BhandaryVarthe Team

BhandaryVarthe Team
Bhandary Varthe Team

Saturday, 12 August 2017

ಸಾಲುಮರದ ತಿಮ್ಮಕ್ಕ

ಸಾವಿರಾರು ಸಸಿ ನೆಟ್ಟು, ನೀರೆರೆದು ಹೆಮ್ಮರವಾಗಿಸಿ...ಬದುಕಿನ ಮುಸ್ಸಂಜೆಯಲ್ಲಿ ಒಂಟಿಯಾಗಿ ಬದುಕು ಸವೆಸುತ್ತಿರುವ ವೃಕ್ಷಮಾತೆ ಸಾಲುಮರದ ತಿಮ್ಮಕ್ಕನವರಿಗೆ ಈ ಸಾಲುಗಳು  ಅರ್ಪಣೆ...

ಸಾಲುಮರದ ತಿಮ್ಮಕ್ಕ
ಕಂಡುಕೊಂಡಿರಿ ನೀವು ಜೀವನ ಸಾರ್ಥಕ್ಯ||ಪ||
ಮಕ್ಕಳಿಲ್ಲದ ಕೊರಗು
ಗಿಡಸಸಿಯಲ್ಲಿ ಹುಡುಕುತ.
ಬಂಜೆಯೆಂಬ ಪದಕೆ
ಅಂಜದೇ ಮುಂದೆ ನೆಡೆಯುತ...||ಪ||
ಮರವೇ ಮಂದಿರವೆಂದು
ಆಲವೇ ಆಲಯವೆಂದು.
ಗಿಡಮರಗಳೇ ಕರುಳ ಬಳ್ಳಿಗಳೆಂದು,
ಕಾಡುಮೇಡು ಒಡಹುಟ್ಟಿದವರೆಂದು.||ಪ||
ಅನ್ನ ನೀಡಲಾಗದಿದ್ದರೂ
ಅರಿವು ನೀಡುವೆನೆಂದು.
ನೆರವು ನೀಡಲಾಗದಿದ್ದರೂ
ನೆರಳು ನೀಡುವೆನೆಂದು.||ಪ||
ಗಿಡ ನೆಟ್ಟ ಕರವಿಂದು
ಮರಗಟ್ಟಿ ಹೋಗಿದೆ.
ನೆರಳುಂಡ ಜನರಿಗೂ
ಮರೆವು ಬಂದೆರಗಿದೆ.
ತಾಯಿ ತಿಮ್ಮಕ್ಕನ ನಾವು ಮರೆತರೆ
ಅವಳು ತಬ್ಬಲಿಯಲ್ಲ.
ಅವಳದೋ ವಂಶ ವೃಕ್ಷ ಸಂಕುಲಗಳು..
ಕಡೆಗೂ ನಾವೇ ತಬ್ಬಲಿಗಳು...
ಕಡೆಗೂ ನಾವೇ ತಬ್ಬಲಿಗಳು....
ಸಾಲುಮರದ ತಿಮ್ಮಕ್ಕ
ಕಂಡುಕೊಂಡಿರಿ ನೀವು ಜೀವನ ಸಾರ್ಥಕ್ಯ...||
ಭಾಸ್ಕರ ಭಂಡಾರಿ ಸಿ.ಆರ್
ಶಿರಾಳಕೊಪ್ಪ

ಮನೆಯ ಕೆಲಸವೆಲ್ಲ ಮಾಡಿ ಓಡೋಡಿ ಬರುವರು..

ನೆಯ  ಕೆಲಸವೆಲ್ಲ  ಮಾಡಿ ಓಡೋಡಿ  ಬರುವರು
ತಮ್ಮ  ನಿಯತ್ತಿನ  ಕರ್ತವ್ಯಕ್ಕೆ ನಗುನಗುತ್ತಾ ಹಾಜರಾಗುವರು
ಅದೇನೇ  ಬೇಸರ  ನೋವುಗಳಿದ್ದರು ತೋರಿಸಲ್ಲ  ಮಕ್ಕಳೆದುರು
ಅದೆಷ್ಟೋ  ಮಕ್ಕಳಿಗೆ  ದಾರಿದೀಪವಾದವರಿವರು

ನಸು  ನಗುತ್ತ  ಮಕ್ಕಳೊಂದಿಗೆ  ಮಕ್ಕಳಾಗುವರು
ಕೆಲವು ಸಲ ತನ್ನದಲ್ಲದ   ತಪ್ಪಿಗೆ ಬಯ್ಯಿಸಿಕೊಳ್ಳುವರು
ದಾನದಲ್ಲಿಯೇ  ಶ್ರೇಷ್ಠ  ದಾನವೆಂದರೆ ವಿದ್ಯಾದಾನ
ವಿದ್ಯೆಯ ಉಣಿಸುತ್ತಾ ಅದರಲ್ಲೆ ನೆಮ್ಮದಿಯ ಕಾಣುವರು ಇಡೀದಿನ

ಮಕ್ಕಳಿಗೆ ನೋವಾದಾಗಲೆಲ್ಲ ಸಂತೈಸುವರು ತಾಯಿಯಂತೆ
ಆದರೆ ಇವರನ್ನು ಸಂತೈಸುವವರು ಯಾರಿಲ್ಲ ತಮ್ಮವರಂತೆ
ಆದರೂ ಮಕ್ಕಳ ಕುಡಿ ನೋಟ ನೊಡಿದರೆ ಸಾಕು ಇದಾವುದರ ಪರಿವಿಲ್ಲ
ನಡೆದಾಡುತ್ತಾ ಪಾಠಪ್ರವಚನ ನೀಡುತ್ತಾ ಸಾಗಿದರೂ ಅವರಿಗೆ ದಣಿವಿಲ್ಲ

ನಿರಂತರ ನಿರರ್ಗಳವಾಗಿ ಮಾತನಾಡುವರು
ಮಕ್ಕಳ  ಜೊತೆ ತನ್ನ ಆರೋಗ್ಯವ. ಲೆಕ್ಕಿಸದೇ ಬೆರೆಯುವರು
ಹಂಗಿಸುವರು ಅವರ ಹಾಗಂತೆ ಹೀಗಂತೆ ಎಂದು
ವಿದ್ಯಾರ್ಥಿಗಳಲ್ಲಿ ಭೇಧ ಭಾವ ಮಾಡಲಿಲ್ಲ ಇವರು ನೊಂದು

ಆದರು ಯಾರ ಹಂಗನ್ನು ಬಯಸದ ನಿಸ್ವಾರ್ಥ ಸೇವೆ ಸಲ್ಲಿಸುವರು
ಶಾಲೆಯೇ ನಮ್ಮ ದೇಗುಲವೆಂದು ಕೈಮುಗಿದು ಜೀವಿಸುವರು      
ಬೆಲೆ ಕಟ್ಟಲಾಗದು ಅವರಿಗೆ  ಎಂದೆಂದೂ 
ಬೆಲೆಕಟ್ಟಲಾಗದ ಸಂಪತ್ತು ದಾನಮಾಡಿರುವರು ನಮಗಂದು

ಮರೆಯದಿರಿ ನಿಮ್ಮ ಜೀವನಕ್ಕೆ ದಾರಿ ನೀಡಿದ ನಿಮ್ಮೆಲ್ಲ ಅಚ್ಚು ಮೆಚ್ಚಿನ ಶಿಕ್ಷಕರ
ನಕ್ಕು ಬಿಡಿ ಒಮ್ಮೆ ನಿಮ್ಮೆದುರು ಬಂದಾಗ ನೋಡಿ ಅವರ
ಅಷ್ಟೆ ಸಾಕು ಆ ಜೀವಕೆ ತನ್ನ ಸಾರ್ಥಕ ಬದುಕಿಗೆ
ವಿದ್ಯಾರ್ಥಿಗಳ ಸಾಧನೆಯ ಕಂಡು ಸಂಭ್ರಮಿಸುವ ಗುರುವಿಗೆ.

: ಸುಪ್ರೀತ ಭಂಡಾರಿ, ಸೂರಿಂಜೆ

Thursday, 10 August 2017

ಜಿಲ್ಲಾ ಮಟ್ಟದ ಕರಾಟೆ ಸ್ಪರ್ಧೆಗೆ ಪ್ರೀತಿ ಮತ್ತು ಲೀಕ್ಷಿತಾ ಆಯ್ಕೆ

            ಮಂಗಳೂರು: ಆಗಸ್ಟ್  04 ರಂದು, ಮಂಗಳೂರಿನಲ್ಲಿ ನಡೆದ  ಉತ್ತರ ವಲಯ ತಾಲೂಕು ಮಟ್ಟದ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ವಿಭಾಗದ ಕರಾಟೆ ಸ್ಪರ್ಧೆಯಲ್ಲಿ 9ನೇ ತರಗತಿಯ ಪ್ರೀತಿ ಭಂಡಾರಿ ಹಾಗೂ 7ನೇ ತರಗತಿಯ ಲೀಕ್ಷಿತಾ ಭಂಡಾರಿ ಪ್ರಥಮ ಸ್ಥಾನ ಪಡೆದಿದ್ದು, ಆಗಸ್ಟ್ 22 ರಂದು ನಡೆಯಲಿರುವ ಜಿಲ್ಲಾ ಮಟ್ಟದ ಸ್ಪರ್ಧೆಗೆ  ಆಯ್ಕೆಯಾಗಿದ್ದಾರೆ.
            ಮೂಲತಃ ಮಡಿಕೇರಿಯ ಕಡಗದಾಳು ನಿವಾಸಿಗಳಾದ, ಪ್ರಸ್ತುತ ಸುರತ್ಕಲ್ ನಲ್ಲಿ  ವಾಸಿಸುತ್ತಿರುವ ಸಂತೋಷ್ ಭಂಡಾರಿ ಮತ್ತು ಜ್ಯೋತಿ ಸಂತೋಷ್ ದಂಪತಿಯ   ಪುತ್ರಿಯರಾಗಿರುವ ಇವರು, ಸುರತ್ಕಲ್ ನ ಹೋಲಿ ಫ್ಯಾಮಿಲಿ ಶಾಲೆಯ ವಿದ್ಯಾರ್ಥಿನಿಯರಾಗಿದ್ದಾರೆ. ಇವರಿಬ್ಬರು  ನಿತಿನ್. ಎನ್. ಸುವರ್ಣ ಅವರಿಂದ ಕರಾಟೆ ತರಬೇತಿ ಪಡೆಯುತ್ತಿದ್ದಾರೆ.

ವರದಿ: ಎಸ್.ಕೆ.ಬಂಗಾಡಿ, ಸಂಪಾದಕರು, ಭಂಡಾರಿ ವಾರ್ತೆ

Preethi and Leekshitha are selected for district level karate competition.                  

          Mangalore: 9th standard student Preethi Bhandary and 7th standard student Leekshitha Bhandary, won the first place in the North Zone Taluk level Karate competition held on August 4th in Mangalore , have been selected for the District Level Competition on August 22.
The girls trained from Nithin. N Suvarna, are basically from Kadagadalu of Madikeri. They are the daughters of Santosh Bhandary and Jyoti Santosh, currently living in Suratkal. Both are Studying in Holy Family School,  Suratkal.
Reporter: S.K.Bangady, Bhandary Varthe
Translation:  Divya Ujire, Bhandary Varthe

ಮೌಢ್ಯದಿಂದ ಬಿಡುಗಡೆ, ದುಃಖದಿಂದ ಬಿಡುಗಡೆ



(ಧ್ಯಾನ- 4)

               ಒಂದು ಪರಂಪರೆಯನ್ನು ಕಡಿದುಕೊಂಡು ಇನ್ನೊಂದು ಪರಂಪರೆಗೆ ಬದ್ಧರಾಗುವುದು, ಒಬ್ಬ ನಾಯಕನನ್ನು ಬಿಟ್ಟು ಇನ್ನೊಬ್ಬನನ್ನು ಹಿಂಬಾಲಿಸುವುದು ಇವೆಲ್ಲ ತೋರಿಕೆಯ ಭಂಗಿಗಳು. ಅಧಿಕಾರದ (ಪೂರ್ವಗ್ರಹ) ಬಗ್ಗೆ ಇಡಿಯಾದ ಎಚ್ಚರವನ್ನು ಪಡೆಯಬೇಕೆಂದಿದ್ದರೆ,ಅಧಿಕಾರ ನಮ್ಮೊಳಗೆ ಹೇಗೆ ಇದೆ ಎಂದು ಅರಿಯಬೇಕೆಂದಿದ್ದರೆ, ಖಚಿತತೆಯ ಆಸೆಯನ್ನು ಮೀರಬೇಕೆಂದಿದ್ದರೆ,ಆಗ ನಮಗೆ ಅಗಾಧವಾದ ಎಚ್ಚರ ಮತ್ತು ಒಳನೋಟ ಬೇಕಾಗುತ್ತದೆ. ಇದು ಸಾಧ್ಯವಾಗಬೇಕಾದರೆ ನಾವು ಇನ್ನು ಎಂದೋ,ನಮ್ಮ ಬದುಕಿನ ಕೊನೆಗೆ ಅಲ್ಲ,' ಈಗಲೇ, ಇಂದೇ,ಮೊದಲಿಗೇ ಬಿಡುಗಡೆಯನ್ನು ಪಡೆಯಬೇಕಾಗುತ್ತದೆ'.

            ನಾವು ಮನಸ್ಸಿನ ತುಂಬ ಆಸೆಗಳನ್ನಿಟ್ಟುಕೊಂಡು, ಭಯಗಳನ್ನು ತುಂಬಿಕೊಂಡು ಕೇಳುತ್ತೇವೆ. ಬೆಳಕು ಕಂಡಿರುವ ವ್ಯಕ್ತಿ ಯಾರು ಎಂದು ಹುಡುಕುತ್ತೇವೆ. ಅಂಥವರಿಂದ ಬೆಳಕು ಪಡೆಯಲು ಬಯಸುತ್ತೇವೆ. ಆದರೆ ಅರ್ಥಮಾಡಿಕೊಳ್ಳುವುದಕ್ಕೆ ಬೇಕಾದ ನಿಷ್ಕ್ರಿಯ ಎಚ್ಚರ ನಮ್ಮಲ್ಲಿರುವುದಿಲ್ಲ. ಮುಕ್ತನಾಗಿರುವ  ವ್ಯಕ್ತಿ ನಮ್ಮ ಆಸೆಗಳನ್ನು ಪೂರೈಸುವಂತೆ ಕಂಡರೆ ಆತನನ್ನು ಒಪ್ಪಿಕೊಳ್ಳುತ್ತೇವೆ. ಇಲ್ಲದಿದ್ದರೆ ಮತ್ತೊಬ್ಬ ವ್ಯಕ್ತಿ ಎಲ್ಲಿದ್ದಾನೆ ಎಂದು ಹುಡುಕಲು ತೊಡಗುತ್ತೇವೆ. ನಮ್ಮಲ್ಲಿ ಬಹಳ ಜನಕ್ಕೆ ಬೇರೆ ಬೇರೆ ಹಂತಗಳ ತೃಪ್ತಿ ಬೇಕಾಗಿರುತ್ತದೆ. ಮುಕ್ತಾತ್ಮನನ್ನು ಹುಡುಕುವುದು ಕಂಡುಕೊಳ್ಳುವುದು ಮುಖ್ಯವಲ್ಲ. ನಿಮ್ಮನ್ನು ನೀವು ಅರ್ಥಮಾಡಿಕೊಳ್ಳುವುದೇ ಮುಖ್ಯವಾದದ್ದು. ಲೋಕದ ಅಥವಾ ಪರಲೋಕದ ಯಾವ ಅಧಿಕಾರವೂ ನಿಮಗೆ ನಿಮ್ಮ ಬಗ್ಗೆ ತಿಳಿವಳಿಕೆಯನ್ನು ಕೊಡಲಾರದು. ನಿಮ್ಮ ಬಗ್ಗೆ ನೀವು ತಿಳಿಯದಿದ್ದರೆ ಮೌಢ್ಯದಿಂದ ,ದುಃಖದಿಂದ ಬಿಡುಗಡೆಯೂ ದೊರೆಯಲಾರದು.
         
ನಮ್ಮನ್ನು ನಾವು ತಿಳಿಯುವುದು ಬಹಳ ಶ್ರಮದ ಕೆಲಸ. ನಮಗೆ ಯಾವಾಗಲೂ ಸುಲಭವಾದ ದಾರಿ ಬೇಕು, ಭ್ರಮೆಯ ದಾರಿ ಬೇಕು.ಅದ್ದರಿಂದ ನಮ್ಮ ಬದುಕಿಗೆ ಒಂದು ವಿನ್ಯಾಸವನ್ನು, ಆಕಾರವನ್ನು ಒದಗಿಸಿಕೊಡುವ ಅಧಿಕಾರವನ್ನು (ಪದ್ಧತಿಯ ಹಿಡಿತವಿರುವ ಮನಸ್ಸು) ಸೃಷ್ಟಿಸಿಕೊಳ್ಳುತ್ತೇವೆ. ಅಧಿಕಾರ ಸಾಮೂಹಿಕ ಸ್ವರೂಪದ್ದಾಗಿರಬಹುದು, ರಾಜ್ಯಾಧಿಕಾರದಂತೆ, ವೈಯುಕ್ತಿಕ ಸ್ವರೂಪದ್ದಾಗಿರಬಹುದು. ಒಡೆಯ, ರಕ್ಷಕ, ಗುರು, ಎಂಬಂತೆ. ಯಾವುದೇ ಬಗೆಯ ಅಧಿಕಾರ ನಮ್ಮನ್ನು ಕುರುಡು ಮಾಡುತ್ತದೆ, ಆಲೋಚನೆ ಮಾಡುವುದನ್ನು ತಪ್ಪಿಸುತ್ತದೆ‌. ನಮ್ಮಲ್ಲಿ ಬಹುಪಾಲು ಜನಕ್ಕೆ ಆಲೋಚನೆ ಬಹಳ ನೋವಿನ ಕೆಲಸವಾದ್ದರಿಂದ ನಮ್ಮನ್ನು ನಾವು ಸುಮ್ಮನೆ ಅಧಿಕಾರಕ್ಕೆ ಒಪ್ಪಿಸಿಕೊಂಡು ಬಿಡುತ್ತೇವೆ. ಸ್ವಯಂ ಅರಿವಿಲ್ಲದವನಲ್ಲಿ ಒಪ್ಪಿಸಿಕೊಳ್ಳುವುದರಿಂದ, ಅಧಿಕಾರ ಹೊಂದಿರುವವನನ್ನು ಮಾತ್ರವಲ್ಲದೆ ಹಿಂಬಾಲಕರನ್ನು ಭ್ರಷ್ಟಗೊಳಿಸುತ್ತದೆ‌. ಜ್ಞಾನ ಮತ್ತು ಅನುಭವದ ಅಧಿಕಾರ, ಅದು ಒಡೆಯನ್ನಲ್ಲಿರಲಿ, ಒಡೆಯನ ಪ್ರತಿನಿಧಿಯಲ್ಲಿರಲಿ, ಗುರುವಿನಲ್ಲಿ, ಅಥವಾ ಪೂಜಾರಿಯಲ್ಲಿರಲಿ, ವಿಕೃತವಾದದ್ದು‌. ನಿಮ್ಮ ನಿಮ್ಮ ಸ್ವಂತ ಬದುಕು, ನಿಮ್ಮ ಸ್ವಂತ ಅರಿವು ಇಲ್ಲಿ ಮುಖ್ಯ. ಅಧಿಕಾರಯುತ ವ್ಯಕ್ತಿಗಳು ನಿಮ್ಮನ್ನು ಅರಿವಿನಿಂದ ದೂರ ದೂರ ಒಯ್ಯುತ್ತಾರೆ ನಿಮ್ಮನ್ನು…  ನಾವು ಬೇರೆಯವರನ್ನು ಒಪ್ಪಿಕೊಳುವುದ ಏಕೆ ? ಇನ್ನೊಬ್ಬರ ಅಧಿಕಾರವನ್ನು, ಜ್ಞಾನವನ್ನು ಒಪ್ಪಿ ಹಿಂಬಾಲಿಸುತ್ತೇವೆ, ಆನಂತರ ಅದರ ಬಗ್ಗೆ ಅನುಮಾನಪಡುತ್ತೇವೆ. ಅಧಿಕಾರಕ್ಕಾಗಿ ನಡೆಸುವ ಹುಡುಕಾಟದ ಜೊತೆಜೊತೆಗೆ ಭ್ರಮನಿರಸನವೋ ಆಗುತ್ತಿರುತ್ತದೆ. ಇದು ಬಹಳ ನೋವಿನ ಅನುಭವ. ನಾವು ಒಮ್ಮೆ ಒಪ್ಪಿಕೊಂಡ ಅಧಿಕಾರವನ್ನು, ನಾಯಕನನ್ನು, ಗುರುವನ್ನು ನಿಂದಿಸುತ್ತೇವೆ, ಆದರೆ ನಮ್ಮೊಳಗೆ ಇದ್ದು ನಮ್ಮ ವರ್ತನೆಗೆ ಕಾರಣವಾಗಿರುವ ಅಧಿಕಾರದ ಹಂಬಲವನ್ನು ಪರಿಶೀಲಿಸಿಕೊಳ್ಳುವುದೇ ಇಲ್ಲ. ಹಂಬಲವನ್ನು ಒಮ್ಮೆ ಅರ್ಥಮಾಡಿಕೊಂಡರೆ ಸಂಶಯದ ಮಹತ್ವ ನಮಗೆ ತಿಳಿಯುತ್ತದೆ. ಹಳೆಯ ಜ್ಞಾನವೆಂಬ ಅಧಿಕಾರ ಅಥವಾ ಮೌಢ್ಯದಿಂದ ಮುಕ್ತವಾಗಿ ನಮ್ಮನ್ನು ನಾವು ಕಂಡುಕೊಂಡಾಗ ದುಃಖದಿಂದ ಬಿಡುಗಡೆ ದೊರೆಯುತ್ತದೆ...
(
ಮುಂದುವರಿಯುತ್ತದೆ)

ಮೂಲ: ಜಿಡ್ಡು ಕೃಷ್ಣಮೂರ್ತಿ ಪುಸ್ತಕಗಳು
: ಕಣಬ್ರಹ್ಮವೆಂಕಿ (ವೆಂಕಟೇಶ ಭಂಡಾರಿ), ಭಂಡಾರಿ ವಾರ್ತೆ

Sunday, 6 August 2017

ಖಂಡಗ್ರಾಸ ಚಂದ್ರಗ್ರಹಣ

             ದಿನಾಂಕ 07/08/2017 ಸೋಮವಾರ ಶ್ರವಣ ನಕ್ಷತ್ರ ಮಕರರಾಶಿಯಲ್ಲಿ ಚಂದ್ರನಿಗೆ ಕೇತುಗ್ರಹಣ. ಗ್ರಹಣದಿಂದ ವ್ಯಾಪಾರಸ್ಥರಿಗೆ, ಹಿಂದುಳಿದ ಜನರಿಗೆ ಹಾಗೂ ಎಮ್ಮೆ, ಕೋಣ, ಆನೆಗಳಿಗೆ ಮುಂದಿನ 6 ತಿಂಗಳವರೆಗೆ ವಿಪರೀತ ಪೀಡೆ ಇದೆ. ಮಕರರಾಶಿಯಲ್ಲಿ ಗ್ರಹಣವಾಗಿರುವುದರಿಂದ ಉತ್ತರಭಾರತದಲ್ಲಿ ಭಾರೀ ಅನಾಹುತ, ನೆರೆಹಾವಳಿ, ಯುದ್ಧಭೀತಿ ಎದುರಾಗಬಹುದು. ಮಧ್ಯಭಾರತ, ಚೀನಾ, ಮುಸ್ಲಿಂ ದೇಶಗಳು, ಗ್ರೀಕ್ ದೇಶಕ್ಕೆ ತೊಂದರೆ ಇದೆ. ದೇಶದ ಓರ್ವ ಶ್ರೇಷ್ಠ ಸ್ತ್ರೀಯಳಿಗೆ ಅರಿಷ್ಠವಿದೆ. ವಿದ್ಯಾಜೀವಿಗಳಿಗೆ ಕೆಟ್ಟಕಾಲವಾಗಲಿದೆ. ಭಾರತ ದೇಶದ ವಾಯುವ್ಯ ದಿಕ್ಕಿಗೆ ದುರ್ಭಿಕ್ಷೆ ಇದೆ.
ಕಳ್ಳಕಾಕರು ದರೋಡೆಕೋರರ  ಉಪದ್ರವ ಹೆಚ್ಚಾಗಲಿದೆ. ಮಂತ್ರಿಗಳಿಗೆ, ನೀಚರಿಗೆ, ಗೋವುಗಳಿಗೆ, ಸೈನಿಕರಿಗೆ ಅನಿಷ್ಠ. ದಕ್ಷಿಣದೇಶಿಯರಿಗೆ ಬರದ ತೊಂದರೆ ಇದೆ. ಮಕರ, ತುಲಾ, ಮಿಥುನ, ಕುಂಭಾ ರಾಶಿಯವರಿಗೆ ಅಶುಭ. ರಾತ್ರಿ 10:53 ಕ್ಕೆ ಗ್ರಹಣ ಸ್ಪರ್ಶ. ರಾತ್ರಿ 12:48 ಕ್ಕೆ ಗ್ರಹಣ ಮೋಕ್ಷ. ಚೂಡಾಮಣಿಯೋಗವಿರು ಕಾರಣ ಗ್ರಹಣಕಾಲದಲ್ಲಿ ಸ್ನಾನ, ಧ್ಯಾನ, ಜಪ ಮಾಡಿದರೆ  ಕಾರ್ಯಸಿದ್ದಿ. 07/08/2017 ರಂದು ಮದ್ಯಾಹ್ನ 1:53 ವರೆಗೆ ಭೋಜನ ಮಾಡಬಹುದು. ರೋಗಿಗಳು, ವೃದ್ದರು, ಮಕ್ಕಳು 3:53 ವರೆಗೆ ಊಟ ಮಾಡಬಹುದು. ಗ್ರಹಣಕಾಲಕ್ಕೆ 6 ಗಂಟೆ ಮೊದಲು ಊಟ ಬಿಡಬೇಕಾಗಿರುವುದರಿಂದ 4:53 ಒಳಗೆ ಊಟ ಮುಗಿಸಲೇಬೇಕು
            ವೃಶ್ಚಿಕ, ಸಿಂಹ, ಮೀನ, ಮೇಷ ರಾಶಿಯವರಿಗೆ ಗ್ರಹಣ ಶುಭಕಾರಕವಿದೆ. ಧನು, ಕನ್ಯಾ, ಕರ್ಕ, ವೃಷಭ ರಾಶಿಗೆ ಮಧ್ಯಮಫಲವಿದೆ. ದೇಶದಲ್ಲಿ ಬೆಲೆಗಳು ಗಗನಕ್ಕೇರಲಿದೆ. ನೋಟು ಅಮಾನ್ಯೀಕರಣದಂತಹ  ಸನ್ನಿವೇಶಗಳು ಇನ್ನೊಮ್ಮೆ ಬರಲಿದೆ. ಬ್ಯಾಂಕ್ ಗಳಲ್ಲಿ ಹಣವನ್ನು ಜಮೆ ಮಾಡಲು ಜನ ಹಿಂಜರಿಯುವ ಸ್ಠಿತಿ ಬರಲಿದೆ. ಅಲ್ಲಲ್ಲಿ ಕೋಮುಗಲಭೆಗಳು ಜಾಸ್ತಿಯಾಗುತ್ತದೆ. ಮೀನರಾಶಿಯ ದಕ್ಷಿಣಕನ್ನಡ ಜಿಲ್ಲೆಗೆ ಶಾಂತಿಯ ವಾತಾವರಣ ಬರಲಿದೆ. ವೃಷಭ ರಾಶಿಯ ಉಡುಪಿ ಜಿಲ್ಲೆಯಲ್ಲಿ ಅತೀ ಹೆಚ್ಚು ಅಕಾಲಮರಣ ಸಂಭವವಿದೆ. ಕರ್ನಾಟಕದಲ್ಲಿ ಆಡಳಿತ ವಿಚಾರದಲ್ಲಿ ಆಳುವ ಪಕ್ಷದಲ್ಲಿ ಒಡಕು ಹುಟ್ಟಬಹುದು.
 ತೇಜಿ : ತೆಂಗಿನಕಾಯಿ, ಮಸಾಲೆ, ಆಲುಗಡ್ಡೆ, ಬೆಲ್ಲ, ಶೇಂಗಾ, ಎಣ್ಣೆ, ಉತ್ತುತ್ತೆ, ಸಕ್ಕರೆ, ಉಪ್ಪು, ಜೋಳ.
     ಮಂದಿ : ಅಕ್ಕಿ, ಅಡಿಕೆ, ಬಂಗಾರ, ಬೆಳ್ಳಿ, ಕಂಚು, ಹಿತ್ತಾಳೆ, ವೀಳ್ಯದೆಲೆ, ಹಣ್ಣುಹಂಪಲು, ತರಕಾರಿ.
     ಸಮ : ಮೊಸರು, ಕಾಯಿಪಲ್ಲೆ ಇತ್ಯಾದಿ..

                ಇತೀ ಶುಭಂ.
: ಕೆ. ಅನಂತರಾಮ ಬಂಗಾಡಿ