಾಲಲ್ಲಿ ಆರು ಬೆರಳುಗಳು.ಅದೊಂದು ನನ್ನ ಅವಳ ಮಧ್ಯೆ ಇರುವ ವ್ಯತ್ಯಾಸ . ಆದರೆ ಅವಳು ಹಠಮಾರಿ ನಾನು ಮೌನಗೌರಿ. ಪಿಯುಸಿವರೆಗೆ ಜೊತೆಯಲ್ಲಿ ಓದಿದ ಅವಳಿಗಳು ನಾವಾದರೂ ಮುಂದೆ ನಾನು ವೈದ್ಯೆಯಾಗುವ ಹಂಬಲದಿಂದ ಮೆಡಿಕಲ್ ಸೇರಿದರೆ , ಅವಳು ಫ್ಯಾಶನ್ ಡಿಸೈನರ್ ನತ್ತ ಒಲವಿರಿಸಿಕೊಂಡಳು.ಅವಳು ಬಯಸಿದ್ದು ಅವಳ ಕೈ ಸೇರಲೇ ಬೇಕಿತ್ತು. ನಾನು ಇಷ್ಟಪಟ್ಟಿದ್ದು ಅವಳ ಆಯ್ಕೆಯಾಗಿ ನಿರಾಸೆ ಕಟ್ಟಿಟ್ಟ ಬುತ್ತಿ ನನಗಾಗುತ್ತಿತ್ತು. ಬಯಸಿದ್ದು ಪಡೆಯಲೇಬೇಕೆಂಬ ಹಠ ಅವಳದು.ಹೀಗಿರುವಾಗ ತಂದೆಯ ತಂಗಿಯ ಮಗ "ಅಮೋಘ"ನ ಮನಗೆದ್ದು ಪ್ರೀತಿಯ ನೌಕೆಯಲಿ ತೇಲತೊಡಗಿದಳು. ಮದುವೆಗೆ ಇನ್ನು ಒಂದು ವಾರ ಇದೆ ಎನ್ನುವಾಗ ತನ್ಮಯಿಯ ಡ್ರೈವಿಂಗ್ ಹುಚ್ಚಿಗೆ ಬಲಿಯಾಗಿ ಅಮೋಘ ಶಾಶ್ವತ ವಾಗಿ ತನ್ನ ಒಂದು ಕಾಲನ್ನು‌ ಕಳೆದುಕೊಂಡಾಗಿತ್ತು. ಅವನ ಸ್ಥಿತಿ ಕಂಡ 'ತನ್ಮಯಿ‌' ನೇರವಾಗಿ "ತನಗೆ ಈ ಮದುವೆ ಇಷ್ಟವಿಲ್ಲ" ಎಂದು ಹತ್ತು ವರ್ಷಗಳ ಪ್ರೀತಿಗೆ ತಿಲಾಂಜಲಿಯಿಟ್ಟು ನನ್ನ ನೋಡ ಬಂದವರೆದುರು ವಧು ಪರೀಕ್ಷೆಗೆ ಕುಳಿತಿದ್ದಳು.

ತಂದೆಯ ಅಸಹಾಯಕತೆ ,ಅಮೋಘನ ಪ್ರೀತಿಯ ಅರಿವಿದ್ದ ನಾನು ಎಲ್ಲರ ಆಸೆಯಂತೆ ಅಮೋಘನ ಕೈಹಿಡಿದಿದೆ. ವರ್ಷಗಳು ಉರುಳಿದವು ನಾನು ವೈದ್ಯಳಾದೆ. ಅಮೋಘ ,ತಾನು ಅಂಗವಿಕಲ ಎಂಬ ಕೀಳರಿಮೆ ಮರೆತು ತನ್ನ ಉದ್ದಿಮೆಯಲ್ಲಿ ತೊಡಗಿಸಿಕೊಂಡ.ಜತೆಗೆ ನಿಧಾನಕ್ಕೆ ಅವನ ಪ್ರೀತಿಯೂ ನನ್ನತ್ತ ವಾಲತೊಡಗಿತು. ತನ್ಮಯಿ‌ ತನ್ನ ಗಂಡನೊಂದಿಗೆ ಅಮೆರಿಕದಲ್ಲಿ ಆರಾಮವಾಗಿದ್ದಳು.ನಾನು ಹೆಚ್ಚಿನ ವಿದ್ಯಾಭ್ಯಾಸಕ್ಕೆ ಕೆನಡಾ ಕ್ಕೆ ತೆರಳಿದೆ‌.ನನ್ನ ಉನ್ನತ ಶಿಕ್ಷಣದೊಂದಿಗೆ ನನ್ನ ಕನಸನ್ನೂ ಪೂರೈಸಿಕೊಂಡೆ.ಅಂಗಾಂಗ ದಾನಿಯೊಬ್ಬರ ನೆರವಿನಿಂದ ಅಮೋಘನಿಗೆ ಹೊಂದಿಕೆಯಾಗುವ ಕಾಲು ದೊರಕಿತು.ದೇಶದ ಮೊದಲ ಪ್ರಯೋಗದಲ್ಲಿ ಯಶಸ್ವಿಯೂ ಆದೆ‌.ಅಮೋಘನಲ್ಲಿ ದುಪ್ಪಟ್ಟು ಆತ್ಮ ವಿಶ್ವಾಸ ತುಂಬಿದೆ.ನಮ್ಮ ಊರಲ್ಲೇ ಕೈ ಕಾಲು ಕಳೆದುಕೊಂಡ ರೋಗಿಗಳಿಗೆ ಸುಸಜ್ಜಿತವಾದ ಆಸ್ಪತ್ರೆ ನಿರ್ಮಸಿದ್ದೇವೆ.ಬಾಳ ರಥ ಯಾವುದೇ ಏರುಪೇರಿಲ್ಲದೆ ಸಾಗುತ್ತಿದೆ.
ಇದೀಗ ಹೆರಿಗೆಗೆಂದು ತವರಿಗೆ ಬಂದಿದ್ದಾಳೆ ತನ್ಮಯಿ.ಆದರೆ ಹಠಮಾರಿ ಹೆಣ್ಣು ಬದಲಾಗಿಲ್ಲ.ಹಾಗೆಯೇ ಇದ್ದಾಳೆಂದೆನಿಸುತಿದೆ.
'ತಸು' ಎದ್ದೇಳೆ ಎಂದ ಅಮೋಘನ ದನಿಗೆ ನನ್ನ ಮನದಲ್ಲಿ ನಡೆಯುತ್ತಿದ್ದ ತಾಕಲಾಟಕ್ಕೆ ಅಲ್ಪ ವಿರಾಮ ಬಿದ್ದಂತಾಯಿತು.ನಿಧಾನವಾಗಿ ಮೇಲಿದ್ದವಳಿಗೆ ಹೊಟ್ಟೆಯಲ್ಲೇನೋ ಸಂಕಟ.ಹೌದು , ನಮ್ಮ ಪ್ರೇಮದ ಉಸಿರು ನನ್ನ ಬಸಿರಲ್ಲಿ ಮೊಳಕೆಯೊಡೆದಿದೆ.ಇನ್ನೇನು ಹೆರಿಗೆಯಾಗುವ ಸಮಯ.ನನ್ನೆಲ್ಲಾ ಕೆಲಸ ಕಾರ್ಯಗಳಿಗೆ ರಜೆ ಘೋಷಿಸಿದ್ದೇನೆ.ಅಮೋಘನು ನನ್ನ ಜತೆಯೇ ಸಮಯ ಕಳೆಯುತ್ತಿದ್ದಾರೆ.ಇದೀಗ ನನ್ನ ಪರಿಸ್ಥಿತಿ ಕಂಡು ಅಮೋಘ ಗಾಬರಿಯಾಗುವರೆಂದು ಮ ಅಮ್ಮನಿಗೆ ಆಸ್ಪತ್ರೆಗೆ ಬರಲು ಕೋರಿದೆ.

ಅಮೋಘನ ಒಲವಿನ ಕುಡಿಯ ನಿರೀಕ್ಷೆಯಲ್ಲಿಯೇ ನಾನು‌ ನಿಧಾನವಾಗಿ ಅವರ ಕೈಹಿಡಿದು ನಿಂತೆ. ಅನತಿ‌ ದೂರದಲ್ಲಿದ್ದ ಅತ್ತಿಗೆ ಓಡಿ ಬಂದಿದ್ದರು. "ಹೇಳಿದ ಮಾತಲ್ಲಿ ಕೇಳ್ತಿಯ? ದಿನ ತುಂಬಿದ ಮೇಲೆ ಓಡಾಡಬೇಡ ಅಂದ್ರೆ ಕೇಳಲ್ಲ" ಎಂದು ಗೊಣಗುತ್ತಲೇ ಅಣ್ಣ "ತನುಜ್ "ನ ಅವಸರಿಸುತ್ತಾ ಆಸ್ಪತ್ರೆಯತ್ತ ಕಾರು ಓಡಿಸಲು ತಿಳಿಸಿದರು.
ಒಂದು ದಿನ ನೋವು ತಿಂದ ನನ್ನ ಮಡಿಲಿಗೆ "ಮಗಳು" ಬಂದಾಯ್ತು. ಸಂತೋಷ ಸಂಭ್ರಮ ಮನೆ ಮನ ತುಂಬಿತು. ಆದರೆ ಗಂಡನ ಮನೆಯಲ್ಲಿ ಮಹಡಿಯಿಂದ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದ ' ತನ್ಮಯಿ' ಕೂಡ ಆಸ್ಪತ್ರೆ ಸೇರಿ ಜೀವನ್ಮರಣ ಹೋರಾಟಕ್ಕೆ ಇಳಿದಿದ್ದಳು.ಅವಳ ಗಂಡ 'ಅಭಯ್' ನ ಕಳವಳ ನೋಡಲಾಗುತ್ತಿರಲಿಲ್ಲ.
ಕೊನೆಗೂ ಎಲ್ಲರ ಹಾರೈಕೆಯ ಫಲವೆಂಬಂತೆ ಮಗುವನ್ನು ಕಳೆದುಕೊಂಡು,ಜತೆಗೆ ಶಾಶ್ವತವಾಗಿ ತಾಯ್ತನದಿಂದ ವಂಚಿತವಾಗಿ ತನ್ಮಯಿ ಬದುಕುಳಿದಳು. ಜೀವಚ್ಛ ಶವದಂತೆ ಮಲಗಿದ್ದ ನನ್ನದೇ ಪಡಿಯಚ್ಚನ್ನು ನೋಡಿದಾಗ ಕರುಳು ಕಿತ್ತು ಬರುತ್ತಿತ್ತು. ಅವಳು ಯಾವಾಗ ಕೋಮಾದಿಂದ ಹೊರ ಬರುವಳೆಂದು ವೈದ್ಯರು ಭರವಸೆ ನೀಡಲಿಲ್ಲ. ಆದರೆ ಏನೋ, ನಿರ್ಧರಿಸಿದವಳಂತೆ ಮಗಳು "ಅರ್ಥಾ"ಳನ್ನು ಅವಳ ಬಳಿ ಮಲಗಿಸಿ ಬರತೊಡಗಿದೆ. ಅಚ್ಚರಿಯೆಂಬಂತೆ ಕೆಲವೇ ದಿನಗಳಲ್ಲಿ ತನ್ಮಯಿ‌ ಚೇತರಿ ಕ್ಕೊಳ್ಳತೊಡಗಿದ್ದಾಳೆ. ಹಳೆಯದೆಲ್ಲ ಮರೆತ ಅವಳಿಗೆ "ಅರ್ಥಾ" ಮಗಳಾಗಿದ್ದಾಳೆ. ನಾನು ಅವಳ ದೊಡ್ಡಮ್ಮ ನಾಗಿದ್ದೇನೆ.ನಮಗಾಗಿ ಅಭಯ್ ಅಮೇರಿಕಾ ಬಿಟ್ಟು"ಅಮೋಘ್ " ನ ಬ್ಯುಸಿನೆಸ್ ನಲ್ಲಿ ತೊಡಗಿಸಿಕೊಂಡಿದ್ದಾರೆ.ನಾವೂ ಅಷ್ಟೇ ಅರ್ಥಾಳ ತುಂಟಾಟಕ್ಕೆ ದನಿಯಾಗಿ ಮಗದೊಂದು ಸಂಭ್ರಮಕ್ಕೆ ನಿರೀಕ್ಷೆಯಿರಿಸಿ ಕಾಯುತ್ತಿದ್ದೇವೆ.

✍🏻ಎ.ಆರ್.ಭಂಡಾರಿ.ವಿಟ್ಲ.




No comments:

Post a Comment